ನಿನ್ನನ್ನು ಮುಗಿಸುವ ಸಮಯ ಬಂದಿದೆ”: ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ ಉಡುಪಿ ವ್ಯಕ್ತಿಯ ಬಂಧನ
Man Arrested for Threatening Home Minister: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿ ಫೇಸ್ಬುಕ್ ಕಾಮೆಂಟ್ ಹಾಕಿದ್ದ 48 ವರ್ಷದ ವ್ಯಕ್ತಿಯೊಬ್ಬನನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ನಿಟ್ಟೆ ಗ್ರಾಮದ ನಿವಾಸಿಯೊಬ್ಬರು ಈ ಪೋಸ್ಟ್ ಅನ್ನು ಗಮನಿಸಿ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ -
ಉಡುಪಿ, ಜೂ.9: ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಕೊಲೆ ಬೆದರಿಕೆ ಮತ್ತು ಜಾತಿ ನಿಂದನೆ ಮಾಡಿ ಫೇಸ್ಬುಕ್ ಕಾಮೆಂಟ್ ಹಾಕಿದ್ದ 48 ವರ್ಷದ ವ್ಯಕ್ತಿಯೊಬ್ಬನನ್ನು ಉಡುಪಿ (Udupi) ಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಕಾರ್ಕಳ ಬಳಿಯ ಕೆರ್ವಾಶೆ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದ್ದು, ಆತನನ್ನು ಕಾರ್ಕಳ ಪಟ್ಟಣ ಪೊಲೀಸರು ವಶಕ್ಕೆ ಪಡೆದು ನಂತರ, ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.
‘ನಮ್ಮ ಕಾರ್ಲಾ’ ಎಂಬ ಫೇಸ್ಬುಕ್ ಪುಟದಲ್ಲಿ ಸಚಿವರ ಛಾಯಾಚಿತ್ರವನ್ನು ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ಗೆ ಬಂಧಿತ ವ್ಯಕ್ತಿಯು, ನಿಂದನಾತ್ಮಕ ಭಾಷೆ, ಜಾತಿವಾದಿ ಹೇಳಿಕೆ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆಯನ್ನು ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ. ಜೂನ್ 7 ರಂದು ನಿಟ್ಟೆ ಗ್ರಾಮದ ನಿವಾಸಿಯೊಬ್ಬರು ಈ ಪೋಸ್ಟ್ ಅನ್ನು ಗಮನಿಸಿ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಆರೋಪಿ ಜೂನ್ 6 ರಂದು ಈ ಕಾಮೆಂಟ್ ಪೋಸ್ಟ್ ಮಾಡಿದ್ದ. ಆ ಕಾಮೆಂಟ್ನಲ್ಲಿ “ನೀನು ಯಾರು ಬೇ..? ನೀನು ನಮ್ಮ ಎಂಜಲು ತಿನ್ನುವ ಭಿಕಾರಿ. ಮುಗಿಸೋದು ಬೆಳೆಸೋದು ನಮ್ಮ ಕೆಲಸ ನೀನು ಮಾಡಬೇಡ. ನಿನ್ನನ್ನು ಮುಗಿಸುವ ಸಮಯ ಬಂದಿದೆ” ಎಂಬ ಕಾಮೆಂಟ್ ಜೊತೆಗೆ ಸಚಿವರನ್ನು ಗುರಿಯಾಗಿಸಿಕೊಂಡು ಇತರ ಅವಹೇಳನಕಾರಿ ಮತ್ತು ಜಾತಿ ಸಂಬಂಧಿತ ಕಾಮೆಂಟ್ಗಳನ್ನು ಬರೆಯಲಾಗಿದೆ ಎಂದು ಆರೋಪಿಸಲಾಗಿದೆ.
ದ್ವೇಷ ಭಾಷಣ ತಡೆ ಕಾಯ್ದೆಯಡಿ ಪ್ರಿಯಾಂಕ್ ಖರ್ಗೆ ಮೊದಲ ಅಪರಾಧಿ; ಕ್ಷಮೆಗೆ ಗೋವಿಂದ ಕಾರಜೋಳ ಆಗ್ರಹ
ಈ ವಿಷಯವು ಸಮುದಾಯಗಳ ನಡುವೆ ವೈಮನಸ್ಸು ಮತ್ತು ದ್ವೇಷವನ್ನು ಹರಡುವ ಉದ್ದೇಶದಿಂದ ಪ್ರಕಟಿಸಲ್ಪಟ್ಟಿದ್ದು, ಕ್ರಿಮಿನಲ್ ಬೆದರಿಕೆಯ ಅಂಶಗಳನ್ನು ಒಳಗೊಂಡಿದೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದೂರಿನ ಆಧಾರದ ಮೇಲೆ, ಕಾರ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಅಪರಾಧಿ ಬೆದರಿಕೆಗೆ ಸಂಬಂಧಿಸಿದ ಸೆಕ್ಷನ್ 351(3), ಸಾರ್ವಜನಿಕ ಶಾಂತಿಭಂಗಕ್ಕೆ ಕಾರಣವಾಗುವ ಹೇಳಿಕೆಗಳಿಗೆ ಸಂಬಂಧಿಸಿದ ಸೆಕ್ಷನ್ 353(2) ಹಾಗೂ ಧಾರ್ಮಿಕ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದ ಸೆಕ್ಷನ್ 196 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾತಿವಾದಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 33(1)(ಆರ್)(ಯು) ಅಡಿಯಲ್ಲಿಯೂ ಪ್ರಕರಣ ದಾಖಲಿಸಿದ್ದಾರೆ. ಭಾನುವಾರ (ಜೂ. 7) ಆರೋಪಿಯನ್ನು ಬಂಧಿಸಿ, ವಶಕ್ಕೆ ಪಡೆದ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.