Vote Chori: ಬಿಜೆಪಿ ಗೆದ್ದ ಏಕೈಕ ಕ್ಷೇತ್ರದಲ್ಲಿ ಮತಗಳ್ಳತನ? "ನನ್ನ ವಿಳಾಸಕ್ಕೆ 9 ನಕಲಿ ಮತಗಳ ಸೇರ್ಪಡೆ" ಮಹಿಳೆ ಆರೋಪ
ಕೇರಳದ ತ್ರಿಶೂರ್ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ವಿಳಾಸವನ್ನು ಬಳಸಿಕೊಂಡು ತಮಗೆ ತಿಳಿಯದೆ ಒಂಬತ್ತು ನಕಲಿ ಮತಗಳನ್ನು ನೋಂದಾಯಿಸಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ನಾವು ನಾಲ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಒಪ್ಪಿಗೆಯಿಲ್ಲದೆ ನಮ್ಮ ವಿಳಾಸಕ್ಕೆ ಹೆಸರುಗಳನ್ನು ಸೇರಿಸುವುದು ಸರಿಯಲ್ಲ ಎಂದು ಅವರು ಹೇಳಿದರು.


ತಿರುವನಂತಪುರಂ: ದೇಶದಾದ್ಯಂತದ ಕಾಂಗ್ರೆಸ್ ಮತಗಳ್ಳತನ ಆರೋಪ (Vote Chori) ಮಾಡುವ ಸಂದರ್ಭದಲ್ಲಿಯೇ ಕೇರಳದ ತ್ರಿಶೂರ್ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ವಿಳಾಸವನ್ನು ಬಳಸಿಕೊಂಡು ತಮಗೆ ತಿಳಿಯದೆ ಒಂಬತ್ತು ನಕಲಿ ಮತಗಳನ್ನು ನೋಂದಾಯಿಸಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಪೂಂಕುನ್ನಂನಲ್ಲಿರುವ ಕ್ಯಾಪಿಟಲ್ ವಿಲೇಜ್ ಅಪಾರ್ಟ್ಮೆಂಟ್ನ ಫ್ಲಾಟ್ ಸಂಖ್ಯೆ 4C ಯಲ್ಲಿ ಈ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಮನೆ ಮಾಲಕಿ ಪ್ರಸನ್ನಾ ಎಂಬುವವರು ತನ್ನ ಮನೆಯಲ್ಲಿ ತಾನೊಬ್ಬನೇ ಮತ ಚಲಾಯಿಸುವ ಏಕೈಕ ವ್ಯಕ್ತಿ ತಾನು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಪ್ರಸನ್ನಾ , ತಮ್ಮ ಕುಟುಂಬದಲ್ಲಿ ನಾಲ್ವರು ವಯಸ್ಕರು ಮತ್ತು ಇಬ್ಬರು ಮಕ್ಕಳು ಇದ್ದಾರೆ, ಉಳಿದ ವಯಸ್ಕರು ತಮ್ಮ ಪೂರ್ವಜರ ಗ್ರಾಮವಾದ ಪೂಚಿನಿಪದಂನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಪರಿಶೀಲನೆಗಾಗಿ ಯಾರಾದರೂ ತಮ್ಮನ್ನು ಸಂಪರ್ಕಿಸಿದಾಗ ಮಾತ್ರ ಒಂಬತ್ತು ಹೆಚ್ಚುವರಿ ಹೆಸರುಗಳ ಬಗ್ಗೆ ತನಗೆ ತಿಳಿದುಬಂದಿತು ಎಂದು ಅವರು ಹೇಳಿದರು. ನಮಗೆ ಅವರಲ್ಲಿ ಯಾರೂ ತಿಳಿದಿಲ್ಲ. ನಾವು