Shashidhara Halady Column: ಸ್ಪೂರ್ತಿ ತುಂಬುವ ಬರಹಗಳು
ನಮ್ಮೊಳಗೆ ಇರುವ ಬುದ್ಧ ಅದೆಷ್ಟೋ ಬಾರಿ ಸುಶುಪ್ತನಾಗಿರಬಹುದು; ಇಂದಿನ ಒತ್ತಡದ ಬದುಕಿನ ಧಾವಂತದಲ್ಲಿ, ನಾಗಾಲೋಟದಲ್ಲಿ, ಆತನ ಮಾತುಗಳನ್ನು ನಾವು ಕೇಳಿಸಿಕೊಳ್ಳದೇ ಇರಬಹುದು; ಆದರೆ ನಿಜವಾದ ಬದುಕಿನ ಗುರಿಯ ದಾರಿಯಲ್ಲಿ ಸಾಗಲು ನಮ್ಮೊಳಗಿರುವ ಬುದ್ಧನ ಮಾತುಗಳನ್ನು ಆಲಿಸ ಬೇಕು, ಆತನ ಯೋಚನೆಗಳನ್ನು ನಮ್ಮದಾಗಿಸಿಕೊಳ್ಳಬೇಕು.


ಶಶಿಧರ ಹಾಲಾಡಿ
ಚಿಕ್ಕದು ಚೆಂದ ಎಂಬ ಮಾತಿದೆ. ಈ ಪುಸ್ತಕದಲ್ಲಿ 75 ಬರಹಗಳಿವೆ. ಪ್ರತಿ ಬರಹದ ಗಾತ್ರ ಎರಡು ಪುಟಕ್ಕಿಂತ ಕಡಿಮೆ. ಇಲ್ಲಿ ನೊಂದ ಮನವನ್ನು ಸಂತೈಸುವ ಬರಹಗಳಿವೆ, ಬದುಕಿಗೆ ಸ್ಪೂರ್ತಿ ತುಂಬುವ ಬರಹಗಳಿವೆ.
ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರ ಜತೆಯಲ್ಲೇ ನಾವೂ ಓಡುತ್ತಾ ಸಾಗಿದರೆ, ಆ ವೇಗದಲ್ಲಿ ನಾವೆಲ್ಲಾ ಕಳೆದು ಹೋಗುವ ಸಾಧ್ಯತೆ ಇದೆ; ಮಾತ್ರವಲ್ಲ, ಇಂದಿನ ತರಾತುರಿ, ಗುರಿ, ನಿರಂತರ ಯಶಸ್ಸಿನ ತುಡಿತ ಇವುಗಳು ನಮ್ಮ ಮೇಲೆ ಅದಾವ ಪರಿಯ ಒತ್ತಡವನ್ನು ಹೇರುತ್ತಿವೆಯೆಂದರೆ, ‘ಈ ರೀತಿ ನಿರಂತರವಾಗಿ ಓಡುತ್ತಾ ಇರುವುದೇ ನಮ್ಮ ಬದುಕಿನ ಗುರಿ’ ಎಂದು ಬಹುಪಾಲು ಜನರು ತಿಳಿಯುವ ಸಾಧ್ಯತೆ ಇದೆ.
ಇದರಿಂದಾಗುವ ದೊಡ್ಡ ನಷ್ಟವೆಂದರೆ, ನಮ್ಮ ಜೀವನದ ‘ನಿಜವಾದ ಗುರಿ’ ಎಂಬುದು ಏನೆಂಬುದೇ ಮರೆತುಹೋಗುತ್ತದೆ! ಯಶಸ್ಸಿನ ಬೆನ್ನು ಹತ್ತುವ ಒತ್ತಡದ ಬದುಕಿನ ಏರಿಳಿತಗಳನ್ನು ನಿಭಾ ಯಿಸುತ್ತಾ, ಆ ರಭಸ ಅಲೆಗಳ ನಡುವೆ ಬದುಕನ್ನು ಸಮತೋಲನದಲ್ಲಿ ನಡೆಯುವುದೇ ನಮ್ಮ ಬದುಕಿನ ಗುರಿ ಎಂದು ತಿಳಿಯುವ ಸಾಧ್ಯತೆ ಇದೆ.
