ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someswara Column: ಭೂಲೋಕದ ದೇವತೆಗಳೋ, ಯಮನ ಸೋದರರೋ ?

‘ಪವಿತ್ರ ವೃತ್ತಿ’, ‘ದೇವರಂತೆ ಜೀವ ಉಳಿಸುವವರು’, ‘ಧರ್ಮ, ಕರುಣೆ’ ಇತ್ಯಾದಿ ಪದಗಳಿಗೆ ಮೋಸ ಹೋಗಬೇಡಿ. ಇವು ಒಂದಾನೊಂದು ಕಾಲಕ್ಕೆ ಮಾತ್ರ ಸೂಕ್ತವಾಗಿದ್ದವು. ಇವತ್ತು ಆರ್ಥಿಕ, ಸಾಮಾ ಜಿಕ ಮತ್ತು ವೈದಕೀಯ ಪರಿಸ್ಥಿತಿಗಳು ಭಿನ್ನವಾಗಿವೆ. ಪ್ರಾಮಾಣಿಕರಾಗಿರಿ, ಆದರೆ ಸತ್ಯಾಂಶವನ್ನು ಒಪ್ಪಿಕೊಳ್ಳಿ.

ಭೂಲೋಕದ ದೇವತೆಗಳೋ, ಯಮನ ಸೋದರರೋ ?

ಹಿಂದಿರುಗಿ ನೋಡಿದಾಗ

What I always believe... First see the patient medicolegally, then medically, then technically, then comes empathy. I suggest to do work honestly and sincerely but never allow the honesty to get in to your head. Consider ourselves like any other profession. We don’t have any extra privilege in our country and in fact we are more vulnerable and are easy targets than anyone else. Don’t get fooled by terminologies like noble profession, God life saver and doing charity and feeling good. Those words were apt in past years, not now. Be honest but accept reality*.

ನಾನು ಸದಾ ಏನನ್ನು ನಂಬುತ್ತೇನೆ ಎಂದರೆ... ಮೊದಲು ರೋಗಿಯನ್ನು ನ್ಯಾಯ- ವೈದ್ಯಕೀಯ (ಮೆಡಿಕೋ-ಲೀಗಲ್) ದೃಷ್ಟಿಯಿಂದ ನೋಡಿ, ಆನಂತರ ವೈದ್ಯಕೀಯ ದೃಷ್ಟಿಯಿಂದ ಪರೀಕ್ಷಿಸಿ, ಆಮೇಲೆ ತಾಂತ್ರಿಕವಾಗಿ ವಿಶ್ಲೇಷಿಸಿ.ಕೊನೆಯಲ್ಲಿ ಮಾನವೀಯತೆಯಿಂದ ಒಟ್ಟಾರೆಯಾಗಿ ಪರಿಶೀಲಿಸಿ. ಕೆಲಸವನ್ನು ಪ್ರಾಮಾಣಿಕತೆಯಿಂದ ಹಾಗೂ ನಿಷ್ಠೆಯಿಂದ ಮಾಡಿ. ಆದರೆ ಆ ಪ್ರಾಮಾ ಣಿಕತೆಯೆನ್ನುವುದು ನಿಮ್ಮ ನೆತ್ತಿಗೆ ಏರಬಾರದು.

ನಾವು ನಮ್ಮ ವೃತ್ತಿಯನ್ನು, ಇತರ ವೃತ್ತಿಗಳಂತೆ ಒಂದು ವೃತ್ತಿಯನ್ನಾಗಿ ಪರಿಗಣಿಸಬೇಕು. ಈ ದೇಶ ದಲ್ಲಿ ವೈದ್ಯರಿಗಾಗಿ ಯಾವುದೇ ವಿಶೇಷ ಅನುಕೂಲತೆಗಳಿಲ್ಲ. ವಾಸ್ತವವಾಗಿ, ನಾವು ಇತರರಿ ಗಿಂತ ಹೆಚ್ಚು ಅಸುರಕ್ಷಿತರಾಗಿದ್ದೇವೆ ಹಾಗೂ ಆಕ್ರಮಣಕ್ಕೆ ಸುಲಭವಾಗಿ ಗುರಿಯಾಗಬಲ್ಲವರಾಗಿದ್ದೇವೆ.