ನಾಲ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಒಪ್ಪಿಗೆಯಿಲ್ಲದೆ ನಮ್ಮ ವಿಳಾಸಕ್ಕೆ ಹೆಸರುಗಳನ್ನು ಸೇರಿಸುವುದು ಸರಿಯಲ್ಲ. ಇಲ್ಲಿ ದೊಡ್ಡ ಅಕ್ರಮವೇ ನಡೆದಿದೆ ಎಂದು ಮನೆ ಮಾಲೀಕ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಜಿಲ್ಲಾಧಿಕಾರಿಗೆ ಈ ಕುರಿತು ದೂರು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಪೂಂಕುನ್ನಂನ ವಾಟರ್ ಲಿಲಿ ಮತ್ತು ಕ್ಯಾಪಿಟಲ್ ವಿಲೇಜ್ನಂತಹ ಇತರ ಫ್ಲಾಟ್ಗಳಲ್ಲಿಯೂ ಇದೇ ರೀತಿಯ ಮತದಾರರ ಪಟ್ಟಿ ಅಕ್ರಮಗಳು ನಡೆದಿವೆ ಎಂದು ಸಿಪಿಎಂ ಕಾರ್ಯಕರ್ತರು ಆರೋಪಿಸಿದ್ದಾರೆ. ಖಾಲಿ ಇರುವ ಫ್ಲಾಟ್ಗಳನ್ನು ಇತರ ಜಿಲ್ಲೆಗಳಿಂದ ಮತಗಳನ್ನು ವರ್ಗಾಯಿಸಲು ನಕಲಿ ವಿಳಾಸಗಳಾಗಿ ಬಳಸಲಾಗಿದೆ ಎಂದು ಅವರು ಆರೋಪಿಸಿದರು. ಮತದಾರರ ನೋಂದಣಿ ಸಮಯದಲ್ಲಿ ಚುನಾವಣಾ ಆಯೋಗವು ದೊಡ್ಡ ಪ್ರಮಾಣದ ಅಕ್ರಮಗಳಿಗೆ ಅವಕಾಶ ನೀಡಿದೆ ಎಂದು ಆರೋಪಿಸಿದ ಸಿಪಿಎಂ ನಾಯಕ ಮತ್ತು ತ್ರಿಶೂರ್ನ ಮಾಜಿ ಅಭ್ಯರ್ಥಿ ವಿ.ಎಸ್. ಸುನೀಲ್ ಕುಮಾರ್ ಅವರ ಹೇಳಿಕೆಗಳಿಗೆ ಈ ಆರೋಪಗಳು ಬಲವನ್ನು ಹೆಚ್ಚಿಸಿವೆ . ಒಂದೇ ಬೂತ್ನಲ್ಲಿ 280 ಅರ್ಜಿಗಳು ಒಟ್ಟಿಗೆ ಬಂದಿವೆ. ವಲಸೆ ಕಾರ್ಮಿಕರ ಹೆಸರುಗಳನ್ನು ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ: Vote Chori Protest: ವಿಪಕ್ಷಗಳಿಂದ ಭಾರೀ ಪ್ರತಿಭಟನೆ; ಪ್ರಜ್ಞೆ ತಪ್ಪಿ ಬಿದ್ದ ಸಂಸದೆಯರು
2024 ರ ಲೋಕಸಭಾ ಚುನಾವಣೆಯಲ್ಲಿ, ಕೇರಳದಲ್ಲಿ ಬಿಜೆಪಿ ಗೆದ್ದ ಏಕೈಕ ಲೋಕಸಭಾ ಸ್ಥಾನ ತ್ರಿಶೂರ್ ಆಗಿದೆ. ಸುರೇಶ್ ಗೋಪಿ ಎಲ್ಡಿಎಫ್ನ ಸುನಿಲ್ ಕುಮಾರ್ ಮತ್ತು ಯುಡಿಎಫ್ನ ಕೆ ಮುರಳೀಧರನ್ ಅವರನ್ನು ಸೋಲಿಸಿ ಜಯಗಳಿಸಿದ್ದರು. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಕೂಡ ದೂರುಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ಕುಟಿಲ ನೀತಿಯನ್ನು ಬಳಸಿ ಚುನಾವಣೆಯಲ್ಲಿ ಜಯಗಳಿಸಿದೆ ಎಂದು ಅವರು ಆರೋಪಿಸಿದ್ದಾರೆ.