ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಅನಂತರಿಗೆ ಸಿಕ್ಕ ಪದ್ಮಭೂಷಣ, ರಾಜ್ಯದಲ್ಲಿ ಅನಾಥವಾಯ್ತು

ಪದ್ಮಭೂಷಣ ನಟ ಸಾರ್ವಭೌಮ ಡಾಕ್ಟರ್ ರಾಜ್‌ಕುಮಾರ್ ಅಂತ ಹೇಳೋದರಲ್ಲಿ ಇರೋ ಅದ್ಭುತ ಆನಂದವೇ ಬೇರೆ. ಇವತ್ತಿಗೆ ಕನ್ನಡ ಚಿತ್ರರಂಗದಲ್ಲಿ ಥ್ರಿಲ್ಲರ್ ಮಂಜು, ಕೊಬ್ರಿ ಮಂಜುವಿನಿಂದ ಹಿಡಿದು ರವಿಚಂದ್ರನ್ ತನಕ ಪ್ರತಿಯೊಬ್ಬರೂ ಡಾಕ್ಟರ್‌ಗಳೇ. ಅದರೆ ಅವರೇ ಅದನ್ನ ಡಿಮ್ಯಾಂಡ್ ಮಾಡಿ ಕರೆಸಿಕೊಳ್ಳಬೇಕೇ ಹೊರತು, ಅಯಾಚಿತವಾಗಿ ಅವರ ಹೆಸರಿನೊಂದಿಗೆ ‘ಡಾಕ್ಟರ್’ ಹೇಳಲು ಸಾಧ್ಯ ವಾಗುವುದೇ ಇಲ್ಲ.

ಅನಂತರಿಗೆ ಸಿಕ್ಕ ಪದ್ಮಭೂಷಣ, ರಾಜ್ಯದಲ್ಲಿ ಅನಾಥವಾಯ್ತು

ಪದಸಾಗರ

naveensagar2709@gmail.com

ಎರಡು ವಾರಗಳ ಹಿಂದೆ ಪದ್ಮ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನಡೆಯಿತು. ಸುಮಾರು 139 ಗಣ್ಯರಿಗೆ ರಾಷ್ಟ್ರಪತಿಗಳು ಗೌರವ ಪ್ರದಾನ ಮಾಡುವ ಕಾರ್ಯಕ್ರಮವದು. ಪ್ರಧಾನಿ ಆದಿಯಾಗಿ ಇಡೀ ಕೇಂದ್ರ ಸರಕಾರ ಹಾಗೂ ಗಣ್ಯರ ಸಮ್ಮುಖದಲ್ಲಿ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡುವ ಆಡಂಬರವಿಲ್ಲದ ಅಪರೂಪದ ಈ ಕಾರ್ಯಕ್ರಮಕ್ಕೆ ನಿಜಕ್ಕೂ ಮೆರುಗು ಬಂದದ್ದು ಇತ್ತೀಚಿನ ದಿನಗಳಲ್ಲೇ.

ಮೊದಲೆಲ್ಲ ಘೋಷಣೆಯಾದ ಸುದ್ದಿ ಕೇಳುತ್ತಿದ್ದೆವಷ್ಟೆ. ಹೆಚ್ಚೆಂದರೆ ಪ್ರದಾನ ಕಾರ್ಯಕ್ರಮದ ಫೋಟೋಗಳು ಮರುದಿನದ ಪತ್ರಿಕೆಯಲ್ಲಿ ನೋಡಲು ಸಿಗುತ್ತಿದ್ದವು. ಆದರೆ ಈಗೆಲ್ಲ ಈ ಕಾರ್ಯಕ್ರಮದ ಲೈವ್ ನೋಡಲು ಸಿಗುತ್ತದೆ. ಯಾವ ಭಾಷಣ, ಬಿಲ್ಡಪ್ ಇಲ್ಲದೇ ಪ್ರಶಸ್ತಿ ವಿಜೇತರ ಹೆಸರು ಕರೆಯಲಾಗುತ್ತದೆ.