‘ಪವಿತ್ರ ವೃತ್ತಿ’, ‘ದೇವರಂತೆ ಜೀವ ಉಳಿಸುವವರು’, ‘ಧರ್ಮ, ಕರುಣೆ’ ಇತ್ಯಾದಿ ಪದಗಳಿಗೆ ಮೋಸ ಹೋಗಬೇಡಿ. ಇವು ಒಂದಾನೊಂದು ಕಾಲಕ್ಕೆ ಮಾತ್ರ ಸೂಕ್ತವಾಗಿದ್ದವು. ಇವತ್ತು ಆರ್ಥಿಕ, ಸಾಮಾ ಜಿಕ ಮತ್ತು ವೈದಕೀಯ ಪರಿಸ್ಥಿತಿಗಳು ಭಿನ್ನವಾಗಿವೆ. ಪ್ರಾಮಾಣಿಕರಾಗಿರಿ, ಆದರೆ ಸತ್ಯಾಂಶವನ್ನು ಒಪ್ಪಿಕೊಳ್ಳಿ.

ಇದನ್ನೂ ಓದಿ: Dr N Someshwara Column: ಥೀಬ್ಸ್‌ ನಿಂದ ಹಸ್ತಿನಾವತಿಯವರೆಗೆ ಕಾಮ, ಪ್ರೇಮ ಮತ್ತು ಪ್ರೀತಿ !

ಮೊದಲು ಇಂಗ್ಲಿಷ್ ಬರಹವನ್ನು ಓದಿ, ನಂತರ ಆ ಇಂಗ್ಲಿಷ್ ಬರಹದ ಕನ್ನಡ ಭಾವಾನು ವಾದ ವನ್ನು ಓದಿ. ಮೊದಲಿನ ಇಂಗ್ಲಿಷ್ ಬರಹದ ಒಂದು ಸ್ಲೈಡ್, ಇತ್ತೀಚಿನ ಒಂದು ನ್ಯಾಯ-ವೈದ್ಯ ಕೀಯ ಸಮಾವೇಶದಲ್ಲಿ (ಮೆಡಿಕೊ-ಲೀಗಲ್ ಕಾನ್ಫರೆನ್ಸ್) ನಡೆದ ಒಂದು ಚರ್ಚೆಯಲ್ಲಿ ಕಂಡು ಬಂದಿತು. ಈ ಸ್ಲೈಡಿನ ಧೋರಣೆಯನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಈ ಸ್ಲೈಡ್, ವಾಸ್ತವ ಪರಿಸ್ಥಿತಿಯನ್ನು, ಇರುವ ಹಾಗೆ ನಮ್ಮ ಮುಂದೆ ಇಟ್ಟಿದೆ.

‘ವೈದ್ಯಕೀಯ ವೃತ್ತಿ ಎನ್ನುವುದು ಪವಿತ್ರ ವೃತ್ತಿ, ವೈದ್ಯರು ಭೂಮಿಯ ಮೇಲೆ ನಡೆದಾಡುವ ದೇವರು, ವೈದ್ಯರು ಎಂದರೆ ಮೃತ್ಯುವಿನ ದವಡೆಯಲ್ಲಿರುವ ರೋಗಿಯನ್ನು ಪಾರು ಮಾಡಬಲ್ಲ ಧೀಮಂತರು, ಹೋಗುತ್ತಿರುವ ಜೀವವನ್ನು ತಡೆಹಿಡಿಯಬಲ್ಲ ಸಮರ್ಥರು’ ಇತ್ಯಾದಿ ಭಾವನೆಗಳು ಒಂದಾನೊಂದು ಕಾಲದಲ್ಲಿ ಇದ್ದಿರಬಹುದು. ಆದರೆ ಅಂಥ ಭಾವನೆಯು ಇಂದಿನ ಸಮಾಜದಲ್ಲಿ ಇಲ್ಲ.

ಎಲ್ಲ ವೃತ್ತಿಗಳಂತೆ ವೈದ್ಯಕೀಯವೂ ಒಂದು ವೃತ್ತಿ, ಅಷ್ಟೇ. ಎಲ್ಲ ವೃತ್ತಿಪರರು ತೆರಿಗೆಯನ್ನು ಕಟ್ಟುವಂತೆ ನಾವೂ ಕಟ್ಟುತ್ತೇವೆ. ಎಲ್ಲ ವೃತ್ತಿಗಳಿಗೆ ಗ್ರಾಹಕ ಕಾಯಿದೆಯು ಹೇಗೆ ಅನ್ವಯ ಆಗುತ್ತದೆ ಯೋ, ಹಾಗೆಯೇ ವೈದ್ಯ ವೃತ್ತಿಗೂ ಆಗುತ್ತದೆ. ‘ಸಾವಿನೊಡನೆ ಸೆಣಸುವ ವೈದ್ಯನಿಗೆ’ ಈ ಸಮಾಜವು ಯಾವುದೇ ರಿಯಾಯತಿಯನ್ನು ನೀಡಿಲ್ಲ. ‘ಎಲ್ಲ ವ್ಯಾಪಾರಿಗಳಂತೆ ನಾವೂ ವ್ಯಾಪಾರಿಗಳು’ ಎನ್ನುವ ಅರ್ಥದಲ್ಲಿ ಸಮಾಜವು ನಮ್ಮನ್ನು ನಡೆಸಿಕೊಳ್ಳುತ್ತಿದೆ.

