SV Rajendrasingh Babu: ಬೆಂಗಳೂರಿನಲ್ಲಿ ಅ.23ರಿಂದ 5 ದಿನಗಳ ಕಾಲ ʼಎಸ್ವಿಆರ್ 50ʼ ಸಮಾರಂಭ
SVR @ 50: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಕರಾಗಿ ಇದೇ ಅಕ್ಟೋಬರ್ ತಿಂಗಳಿಗೆ 50 ವರ್ಷಗಳಾಗಿದೆ. ಈ ಸಂಭ್ರಮವನ್ನು ಸಂಭಮಿಸಲು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ʼಎಸ್ವಿಆರ್ @ 50ʼ ಸಾಧನೆ-ಸಂಭ್ರಮ-ಚಿತ್ರೋತ್ಸವವನ್ನು ಅ.23ರಿಂದ 27ರವರೆಗೆ ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿರುವ ಡಾ.ರಾಜ್ಕುಮಾರ್ ಭವನ, ಅಂಬರೀಷ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

-

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು (SV Rajendrasingh Babu) ನಿರ್ದೇಶಕರಾಗಿ ಇದೇ ಅಕ್ಟೋಬರ್ ತಿಂಗಳಿಗೆ 50 ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ʼಎಸ್ವಿಆರ್ @ 50ʼ ಸಾಧನೆ-ಸಂಭ್ರಮ-ಚಿತ್ರೋತ್ಸವವನ್ನು (KANFICC FILM Festival 2025) ಅ.23ರಿಂದ 27ರವರೆಗೆ ನಗರದ ಚಾಮರಾಜಪೇಟೆಯಲ್ಲಿನ ಕರ್ನಾಟಕ ಕಲಾವಿದರ ಸಂಘದ ಡಾ.ರಾಜ್ಕುಮಾರ್ ಭವನ (ಅಂಬರೀಷ್ ಸಭಾಂಗಣ) ಹಾಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಅ.23 ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಖ್ಯಾತ ಚಲನಚಿತ್ರ ಕಲಾವಿದ ಸುದೀಪ್ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಡಿಸಿಎಂ, ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕ ಮುನಿರತ್ನ, ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ ಪಾಲ್ಗೊಳ್ಳುವರು. ಇದೇ ವೇಳೆ ʼನಿರ್ದೇಶಕನ ನೂರಾರು ಕಣ್ಣುʼ (ವೀರಲೋಕ ಬುಕ್ಸ್) ಕೃತಿ ಬಿಡುಗಡೆಗೊಳ್ಳಲಿದೆ. ಈ ವೇಳೆ ಶ್ರೀಮತಿ ಲಕ್ಷ್ಮಿ, ಡಾ. ಬರಗೂರು ರಾಮಚಂದ್ರಪ್ಪ, ಡಾ. ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಹಂಸಲೇಖ, ರಾಕ್ ಲೈನ್ ವೆಂಕಟೇಶ್, ರಾಘವೇಂದ್ರ ರಾಜಕುಮಾರ್ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ತ್ರಿವೇಣಿ ಕಾದಂಬರಿ ಆಧಾರಿತ ಹೂವು ಹಣ್ಣು (1993) ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಬಳಿಕ 3.30ಕ್ಕೆ ಎಚ್.