ಅವರು ನಡೆದು ಬಂದು ರಾಷ್ಟ್ರಪತಿಗಳಿಗೆ ವಂದಿಸಿ ಪ್ರಶಸ್ತಿ ಸ್ವೀಕರಿಸಿ ವಾಪಸ್ ಹೋಗುತ್ತಾರೆ. ಆದರೆ ಒಬ್ಬೊಬ್ಬರು ಬಂದು ಪ್ರಶಸ್ತಿ ಸ್ವೀಕರಿಸಿ ಹೋಗುವ ಆ ಕ್ಷಣಗಳಿವೆಯಲ್ಲ ಅವು, ನಿಜಕ್ಕೂ ಕಣ್ತುಂಬಿ ಕೊಳ್ಳುವ ಹಾಗಿರುತ್ತವೆ. ಅದರಲ್ಲೂ ಕೆಲವರು ಪ್ರಶಸ್ತಿ ಸ್ವೀಕರಿಸಿದ ಕ್ಷಣಗಳು ಮನಸಿನಲ್ಲಿ ಅಚ್ಚೊತ್ತಿದಂತೆ ಉಳಿದು ಬಿಟ್ಟಿದೆ.

ಸಾಲುಮರದ ತಿಮ್ಮಕ್ಕ, ಭೀಮವ್ವ, ಮಂಜಮ್ಮ ಜೋಗತಿ, ಹಾಜಬ್ಬ, ಇಬ್ರಾಹಿಂ ಸುತಾರ್ ಇಂಥ ವರಿಗೆ ಪದ್ಮ ಪ್ರಶಸ್ತಿ ಘೋಷಣೆಯಾದಾಗ, ಅವರು ಸ್ವೀಕರಿಸುವ ದೃಶ್ಯಾವಳಿಗಳನ್ನು ನೋಡಿದಾಗ ಮನಸು ಅನುಭವಿಸಿದ ಖುಷಿ, ಹೊರ ಬಂದ ಆನಂದದ ಕಣ್ಣೀರು ವಿವರಿಸಲಸಾಧ್ಯ. ಇನ್ನು ವೈಯಕ್ತಿಕವಾಗಿ ನಂಗೆ ಈ ಸಮಾರಂಭ ನೋಡುವಾಗ ವಿಜೇತರು ನಡೆದು ಬರುವ ರೀತಿ, ಪ್ರಧಾನಿ ಮೋದಿಗೆ ವಂದಿಸುವ ಆ ಕ್ಷಣಾರ್ಧ, ಅದಕ್ಕೆ ಮೋದಿ ರಿಯಾಕ್ಟ್ ಮಾಡುವ ಬಗೆ, ದೊಡ್ಡ ವ್ಯಕ್ತಿಗಳ ವಿನಮ್ರತೆ, ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿ ಕೈಮುಗಿಯುವ ಭಂಗಿ, ಪ್ರತಿಯೊಂದೂ ಇಷ್ಟದ ಮೊಮೆಂಟ್ ಗಳು.

ಇದನ್ನೂ ಓದಿ: Naveen Sagar Column: ಟೂರಿಸ್ಟ್‌ ಫ್ಯಾಮಿಲಿ ಅಲ್ಲ, ಇದು ಟೂಲ್‌ಕಿಟ್‌ ಫ್ಯಾಮಿಲಿ

ಇವತ್ತಿನವರೆಗೆ ನನಗೆ ವಿಪರೀತ ಇಷ್ಟವಾದದ್ದೆಂದರೆ ನನ್ನ ನೆಚ್ಚಿನ ಕ್ರಿಕೆಟರ್ ಧೋನಿ ಮಿಲಿಟರಿ ವಸ್ತ್ರ ಧರಿಸಿ, ಅದೇ ಪೆರೇಡ್ ಶೈಲಿಯಲ್ಲಿ ನಡೆದು ಬಂದು ಸೆಲ್ಯೂಟ್ ಮಾಡಿ ಪ್ರಶಸ್ತಿ ಸ್ವೀಕರಿಸಿದ ಆ ಗಳಿಗೆ. ಅಂದಿನ ನಂತರ ಈ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಬೇಕು ನಾನು ಅಂತ ಈ ತನಕ ಕಾದಿದ್ದು ಒಬ್ಬರೇ ಒಬ್ಬರಿಗಾಗಿ. ಅದು ಅನಂತ್ ನಾಗ್.

