ಸಂಸತ್ತಿನಲ್ಲಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ ನಡುವೆ ಲಘು ಹಾಸ್ಯ, ಹಸ್ತಲಾಘವ; ಅಂಬೇಡ್ಕರ್ ಜಯಂತಿ ವೇಳೆ ಅಪರೂಪದ ಕ್ಷಣ
PM Modi-Mallikarjun Kharge: ಅಂಬೇಡ್ಕರ್ ಜಯಂತಿ ಅಂಗವಾಗಿ ಸಂಸತ್ತಿನಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಲಘು ಹಾಸ್ಯಭರಿತ ಮಾತುಕತೆ ಹಾಗೂ ಹಸ್ತಲಾಘವ ನಡೆದದ್ದು ಎಲ್ಲರ ಗಮನ ಸೆಳೆಯಿತು. ರಾಜಕೀಯವಾಗಿ ಪರಸ್ಪರ ವಿರೋಧಾಭಿಪ್ರಾಯಗಳನ್ನು ಹೊಂದಿದ್ದರೂ, ಆ ಕ್ಷಣದಲ್ಲಿ ಇಬ್ಬರೂ ನಗುಮುಖದಿಂದ ಪರಸ್ಪರ ಮಾತುಕತೆ ನಡೆಸಿದ್ದು ವಿಶೇಷ.
ನರೇಂದ್ರ ಮೋದಿ - ಮಲ್ಲಿಕಾರ್ಜುನ ಖರ್ಗೆ -
ನವದೆಹಲಿ, ಏ. 14: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರ 135ನೇ ಜನ್ಮದಿನದ ಅಂಗವಾಗಿ ಮಂಗಳವಾರ ಸಂಸತ್ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಪುಷ್ಪ ನಮನ ಕಾರ್ಯಕ್ರಮದಲ್ಲಿ ರಾಜಕೀಯ ವೈರಿಗಳಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಡುವೆ ಅಪರೂಪದ ಆತ್ಮೀಯ ಕ್ಷಣ ಕಂಡುಬಂತು. ಪ್ರೇರಣಾ ಸ್ಥಳದಲ್ಲಿ ಇಬ್ಬರು ನಾಯಕರು ಪರಸ್ಪರ ಹಸ್ತಲಾಘವ ಮಾಡಿ, ನಗುನಗುತ ಮಾತನಾಡಿಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಪುಷ್ಪ ನಮನ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಮೊದಲು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭಿನಂದಿಸಿದರು. ನಂತರ ಪಕ್ಕದಲ್ಲೇ ಇದ್ದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರತ್ತ ತಿರುಗಿ ಹಸ್ತಲಾಘವ ಮಾಡಿದರು. ಈ ವೇಳೆ ಇಬ್ಬರೂ ನಾಯಕರು ಪರಸ್ಪರ ಏನೋ ಚರ್ಚಿಸಿ ಜೋರಾಗಿ ನಗುತ್ತಿರುವುದು ಕಂಡುಬಂತು. ಗಂಭೀರ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಇಬ್ಬರೂ ನಾಯಕರು ತೋರಿದ ಈ ಅಪರೂಪದ ಕ್ಷಣ ನೆರೆದಿದ್ದ ಇತರ ಸಂಸದರಲ್ಲೂ ನಗು ಮೂಡಿಸಿತು.
ಮೋದಿ ಮತ್ತು ಖರ್ಗೆ ನಡುವಿನ ಆತ್ಮೀಯ ಕ್ಷಣ:
VIDEO | Delhi: PM Modi (@narendramodi) and Congress president Mallikarjun Kharge interact as they gather at the Parliament premises to pay floral tributes to Dr BR Ambedkar on his 135th birth anniversary.
— Press Trust of India (@PTI_News) April 14, 2026
(Source: Third Party)
(Full video available on PTI Videos -… pic.twitter.com/drkPXN2Kgx
ಮೂಲಗಳ ಪ್ರಕಾರ, ಈ ಸಂಭಾಷಣೆಯ ವೇಳೆ ಪ್ರಧಾನಿ ಮೋದಿ 'ನಾರಿ ಶಕ್ತಿ ವಂದನ್ ಅಧಿನಿಯಮ' (ಮಹಿಳಾ ಮೀಸಲಾತಿ ಕಾಯ್ದೆ 2023) ವಿಚಾರವಾಗಿ ಖರ್ಗೆ ಅವರ ಬೆಂಬಲ ಕೋರಿದರು. 2029ರ ವೇಳೆಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ಈ ಕಾಯ್ದೆಯು ಮಹಿಳೆಯರ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ ಮತ್ತು ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಎಂದು ಪ್ರಧಾನಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ತಮ್ಮ ಪಕ್ಷದ ಆಂತರಿಕ ಸಮಾಲೋಚನೆಯ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು. ಏಪ್ರಿಲ್ 16ರಿಂದ 18 ರವರೆಗೆ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಎಲ್ಲಾ ಕಾಲಕ್ಕೂ ಸಲ್ಲುತ್ತಾರೆ: ಸಿಎಂ ಸಿದ್ದರಾಮಯ್ಯ
ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಉಪಸ್ಥಿತರಿದ್ದರು. ದೇಶದ ಮೊದಲ ಕಾನೂನು ಸಚಿವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಂಪರೆಯನ್ನು ಸ್ಮರಿಸುವ ಈ ದಿನದಂದು ಮೋದಿ ಮತ್ತು ಖರ್ಗೆ ಅವರ ನಡುವಿನ ಈ ಮಾತುಕತೆಯು ರಾಜಕೀಯ ಕಡುವೈರಿಗಳ ನಡುವೆಯೂ ಸಂಸದೀಯ ಮೌಲ್ಯಗಳು ಜೀವಂತವಾಗಿವೆ ಎಂಬುದನ್ನು ಸಾಬೀತುಪಡಿಸಿತು.