ಹಾಗಾಗಿ ನಾವು ಇನ್ನು ಮೇಲಾದರೂ ವೃತ್ತಿಪರರಂತೆ ನಡೆದುಕೊಳ್ಳಬೇಕು. ಈ ಕಟುವಾಸ್ತವದ ಹಿನ್ನೆಲೆಯಲ್ಲಿ, ನಮ್ಮ ಬಳಿ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ರೋಗಿಯೂ ‘ನಮ್ಮ ಮೇಲೆ ನಾಳೆ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಬಲ್ಲ’ ಎನ್ನುವ ಕಹಿಸತ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಬಲು ಎಚ್ಚರಿಕೆಯಿಂದ ಚಿಕಿತ್ಸೆಯನ್ನು ಆರಂಭಿಸುವುದು ಸೂಕ್ತವೆನಿಸುತ್ತದೆ. ಇದಕ್ಕೆ ‘ಆತ್ಮರಕ್ಷಣಾ ವೈದ್ಯಕೀಯ’ ಅಥವಾ ‘ಡಿಫೆನ್ಸಿವ್ ಪ್ರಾಕ್ಟೀಸ್’ ಎಂದು ಹೆಸರು.

ನಮ್ಮ ಸಮಾಜದಲ್ಲಿ ಮಾತ್ರವಲ್ಲ, ಜಗತ್ತಿನ ಯಾವುದೇ ಕಾಲದ, ಯಾವುದೇ ದೇಶದ, ಯಾವುದೇ ಸಮಾಜದಲ್ಲಿ ವೈದ್ಯರಿಗೆ ಅಂಥ ಗೌರವ ಇದ್ದ ಹಾಗೆ ಕಾಣುವುದಿಲ್ಲ. ವೈದ್ಯರನ್ನು ‘ಭೂಮಿಯ ಮೇಲೆ ನಡೆದಾಡುವ ದೇವರು’ ಎಂದು ಹೊಗಳಿ ಗೌರೀಶಂಕರಕ್ಕೇರಿಸುವುದು ಅಥವಾ ‘ಯಮ ಧರ್ಮನ ಸಹೋದರ’ ಎಂದು ಹಿಯಾಳಿಸುವುದು, ಈ ಎರಡೂ ಅತಿರೇಕಗಳು ವೈದ್ಯರಿಗೆ ಅನಗತ್ಯ. ವೈದ್ಯ ರನ್ನೂ ಉಪ್ಪು, ಖಾರ, ಹುಳಿ ತಿನ್ನುವ ಎಲ್ಲ ಮನುಷ್ಯರಂತೆ ನಡೆಸಿಕೊಂಡರೆ ಸಾಕಾಗುತ್ತದೆ.

ಇದು ಈ ಸ್ಲೈಡಿನ ಸಾಮಾನ್ಯ ಆಶಯವಾಗಿತ್ತು.

ಹಲ್ಲೆ ಮತ್ತು ದಂಡ: ಭಾರತದಲ್ಲಿ ಎರಡು ರೀತಿಯ ಸಮಸ್ಯೆಗಳಿವೆ. ಮೊದಲನೆಯದು ವೈದ್ಯರು ಹಾಗೂ ಆಸ್ಪತ್ರೆಗಳ ಮೇಲೆ ನಡೆಯುವ ಹಲ್ಲೆ. ಇಂಥ ಪ್ರಕರಣಗಳಲ್ಲಿ ನಮ್ಮ ನ್ಯಾಯಾಲಯಗಳು ಆರೋಪಿ/ಅಪರಾಧಿಗಳನ್ನು ವಿಚಾರಿಸಿ ಅವರಿಗೆ ಶಿಕ್ಷೆಯನ್ನು ಕೊಟ್ಟ ಉದಾಹರಣೆಗಳು ಅಥವಾ ದಂಡವನ್ನು ವಿಧಿಸಿ ಆ ಹಣವನ್ನು ವೈದ್ಯರಿಗೆ/ ಆಸ್ಪತ್ರೆಗೆ ಕೊಟ್ಟ ಉದಾಹರಣೆಗಳು ಅಪರೂಪ.