ಹೌದು. ಅನಂತ್ ನಾಗ್‌ರನ್ನು ಇಷ್ಟ ಪಡುವ ಕರ್ನಾಟಕದ ಬಹುದೊಡ್ಡ ಸಮೂಹವೊಂದು ಅವರಿಗೆ ಪದ್ಮಪ್ರಶಸ್ತಿ ಸಿಗಬೇಕೆಂದು ತಪಸ್ಸು ಮಾಡಿತ್ತು. ಸಾತ್ವಿಕ ಹೋರಾಟ ಮಾಡಿತ್ತು. ಶಬರಿ ಯಂತೆ ಕಾದಿತ್ತು. ಕೊನೆಗೂ ಅದು ಸಾಕಾರಗೊಂಡಾಗ, ಪ್ರಶಸ್ತಿ ಸ್ವೀಕರಿಸುವ ದೃಶ್ಯ ನೋಡಲು ಹಾತೊರೆದಿತ್ತು. ಮೊದಲ ಕಂತಿನ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಹೆಸರು ಬರಲೇ ಇಲ್ಲ. ಸುಮಾರು ಒಂದೂವರೆ ಗಂಟೆಯ ಆ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರನ್ನು ಹುಡುಕಿ ನಿರಾಸೆಗೊಂಡಿದ್ದೆ.

ಎರಡನೇ ಗುಂಪಿನಲ್ಲಿ ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನ ಆಗುವ ಹೊತ್ತಿಗೆ ರಾಜ್ಯದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮ, ಕಾಲ್ತುಳಿತದಲ್ಲಿ ಆದ ಸಾವುಗಳಿಗೆ ಸಂತಾಪ, ರಾಜಕೀಯ, ಇತ್ಯಾದಿ ಗಳ ಅಬ್ಬರ ಅತಿರೇಕಕ್ಕೆ ಹೋಗಿತ್ತು. ವರ್ಷಗಳಿಂದ ಕಾದಿದ್ದ ಅಪರೂಪದ ಕ್ಷಣ ತೆರೆಮರೆಗೆ ಸರಿದು ಹೋಯ್ತು. ಅಂದು ಇಂದು ಸೋಷಿಯಲ್ ಮೀಡಿಯಾ ರೀಲ್‌ಗಳಾಗಿ ಓಡಾಡಿ ಮರೆಯಾಗಿ ಬಿಟ್ಟಿತು.

ಪತ್ರಿಕೆಗಳಲ್ಲೂ, ಸುದ್ದಿವಾಹಿನಿಗಳಲ್ಲೂ ಇದೊಂದು ಸುದ್ದಿಯೇ ಅಲ್ಲವೆಂಬಂತೆ ಬದಿಗೆ ಸರಿದು ಹೋಗಿ ಬಿಟ್ಟಿತು. ಪ್ರತಿ ಬಾರಿ ಪದ್ಮ ಪ್ರಶಸ್ತಿ ಘೋಷಣೆಯಾದಾಗ ಅನಂತ್ ನಾಗ್ ಅವರಿಗೆ ಬರಲಿಲ್ಲ ಎಂದು ಬೇಸರಗೊಂಡು, ಪದ್ಮ ಪ್ರಶಸ್ತಿಯನ್ನು ದೂಷಿಸಿ, ಹಾಳು ವ್ಯವಸ್ಥೆಯನ್ನು ಬಯ್ದು, ಆಕ್ರೋಶ ಹತಾಶೆ ಹೊರ ಹಾಕುತ್ತಿದ್ದ ರಾಜ್ಯ, ಅನಂತ್ ನಾಗ್ ಆ ಪ್ರಶಸ್ತಿ ಪಡೆದದ್ದಕ್ಕೆ ಇಷ್ಟು ನೀರಸವಾದ ಪ್ರತಿಕ್ರಿಯೆ ಕೊಟ್ಟಿದೆ ಅಂದರೆ ಅದನ್ನು ನನಗೆ ಈ ಕ್ಷಣಕ್ಕೂ ಒಪ್ಪಿಕೊಳ್ಳಲಾಗುತ್ತಿಲ್ಲ.

