Shashidhara Halady Column: ಮಕ್ಕಳೇ ಮಣ್ಣು ಹೊತ್ತ ಆಟದ ಮೈದಾನ !
ಗದ್ದೆ ಬಯಲು, ಹಾಡಿ, ಹಕ್ಕಲುಗಳ ನಡುವೆಯಿದ್ದ ನಮ್ಮ ಮನೆಯಿಂದ, ಬಸ್ ರಸ್ತೆ ತಲುಪಲು ಅನಿವಾ ರ್ಯವಾಗಿ 2 ಕಿ.ಮೀ. ನಡೆಯಲೇಬೇಕಿತ್ತು. ನಂತರ ಅಲ್ಲಿಂದ 3 ಕಿ.ಮೀ. ದೂರದಲ್ಲಿ ಹೈಸ್ಕೂಲು. ಮನೆ ಯಿಂದ ಆ ಹೈಸ್ಕೂಲಿಗೆ ಇದ್ದ 5 ಕಿ.ಮೀ. ಕ್ರಮಿಸಲು ನಮಗೆ ಒಂದರಿಂದ ಒಂದೂವರೆ ಗಂಟೆ ಕಾಲ ಬೇಕಿತ್ತು. ಮಕ್ಕಳಿಗಿಂತಲೂ ಮುಂಚೆ ಮನೆಯ ಹಿರಿಯರು ಎದ್ದು, ಶಾಲೆಗೆ ಹೋಗುವವರಿಗೆ ಸಿದ್ಧತೆ ನಡೆಸಬೇಕಿತ್ತು!


ಶಶಾಂಕಣ
ನೀವು ಏನೇ ಹೇಳಿ, ಗ್ರಾಮೀಣ ಬದುಕಿನಲ್ಲಿ ಕಷ್ಟಗಳು ಇದ್ದರೂ, ಅಲ್ಲಿನ ಅನುಭವ ವೈವಿಧ್ಯಕ್ಕೆ ಸಾಟಿಯೇ ಇಲ್ಲ! ಉದಾಹರಣೆಗೆ ಹೇಳುವುದಾದರೆ, ನಾನು ಓದಿದ ಹೈಸ್ಕೂಲು ಇದ್ದದ್ದು ಕಾಡಿನ ಅಂಚಿನ ಒಂದು ಗುಡ್ಡದ ಬದಿಯಲ್ಲಿ. ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಹೈಸ್ಕೂಲು ವಿದ್ಯಾಭ್ಯಾಸ ವೆಂದರೆ, ಹಲವು ಅನುಭವ ವೈವಿಧ್ಯದ ಆಗರ!
ಆ ಹೈಸ್ಕೂಲನ್ನು ತಲುಪಲು ಪ್ರತಿದಿನ ಬೆಳಗ್ಗೆ 5 ಕಿ.ಮೀ., ಸಂಜೆ 5 ಕಿ.ಮೀ. ಕ್ರಮಿಸುವ ಅನುಭವ ಮಾತ್ರ ತುಸು ಶ್ರಮದಾಯಕ, ತುಸು ಸಂತಸಭರಿತ. ಅದರಲ್ಲಿ ಅರ್ಧ ದೂರ ಅನಿವಾರ್ಯವಾಗಿ ನಡಿಗೆ, ಇನ್ನರ್ಧ ದೂರ ಒಮ್ಮೊಮ್ಮೆ ಬಸ್ ಪಯಣ, ಕೆಲವೊಮ್ಮೆ ಅದೂ ನಡಿಗೆಯಲ್ಲೇ!
ಗದ್ದೆ ಬಯಲು, ಹಾಡಿ, ಹಕ್ಕಲುಗಳ ನಡುವೆಯಿದ್ದ ನಮ್ಮ ಮನೆಯಿಂದ, ಬಸ್ ರಸ್ತೆ ತಲುಪಲು ಅನಿವಾರ್ಯವಾಗಿ 2 ಕಿ.ಮೀ. ನಡೆಯಲೇಬೇಕಿತ್ತು. ನಂತರ ಅಲ್ಲಿಂದ 3 ಕಿ.ಮೀ. ದೂರದಲ್ಲಿ ಹೈಸ್ಕೂಲು. ಮನೆಯಿಂದ ಆ ಹೈಸ್ಕೂಲಿಗೆ ಇದ್ದ 5 ಕಿ.ಮೀ. ಕ್ರಮಿಸಲು ನಮಗೆ ಒಂದರಿಂದ ಒಂದೂ ವರೆ ಗಂಟೆ ಕಾಲ ಬೇಕಿತ್ತು. ಮಕ್ಕಳಿಗಿಂತಲೂ ಮುಂಚೆ ಮನೆಯ ಹಿರಿಯರು ಎದ್ದು, ಶಾಲೆಗೆ ಹೋಗು ವವರಿಗೆ ಸಿದ್ಧತೆ ನಡೆಸಬೇಕಿತ್ತು!