ಹಾಗಿದ್ದರೆ ನಮ್ಮ ಬದುಕಿನ ನಿಜವಾದ ಗುರಿ ಯಾವುದು ಮತ್ತು ಅದನ್ನು ಗುರುತಿಸುವುದು ಹೇಗೆ? ಇಂತಹ ಪ್ರಶ್ನೆಯನ್ನು ನಾವೇ ಕೇಳಿಕೊಂಡಾಗ, ‘ನಮ್ಮೊಳಗೆ ಒಬ್ಬ ಬುದ್ಧನಿದ್ದಾನೆ, ಅವನ ಮಾತು ಗಳನ್ನು, ಅವನ ಸೂಚನೆಗಳನ್ನು, ಅವನ ಬೋಧನೆಗಳನ್ನು ಆಲಿಸುವುದು ಅಗತ್ಯ’ ಎಂದೆನಿಸಲೂ ಬಹುದು. ಸದಾ ಶಾಂತಿಯನ್ನು ಬಯಸುವ, ಸುತ್ತಲಿನವರ ಜತೆ ನಮ್ಮ ಬದುಕೂ ನೆಮ್ಮದಿಯಿಂದ ಕೂಡಿರಬೇಕೆಂದು ಆಶಿಸುವ ಬೋಧನೆಗಳನ್ನು ಬುದ್ಧನಲ್ಲಿ ಕಾಣಬಹುದು.
ಇದನ್ನೂ ಓದಿ: Shashidhara Halady Column: ಸಣ್ಣ ಹೊಳೆ ದಾಟಲು ಒಂದೇ ಮರದ ಸಂಕ !
ನಮ್ಮೊಳಗೆ ಇರುವ ಬುದ್ಧ ಅದೆಷ್ಟೋ ಬಾರಿ ಸುಶುಪ್ತನಾಗಿರಬಹುದು; ಇಂದಿನ ಒತ್ತಡದ ಬದುಕಿನ ಧಾವಂತದಲ್ಲಿ, ನಾಗಾಲೋಟದಲ್ಲಿ, ಆತನ ಮಾತುಗಳನ್ನು ನಾವು ಕೇಳಿಸಿಕೊಳ್ಳದೇ ಇರಬಹುದು; ಆದರೆ ನಿಜವಾದ ಬದುಕಿನ ಗುರಿಯ ದಾರಿಯಲ್ಲಿ ಸಾಗಲು ನಮ್ಮೊಳಗಿರುವ ಬುದ್ಧನ ಮಾತು ಗಳನ್ನು ಆಲಿಸಬೇಕು, ಆತನ ಯೋಚನೆಗಳನ್ನು ನಮ್ಮದಾಗಿಸಿಕೊಳ್ಳಬೇಕು.
ಇಂತಹ ಆಲಿಸುವ ಪ್ರವೃತ್ತಿಯನ್ನು ನೆನಪಿಸುವ ಒಂದು ಪ್ರಾಮಾಣಿಕ ಪ್ರಯತ್ನವನ್ನು ‘ನಮ್ಮೊಳಗೆ ಬುದ್ಧನೊಬ್ಬ’ ಪುಸ್ತಕದ ಮೂಲಕ ಮಹಾದೇವ ಬಸರಕೋಡ ಮಾಡಿದ್ದಾರೆ. ಇಲ್ಲಿ 75 ಪುಟ್ಟ ಪುಟ್ಟ ಬರಹಗಳಿವೆ. ಪುಸ್ತಕದ ಶೀರ್ಷಿಕೆಯು ಅರ್ಥಪೂರ್ಣ ಎನಿಸಿದ್ದು, ಓದುಗರ ಮನಸ್ಸನ್ನು ಸಣ್ಣಗೆ ಎಚ್ಚರಿಸುತ್ತದೆ! ನಮ್ಮ ಜೀವನವೆಂದರೆ ಕೇವಲ ವೃತ್ತಿ ನಿಭಾಯಿಸುವುದು, ಹಣ ಗಳಿಸುವುದು, ಬಾಹ್ಯ ಸಂತಸವನ್ನು ಅನುಭವಿಸುವುದು, ಮೋಜಿನ ಜೀವನವನ್ನು ನಡೆಸುವುದು ಎಂಬುದು ಮಾತ್ರವಲ್ಲ, ಅದರ ಜತೆಯಲ್ಲೇ, ಶಾಂತಿ, ನೆಮ್ಮದಿ, ಪರ ಹಿತ, ಲೋಕ ಹಿತ, ಪರೋಪಕಾರ ಮತ್ತು ಇತರ ಸದ್ಗುಣಗಳನ್ನು ಒಳಗೊಂಡು ಬದುಕನ್ನು ಅನುಭವಿಸುವುದು ಎಂಬುದನ್ನು ಇಲ್ಲಿನ ಬರಹಗಳು ಹೇಳುತ್ತಿವೆ.