ಈ ರಾಜ್ಯದಲ್ಲಿ ಪ್ರತಿಭೆ ಮತ್ತು ಸಾಧನೆಗೆ ತಕ್ಕ ಮನ್ನಣೆ ಸಿಕ್ಕಿಲ್ಲ ಎಂದು ಹೆಚ್ಚು ಮಾತುಗಳು ಕೇಳಿ ಬಂದಿದ್ದು ಇಬ್ಬರ ಬಗ್ಗೆ. ಎಸ್.ಎಲ್.ಭೈರಪ್ಪನವರಿಗೆ ಜ್ಞಾನಪೀಠ ದೊರೆತಿಲ್ಲ ಮತ್ತು ಅನಂತ್ ನಾಗ್‌ಗೆ ಪದ್ಮಪ್ರಶಸ್ತಿ ಸಿಕ್ಕಿಲ್ಲ ಅನ್ನೋದು. ವಿಷ್ಣುವರ್ಧನ್ ಬಿಡಿ ಅವರೊಬ್ಬ ಶಾಪಗ್ರಸ್ತ ಗಂಧರ್ವ. ಸಾವಿನ ನಂತರವೂ ಅನ್ಯಾಯಕ್ಕೆ ಒಳಗಾಗುತ್ತಲೇ ಇರುವ ಜೀವ ಅದು.

ಎಷ್ಟೋ ಬಾರಿ ಅನರ್ಹರಿಗೆ, ಅಪಾತ್ರರಿಗೆ, ಕುಖ್ಯಾತರಿಗೆ, ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರು ವವರಿಗೆ ಪದ್ಮಪ್ರಶಸ್ತಿ ಬಂದಾಗ, ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಬರದಿದ್ದುದೇ ಒಳ್ಳೆಯದು. ಈಗ ಪ್ರಶಸ್ತಿ ಗೌರವ ಕಳೆದುಕೊಂಡಿದೆ. ಅಂಥವರೆಲ್ಲ ಪಡೆದುಕೊಂಡ ಪ್ರಶಸ್ತಿ ಅನಂತ್‌ಗೆ ಸಿಗದಿ ರೋದೇ ಮರ್ಯಾದೆ ಅಂತ ಸಮಾಧಾನಿಸಿಕೊಂಡದ್ದೂ ಇದೆ. ಭೈರಪ್ಪನವರ ಪ್ರತಿಭೆ ಮತ್ತು ಸಾಧನೆಗೆ ಜ್ಞಾನಪೀಠವೇ ಕಮ್ಮಿ ಅನಿಸಿದ್ದೂ ಇದೆ.

ಇನ್ನು ರಾಜಕೀಯ ತಳಕು ಹಾಕಿಕೊಂಡಾಗ ಅನಂತ್ ನಾಗ್ ಮತ್ತು ಭೈರಪ್ಪನವರಿಗೆ ಈಗಲಾದರೂ ಸಿಗಬೇಕಾದ ಮನ್ನಣೆ ಸಿಕ್ಕಬಹುದಾ ಅಂತ ಒಂದು ಕಡೆ ಅನಿಸಿದರೆ, ಇನ್ನೊಂದು ಕಡೆ ಇದರ ಇನ್ನೊಂದು ದೃಷ್ಟಿಕೋನ ಕಾಣುತ್ತಿತ್ತು. ಈಗ ಇವರಿಗೆ ಅರ್ಹವಾಗಿಯೇ ಪ್ರಶಸ್ತಿ ಒಲಿದರೂ ಜನರು ಬಲಪಂಥೀಯ ಪಕ್ಷಪಾತಕ್ಕೆ ಲಿಂಕ್ ಮಾಡಿ ಪ್ರಶಸ್ತಿ ಸಿಕ್ಕಿರುವ ಖುಷಿ ಹಾಳುಮಾಡುತ್ತಾರೆಂಬ ಅಳುಕು ಕಾಡುತ್ತಿತ್ತು. ಇದರ ಜತೆಗೆ ಇನ್ನೊಂದು ಆಯಾಮ. ಈಗಲೂ ಸಿಗದಿದ್ದರೆ ಇನ್ಯಾವಾಗ ಎಂಬ ಪ್ರಶ್ನೆ!