ಕೆ. ಅನಂತರಾವ್ ಕಾದಂಬರಿ ಆಧಾರಿತ ಅಂತ (1981) ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಚಿತ್ರ ಪ್ರದರ್ಶನದ ಬಳಿಕ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅ.24ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಭೂಮಿ ತಾಯಿಯ ಚೊಚ್ಚಲ ಮಗ (1998) ಚಲನಚಿತ್ರ ಪ್ರದರ್ಶನ ಗೊಳ್ಳಲಿದೆ. ಬಳಿಕ ಮಧ್ಯಾಹ್ನ 2.30ಕ್ಕೆ ಕುರಿಗಳು ಸಾರ್ ಕುರಿಗಳು (2001) ಚಲನಚಿತ್ರ ಪ್ರದರ್ಶನ ಗೊಳ್ಳಲಿದೆ. ಚಿತ್ರ ಪ್ರದರ್ಶನದ ಬಳಿಕ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅ.25ರಂದು ಶನಿವಾರ ಬೆಳಗ್ಗೆ 10.30ಕ್ಕೆ ʼಬಂಧನʼ ಚಲನಚಿತ್ರ ಪ್ರದರ್ಶನ ಗೊಳ್ಳಲಿದೆ. ಬಳಿಕ ಮಧ್ಯಾಹ್ನ 2.30ಕ್ಕೆ ʼಗಂಡಭೇರುಂಡʼ (1984) ಚಲನಚಿತ್ರ ಪ್ರದರ್ಶನ ಗೊಳ್ಳಲಿದೆ. ಚಿತ್ರ ಪ್ರದರ್ಶನದ ಬಳಿಕ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅ.26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ʼಮುತ್ತಿನಹಾರʼ (1990) ಚಲನಚಿತ್ರ ಪ್ರದರ್ಶನ ಗೊಳ್ಳಲಿದೆ. ಬಳಿಕ ಮಧ್ಯಾಹ್ನ 2.30ಕ್ಕೆ ʼನಾಗರಹೊಳೆʼ (1977) ಚಲನಚಿತ್ರ ಪ್ರದರ್ಶನ ಗೊಳ್ಳಲಿದೆ. ಚಿತ್ರ ಪ್ರದರ್ಶನದ ಬಳಿಕ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಮಾರೋಪ, ಎಸ್.ವಿ. ರಾಜೇಂದ್ರಸಿಂಗ್ ಬಾಬುಗೆ ಸನ್ಮಾನ
ಅ.27ರಂದು ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಮತ್ತು ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಗ್ಗೆ 11.30ಕ್ಕೆ ʼರೆಟ್ರೋ ರಿವೈವಲ್ʼ, ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ಐಕಾನಿಕ್ ಸಿನಿಮಾಗಳ ಥೀಮ್ ಬೇಸ್ಡ್ ಫ್ಯಾಷನ್ ಶೋ ಏರ್ಪಡಿಸಲಾಗಿದೆ.
ಸಂಜೆ 5ಕ್ಕೆ ʼಗಾನಲಹರಿʼ ನಾದಬ್ರಹ್ಮ ಡಾ. ಹಂಸಲೇಖ ನೇತೃತ್ವದ ಸಂಗೀತ ಕಾರ್ಯಕ್ರಮ ಇರಲಿದೆ. ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಎಸ್.ವಿ. ರಾಜೇಂದ್ರಸಿಂಗ್ ಬಾಬು, ಅನಂತನಾಗ್, ಪ್ರಕಾಶ್ ಕಾರ್ಯಪ್ಪ, ಪಿ. ಧನರಾಜ್ ಅವರಿಗೆ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿದೆ. ಮಣಿರತ್ನಂ ಅವರಿಂದ ʼಚಿತ್ರ ಮಹಾತ್ಮʼ-SVR Golden Years ಕಿರುಚಿತ್ರ ಬಿಡುಗಡೆಗೊಳ್ಳಲಿದೆ.
ಈ ಸುದ್ದಿಯನ್ನೂ ಓದಿ | SV Rajendrasingh Babu: ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷ ಪೂರ್ಣ: ಅ.23ರಿಂದ 5 ದಿನಗಳ ಕಾಲ ʼಎಸ್ವಿಆರ್ 50ʼ ಸಮಾರಂಭ
ಮುಖ್ಯ ಅತಿಥಿಗಳಾಗಿ ಡಾ.ಬರಗೂರು ರಾಮಚಂದ್ರಪ್ಪ, ಡಾ.ಗಿರೀಶ್ ಕಾಸರವಳ್ಳಿ, ಸುಹಾಸಿನಿ, ಡಾ. ಶಿವರಾಜ್ಕುಮಾರ್, ವಿ. ರವಿಚಂದ್ರನ್, ಸಾಧು ಕೋಕಿಲ, ಟಿ.ಎ. ನಾರಾಯಣ ಗೌಡ, ರಾಕ್ಲೈನ್ ವೆಂಕಟೇಶ್, ಅರ್ಜುನ್ ಸರ್ಜಾ, ಧೃವ ಸರ್ಜಾ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆಹ್ವಾನ ಪತ್ರಿಕೆಗಾಗಿ ಇಲ್ಲಿ ಕ್ಲಿಕ್ಮಾಡಿ