Operation Sindoor: ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡ ಭಾರತ; ಸಿನಿಮಾ ಮಂದಿ ಏನಂದ್ರು?
ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಇದೀಗ ಭಾರತೀಯ ಸೇನೆ ಭರ್ಜರಿಯಾಗಿ ಸೇಡು ತೀರಿಸಿಕೊಂಡಿದೆ. ಪ್ರವಾಸಿಗರ ಧರ್ಮ ವಿಚಾರಿಸಿ ಉಗ್ರರು ಮುಸ್ಲಿಮೇತರರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಹಿಂದೂ ಮಹಿಳೆಯರ ಕುಂಕುಮ ಅಳಿಸಿದವರನ್ನು ಪಾಕ್ ಒಳಗೇ ನುಗ್ಗಿ ಹೊಡೆಯಲಾಗಿದೆ. ಭಾರತೀಯ ಸೇನೆ ಮಧ್ಯ ರಾತ್ರಿ ನಡೆಸಿದ ಈ ದಾಳಿಯಲ್ಲಿ 70ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಭಾರತೀಯ ಸೇನೆಯ ಈ ದಾಳಿಗೆ ಬಾಲಿವುಡ್ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾರು ಏನಂದರು ಎನ್ನುವ ವಿವರ ಇಲ್ಲಿದೆ.



ರಜನಿಕಾಂತ್
ಭಾರತೀಯ ಸೇನೆ ಮೇ 7ರಂದು ಮುಂಜಾನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ʼʼಹೋರಾಟ ಆರಂಭವಾಗಿದೆ. ಯೋಜನೆ ಪೂರ್ಣವಾಗುವವರೆಗೆ ವಿರಮಿಸುವುದೇ ಇಲ್ಲ. ಇಡೀ ದೇಶವೇ ಭಾರತೀಯ ಸೇನೆಯೊಂದಿಗೆ ಇದೆ. ಜೈ ಹಿಂದ್ʼʼ ಎಂದಿದ್ದಾರೆ.

ಕಂಗನಾ ರಾಣಾವತ್
ಆಪರೇಷನ್ ಸಿಂಧೂರ್ ನಡೆಸಿದ ಭಾರತೀಯ ಸೇನೆಗೆ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ''ಆಪರೇಷನ್ ಸಿಂಧೂರ್: ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ. ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆಗಳಲ್ಲಿ ದಾಳಿ ನಡೆಸಿ ಉಗ್ರರ ಅಡಗುತಾಣವನ್ನು ಧ್ವಂಸಗೊಳಿಸಿದೆʼʼ ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಕುಮಾರ್
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಕೂಡ ಆಪರೇಷನ್ ಕೇಸರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ʼʼಜೈ ಹಿಂದ್, ಜೈ ಮಹಾಕಾಳ್ʼʼ ಎಂದು ಬರೆದು ಭಾರತೀಯ ಸೇನೆಗೆ ಬೆಂಬಲ ಸೂಚಿಸಿದ್ದಾರೆ.

ಚಿರಂಜೀವಿ
ಟಾಲಿವುಡ್ ಸೂಪರ್ ಸ್ಟಾರ್, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ನಟ ಚಿರಂಜೀವಿ ಅವರು ಎಕ್ಸ್ ಖಾತೆಯಲ್ಲಿ ಆಪರೇಷನ್ ಸಿಂಧೂರ್ ಪೋಸ್ಟ್ ಶೇರ್ ಮಾಡಿ ʼʼಜೈ ಹಿಂದ್ʼʼ ಎಂದು ಬರೆದುಕೊಂಡಿದ್ದಾರೆ. ಜತೆಗೆ ಭಾರತದ ಧ್ವಜವನ್ನೂ ಉಲ್ಲೇಖಿಸಿದ್ದಾರೆ.

ನಿಮ್ರತ್ ಕೌರ್
ʼದಿ ಲಂಚ್ಬಾಕ್ಸ್ʼ, ʼಏರ್ಲಿಫ್ಟ್ʼ ಬಾಲಿವುಡ್ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ನಿಮ್ರತ್ ಕೌರ್ ಕೂಡ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಬೆಂಬಲ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಅವರು, ʼʼನಮ್ಮ ಸೇನೆಯೊಂದಿಗೆ ನಿಲ್ಲುತ್ತೇವೆ. ಒಂದು ದೇಶ, ಒಂದು ಯೋಜನೆ. ಜೈ ಹಿಂದ್ʼʼ ಎಂದು ಬರೆದುಕೊಂಡಿದ್ದಾರೆ.

ರಿತೇಶ್ ದೇಶ್ಮುಖ್
ಬಾಲಿವುಡ್, ಮರಾಠಿ ಚಿತ್ರರಂಗದ ಜನಪ್ರಿಯ ನಟ ರಿತೇಶ್ ದೇಶ್ಮುಖ್ ʼʼಜೈ ಹಿಂದ್. ಭಾರತ ಮಾತಾ ಕಿ ಜೈ. ಆಪರೇಷನ್ ಸಿಂಧೂರ್ʼʼ ಎಂದು ಹೇಳಿದ್ದಾರೆ. ಭಾರತೀಯ ಸೇನೆ ಉಗ್ರರ ನೆಲೆಯನ್ನು ಯಶಸ್ವಿಯಾಗಿ ಧ್ವಂಸಗೊಳಿಸಿರುವುದನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.

ಅನುಪಮ್ ಖೇರ್
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಆಪರೇಷನ್ ಸಿಂಧೂರ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ʼʼಭಾರತ್ ಮಾತಾ ಕೀ ಜೈ. ಆಪರೇಷನ್ ಸಿಂಧೂರ್ʼʼ ಎಂದು ಹೇಳಿದ್ದಾರೆ. ಆ ಮೂಲಕ ಸೇನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪರೇಶ್ ರಾವೆಲ್
ಬಾಲಿವುಡ್ ಹಿರಿಯ ನಟ, ರಾಜಕಾರಣಿ, ಚಿತ್ರ ನಿರ್ಮಾಪಕ ಪರೇಶ್ ರಾವಲ್ ಅವರೂ ಭಾರತೀಯ ಈ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಅವರು ಈ ಕಾರ್ಯಾಚರಣೆ ಕೈಗೊಂಡ ಭಾರತೀಯ ಸೇನೆ ಮತ್ತು ಪ್ರದಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಮಧುರ್ ಭಂಡಾರ್ಕರ್
ಬಾಲಿವುಡ್ನ ಜನಪ್ರಿಯ ನಿರ್ದೇಶಕ ಮಧುರ್ ಭಂಡಾರ್ಕರ್ ಅವರೂ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ʼʼಸೇನೆಗಾಗಿ ನಮ್ಮ ಪ್ರಾರ್ಥನೆ ಸದಾ ಇರುತ್ತದೆ. ದೇಶಕ್ಕಾಗಿ ನಾವೆಲ್ಲ ಒಗ್ಗಟ್ಟಿನಿಂತ ನಿಲ್ಲುತ್ತೇವೆ. ಜೈ ಹಿಂದ್, ವಂದೇ ಭಾರತ್ʼʼ ಎಂದು ಬರೆದುಕೊಂಡಿದ್ದಾರೆ. ಹೀಗೆ ಅನೇಕ ಸೆಲೆಬ್ರಿಟಿಗಳು ಆಪರೇಷನ್ ಸಿಂಧೂರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.