ಇದನ್ನೂ ಓದಿ: Shashidhara Halady Column: ಕಡಲ ತೀರಕ್ಕೆ ಹೊರಟಿತು ಒಂದು ಶ್ವೇತ ನದಿ !
ನಮ್ಮಮ್ಮ ತಯಾರಿಸಿ ಕೊಟ್ಟ ಗಂಜಿಯನ್ನು ಪುಟಾಣಿ ಬುತ್ತಿಪಾತ್ರೆಗೆ ತುಂಬಿಸಿಕೊಂಡು, ನಡೆದು ಬಸ್ಸ್ಟಾಪ್ ಬಳಿಗೆ 8.30ರ ಮುಂಚೆ ಬಂದರೆ, ಜಗದೀಶ್ವರ ಎಂಬ ಬಸ್ ಸಿಗುತ್ತಿತ್ತು. ಆ ಬಸ್ 8.45ರ ಮುಂಚೆ ನಮ್ಮನ್ನು ಹೈಸ್ಕೂಲಿನ ಬಳಿ ಬಿಡುತ್ತಿತ್ತು. ಸಕಾಲಕ್ಕೆ ಬೇರೆ ಬಸ್ಗಳಿರಲಿಲ್ಲ. ಅಷ್ಟು ಬೇಗನೆ ಹೋಗುವುದು ಏಕೆ ಎಂದು, ಹೆಚ್ಚಿನ ದಿನ ನಡೆದುಕೊಂಡೇ ಹೈಸ್ಕೂಲಿಗೆ ಹೋಗುತ್ತಿದ್ದೆ. ಇತರ ಸಹಪಾಠಿಗಳು ಜತೆಯಾಗುತ್ತಿದ್ದರು. ಮೊದಲ 2 ಕಿ.ಮೀ., ಗದ್ದೆ ಬೈಲು, ಕಾಡು ಗುಡ್ಡದ ದಾರಿ, ನಂತರದ 3 ಕಿ.ಮೀ. ರಸ್ತೆ ದಾರಿ.
ನಮ್ಮ ಹೈಸ್ಕೂಲು ಇದ್ದ ಹಳ್ಳಿಯ ಮೂಲಹೆಸರು ಗೋಳಿಕಟ್ಟೆ. ಪುರಾತನ ಕಾಲದಲ್ಲಿ ಅಲ್ಲೊಂದು ಗೋಳಿ ಮರ ಮತ್ತು ಅದಕ್ಕೆಂದೇ ಒಂದು ಕಟ್ಟೆ ಇತ್ತು ಎನಿಸುತ್ತದೆ. ನಾಲ್ಕು ರಸ್ತೆ ಕೂಡುವ ತಾಣ ಅದು. ಈ ನಡುವೆ, ಅಲ್ಲೇ ಇದ್ದ ಪುರಾತನ ಕಾಲದ ಶಂಕರನಾರಾಯಣ ದೇವಾಲಯವು ಪ್ರಸಿದ್ಧಿಗೆ ಬಂತು.

ಆದ್ದರಿಂದ ಆ ಹಳ್ಳಿಯನ್ನು ದೇವರ ಹೆಸರಿನಲ್ಲಿ ಅಂದರೆ ‘ಶಂಕರನಾರಾಯಣ’ ಎಂದು ಕರೆಯ ತೊಡಗಿದರು! ದೇವರ ಹೆಸರು, ವ್ಯಕ್ತಿಯ ಹೆಸರು ಒಂದು ಹಳ್ಳಿಯ ಹೆಸರಾಗಿದೆ ಎಂಬ ಕ್ವಿಜ್ ಪ್ರಶ್ನೆಗೆ ಈ ಊರು ಸೂಕ್ತ! ಬೆಳಗ್ಗೆ ಶಾಲೆಗೆ ಅನುಕೂಲವಾದ ಸಮಯಕ್ಕೆ ಬಸ್ ಇರಲಿಲ್ಲವೆಂದೋ, ಆಗ ಎಲ್ಲರೂ ಅನುಸರಿಸುತ್ತಿದ್ದ ಮಿತವ್ಯಯದ ಆಚರಣೆಯಿಂದಲೋ ಏನೋ, ನಾವು ಹಲವರು ಮಕ್ಕಳು ರಸ್ತೆಯ ಮೇಲೆ ನಡೆಯುತ್ತಾ ಹೋಗಿ ಹೈಸ್ಕೂಲು ತಲುಪುತ್ತಿದ್ದೆವು.