ಎರಡನೆಯದು, ಯಾರಾದರೂ ವೈದ್ಯರು ಅಥವಾ ಆಸ್ಪತ್ರೆಗಳ ಮೇಲೆ ವೈದ್ಯಕೀಯ ನಿರ್ಲಕ್ಷ್ಯ ಅಥವಾ ಮತ್ತೊಂದು ಆರೋಪದ ಮೇಲೆ ನ್ಯಾಯಾಲಯಕ್ಕೆ ಹೋದರೆ, ಅಲ್ಲಿ ಆರೋಪವು ಸಾಬೀ ತಾದರೆ, ಆಗ ರೋಗಿಗೆ/ರೋಗಿಯ ಕಡೆಯವರಿಗೆ ನೀಡುವ ದಂಡ ದೊಡ್ಡ ಪ್ರಮಾಣದಲ್ಲಿರುತ್ತದೆ. ಇದನ್ನು ನೆನೆಸಿಕೊಂಡರೆ, ಬಹುಶಃ ಅನಾದಿ ಕಾಲದಿಂದ ವೈದ್ಯರಿಗೆ ದೊರೆಯುತ್ತಿದ್ದ ದಂಡ/ ಶಿಕ್ಷೆ ಯಲ್ಲಿ ಅಂಥ ದೊಡ್ಡ ಬದಲಾವಣೆಯಾಗಿಲ್ಲ ಎಂದೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಮಾನವ ಇತಿಹಾಸದ ಲಭ್ಯ ಪ್ರಪ್ರಥಮ ದಾಖಲೆಯಾದ ‘ಹಮುರಬಿ ಶಾಸನ’ವು ನೆನಪಿಗೆ ಬರುತ್ತಿದೆ. ಹಾಗಾಗಿ ಅದನ್ನು ಒಮ್ಮೆ ಅವಲೋಕಿಸುವುದು ಸೂಕ್ತವಾದೀತು.

ಹಮುರಬಿ ಶಾಸನ: ಇದು ಬ್ಯಾಬಿಲೋನಿಯನ್ ಸಂಸ್ಕೃತಿಗೆ ಸೇರಿದ, ಮನುಕುಲದ ಪ್ರಪ್ರಥಮ ನ್ಯಾಯ-ವೈದ್ಯಕೀಯ ಶಾಸನ. ಇದು ಪ್ರಾಚೀನ ಜಗತ್ತಿನ ಅತ್ಯಂತ ದೀರ್ಘವಾದ, ಕ್ರಮಬದ್ಧವಾದ ಹಾಗೂ ಸಂರಕ್ಷಿತ ಶಾಸನವಾಗಿದೆ. ಇದನ್ನು ಬ್ಯಾಬಿಲೋನಿಯದ ಅಕ್ಕಾಡಿಯನ್ ಭಾಷೆಯ ಕ್ಯೂನಿ-ರಮ್ ಲಿಪಿಯಲ್ಲಿ ಬರೆಯಲಾಗಿದೆ.

ಬ್ಯಾಬಿಲೋನ್ ಸಾಮ್ರಾಜ್ಯವನ್ನು ಆಳಿದ ಮೊದಲ ವಂಶದ ಆರನೆಯ ಅರಸ ಹಮ್ಮುರಬಿ (ಕ್ರಿ.ಪೂ.1810-1750) ಈ ಶಾಸನದ ಕರ್ತೃ. ಕ್ರಿ.ಪೂ.1755-1750ರ ಅವಧಿಯಲ್ಲಿ ಈ ಶಾಸನವು ರೂಪು ಗೊಂಡಿರಬಹುದು. ಇದನ್ನು ಬೆಸಾಲ್ಟ್ ಶಿಲಾ ಫಲಕದ (ಬೆಸಾಲ್ಟ್ ಸ್ಟೀಲ್) ಮೇಲೆ ಕೆತ್ತಲಾಗಿದೆ.

ಬೆಸಾಲ್ಟ್ ಶಿಲಾಫಲಕವು ಸುಮಾರು 2.25 ಮೀಟರ್ ಎತ್ತರವಿದೆ. ಈ ಶಿಲಾಫಲಕದ ಮೇಲೆ 282 ಸಿವಿಲ್ (ಕೌಟುಂಬಿಕ ಕಾನೂನು, ಆಸ್ತಿ ಕಾನೂನು ಮತ್ತು ವಾಣಿಜ್ಯ ಕಾನೂನು) ಮತ್ತು ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸಿದ ಶಾಸನಗಳನ್ನು 4130 ಸಾಲುಗಳಲ್ಲಿ ಕೆತ್ತಲಾಗಿದೆ. ಮೂಲ ಶಾಸನ ವನ್ನು ಪ್ಯಾರಿಸ್ಸಿನ ಲೂವ್ರ್ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇದರ ಹಲವು ಪ್ರತಿಗಳು ಜಗತ್ತಿನ ಹಲವು ಕಡೆ ದೊರೆಯುತ್ತವೆ.