ಅಂತೂ ಭೈರಪ್ಪನವರಿಗೆ ಜ್ಞಾನಪೀಠ ಮರೀಚಿಕೆಯಾಗಿಯೇ ಉಳಿದಿದ್ದರೂ, ಅನಂತ್ ನಾಗ್ ಅವರಿಗೆ ಪದ್ಮಭೂಷಣ ದೊರೆತಿದೆ. ಸಮಾಧಾನದ ಸಂತೋಷದ ನಿಟ್ಟುಸಿರು ಬಿಡಲಡ್ಡಿಯಿಲ್ಲ. ನನಗೆ ಇವತ್ತಿಗೂ ಪದ್ಮಭೂಷಣ ಅಂದರೆ ಅದರ ಮುಂದೆ ಬರುವ ಹೆಸರು ಒಂದೇ. ರಾಜ್ ಕುಮಾರ್. ಡಾಕ್ಟರ್ ಆಗ್ಲೀ, ಪದ್ಮಭೂಷಣ, ರಾಜ್‌ಕುಮಾರ್ ಹೆಸರಿನ ಹಿಂದೆ ಕೂತಷ್ಟು ಪರ್ಫೆಕ್ಟಾಗಿ ಇನ್ಯಾರ ಹೆಸರ ಹಿಂದೆಯೂ ಕೂರುವುದಿಲ್ಲ ಅನಿಸುವಷ್ಟು ನಮ್ಮಲ್ಲಿ ಅದು ಬೇರೂರಿದೆ.

ಪದ್ಮಭೂಷಣ ನಟ ಸಾರ್ವಭೌಮ ಡಾಕ್ಟರ್ ರಾಜ್‌ಕುಮಾರ್ ಅಂತ ಹೇಳೋದರಲ್ಲಿ ಇರೋ ಅದ್ಭುತ ಆನಂದವೇ ಬೇರೆ. ಇವತ್ತಿಗೆ ಕನ್ನಡ ಚಿತ್ರರಂಗದಲ್ಲಿ ಥ್ರಿಲ್ಲರ್ ಮಂಜು, ಕೊಬ್ರಿ ಮಂಜುವಿನಿಂದ ಹಿಡಿದು ರವಿಚಂದ್ರನ್ ತನಕ ಪ್ರತಿಯೊಬ್ಬರೂ ಡಾಕ್ಟರ್‌ಗಳೇ. ಅದರೆ ಅವರೇ ಅದನ್ನ ಡಿಮ್ಯಾಂಡ್ ಮಾಡಿ ಕರೆಸಿಕೊಳ್ಳಬೇಕೇ ಹೊರತು, ಅಯಾಚಿತವಾಗಿ ಅವರ ಹೆಸರಿನೊಂದಿಗೆ ‘ಡಾಕ್ಟರ್’ ಹೇಳಲು ಸಾಧ್ಯವಾಗುವುದೇ ಇಲ್ಲ.

ಇಲ್ಲಿಯ ತನಕ ಕರ್ನಾಟಕದವರು 76 ಮಂದಿ ಪದ್ಮಭೂಷಣ ಗೌರವ ಪಡೆದಿದ್ದಾರೆ. 23 ಪದ್ಮವಿಭೂಷಣ ಸಿಕ್ಕಿದೆ. ಸುಮಾರು 200ರ ಹತ್ತಿರ ಪದ್ಮಶ್ರೀ ಅವಾರ್ಡ್‌ಗಳು ಕನ್ನಡಿಗರಿಗೆ ಒಲಿದಿವೆ. ಭೈರಪ್ಪ, ಕಂಬಾರ, ಸುಧಾಮೂರ್ತಿ, ದ್ರಾವಿಡ್, ಶಿವಕುಮಾರ ಸ್ವಾಮಿಗಳು, ಬಿ.ಎಂ.ಹೆಗಡೆ, ಪುಟ್ಟರಾಜ ಗವಾಯಿಗಳು, ವೀರೇಂದ್ರ ಹೆಗ್ಗಡೆಯವರು, ಡಿವಿಜಿ ಹೀಗೆ ಖ್ಯಾತನಾಮರ ದೊಡ್ಡ ಪಟ್ಟಿಯೇ ಇದೆ.

