ಆತ್ಮಹತ್ಯೆಗೆ ಶರಣಾದ ನೀಟ್ ಆಕಾಂಕ್ಷಿಗಳ ಮನೆಯವರಿಗೆ 1 ಕೋಟಿ ರುಪಾಯಿ ಪರಿಹಾರ, ವಾಂಗ್ಚುಕ್ ಬಿಡುಗಡೆ: ಕೇಂದ್ರದ ಮುಂದೆ ಸಿಜೆಪಿ ಇಟ್ಟ ಬೇಡಿಕೆಗಳಿವು
CJP's Demands to Centre: ಸಿಜೆಪಿ ಜತೆ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿದೆ. ದೆಹಲಿಯಲ್ಲಿ ನಡೆದ ಚಲೋ ಸಂಸತ್ ಮೆರವಣಿಗೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಕಾಕ್ರೋಚ್ ಜನತಾ ಪಾರ್ಟಿಯ ಇಬ್ಬರು ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರತಿಭಟನೆ ತೀವ್ರಗೊಂಡ ಬಳಿಕ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಮೊದಲ ಅಧಿಕೃತ ಮಾತುಕತೆ ಇದಾಗಿದೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ -
ನವದೆಹಲಿ, ಜು. 20: ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಜೆಪಿ ಜತೆ ಕೇಂದ್ರ ಸರ್ಕಾರ ಮಾತುಕತೆಗೆ ಮುಂದಾಗಿದೆ. ದೆಹಲಿಯಲ್ಲಿ ನಡೆದ ಚಲೋ ಸಂಸತ್ ಮೆರವಣಿಗೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಆ ಸಂಘಟನೆಯ ಇಬ್ಬರು ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳ ಲಿಖಿತ ಮನವಿಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ಸಿಜೆಪಿ ನಾಯಕರು ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಲು ಸಮಯ ಕೋರಿರುವುದಾಗಿ ಹೇಳಿದ್ದಾರೆ. ಪ್ರತಿಭಟನೆ ತೀವ್ರಗೊಂಡ ಬಳಿಕ ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಮೊದಲ ಅಧಿಕೃತ ಮಾತುಕತೆ ಇದಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಸಿಜೆಪಿ ಬೆಂಬಲಿಗರು ಸಂಸತ್ತಿನತ್ತ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಈ ಸಭೆ ನಡೆಯಿತು. ಪ್ರತಿಭಟನೆ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪೊಲೀಸ್ ನಿಯೋಜನೆ, ಬ್ಯಾರಿಕೇಡ್ ಅಳವಡಿಕೆ, ಲಾಠಿಚಾರ್ಜ್, ಅರೆಸ್ಟ್ ಮತ್ತು ಸಂಚಾರ ಅಡಚಣೆಗಳು ಕಂಡುಬಂದವು.
ಪೋಸ್ಟ್ ಇಲ್ಲಿದೆ:
Update:
— Ashutosh Ranka (@AshutoshRanka) July 20, 2026
Me and @SauravDassss are still at Nadda ji's residence. Nadda ji has requested some time to align with their leadership with regards to our following demands:
- Immediate release of @Wangchuk66
- Dharmendra Pradhan's resignation
- 1Cr compensation for all NEET aspirants…
ಜೆಪಿ ನಡ್ಡಾ-ಸಿಜೆಪಿ ಸಭೆಯಲ್ಲಿ ಏನಾಯಿತು?
ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ಸಚಿವ ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು ಎಂದು ಸಂಘಟನೆ ತಿಳಿಸಿದೆ. ಸಭೆಗೆ ಹೊರಡುವ ಮೊದಲು, ದಾಸ್ ಎಕ್ಸ್ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದರು. “ಕಾಕ್ರೋಚ್ ಜನತಾ ಪಾರ್ಟಿಯ ಪರವಾಗಿ ನಾನು ಮತ್ತು ಅಶುತೋಷ್ ರಾಂಕಾ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲು ಹೊರಟಿದ್ದೇವೆ. ಸರ್ಕಾರ ಮಾತುಕತೆಗಾಗಿ ಕರೆಸಿದೆ. ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಯುವಕರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ” ಎಂದು ಅವರು ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಸೋನಮ್ ವಾಂಗ್ಚುಕ್ ಕೋರಿಕೆ ಮೇರೆಗೆ ಉಪಾವಾಸ ಅಂತ್ಯಗೊಳಿಸಿದ ಅಭಿಜಿತ್ ದೀಪ್ಕೆ; ವಶಕ್ಕೆ ಪಡೆದ ಪೊಲೀಸರು
ಸಭೆಯ ನಂತರ, ಇಬ್ಬರು ನಾಯಕರು ಕೇಂದ್ರ ಸಚಿವರೊಂದಿಗೆ ಸುಮಾರು 10 ನಿಮಿಷಗಳ ಕಾಲ ಮಾತನಾಡುವ ಮೊದಲು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾದಿರುವುದಾಗಿ ದಾಸ್ ಹೇಳಿದರು. “2 ಗಂಟೆಗಳಿಗೂ ಹೆಚ್ಚು ಕಾಲ ಕಾದ ನಂತರ, ಅಶುತೋಷ್ ರಾಂಕಾ ಮತ್ತು ನಾನು ಜೆ.ಪಿ. ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದೆವು” ಎಂದು ದಾಸ್ ಎಕ್ಸ್ನಲ್ಲಿ ಬರೆದಿದ್ದಾರೆ. ಸಿಜೆಪಿಯ ಬೇಡಿಕೆಗಳನ್ನು ವಿವರಿಸುವ ಲಿಖಿತ ಜ್ಞಾಪಕ ಪತ್ರವನ್ನು ನಿಯೋಗ ಸಲ್ಲಿಸಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
“ನಮ್ಮ ಬೇಡಿಕೆಗಳನ್ನು ಒಳಗೊಂಡ ಲಿಖಿತ ಪತ್ರವನ್ನು ನಾವು ಸಲ್ಲಿಸಿದ್ದೇವೆ. ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಅವರು ನಮಗೆ ಭರವಸೆ ನೀಡಿದ್ದಾರೆ” ಎಂದು ದಾಸ್ ತಿಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ತಕ್ಷಣ ಬಿಡುಗಡೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ 1 ಕೋಟಿ ರುಪಾಯಿ ಪರಿಹಾರ ನೀಡುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ ಎಂದು ರಂಕಾ ಹೇಳಿದ್ದಾರೆ.
ಈ ಮೂರು ಬೇಡಿಕೆಗಳ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಚೆಂಡು ಈಗ ಅವರ ಅಂಗಳದಲ್ಲಿದೆ ಎಂದು ದಾಸ್ ತಿಳಿಸಿದ್ದಾರೆ.