ವೈದ್ಯಕೀಯ ಶಾಸನಗಳು: ವೈದ್ಯಕೀಯಕ್ಕೆ ಸಂಬಂಧಿಸಿದಂತೆ, 215-223ರವರೆಗೆ, ಒಂಬತ್ತು ಶಾಸನಗಳಿವೆ. ಇವನ್ನು ಒಂದೊಂದಾಗಿ ಗಮನಿಸೋಣ. 215. ಒಬ್ಬ ವೈದ್ಯನು ರೋಗಿಯ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿ, ಅವನ ಕಣ್ಣನ್ನು ಉಳಿಸಿದರೆ, ಅವನಿಗೆ ಹತ್ತು ಶೆಕೆಲ್ ಹಣ (ಬೆಳ್ಳಿ ನಾಣ್ಯಗಳು) ಸಂದಾಯವಾಗಬೇಕು.

216. ಶಸಚಿಕಿತ್ಸೆಯನ್ನು ಪಡೆದ ವ್ಯಕ್ತಿಯು ಹೀನ ಕುಲದವನಾಗಿದ್ದರೆ, ಅವನು ಐದು ಶೆಕೆಲ್ ಹಣವನ್ನು ವೈದ್ಯರಿಗೆ ಸಂದಾಯ ಮಾಡಬೇಕು.

217. ಚಿಕಿತ್ಸೆಯನ್ನು ಪಡೆದವನು ಗುಲಾಮನಾಗಿದ್ದರೆ, ಆ ಗುಲಾಮನ ಯಜಮಾನನು ಎರಡು ಶೆಕೆಲ್ ಹಣವನ್ನು ವೈದ್ಯರಿಗೆ ಸಂದಾಯ ಮಾಡಬೇಕು.

218. ಒಬ್ಬ ವೈದ್ಯನು ಚಿಕಿತ್ಸೆಯನ್ನು ನೀಡುವಾಗ ರೋಗಿಯು ಸತ್ತರೆ ಅಥವಾ ಕಣ್ಣಿನ ದೃಷ್ಟಿಯು ನಾಶವಾದರೆ, ವೈದ್ಯನ ಕೈಗಳನ್ನು ಛೇದಿಸಬೇಕು.

219. ಒಬ್ಬ ವೈದ್ಯನು ಹೀನ ಕುಲದವನ ಗುಲಾಮನಿಗೆ ಶಸ್ತ್ರಚಿಕಿತ್ಸೆಯನ್ನು ನೀಡುವಾಗ, ಆ ಗುಲಾಮನು ಮರಣಿಸಿದರೆ, ವೈದ್ಯನು ಮತ್ತೊಬ್ಬ ಗುಲಾಮನನ್ನು ಬದಲಿಯನ್ನಾಗಿ ಹೀನಕುಲ ದವನಿಗೆ ನೀಡಬೇಕು.

220. ಒಬ್ಬ ವೈದ್ಯನು ತನ್ನ ಶಸ್ತ್ರದಿಂದ ಒಂದು ಗಂತಿಯನ್ನು (ಟ್ಯೂಮರ್) ಛೇದಿಸುವಾಗ, ಅವನ ಕಣ್ಣನ್ನು ಛೇದಿಸಿದರೆ, ಆಗ ವೈದ್ಯನು ಗುಲಾಮನ ಬೆಲೆಯ ಅರ್ಧವನ್ನು ನೀಡಬೇಕು.

221. ಒಬ್ಬ ವೈದ್ಯನು ರೋಗಿಯ ಮುರಿದ ಮೂಳೆಯನ್ನು ಸರಿಪಡಿಸಿದರೆ ಅಥವಾ ರೋಗಗ್ರಸ್ತ ಮೃದು ಅಂಗವನ್ನು ಗುಣಪಡಿಸಿದರೆ, ಆಗ ರೋಗಿಯು ವೈದ್ಯನಿಗೆ ಐದು ಶೆಕೆಲ್ ಹಣವನ್ನು ನೀಡಬೇಕು.

222. ರೋಗಿಯು ಹೀನ ಕುಲದವನಾಗಿದ್ದರೆ, ಅವನು ವೈದ್ಯನಿಗೆ ಮೂರು ಶೆಕೆಲ್ ಹಣವನ್ನು ನೀಡಬೇಕು.

223. ರೋಗಿಯು ಗುಲಾಮನಾಗಿದ್ದರೆ, ಆ ಗುಲಾಮನ ಯಜಮಾನನು ವೈದ್ಯನಿಗೆ 2 ಶೆಕೆಲ್ ಹಣವನ್ನು ಕೊಡಬೇಕು.

