ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elephant Attack in Bandipur: ಪ್ರಾಣಕ್ಕಿಂತ ಸೆಲ್ಫಿಯೇ ಹೆಚ್ಚಾಯ್ತಾ? ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪ್ರವಾಸಿಗ ಪಾರು; ಇಲ್ಲಿದೆ ಭಯಾನಕ ವಿಡಿಯೊ

Viral Video: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಕೇರಳದ ಪ್ರವಾಸಿಗರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಘಟನೆ ನಡೆದಿದೆ. ಈ ಭಯಾನಕ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಸ್ತೆ ಬದಿ ನಿಂತಿದ್ದ ಆನೆ ಬಳಿ ಸೆಲ್ಫಿ ಕ್ಲಿಕ್ಕಿಸಲು ಯುವಕನೊಬ್ಬ ಮುಂದಾಗಿದ್ದಾನೆ. ಈ ವೇಳೆ ಕೋಪಗೊಂಡ ಆನೆ ದಾಳಿ ಮಾಡಿದೆ.

ಸೆಲ್ಫಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ

Priyanka P Priyanka P Aug 11, 2025 8:03 PM

ಬಂಡೀಪುರ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಕೇರಳದ ಪ್ರವಾಸಿಗರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ (Viral Video). ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಘಟನೆ ನಡೆದಿದೆ (Elephant Attack in Bandipore). ಈ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ರಸ್ತೆ ಬದಿಯ ಪೊದೆಗಳ ಬಳಿ ನಿಂತಿದ್ದಾಗ ಆ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ರಸ್ತೆ ಬದಿ ನಿಂತಿದ್ದ ಆನೆ ಬಳಿ ಸೆಲ್ಫಿ ಕ್ಲಿಕ್ಕಿಸಲು ಯುವಕನೊಬ್ಬ ಮುಂದಾಗಿದ್ದಾನೆ. ಈ ವೇಳೆ ಕೋಪಗೊಂಡ ಆನೆ ದಾಳಿ ಮಾಡಿದೆ. ಈ ಘಟನೆಯನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸಿದ್ದಾರೆ.

ದೂರದಿಂದ ಚಿತ್ರೀಕರಿಸಲಾದ ಮೊದಲ ವಿಡಿಯೊದಲ್ಲಿ ಆನೆಯು ರಸ್ತೆಯ ಇನ್ನೊಂದು ಬದಿಯಿಂದ ಓಡುತ್ತಿರುವುದು ಕಂಡುಬಂದಿದೆ. ಅದು ದಾಟುತ್ತಿದ್ದಂತೆ, ಒಂದು ಬಿಳಿ ಕಾರು ಸಹ ಹಾದುಹೋಗುತ್ತಿರುವುದು ಸಹ ಸೆರೆಯಾಗಿದೆ. ಆದರೆ ಆ ಕಾರಿನ ಚಾಲಕ ಆನೆ ಹಾದುಹೋಗಲಿ ಎಂದು ಹಠಾತ್ತನೆ ನಿಲ್ಲಿಸುತ್ತಾನೆ. ನಂತರ ಆನೆಯು ಸಿಟ್ಟಿನಿಂದ ರಸ್ತೆಯಂಚಿನಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ನೇರವಾಗಿ ದಾಳಿ ಮಾಡುತ್ತದೆ. ಅವನು ಭಯಭೀತನಾಗಿ ಓಡಿದ್ದಾನೆ.

ಆನೆ ದಾಳಿಗೆ ಹೆದರಿ ಓಡುವಾಗ ಆತ ರಸ್ತೆಗೆ ಬಿದ್ದಿದ್ದಾನೆ. ಆನೆಯು ಆತನಿಗೆ ತುಳಿಯಲು ಮುಂದಾದಂತೆ ಕಾಣುತ್ತದೆ. ಈ ವೇಳೆ ಆಘಾತಕ್ಕೊಳಗಾದ ಸ್ಥಳದಲ್ಲಿದ್ದ ಜನರು ರಸ್ತೆಬದಿಯಿಂದ ಕಿರುಚಿದ್ದಾರೆ. ಅದೃಷ್ಟವಶಾತ್ ಕೆಲವು ಕ್ಷಣಗಳ ನಂತರ ಅದು ಹಿಂದೆ ಸರಿಯಿತು. ಇದರಿಂದಾಗಿ ಆ ವ್ಯಕ್ತಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.