ಆದರೆ ರಾಜ್‌ಕುಮಾರ್ ಅವರನ್ನ ಪದ್ಮಭೂಷಣದೊಂದಿಗೆ ಸಂಭ್ರಮಿಸುವಂತೆ ನಾವು ಯಾರನ್ನೂ ಸಂಭ್ರಮಿಸಿದ್ದಿಲ್ಲ. ಈಗ ಅನಂತ್ ನಾಗ್ ಅವರನ್ನೂ ನಾವೇನೂ ಪ್ರತಿ ಬಾರಿ ಕರೆಯುವಾಗ ಪದ್ಮಭೂಷಣ ಡಾಕ್ಟರ್ ಅನಂತ್ ನಾಗ್ ಎಂದು ಸಂಬೋಧಿಸುವುದಿಲ್ಲ. ಆದರೆ ಅವರಿಗೆ ಆ ಗೌರವ ಸಿಗಲೇಬೇಕೆಂದು ಬಹುವಾಗಿ ಕಾದಿದ್ದಂತೂ ನಿಜ.

ಅನಂತ್ ನಾಗ್ ಕನ್ನಡ ಸಿನಿಮಾರಂಗ ಕಂಡ, ಭಾರತೀಯ ಚಿತ್ರರಂಗದ ಅಪರೂಪದ ಸಹಜ ನಟರಬ್ಬರು. ಅಸಹಜ ಫೈಟು, ಡ್ಯಾನ್ಸು ಇವೆರಡನ್ನು ಹೊರತುಪಡಿಸಿ ಇನ್ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸಬಲ್ಲ ನಟ ಅನಂತ್. ಎಂಥ ಕಲ್ಲೆದೆ ಪ್ರೇಕ್ಷಕನನ್ನೂ ಕ್ಷಣಮಾತ್ರದಲ್ಲಿ ನಗಿಸುವ ಅಳಿಸುವ ಶಕ್ತಿ ಇರುವ ಕಲಾವಿದ. ಅನಂತ್ ನಾಗ್ ತೆರೆಯ ಮೇಲಿದ್ದರೆ ದೃಶ್ಯಕ್ಕೊಂದು ಘನತೆ, ಸ್ಕ್ರೀನಿಗೊಂದು ಮೆರುಗು.

ಅನಂತ್ ನಾಗ್‌ಗೆ ಈ ಪಾತ್ರ ಒಪ್ಪೋದಿಲ್ಲ, ಅನಂತ್ ನಾಗ್ ಈ ಪಾತ್ರದಲ್ಲಿ ಚೆನ್ನಾಗಿ ಅಭಿನಯಿಸಿಲ್ಲ ಅಂತ ಪಟ್ಟಿ ಮಾಡೋಕೆ ಹೋದರೆ ನನಗಂತೂ ಎರಡೋ ಮೂರೋ ಚಿತ್ರಗಳಷ್ಟೆ ಸಿಗೋದು. ರಾಜಕೀಯ ಬದುಕಿನಿಂದ ಹೊರ ಬಂದು, ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದಾಗ ಅನಂತ್ ನಾಗ್ ಕಳಪೆ ಚಿತ್ರಗಳಲ್ಲಿ ತಮಗೊಪ್ಪದ ಪಾತ್ರಗಳನ್ನು ಮಾಡಿದ್ದರು. ‌

ಆದರೆ ಅವರ ಮೊದಲ ಇನ್ನಿಂಗ್ಸ್ ಹಾಗೂ ಎರಡನೇ ಇನ್ನಿಂಗ್ಸಿನ ದ್ವಿತೀಯಾರ್ಧ ಅತ್ಯದ್ಭುತ. ‘ಮುಂಗಾರು ಮಳೆ’ಯ ನಂತರದ ಅನಂತ್ ಅಧ್ಯಾಯ, ‘ಎಬಿಸಿ’ ದಿವಾಳಿಯ ನಂತರ ಕಂಬ್ಯಾಕ್ ಮಾಡಿದ ಅಮಿತಾಭ್ ಅಧ್ಯಾಯ ಬಹುತೇಕ ಒಂದೇ ಥರದ್ದು. ಅವರ ಫಸ್ಟ್‌ ಹಾಫಿನ ಬೆಳದಿಂಗಳ ಬಾಲೆ, ಸೆಕೆಂಡ್ ಹಾಫಿನ ಗೋಧಿಬಣ್ಣ ಸಾಧಾರಣ ಮೈಕಟ್ಟು ಈ ಎರಡು ಚಿತ್ರಗಳು ಸಾಕು ಅನಂತ್ ಅವರಿಗೆ ಇರೋ ಬರೋ ಎಲ್ಲ ಅವಾರ್ಡುಗಳನ್ನು ಕೊಟ್ಟುಬಿಡಬಹುದು.