ಮಹಾದೇವ ಬಸರಕೋಡ ಅವರು ಇಲ್ಲಿನ ಬರಹಗಳನ್ನು ಬಹಳ ಸಮಾಧಾನದಿಂದ ಬರೆದಿದ್ದಾರೆ; ಶಾಂತವಾಗಿ ಹರಿವ ನದಿಯ ಸ್ವರೂಪ ಈ ಬರಹಗಳಿಗಿದೆ. ಪ್ರತಿ ಬರಹದ ಕ್ಯಾನ್ವಾಸ್ ಚಿಕ್ಕದು ಎನಿಸಬಹುದು; ಅದರೊಳಗಿನ ಅಂತರಾರ್ಥ ಹಿರಿದು; ಇಲ್ಲಿನ ಬರಹಗಳಲ್ಲಿ ಇತರರಿಗೆ ಮಾರ್ಗ ದರ್ಶನ ನೀಡುವ ತುಡಿತವಿದೆ; ಆದರೆ, ಅಂತಹ ಮಾರ್ಗದರ್ಶನ ನೀಡುವ ಭರದಲ್ಲಿ, ತಮ್ಮ ಬರಹ ಗಳ ಮೂಲಕ ಅವರು ‘ನೆಮ್ಮದಿಯ ಬದುಕಿಗೆ ಇವೆಲ್ಲವೂ ಅಗತ್ಯವಾಗಿ ಬೇಕು, ನೀವು ಖಂಡಿತಾ ಅನುಸರಿಸಿ’ ಎಂಬುದನ್ನು ತಾಕೀತು ಮಾಡುವುದಿಲ್ಲ, ಬದಲಿಗೆ, ಓದುಗರು ಅದನ್ನು ತಮ್ಮಲ್ಲೇ ಅರಿತುಕೊಳ್ಳುವಂತೆ ಮಾಡುತ್ತಾರೆ, ಆ ಮೂಲಕ ಓದುಗನೊಳಗಿರುವ ಬುದ್ಧನನ್ನು ಎಚ್ಚರಿಸುತ್ತಾರೆ.
ಮೇಲ್ನೋಟಕ್ಕೆ ಸರಳವಾಗಿ ಕಾಣಿಸುವ ಇಲ್ಲಿನ ಬರಹಗಳು ಅಧ್ಯಾತ್ಮವೂ ಒಳಗೊಂಡಂತೆ, ಗಹನ ವಾದ ಇತರ ವಿಚಾರಗಳನ್ನು ಚರ್ಚಿಸುತ್ತವೆ; ಆ ಚರ್ಚೆಯು ಆಪ್ತಸಂವಾದದ ರೀತಿ ಓದುಗನ ಮನಸ್ಸನ್ನು ಪ್ರವೇಶಿಸಬಲ್ಲವು. ಅಧ್ಯಾತ್ಮ ಮತ್ತು ನೆಮ್ಮದಿಯ ಜೀವನದಂತಹ ತುಸು ಸಂಕೀರ್ಣ ಸ್ವರೂಪದ ವಿಚಾರಗಳನ್ನು ನಿರೂಪಿಸಲು ಮಹಾದೇವ ಬಸರಕೋಡ ಅವರು ಅಲ್ಲಲ್ಲಿ ಒಂದು ತಂತ್ರವನ್ನು ಅಳವಡಿಸಿಕೊಂಡಿದ್ದಾರೆ; ಅದೇನೆಂದರೆ, ಪೌರಾಣಿಕ, ಐತಿಹಾಸಿಕ ಮತ್ತು ಸಮಕಾಲೀನ ವಿದ್ಯಮಾನಗಳನ್ನು ಕಥೆಯ ರೂಪದಲ್ಲಿ ಬಳಸುವುದು.
ಹಲವು ಬಾರಿ, ನಾವು ನೀವು ದಿನನಿತ್ಯದಲ್ಲಿ ಕೇಳುವ ಐತಿಹ್ಯ ಮತ್ತು ಗಾದೆಯ ತಿರುಳು, ಕೆಲವೊಮ್ಮೆ ನಮ್ಮೆದುರು ನಡೆಯುವ ಸಣ್ಣ ಪುಟ್ಟ ಘಟನೆಗಳು ಸಹ ಇಲ್ಲಿ ಬದುಕಿನ ಅರ್ಥವನ್ನು ತಿಳಿಹೇಳುವ ಮೌಲಿಕ ಕಥನಗಳಾಗಿ ರೂಪುಗೊಳ್ಳುತ್ತವೆ.