ಗೃಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿ ಪ್ರಮುಖ ಖಾತೆ ತನ್ನಲ್ಲೇ ಉಳಿಸಿಕೊಂಡ ತಮಿಳುನಾಡು ಸಿಎಂ ವಿಜಯ್: ಯಾರಿಗೆ ಯಾವ ಸಚಿವಾಲಯ?
Tamil Nadu govt allocates portfolios: ತಮಿಳುನಾಡಿನಲ್ಲಿ ಟಿವಿಕೆ ನೇತೃತ್ವದ ಜೋಸೆಫ್ ವಿಜಯ್ ಅವರ ಸರ್ಕಾರ ಅಧಿಕಾರಕ್ಕೇರಿದೆ. ಇದೀಗ ಸಂಪುಟ ಸಚಿವ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಗೃಹ, ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿ ಪ್ರಮುಖ ಇಲಾಖೆಗಳನ್ನು ವಿಜಯ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಜೋಸೆಫ್ ವಿಜಯ್, ಕೆ.ಎ. ಸೆಂಗೋಟ್ಟಯ್ಯನ್ -
ಚೆನ್ನೈ, ಮೇ 16: ತಮಿಳುನಾಡಿನಲ್ಲಿ ಟಿವಿಕೆ ನೇತೃತ್ವದ ಜೋಸೆಫ್ ವಿಜಯ್ (Joseph Vijay) ಅವರ ಸರ್ಕಾರ ಅಧಿಕಾರಕ್ಕೇರಿದೆ. ಇದೀಗ ಸಂಪುಟ ಸಚಿವ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಗೃಹ, ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಪ್ರಮುಖ ಇಲಾಖೆಗಳನ್ನು ಮುಖ್ಯಮಂತ್ರಿ ವಿಜಯ್ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಖಾತೆ ಹಂಚಿಕೆ ಪಟ್ಟಿಯ ಪ್ರಕಾರ, ವಿಜಯ್ ಸಾರ್ವಜನಿಕ, ಸಾಮಾನ್ಯ ಆಡಳಿತ, ಗೃಹ, ಜಿಲ್ಲಾ ಆದಾಯಾಧಿಕಾರಿ, ಪೊಲೀಸ್, ವಿಶೇಷ ಕಾರ್ಯಕ್ರಮ ಜಾರಿಗೊಳಿಸುವಿಕೆ, ಮಹಿಳಾ ಕಲ್ಯಾಣ, ಯುವಜನ ಕಲ್ಯಾಣ, ಮಕ್ಕಳ ಕಲ್ಯಾಣ, ವೃದ್ಧರು ಮತ್ತು ವಿಭಿನ್ನ ಸಾಮರ್ಥ್ಯ ಹೊಂದಿದವರ ಕಲ್ಯಾಣ, ನಗರಾಡಳಿತ ಹಾಗೂ ನಗರ ನೀರು ಸರಬರಾಜು ಖಾತೆಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.
ಹಿರಿಯ ನಾಯಕ ಕೆ.ಎ. ಸೆಂಗೋಟ್ಟಯ್ಯನ್ ಹಣಕಾಸು ಸಚಿವರಾಗಿದ್ದಾರೆ. ಹೊಸ ಸರ್ಕಾರದಲ್ಲಿ ಅವರು ಹಣಕಾಸು, ಪಿಂಚಣಿ ಮತ್ತು ಪಿಂಚಣಿ ಭತ್ಯೆಗಳನ್ನು ನಿರ್ವಹಿಸಲಿದ್ದಾರೆ. ಸಂಪುಟದ ಅತ್ಯಂತ ಕಿರಿಯ ಸಚಿವೆ ಸೆಲ್ವಿ ಎಸ್. ಕೀರ್ತನಾ ಅವರಿಗೆ ಕೈಗಾರಿಕಾ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದ್ದು, ಅದರೊಂದಿಗೆ ಅವರು ಹೂಡಿಕೆ ಉತ್ತೇಜನ ಇಲಾಖೆಯ ಮೇಲ್ವಿಚಾರಣೆಯನ್ನೂ ವಹಿಸಿಕೊಳ್ಳಲಿದ್ದಾರೆ. ಇದು ಅವರನ್ನು ಸಚಿವ ಸಂಪುಟದ ಪ್ರಮುಖ ಮುಖಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಸಚಿವೆಗೆ ಇಷ್ಟೊಂದು ಪ್ರಮುಖ ಇಲಾಖೆಯನ್ನು ಹಂಚಿಕೆ ಮಾಡಿರುವುದು ತಮಿಳುನಾಡಿನ ರಾಜಕೀಯ ವಲಯದಲ್ಲಿ ತೀವ್ರ ಗಮನ ಸೆಳೆದಿದೆ.