ಪ್ರಾಚೀನ ಮೆಸೊಪೊಟೋಮಿಯನ್ ಸಂಸ್ಕೃತಿಯಲ್ಲಿ ಬಳಕೆಯಲ್ಲಿದ್ದ ನಾಣ್ಯವನ್ನು ‘ಶೆಕೆಲ್’ ಎಂದು ಕರೆಯುತ್ತಿದ್ದರು. ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಶೆಕೆಲ್ ನಾಣ್ಯಗಳನ್ನು ಠಂಕಿಸು ತ್ತಿದ್ದರು. ಆದರೆ ಸರ್ವೇಸಾಮಾನ್ಯವಾಗಿ ಬೆಳ್ಳಿ ಶೆಕೆಲ್ ಮಾತ್ರ ದಿನನಿತ್ಯದ ವ್ಯವಹಾರದಲ್ಲಿ ಬಳಕೆ ಯಲ್ಲಿತ್ತು. ಒಂದು ಶೆಕೆಲ್ ಸರಿ ಸುಮಾರು 11 ಗ್ರಾಂ ತೂಗುತ್ತಿತ್ತು. 10 ಶೆಕೆಲ್ ಎಂದರೆ 110 ಗ್ರಾಂ ಬೆಳ್ಳಿಯಾಯಿತು. ಈ ಲೇಖನವನ್ನು ಬರೆಯುತ್ತಿರುವ ದಿನದಂದು (22.06.2025) ಭಾರತದಲ್ಲಿ 110 ಗ್ರಾಂ ಬೆಳ್ಳಿಗೆ ರೂ.12100 ಬೆಲೆಯಿದೆ.

ಇದರಿಂದ ಪ್ರಾಚೀನ ಮೆಸಪೊಟೋಮಿಯನ್ ಸಂಸ್ಕೃತಿಯಲ್ಲಿದ್ದ ವೈದ್ಯರು ಎಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದರು ಎನ್ನುವ ಬಗ್ಗೆ ನಮಗೆ ಒಂದು ಪರಿಕಲ್ಪನೆಯು ದೊರೆಯುತ್ತದೆ. ಹಮ್ಮುರಬಿಯು ತನ್ನ ಶಾಸನಗಳನ್ನು ರೂಪಿಸುವಾಗ, ಆತನು ಅನೇಕ ಅಂಶಗಳನ್ನು ಪರಿಗಣಿಸಿಲ್ಲ ಎನ್ನುವುದನ್ನು ನಾವು ಮನಗಾಣಬಹುದು.

? ವೈದ್ಯಕೀಯ ವಿಜ್ಞಾನವು ಒಂದು ಅಪರಿಪೂರ್ಣ ವಿಜ್ಞಾನ. ವೈದ್ಯಕೀಯದಲ್ಲಿ 2+2=4 ಆಗಲೇಬೇಕೆಂಬ ನಿಯಮವೇನೂ ಇಲ್ಲ.

? ವೈದ್ಯಕೀಯ ವಿಜ್ಞಾನದಲ್ಲಿ ಇಂದಿಗೂ ಸಂಶೋಧನೆಗಳು ನಡೆಯುತ್ತಿವೆ. ಪ್ರತಿದಿನವೂ ಹೊಸ ಹೊಸ ವಿಚಾರಗಳು ತಿಳಿದು ಬರುತ್ತಿವೆ. ಮನುಷ್ಯನಿಗೆ ದೇಹದ ಬಗ್ಗೆ ವೈದ್ಯರು ತಿಳಿದಿರುವುದಕ್ಕಿಂತ, ತಿಳಿಯಬೇಕಾದದ್ದು ಇನ್ನೂ ತುಂಬಾ ಇದೆ.

? ಪ್ರತಿಯೊಬ್ಬ ಮನುಷ್ಯನ ಶರೀರವು ವಿಶಿಷ್ಟವಾದದ್ದು. ಒಬ್ಬನ ಶರೀರದ ಹಾಗೆ ಮತ್ತೊಬ್ಬನ ಶರೀರವೂ ಇರಲೇಬೇಕೆಂಬ ನಿಯಮವೇನೂ ಇಲ್ಲ. ನ್ಯಾಯಾಧೀಶರು ತೀರ್ಮಾನವನ್ನು ನೀಡುವಾಗ ಈ ವ್ಯಕ್ತಿ ವೈಲಕ್ಷಣತೆಯನ್ನು (ಈಡಿಯೊ ಸಿಂಕ್ರಸಿ) ಗಮನದಲ್ಲಿ ಇಟ್ಟುಕೊಳ್ಳಬೇಕು.

