ನಮ್ಮಲ್ಲಿ ತಮಿಳುನಾಡಿಗೆ ಬಿಡುವಷ್ಟು ಕಾವೇರಿ ನೀರಿಲ್ಲ: ಸಚಿವ ಎಂ.ಬಿ. ಪಾಟೀಲ್
MB Patil: ಚೆನ್ನಾಗಿ ಮಳೆಯಾದರೆ ಕಾವೇರಿ ನೀರಿನ ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ. ಅಂತಹ ವರ್ಷಗಳಲ್ಲಿ ನಾವು ನಿಗದಿತ 177 ಟಿಎಂಸಿಗಿಂತ ಹೆಚ್ಚು ನೀರನ್ನೇ ತಮಿಳುನಾಡಿಗೆ ಹರಿಸುತ್ತಿದ್ದೇವೆ. ಆದರೆ ಬರಗಾಲ ಬಂದಾಗ ಯಾವ ಸಂಕಷ್ಟ ಸೂತ್ರವೂ ಇಲ್ಲ. ಇದಕ್ಕೆಲ್ಲ ಮೇಕೆದಾಟು ಜಲಾಶಯ ನಿರ್ಮಾಣವೇ ಉತ್ತರ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (ಸಂಗ್ರಹ ಚಿತ್ರ) -
ಬೆಂಗಳೂರು, ಜು.29: ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಒಳ್ಳೆಯ ಮಳೆಯೇ ಆಗಿಲ್ಲ. ಹೀಗಾಗಿ ಈ ವ್ಯಾಪ್ತಿಯ ಜಲಾಶಯಗಳಲ್ಲಿ ನೀರಿಲ್ಲ. ಹೀಗಿರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ 4.50 ಟಿಎಂಸಿ ನೀರು ಹರಿಸುವಂತೆ ರಾಜ್ಯಕ್ಕೆ ಹೇಳಿರುವುದು ಸರಿಯಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (MB Patil) ಹೇಳಿದ್ದಾರೆ. ಬುಧವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.
ಚೆನ್ನಾಗಿ ಮಳೆಯಾದರೆ ಕಾವೇರಿ ನೀರಿನ ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ. ಅಂತಹ ವರ್ಷಗಳಲ್ಲಿ ನಾವು ನಿಗದಿತ 177 ಟಿಎಂಸಿಗಿಂತ ಹೆಚ್ಚು ನೀರನ್ನೇ ತಮಿಳುನಾಡಿಗೆ ಹರಿಸುತ್ತಿದ್ದೇವೆ. ಆದರೆ ಬರಗಾಲ ಬಂದಾಗ ಯಾವ ಸಂಕಷ್ಟ ಸೂತ್ರವೂ ಇಲ್ಲ. ಇದಕ್ಕೆಲ್ಲ ಮೇಕೆದಾಟು ಜಲಾಶಯ ನಿರ್ಮಾಣವೇ ಉತ್ತರ ಎಂದು ಪ್ರತಿಪಾದಿಸಿದ್ದಾರೆ.
ಕಾವೇರಿ ನೀರು ಹಂಚಿಕೆಯ ಅಂತಿಮ ತೀರ್ಪಿನಲ್ಲಿ ನಮಗೆ ಹೆಚ್ಚುವರಿಯಾಗಿ ಸಿಕ್ಕಿದ 14 ಟಿಎಂಸಿ ನೀರೂ ಸೇರಿ ಒಟ್ಟು 65 ಟಿಎಂಸಿ ನೀರನ್ನು ನಾವು ಸಂಗ್ರಹಿಸಿ ಇಟ್ಟುಕೊಳ್ಳಲು ವ್ಯವಸ್ಥೆ ಬೇಕಾಗಿದೆ. ಹೀಗಾಗಿ ನಾನು ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗಲೇ ಮೇಕೆದಾಟು ಯೋಜನೆಯ ಪರಿಕಲ್ಪನೆ ಬಂತು. ಇದರಿಂದ ತಮಿಳುನಾಡಿಗೂ ಪ್ರಯೋಜನವಿದೆ. ಆದರೆ ಅಲ್ಲಿಯ ಆಂತರಿಕ ರಾಜಕಾರಣವು ಇದಕ್ಕೆ ಆಸ್ಪದ ಕೊಡುತ್ತಿಲ್ಲ. ಇದರ ಬದಲು ಅವರು ಮೇಕೆದಾಟು ಜಲಾಶಯದಿಂದ ತಮಿಳುನಾಡಿಗೂ ಲಾಭವಿದೆ ಎನ್ನುವ ಸರಳ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೆ ಜಲ ಸಂಪನ್ಮೂಲ ಖಾತೆಯನ್ನೂ ನಿರ್ವಹಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಈಗಿನ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಕೂತು, ಈಗಿನ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕಲಿದ್ದಾರೆ. ಕೇಂದ್ರ ಸರ್ಕಾರದ ಸಮಿತಿ ಕೂಡ ಈಗಿನ ನೀರು ಸಂಗ್ರಹಣೆಗೆ ಸಂಬಂಧಿಸಿದ ವಿಡಿಯೋ ಮತ್ತು ಅಂಕಿಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.