ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

HD Kumaraswamy: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಸಬೇಡಿ, ಇದೆಲ್ಲಾ ಬೋಗಸ್ ಎಂದ ಎಚ್‌ಡಿಕೆ

State Congress Government: ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ಬೆಂಗಳೂರು ಜನರಿಗೆ ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ. ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ. ಇವರ ಮಾತಿಗೆ ಮರುಳಾಗಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಬೋಗಸ್: ಎಚ್‌ಡಿಕೆ

-

Profile Siddalinga Swamy Oct 25, 2025 7:01 PM

ಬೆಂಗಳೂರು: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಎನ್ನುವುದೇ ಬೋಗಸ್. ದುಡ್ಡು ಹೊಡೆಯುವುದಕ್ಕೆ ಮಾಡಿರುವ ಸುಲಿಗೆ ಕಾರ್ಯಕ್ರಮ ಇದಾಗಿದೆ. ಯಾರೂ ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಹಣ ಕಟ್ಟಬೇಡಿ. ಎರಡು ವರ್ಷಗಳಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಡಿಮೆ ದರದಲ್ಲಿ ನಿಮಗೆ ಖಾತೆ ಮಾಡಿಕೊಡುತ್ತೇವೆ. ಈ ಸರ್ಕಾರದ ಬೋಗಸ್ ಆಮಿಷಕ್ಕೆ ಮರುಳಾಗಬೇಡಿ. ಇದು ನಾನು ಬೆಂಗಳೂರು ಜನತೆಗೆ ನೀಡುತ್ತಿರುವ ಮುಕ್ತ ಕರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ಬೆಂಗಳೂರು ಜನರಿಗೆ ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ. ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ. ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು ಎಂದು ಕರೆ ನೀಡಿದರು.

ಜನತೆ ಆತಂಕಕ್ಕೆ ಒಳಗಾಗಬೇಕಿಲ್ಲ. ಎರಡು ವರ್ಷ ಆದ ಮೇಲೆ ನಮ್ಮ ಮೈತ್ರಿ ಸರ್ಕಾರ ಬರುತ್ತದೆ. ಆಗ ಅತ್ಯಂತ ಸರಳವಾಗಿ, ಸುಲಭವಾಗಿ ಖಾತೆ ಮಾಡಿಕೊಡುತ್ತೇವೆ. ನಿಮಗೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ. ಈಗಾಗಲೇ ಆಸ್ತಿ ಸಂಪಾದನೆ ಮಾಡಲು ಸಾಲ ಮಾಡಿ ಬಡ್ಡಿ ಕಟ್ಟುತ್ತಿದ್ದೀರಿ. ಈಗ ಎ ಖಾತಾ ಮಾಡಿಸಲು ಲಕ್ಷಾಂತರ ರೂಪಾಯಿ ಸಾಲ ಮಾಡಬೇಡಿ. ಇನ್ನೊಮ್ಮೆ ಸಾಲದ ಸುಳಿಗೆ ಸಿಕ್ಕಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಈಗಾಗಲೇ ಬೆಲೆ ಏರಿಕೆ ಮತ್ತು ತೆರಿಗೆ ಹೇರಿಕೆಯಿಂದ ಜನತೆ ಬಸವಳಿಸಿದ್ದಾರೆ. ಇಂಥ ಹೊತ್ತಿನಲ್ಲಿ ದೀಪಾವಳಿ ಕೊಡುಗೆ ಎಂದು ಪುಟಗಟ್ಟಲೆ ಜಾಹೀರಾತು ಕೊಟ್ಟುಕೊಂಡು ಬಂದ ಈ ಸರ್ಕಾರ ಎ ಖಾತಾ ಎನ್ನುವ ದೋಖಾ ಕಾರ್ಯಕ್ರಮವನ್ನು 6ನೇ ಗ್ಯಾರಂಟಿಯನ್ನು ಜನರಿಗೆ ದೀಪಾವಳಿ ಉಡುಗೊರೆ ಕೊಟ್ಡಿದ್ದೇವೆ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ. ದೀಪಾವಳಿ ಕೊಡುಗೆ ಎಂದರೆ ಜನರಿಂದ ಲಕ್ಷ ಲಕ್ಷ ಪೀಕುವುದೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಬೋಗಸ್ ಕಾರ್ಯಕ್ರಮದ ಬಗ್ಗೆ ಈ ಸರ್ಕಾರ ನಿತ್ಯ ಜಾಹಿರಾತು ನೀಡುತ್ತಿದೆ. 15 ದಿನಗಳಿಂದ ಜಾಹೀರಾತು ಕೊಡುತ್ತಿದೆ. ಇದು ನಾಡಿನ ಜನರಿಗೆ ಟೋಪಿ ಹಾಕುವ ಕೆಲಸ. ಖಾತಾ ಪರಿವರ್ತನೆ ಮಾಡಲಿ, ಬೇಡ ಎಂದವರು ಯಾರು? ಆದರೆ, ಲಕ್ಷ ಲಕ್ಷ ಸುಲಿಗೆ ಯಾಕೆ? ಎಂದು ಅವರು ಪ್ರಶ್ನಿಸಿದರು.