? ಸಾಕ್ಷ್ಯಾಧಾರಿತ ಚಿಕಿತ್ಸೆಯನ್ನು (ಎವಿಡೆನ್ಸ್ ಬೇಸ್ಡ್ ಟ್ರೀಟ್ಮೆಂಟ್) ನೀಡಿದರೂ, ಕೆಲವು ಸಲ ರೋಗಿಯು ಮರಣಿಸುವುದುಂಟು. ಇದಕ್ಕೆ ವೈಜ್ಞಾನಿಕ ವಿವರಣೆಯನ್ನು ನೀಡಲು ಅಗತ್ಯವಾದ ಜ್ಞಾನವು ಪ್ರಸ್ತುತ ವೈದ್ಯಕೀಯಕ್ಕೆ ಇಲ್ಲ.

? ವೈದ್ಯನೂ ಮನುಷ್ಯನೆ! ಹಾಗಾಗಿ ಎಲ್ಲ ರೀತಿಯ ವೃತ್ತಿಗಳಲ್ಲಿರುವ ಮನುಷ್ಯರು ಹೇಗೆ ಒಂದಲ್ಲ ಒಂದು ಸಲ ತಪ್ಪನ್ನು ಮಾಡಬಹುದೋ, ಹಾಗೆ ವೈದ್ಯರಿಂದಲೂ ತಪ್ಪುಗಳು ಆಗಿರುವ ಸಾಧ್ಯತೆ ಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

? ಅನಾರೋಗ್ಯಪೀಡಿತ ವ್ಯಕ್ತಿಯು ಶೀಘ್ರ ಗುಣಮುಖನಾಗಬೇಕಾದರೆ, ಅವನ ಮನಸ್ಸಿನ ಆರೋಗ್ಯವು ಉತ್ತಮವಾಗಿರಬೇಕು. ಕೆಲವು ರೋಗಿಗಳಲ್ಲಾದರೂ ಸರಿ, ಬದುಕುವ ಉತ್ಸಾಹವೇ ಇರುವುದಿಲ್ಲ. ರೋಗಿಯಿಂದ ಇತ್ಯಾತ್ಮಕ ಸಹಕಾರವು ದೊರೆಯದೆ ಆತ ಮರಣಿಸಿದರೆ, ಅದಕ್ಕೂ ವೈದ್ಯರನ್ನೇ ಹೊಣೆ ಮಾಡುವ ಪದ್ಧತಿಯು ಇಂದಿದೆ.

? ಒಂದು ಪ್ರಕರಣ: ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಸಂಬಂಽತ ಮೆಡಿಕೋ-ಲೀಗಲ್ ಪ್ರಕರಣ ಗಳಲ್ಲಿ ಅತ್ಯಧಿಕ ಪರಿಹಾರ ಹಣವಾಗಿ, ಬಡ್ಡಿಯೂ ಸೇರಿದಂತೆ, ಸುಮಾರು 11.5 ಕೋಟಿ ರು. ನೀಡಲಾಗಿದೆ. ಈ ಐತಿಹಾಸಿಕ ಪ್ರಕರಣವು ಅನುರಾಧಾ ಸಾಹಾ ಎಂಬುವವರ ಮರಣಕ್ಕೆ ಸಂಬಂಧಿ ಸಿದ್ದು. ಅವರು ಅಮೆರಿಕದ ವೈದ್ಯ ಡಾ. ಕುನಾಲ್ ಸಾಹಾ ಅವರ ಪತ್ನಿ.

ಆತ ತನ್ನ ಮಡದಿಯ ಮರಣಕ್ಕೆ ಕೋಲ್ಕತ್ತಾದ ಅIಐ ಆಸ್ಪತ್ರೆಯನ್ನು ಗುರಿಯಾಗಿಸಿ, ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ಮಾಡಿದ್ದ.

ಭಾರತದ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ರಾಷ್ಟ್ರಮಟ್ಟದ ಗ್ರಾಹಕರ ತಕರಾರು ಪರಿಹಾರ ಆಯೋಗ ( NCDRC) ನೀಡಿದ್ದ 1.73 ಕೋಟಿ ರುಪಾಯಿಗಳ ಪರಿಹಾರವನ್ನು, ರು.5.96 ಕೋಟಿ+ ಬಡ್ಡಿಯಾಗಿ ಹೆಚ್ಚಿಸಿತ್ತು. ಒಟ್ಟು ರು.11.5 ಕೋಟಿ ಪರಿಹಾರವನ್ನು ನೀಡಲು ಸೂಚಿಸಿತ್ತು, ಇದರಲ್ಲಿ ಸುಮಾರು 15 ವರ್ಷಗಳ ಬಡ್ಡಿಯೂ ಸೇರಿದೆ.

