ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Students Rescue: ಗೂಗಲ್‌ ಮ್ಯಾಪ್‌ ನಂಬಿ ಚಾರಣಕ್ಕೆ ಹೋಗಿ ದಾರಿ ತಪ್ಪಿದ ವಿದ್ಯಾರ್ಥಿಗಳ ರಕ್ಷಣೆ

students rescue: ಚಿತ್ರದುರ್ಗದ ಕಾಲೇಜು ವಿದ್ಯಾರ್ಥಿಗಳು ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಗೂಗಲ್‌ ಮ್ಯಾಪ್‌ ನಂಬಿ ಚಾರಣಕ್ಕಿಳಿದು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದರು. ಸ್ಥಳೀಯರು ಹಾಗೂ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ. ಗೈಡ್‌ ಇಲ್ಲದೆ ಇಂಥ ಚಾರಣಕ್ಕೆ ತೊಡಗದಂತೆ ಅರಣ್ಯ ಇಲಾಖೆ ಸೂಚಿಸಿದೆ.

ಗೂಗಲ್‌ ಮ್ಯಾಪ್‌ ನಂಬಿ ಚಾರಣಕ್ಕೆ ಹೋಗಿ ದಾರಿ ತಪ್ಪಿದ ವಿದ್ಯಾರ್ಥಿಗಳ ರಕ್ಷಣೆ

ಹರೀಶ್‌ ಕೇರ ಹರೀಶ್‌ ಕೇರ Jun 11, 2025 8:52 AM

ಚಿಕ್ಕಮಗಳೂರು: ಪಶ್ಚಿಮ ಘಟ್ಟದ (Western Ghats) ದಟ್ಟಾರಣ್ಯದಲ್ಲಿ ಗೂಗಲ್ ಮ್ಯಾಪ್ (Google maps) ನಂಬಿಕೊಂಡು ಚಾರಣ (Trekking) ಹೋಗಿದ್ದ 10 ಜನ ವಿದ್ಯಾರ್ಥಿಗಳು ದಿಕ್ಕುತಪ್ಪಿ ಕಾಡಿನಲ್ಲಿ ಸಿಲುಕಿ ಹೈರಾಣಾಗಿದ್ದಾರೆ. ಚಿತ್ರದುರ್ಗ ಮೂಲದ ಕಾಲೇಜಿನ ಐವರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನ ದುರ್ಗ ಮತ್ತು ಬಂಡಾಜೆ ಜಲಪಾತಕ್ಕೆ ಚಾರಣ ಹೋಗಿ ಸಿಲುಕಿಕೊಂಡಿದ್ದರು. ನಂತರ ಅವರನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ (Students Rescue) ಮಾಡಿದ್ದಾರೆ.

ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್‌ ಮಾಡಿದ್ದರು. ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಣಿಝರಿ ಕಡೆಯಿಂದ ಚಾರಣ ಆರಂಭಿಸಬೇಕಿತ್ತು. ಗೂಗಲ್‌ ಮ್ಯಾಪ್‌ನಲ್ಲಿ ಬಂಡಾಜೆ ಟ್ರೆಕ್ಕಿಂಗ್ ಎಂದು ನಮೂದಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ದಿಡುಪೆ ಮಾರ್ಗ ತೋರಿಸಿದೆ. ಅಲ್ಲಿಗೆ ಬಂದು ಚಾರಣ ಆರಂಭಿಸಿದ್ದು, ಬಂಡಾಜೆ ಜಲಪಾತ ತನಕ ಹೋಗಿದ್ದಾರೆ.

ವಾಪಸ್ ಬರಲು ಬಲ್ಲಾಳರಾಯನ ದುರ್ಗ ಹಾಗೂ ರಾಣಿಝರಿ ಕಡೆಯ ಮಾರ್ಗ ಹಿಡಿದಿದ್ದಾರೆ. ಅದಕ್ಕೂ ಮುನ್ನ ತಾವು ಬಂದಿದ್ದ ಟೆಂಪೊ ಟ್ರಾವೆಲರ್‌ ಚಾಲಕನಿಗೆ ವಿಷಯ ಮುಟ್ಟಿಸಿ ರಾಣಿಝರಿ ಕಡೆಗೆ ಬರಲು ತಿಳಿಸಿದ್ದಾರೆ. ವಾಪಸ್ ಚಾರಣ ಹೊರಟ ಸ್ವಲ್ಪ ದೂರದಲ್ಲೇ ದಿಕ್ಕು ತಪ್ಪಿದ್ದಾರೆ. ಅಷ್ಟರಲ್ಲಿ ಕತ್ತಲಾಗಿದ್ದರಿಂದ ದಾರಿ ಕಾಣಿಸದೆ ಕಂಗಾಲಾಗಿದ್ದಾರೆ. ಅಲ್ಲದೇ ನೆಟ್‌ವರ್ಕ್ ಇಲ್ಲದ ಕಾರಣ ಗೂಗಲ್ ಮ್ಯಾಪ್‌ ಕೂಡ ಕೆಲಸ ಮಾಡಿಲ್ಲ.

ಚಾಲಕನ ಮೂಲಕ ವಿಷಯ ತಿಳಿದ ಬಾಳೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ದಿಲೀಪ್‌ಕುಮಾರ್, ಸ್ನೇಕ್ ಆರೀಫ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಕಾಡಿಗೆ ಹೋಗಿ ಆರು ಗಂಟೆಗಳ ಕಾಲ ಹುಡುಕಾಟ ನಡೆಸಿದರು. ಮಧ್ಯರಾತ್ರಿ 2 ಗಂಟೆ ವೇಳೆಗೆ ವಿದ್ಯಾರ್ಥಿಗಳು ಸಿಕ್ಕಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗಿದೆ. ಗೈಡ್‌ ಇಲ್ಲದೆ ಇಂಥ ಚಾರಣದ ದುಸ್ಸಾಹಸಕ್ಕೆ ಇಳಿಯದಂತೆ ಅರಣ್ಯ ಇಲಾಖೆ ಸೂಚಿಸಿದೆ.

ಇದನ್ನೂ ಓದಿ: ಸರಳ ಚಾರಣಕ್ಕೆ ಸೂಕ್ತ ತಾಣ