2007ರಲ್ಲಿ ನಾನು ಸಿಎಂ ಇದ್ದಾಗ ಕೇಂದ್ರ ಸರ್ಕಾರದಿಂದ ಒಂದು ಯೋಜನೆ ಆರಂಭವಾಯಿತು. ಅದರ ಮೂಲಕ 5 ವರ್ಷಗಳಲ್ಲಿ ನಗರಗಳ ಅಭಿವೃದ್ಧಿ ಮಾಡುವ ಯೋಜನೆ ಅದು. ನಾನು ಆಗ ಬೆಂಗಳೂರು, ಮೈಸೂರು ಅಭಿವೃದ್ಧಿಗೆ ಒತ್ತು ನೀಡಿದೆ. ಬೆಂಗಳೂರಿನಲ್ಲಿ 198 ವಾರ್ಡ್ ಮಾಡಿ BBMP ಆಯಿತು. ಅದಕ್ಕೆ 110 ಹಳ್ಳಿಗಳನ್ನು ಸೇರಿಸಿದ್ದೆ. ಬೆಂಗಳೂರು, ಮೈಸೂರು ಅಭಿವೃದ್ಧಿಗೆ 25 ಸಾವಿರ ಕೋಟಿ ಹಣ ಹೊಂದಿಸುವ ಯೋಜನೆ ಅದು. ಬೆಂಗಳೂರು ಅಭಿವೃದ್ಧಿಗೆ ಸಮಗ್ರ ಕಾರ್ಯಕ್ರಮ ರೂಪಿಸಿದ್ದೆ ಎಂದು ಹೇಳಿದರು.

2007ರ ನನ್ನ ಕಾಲದಲ್ಲಿ ಇಂಥ ನಿವೇಶನಗಳಿಗೆ ಖಾತೆ ಮಾಡಿಕೊಡುವ ನಿರ್ಧಾರ ಮಾಡಿದೆವು. 60 ಮತ್ತು ಅದರ ಒಳಗಿನ ಪ್ರತಿ ಚದರ ಮೀಟರ್‌ಗೆ 200 ರೂ., 60ರಿಂದ 120 ಚದರ ಮೀಟರ್‌ಗೆ- 400 ರೂ., 120 ಚದರ ಅಡಿ ಮೇಲ್ಪಟ್ಟ 600 ರೂ. ನಿಗದಿ ಮಾಡಿದೆವು. ಆದಾದ ಮೇಲೆ ಕೆಲವರು ಕೋರ್ಟ್‌ಗೆ ಹೋಗ್ತಾರೆ. ಕೋರ್ಟ್ ಅಂದು 15 ದಿನಗಳಲ್ಲಿ ಖಾತೆ ಮಾಡಿಕೊಡಿ ಅಂತ ಹೇಳಿತ್ತು. ಅಂದೇ ಜನರಿಂದ ಖಾತೆ ಮಾಡಿಸಿಕೊಡಲು ಸರ್ಕಾರ/ BBMP ಹಣ ಪಡೆದಿದೆ. ಹೀಗಾಗಿ ಮತ್ತೆ ಇವರು ಯಾಕೆ ಹಣ ಪಡೆಯಬೇಕು ಎಂದು ಪ್ರಶ್ನಿಸಿದರು.

ಇನ್ನು ಎಷ್ಟು ದಿನ ಎಂದು ಜನರಿಂದ ಹಗಲ ದರೋಡೆ ಮಾಡ್ತೀರಾ? ನಿಮಗೆ ಕೆಟ್ಟಕಾಲ ಬಂದಿದೆ. ಜನರ ಪರ ಮಾತನಾಡಿದರೆ ಅಸೂಯೆಗೆ ನಾವು ಮಾತಾಡ್ತೀವಿ ಅಂತಾರೆ. ಬಿ ಖಾತಾ ಎ ಖಾತಾ ಎಲ್ಲೂ ಇಲ್ಲ. ಅದೂ ಸಾಲದು ಅನ್ನುವಂತೆ ಈಗ ಓಸಿ,‌ ಸಿಸಿ ಅಂತ ಮತ್ತೊಂದು ಮಾಡ್ತಾ ಇದ್ದಾರೆ. 70% ಜನರಿಗೆ ಓಸಿ ವಿನಾಯಿತಿಯಿಂದ ಲಾಭ ಅಂತ ಹೇಳ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: 15ನೇ ಹಣಕಾಸು ಆಯೋಗದಲ್ಲಿ ವಿಶೇಷ ಅನುದಾನ ಪ್ರಸ್ತಾಪವೇ ಇಲ್ಲ: ಜೋಶಿ

ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎಸ್.ಎಲ್. ಭೋಜೇಗೌಡ, ಜವರಾಯಿಗೌಡ, ವಿವೇಕಾನಂದ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್.ಎಂ. ರಮೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ ಹಾಗೂ ಇತರರು ಹಾಜರಿದ್ದರು.