ಪ್ರಕರಣದ ಪ್ರಮುಖ ವಿವರಗಳು:

? ಪ್ರಕರಣ: ಕುನಾಲ್ ಸಾಹಾ ವರ್ಸಸ್ AMRI ಆಸ್ಪತ್ರೆ ಮತ್ತು ಇತರರು.

? ಮರಣ: ಅನುರಾಧಾ ಸಾಹಾ (ಡಾ. ಕುನಾಲ್ ಸಾಹಾ ಅವರ ಪತ್ನಿ)

? ಆರೋಪ: ವೈದ್ಯಕೀಯ ನಿರ್ಲಕ್ಷ್ಯದ ಕಾರಣದಿಂದ ಸಾವು

? ಆಸ್ಪತ್ರೆ: AMRI (Advanced Medicare and Research Institute), ಕೋಲ್ಕತ್ತಾ.

? ಮೂಲ ಪರಿಹಾರ: ರು.1.73 ಕೋಟಿ ( NCDRC ಮೂಲಕ)

? ಸುಪ್ರೀಂ ಕೋರ್ಟ್ ನೀಡಿದ ಅಂತಿಮ ಪರಿಹಾರ: ಸುಮಾರು ರು.11.5 ಕೋಟಿ (ಬಡ್ಡಿ ಸೇರಿ)

? ಬಡ್ಡಿ ವಿವರ: ಈ ಪರಿಹಾರದಲ್ಲಿ ಸುಮಾರು 15 ವರ್ಷಗಳ ಬಡ್ಡಿಯು ಸೇರಿದೆ.

? ಪ್ರಾಮುಖ್ಯ: ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಇದನ್ನು ಒಂದು ಐತಿಹಾಸಿಕ ತೀರ್ಪು ಎಂದು ಪರಿಗಣಿಸಲಾಗಿದೆ.

ಇದರಿಂದ ಭವಿಷ್ಯದ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳಿಗೆ ಒಂದು ಮಾರ್ಗದರ್ಶನ ದೊರೆ ತಂತಾಗಿದೆ. ಇದು ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ, ಹೊಣೆ ಮತ್ತು ವೈದ್ಯಕೀಯ ದಾಖಲೆಗಳ ಸ್ಪಷ್ಟತೆಯ ಪ್ರಾಮುಖ್ಯ ಎಷ್ಟು ಮಹತ್ತರವೆಂಬುದನ್ನು ಉಲ್ಲೇಖಿಸುತ್ತದೆ.

ಹಮ್ಮುರಬಿಯು ತಪ್ಪು ಮಾಡಿದ ಶಸವೈದ್ಯನ ಕೈಗಳನ್ನು ಕತ್ತರಿಸುತ್ತಿದ್ದ. ಕೈಗಳಿಲ್ಲದ ವೈದ್ಯ (ಶಸ್ತ್ರ ವೈದ್ಯ) ಹೇಗೆ ತಾನೆ ತನ್ನ ವೃತ್ತಿಯಲ್ಲಿ ಮುಂದುವರೆಯಬಲ್ಲ? ಅವನ ವೈದ್ಯಕೀಯ ಬದುಕೇ ಮುಗಿದಂತೆ. ಅವನು ಬದುಕಿದ್ದೂ ಸತ್ತಂತಾಗಿರುತ್ತಾನೆ. ಈಗಿನ ನ್ಯಾಯಾಲಯಗಳು ಕೆಲವು ಪ್ರಕರಣ ಗಳಲ್ಲಿ ರೋಗಿಯ ಕಡೆಯವರು ಅಥವಾ ನ್ಯಾಯಾಲಯವು ವಿಧಿಸುವ ದಂಡ/ ಪರಿಹಾರವನ್ನು ನೆನೆಸಿಕೊಂಡರೆ, ಹಮ್ಮುರಬಿಯ ಕಾಲಕ್ಕೇ ನಮ್ಮ ನ್ಯಾಯಪದ್ಧತಿಯು ಹಿಮ್ಮರಳಿದೆ ಎಂದೆನಿಸುತ್ತದೆ.

ಈ ಹಿನ್ನೆಲೆಯಲ್ಲಿ ಲೇಖನದ ಆರಂಭದಲ್ಲಿರುವ ಸ್ಲೈಡ್ ಅರ್ಥಪೂರ್ಣವಾಗಿದೆ ಎನ್ನಬಹುದು. ಹಾಗಾಗಿ ನಮ್ಮ ಸಮಾಜವು ಎಲ್ಲ ಜನಸಾಮಾನ್ಯರನ್ನು ಕಾಣುವಂತೆ ವೈದ್ಯರನ್ನೂ ಕಾಣುವುದು ಎನ್ನುವುದನ್ನು ಮನಗಾಣಬೇಕಾಗಿದೆ.