"ಬೇಕಾದಷ್ಟು ನನ್ನ ಚಚ್ಚವ್ರೆ...": ಅಧಿವೇಶನದ ವೇಳೆ ಡಿ.ಕೆ. ಶಿವಕುಮಾರ್ ಬೇಸರ
ʼʼಪ್ರತಿಪಕ್ಷ ನಾಯಕ ಆರ್. ಅಶೋಕ್, ಅಶ್ವತ್ಥ ನಾರಾಯಣ್ ಸೇರಿದಂತೆ ಅನೇಕ ಹಿರಿಯ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ, ಟೀಕೆಗಳನ್ನೂ ಮಾಡಿದ್ದಾರೆ. ಚಿನ್ನವನ್ನು ಪರೀಕ್ಷಿಸುವಾಗ ಚಿನ್ನವನ್ನು ಬೆಂಕಿಗೆ ಹಾಕುವಂತೆ, ಮನುಷ್ಯನನ್ನು ಪರೀಕ್ಷೆ ಮಾಡಲು ಟೀಕೆ, ಆಪಾದನೆಗಳು ಬರುತ್ತವೆ. ಆಗ ನಾವು ಯಾವ ರೀತಿ ತಿದ್ದಿಕೊಳ್ಳಬೇಕೆಂದು ಪ್ರಯತ್ನಿಸುತ್ತೇವೆ. ಟೀಕೆ ಮಾಡಿದರೆಂದರೆ ನಾನು ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಹಾಗೆ ಮಾಧ್ಯಮದವರು ಸಹ ಬೇಕಾದಷ್ಟು ನನ್ನನ್ನು ಚಚ್ಚುತ್ತಾರೆ. ಬೇಕಾದಷ್ಟು ಸಂದರ್ಭಗಳಲ್ಲೂ ನಾನು ನೋಡಿದ್ದೇನೆ. ನನ್ನ ಮನೆ ಮೇಲೆ ರೇಡ್ ಆದಾಗ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಹೀಗೆ ಆಗಿದೆʼʼ ಎಂದು ಅಧಿವೇಶನದ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Siddalinga Swamy
Mar 26, 2026 5:02 PM
ಬೆಂಗಳೂರು, ಮಾ. 26: ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ʼʼವಿಪಕ್ಷ ನಾಯಕರು, ಮಾಧ್ಯಮದವರು ಬೇಕಾದಷ್ಟು ಬಾರಿ ನನ್ನನ್ನು ಟೀಕಿಸಿದ್ದಾರೆ. ನನ್ನ ಮನೆ ಮೇಲೆ ರೇಡ್ ಆದಾಗ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲೂ ನನ್ನನ್ನು ಮಾತಿನ ಮೂಲಕ ಚಚ್ಚಿದ್ದಾರೆ. ಆದರೆ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆʼʼ ಎಂದು ಹೇಳಿದರು. ʼʼಬೆಂಗಳೂರಿಗೆ ಏನಾದರೂ ಕೊಡುಗೆ ನೀಡಬೇಕು ಎಂದು ತುಂಬಾ ಆಸಕ್ತಿಯಿಂದ ನಗರಾಭಿವೃದ್ಧಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಹಿಂದೆ ನಾನು ಇಂಧನ ಸಚಿವನಾಗಿದ್ದೆ. ನನಗೆ ಆ ಜವಾಬ್ದಾರಿ ಸಾಕಷ್ಟು ತೃಪ್ತಿ ನೀಡಿದೆʼʼ ಎಂದರು.