ಗಣೇಶ, ಗೋಲ್ಮಾಲ್ ಸೀರೀಸ್‌ಗಳಲ್ಲಿ ನಗಿಸಿದ್ದು, ತಣ್ಣನೆಯ ನೆಗೆಟಿವ್ ರೋಲ್‌ಗಳಿಂದ ಅನಂತ್ ಹೀಗೂ ನಟಿಸುತ್ತಾರಾ ಎಂದು ಅಚ್ಚರಿ ಹುಟ್ಟಿಸಿದ್ದು, ಬೆಳದಿಂಗಳ ಬಾಲೆಯಲ್ಲಿ ಫೋನ್ ಹ್ಯಾಂಡ್ ಸೆಟ್ಟನ್ನೇ ಪ್ರೇಯಸಿಯನ್ನು ಸ್ಪರ್ಶಿಸುವಂತೆ ಸ್ಪರ್ಶಿಸುತ್ತಾ ತಾವು ಕಣ್ಣಲ್ಲಿ ನೀರು ತುಂಬಿಕೊಂಡು ನಮ್ಮನ್ನು ಅಳಿಸಿದ್ದು, ಗೋಧಿಬಣ್ಣದ ತೊದಲುಮಾತಿನ ವೆಂಕೋಬರಾವ್ ಆಗಿ ನಮ್ಮನ್ನು ಮೂಕರಾಗಿಸಿದ್ದು, ಮುಂಗಾರು ಮಳೆಯಲ್ಲಿ ಯಂಗ್ ಮ್ಯಾನ್ ಅನ್ನುತ್ತಲೇ ನಗಿಸಿ ಅಳಿಸಿದ್ದು ಯಾವುದನ್ನು ಮರೆಯೋಣ? ಎತ್ತರದ ನಿಲುವು, ಫಾರ್ಮಲ್ ಡ್ರೆಸ್, ಮುಂದಲೆ ಮೇಲೆ ಜಾರುವ ಕೂದಲು, ಆರೋಗ್ಯ ಉಕ್ಕುವ ತ್ವಚೆ, ಅನಂತ್ ನಿಜಕ್ಕೂ ಗಂಡುಮಕ್ಕಳಿಗೆ ಹೊಟ್ಟೆಕಿಚ್ಚು ಹುಟ್ಟಿಸುವ, ಹೆಣ್ಮಕ್ಕಳಿಗೆ ಕ್ರಶ್ ಹುಟ್ಟಿಸುವ ಹೀರೋ. ಅಷ್ಟೇ ಗ್ರೇಸ್ ಫುಲೀ ವೃದ್ಧರಾಗುತ್ತಾ ನಡೆದವರು ಅನಂತ್.

ಈಗ ಅವರ ಮಾತುಗಳನ್ನು, ಹಾಡುವ ಗೀತೆಗಳನ್ನು ಕೇಳುತ್ತಾ ಇದ್ದರೆ, ಅನಂತ್ ನಾಗ್‌ರ ಜ್ಞಾನ ಇತರ ಪ್ರತಿಭೆಗಳು ಈಗ ಅನಾವರಣಗೊಳ್ತಾ ಇದೆಯಾ ಅಂತ ಅಚ್ಚರಿ ಆಗುತ್ತದೆ. ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಬಂದದ್ದು ದೊಡ್ಡ ಮಟ್ಟದಲ್ಲಿ ಸೆಲೆಬ್ರೇಟ್ ಮಾಡಬೇಕಿದ್ದ ವಿಚಾರ. ಆದರೆ ಚಲನಚಿತ್ರ ಮಂಡಳಿಗಳು ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ.