ತಮಿಳುನಾಡಿನ ಸಚಿವರು:
Lok Bhavan releases portfolio allocations for Tamil Nadu’s new Council of Ministers, with @CMOTamilnadu
— Rajalakshmi sampath (@Rajalakshmi2398) May 16, 2026
holding Home and Police, while key departments including Finance, Health, School Education and Industries have been assigned to cabinet ministers. pic.twitter.com/XfFzZuIWo0
ಎನ್. ಆನಂದ್ ಗ್ರಾಮೀಣ ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಖಾತೆಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ಗಳು ಮತ್ತು ಪಂಚಾಯತ್ ಯೂನಿಯನ್, ಬಡತನ ನಿರ್ಮೂಲನಾ ಕಾರ್ಯಕ್ರಮ, ಗ್ರಾಮೀಣ ಸಾಲ ಮತ್ತು ಸಣ್ಣ ನೀರಾವರಿ ಯೋಜನೆಗಳು ಇವೆ.
ʻದಳಪತಿʼ ವಿಜಯ್ ಸಿಎಂ ಆಗುತ್ತಿದ್ದಂತೆಯೇ ಬದಲಾಯ್ತು ʻಜನ ನಾಯಗನ್ʼ ಚಿತ್ರದ ನಸೀಬು
ಆಧವ್ ಅರ್ಜುನಾ ಸಾರ್ವಜನಿಕ ಕಾಮಗಾರಿಗಳು ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿದ್ದಾರೆ. ಅವರು ಕಟ್ಟಡಗಳು, ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳನ್ನು ಒಳಗೊಂಡ ಸಾರ್ವಜನಿಕ ಕಾಮಗಾರಿಗಳ ಜತೆ ಕ್ರೀಡಾ ಅಭಿವೃದ್ಧಿ ಖಾತೆಯನ್ನೂ ನೋಡಿಕೊಳ್ಳಲಿದ್ದಾರೆ. ಡಾ. ಕೆ.ಜಿ. ಅರುಣ್ರಾಜ್ ಅವರಿಗೆ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ನೀಡಲಾಗಿದೆ.
ಪಿ. ವೆಂಕಟರಮಣನ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದರು. ಅವರು ಗ್ರಾಹಕ ರಕ್ಷಣೆ ಮತ್ತು ಬೆಲೆ ನಿಯಂತ್ರಣವನ್ನು ನಿರ್ವಹಿಸಲಿದ್ದಾರೆ. ಆರ್. ನಿರ್ಮಲ್ ಕುಮಾರ್ ಅವರಿಗೆ ಇಂಧನ ಸಂಪನ್ಮೂಲ ಮತ್ತು ಕಾನೂನು ಖಾತೆಯನ್ನು ನೀಡಲಾಯಿತು. ಅವರ ಇಲಾಖೆಗಳಲ್ಲಿ ವಿದ್ಯುತ್ ಮತ್ತು ಇಂಧನ ಅಭಿವೃದ್ಧಿ, ಕಾನೂನು, ನ್ಯಾಯಾಲಯಗಳು, ಕಾರಾಗೃಹ ಮತ್ತು ಭ್ರಷ್ಟಾಚಾರ ತಡೆ, ವಿಧಾನಸಭೆ, ರಾಜ್ಯಪಾಲರು, ಚುನಾವಣೆಗಳು ಮತ್ತು ಪಾಸ್ಪೋರ್ಟ್ ವಿಭಾಗಗಳು ಸೇರಿವೆ.
ರಾಜ್ಮೋಹನ್ ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಪ್ರಚಾರ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಪುರಾತತ್ವ, ತಮಿಳು ಅಧಿಕೃತ ಭಾಷೆ ಮತ್ತು ತಮಿಳು ಸಂಸ್ಕೃತಿ, ಚಲನಚಿತ್ರ ತಂತ್ರಜ್ಞಾನ ಮತ್ತು ಸಿನಿಮಾಟೋಗ್ರಾಫ್ ಕಾಯ್ದೆ, ಸುದ್ದಿ ಮುದ್ರಣ ನಿಯಂತ್ರಣ, ಲೇಖನ ಸಾಮಗ್ರಿ ಮತ್ತು ಮುದ್ರಣ ಮತ್ತು ಸರ್ಕಾರಿ ಮುದ್ರಣಾಲಯದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಡಾ. ಟಿ.ಕೆ. ಪ್ರಭು ಅವರಿಗೆ ನೈಸರ್ಗಿಕ ಸಂಪನ್ಮೂಲ ಖಾತೆಯನ್ನು ನೀಡಲಾಗಿದೆ. ಅವರು ಖನಿಜಗಳು ಮತ್ತು ಗಣಿಗಳನ್ನು ನಿರ್ವಹಿಸುತ್ತಾರೆ.