ಇನ್ನು ಬಿಳಿ ಕಾರಿನ ಒಳಗಿನಿಂದ ಚಿತ್ರೀಕರಿಸಲಾದ ಎರಡನೇ ವಿಡಿಯೊದಲ್ಲಿ, ಭಯಾನಕ ವಿಡಿಯೊವನ್ನು ಬಹಳ ಹತ್ತಿರದಿಂದ ನೋಡಬಹುದು. ಆನೆಯು ವೇಗವಾಗಿ ಹಿಂಬಾಲಿಸುತ್ತಿರುವಾಗ ಆ ವ್ಯಕ್ತಿ ಓಡುತ್ತಿರುವುದನ್ನು ಇಲ್ಲಿ ತೋರಿಸಲಾಗಿದೆ. ಈ ವೇಳೆ ರಸ್ತೆ ಮಧ್ಯದಲ್ಲೇ ಆ ವ್ಯಕ್ತಿ ಎಡವಿ ಬಿದ್ದಿದ್ದಾನೆ. ಆನೆ ಅವನ ಮೇಲೆ ಸ್ವಲ್ಪ ಹೊತ್ತು ಕಾಲಿಟ್ಟು ನಂತರ ಸುಮ್ಮನಾಗುತ್ತದೆ. ಅದೃಷ್ಟವಶಾತ್ ಆತ ಅಪಾಯದಿಂದ ಪಾರಾಗಿದ್ದಾನೆ.

ವಿಡಿಯೊ ವೀಕ್ಷಿಸಿ:



“ಕೇವಲ ಸೆಲ್ಫಿಗಾಗಿ ನಿಮ್ಮ ಪ್ರಾಣವನ್ನೇ ಪಣಕ್ಕಿಡುವುದು ಮೂರ್ಖತನ. ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಆನೆ ದಾಳಿಯಿಂದ ಕೇರಳದ ಪ್ರವಾಸಿಗರೊಬ್ಬರು ಪವಾಡಸದೃಶವಾಗಿ ಬದುಕುಳಿದರು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ, ಅನೇಕರು ಪ್ರವಾಸಿಗನ ಕೃತ್ಯವನ್ನು ಟೀಕಿಸಿದ್ದಾರೆ. ಕೆಲವು ಭಾರತೀಯರಲ್ಲಿ ನನಗೆ ಹೆಚ್ಚು ದ್ವೇಷವಿರುವ ವಿಷಯವೆಂದರೆ ವನ್ಯಜೀವಿಗಳ ವಿಷಯ. ಈ ಮೂರ್ಖರಿಗೆ ಆನೆ ರಸ್ತೆಯಲ್ಲಿ ಬಂದಾಗ ಸುಮ್ಮನೆ ಕುಳಿತು ಕಾಯುವ ತಾಳ್ಮೆಯಿಲ್ಲ, ಅದರ ಪಕ್ಕದಲ್ಲೇ ಓಡಾಡುತ್ತಾರೆ ಎಂದು ಒಬ್ಬ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮೂರ್ಖರಿಗೆ 'ಪಾರ್ಕಿಂಗ್ ನಿಷೇಧಿಸಿ/ ಅಡ್ಡಾಡುವುದನ್ನು ನಿಷೇಧಿಸಿ' ಎಂಬ ಎಚ್ಚರಿಕೆ ಫಲಕಗಳನ್ನು ಓದಲೂ ಬರುವುದಿಲ್ಲ. ಬಂಡೀಪುರ-ಮುದುಮಲೈ-ಮಸಿನಗುಡಿ ಪ್ರದೇಶದಲ್ಲಿ ಕನಿಷ್ಠ 20 ಅಂತಹ ಎಚ್ಚರಿಕೆ ಫಲಕಗಳಿವೆ ಎಂದು ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿದರು.

ವರದಿಯ ಪ್ರಕಾರ, ಆ ವ್ಯಕ್ತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಗುರುತನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.