ಡೀಲಿಂಗ್‌ಗಳಲ್ಲಿ ಬ್ಯುಸಿ, ಕನ್ನಡ ರಕ್ಷಣೆಗಿರುವವರು ಎನ್ನುವ ಹೋರಾಟ ಸಂಘಗಳು, ಬೇರೆ ಭಾಷಿಗರನ್ನು ದ್ವೇಷಿಸುವುದರಲ್ಲಿ ಬ್ಯುಸಿ, ಕನ್ನಡ ಚಿತ್ರರಂಗದ ನಟರು ಕ್ರಿಕೆಟ್ ಆಡುವುದರಲ್ಲಿ, ರಿಯಾಲಿಟಿ ಶೋಗಳಲ್ಲಿ ಮಂಗಾಟ ಮಾಡುವುದರಲ್ಲಿ ಬ್ಯುಸಿ. ಯಾರಿಗೂ ಒಗ್ಗೂಡಿ ಅನಂತ್ ನಾಗ್ ಅವರನ್ನು ಸೆಲೆಬ್ರೇಟ್ ಮಾಡುವ ಆಲೋಚನೆ ಕೂಡ ಇಲ್ಲ. ಆರ್‌ಸಿಬಿ ಗೆಲುವನ್ನು ಕನ್ನಡದ ಗೆಲುವು ಎಂದೆಲ್ಲ ರಾಜ್ಯಪ್ರೇಮ ಮೆರೆಯುವ ಕರ್ನಾಟಕಕ್ಕೆ, ಅನಂತ್ ನಾಗ್ ಪದ್ಮಭೂಷಣಕ್ಕೆ ಭಾಜನರಾಗಿದ್ದು ದೊಡ್ಡ ವಿಷಯ ಅನಿಸುವುದೇ ಇಲ್ಲ.

ಯಾಕೆ? ಅನಂತ್ ನಾಗ್ ಅವರಿಗೆ ಅಭಿಮಾನಿ ಸಂಘಗಳಿಲ್ಲ. ಬಾಲಬಡುಕ ತಂಡವಿಲ್ಲ. ಪಿ.ಆರ್. ಇಲ್ಲ. ಯಾರ ಜತೆಗೂ ಗುರುತಿಸಿಕೊಂಡಿಲ್ಲ. ಬಕೆಟ್ ಹಿಡಿಯಲು ಬರುವವರನ್ನು ಹತ್ತಿರಕ್ಕೆ ಬಿಟ್ಟು ಕೊಳ್ಳುವುದಿಲ್ಲ. ಪ್ರಚಾರ ಬೇಕಾಗಿಯೇ ಇಲ್ಲ. ಕಡೇ ಪಕ್ಷ ಸರಕಾರಕ್ಕಾದರೂ ಅನಿಸಬೇಕಿತ್ತಲ್ವಾ? ಹೆಂಡ ಮಾರುವವನ ತಂಡವನ್ನು ಕರೆಸಿ ವಿಧಾನಸೌಧದ ಮುಂದೆ ಸನ್ಮಾನ ಮಾಡುವ ಉತ್ಸಾಹದ ಒಂದು ಪರ್ಸೆಂಟಾದರೂ ಅನಂತ್ ನಾಗ್ ಅವರನ್ನು ಗೌರವಿಸುವ ಉತ್ಸಾಹ ತೋರಬಹುದಿತ್ತು.

ಅನಂತ್ ನಾಗ್ ಮೋದಿಯನ್ನು ಹೊಗಳಿ ಮಾತನಾಡಿದ್ದು, ದೇಶಪ್ರೇಮವನ್ನು ತೋರಿಸಿಕೊಂಡದ್ದೇ ತಪ್ಪಾಗಿ ಹೋಯಿತಾ? ಅನಂತ್ ನಾಗ್‌ರನ್ನು ಹಾಡಿಹೊಗಳುತ್ತಿದ್ದ ಕೆಲವು ಬಣಗಳು ಅನಂತ್ ನಾಗ್‌ರ ಸೈದ್ಧಾಂತಿಕ ನಿಲುವು ಗಮನಿಸಿ ಬದಲಾದದ್ದನ್ನು ಗಮನಿಸಿದಾಗ ಇಂದಿನ ಈ ನೀರಸ ಸ್ಪಂದನೆಗೆ ಅದೇ ಕಾರಣವಿದ್ದಿರಬಹುದಾ ಅನಿಸುತ್ತಿದೆ. ಅನಂತ್ ನಾಗ್‌ರನ್ನೂ ಹೀಗೆಲ್ಲ ದೂರ ಮಾಡಿಕೊಳ್ಳಬಹುದಾ ಅಂತ ಅಚ್ಚರಿ ಆಗುತ್ತಿದೆ