ಎಷ್ಟೋ ದಿನ ಸಂಜೆ ವಾಪಸ್ ಬರುವಾಗಲೂ 5 ಕಿ.ಮೀ. ನಡೆದೇ ಮನೆ ಸೇರಿದ್ದುಂಟು. ಆಗ ಬಸ್ ಚಾರ್ಜ್ 35 ಪೈಸೆ. ಅದನ್ನು ಉಳಿಸಲು ಈ ರಸ್ತೆ ಚಾರಣ ಎನ್ನಬಹುದಾದರೂ, ಆ ದಾರಿಯ ಸೌಂದ ರ್ಯಕ್ಕೆ, ಸೌಕರ್ಯಕ್ಕೆ ಮನಸೋತು ನಡೆದಿದ್ದೇವೆ ಎಂದು ಈಗ ಹೇಳಿದರೂ, ಒಪ್ಪಬಹುದು. ಏಕೆಂದರೆ, ದಾರಿಯುದ್ದಕ್ಕೂ ಹಸಿರಿನ ಸಿರಿ. ಜತೆಗೆ ನಡೆದು ವಾಪಸ್ ಬರುವಾಗಲೂ, ಮನೆ ತಲುಪು ವಾಗ ಸಂಜೆಗತ್ತಲಾದರೂ, ಯಾರಿಗೂ ಯಾವುದೇ ರೀತಿಯ ಭಯವಿರಲಿಲ್ಲ.
ಅದೆಷ್ಟೋ ಬಾರಿ ಹುಡುಗರು, ಹುಡುಗಿಯರು ಒಬ್ಬೊಬ್ಬರೇ ನಡೆದು ಬರುತ್ತಿದ್ದುದೂ ಉಂಟು. ಅಲ್ಲಲ್ಲಿ ಸಿಗುವ ಮನೆಯವರ ಸಹಕಾರವು ಪರೋಕ್ಷ ಧೈರ್ಯ ನೀಡುತ್ತಿತ್ತು. ದಾರಿಯ ನಡುವೆ ಬಾಯಾರಿದರೆ, ಯಾರ ಮನೆಗೆ ಹೋದರೂ, ಕುಡಿಯಲು ಬೆಲ್ಲ ನೀರು ಕೊಡುತ್ತಿದ್ದರು.
ಕಬ್ಬಿನಾಲೆಯ ಸಮಯದಲ್ಲಿ ಎಲ್ಲರಿಗೂ ಕುಡಿಯಲು ಕಬ್ಬಿನ ಹಾಲು, ತಿನ್ನಲು ಕಬ್ಬಿನ ಕೋಲು! ನಡೆದು ಮನೆ ಸೇರುವಾಗ ಕತ್ತಲಾದರೂ, ದಾರಿಯಲ್ಲಿ ಮನುಷ್ಯರಿಂದ ಭಯ, ಶೋಷಣೆ ಇರಲಿಲ್ಲ. ಹುಲಿ, ಚಿರತೆ ಕಾಟ ಇರಲಿಲ್ಲ. ಆದ್ದರಿಂದಲೇ ಆ ನಡಿಗೆಯ ಅನುಭವ ಅನುಪಮ. ಮಳೆಗಾಲದಲ್ಲಿ ನಮ್ಮ ಮನೆಯಿಂದ ಹೈಸ್ಕೂಲಿಗೆ ನಡೆದು ಹೊರಟರೆ, ಮೊದಲಿನ ಅರ್ಧ ಕಿ.ಮೀ. ದೂರ ತುಸು ರಗಳೆಯೇ ಸರಿ.
ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಬುತ್ತಿಪಾತ್ರೆ ಹಿಡಿದು ಆ ಬೈಲನ್ನು ದಾಟುವುದು ಸಣ್ಣ ಸಾಹಸ. ಮಳೆ ಸುರಿಯವಾಗ, ಕೊಡೆ ಹಿಡಿದು ಗದ್ದೆಯಂಚಿನ ಮೇಲೆ ನಡಿಗೆ, ಎರಡೂ ಕಡೆ ಭತ್ತ ಬೆಳೆದ ಗದ್ದೆ, ಅದರಾಚೆ ನೀರು ಹರಿಯುವ ತೋಡು, ಆ ತೋಡನ್ನು ದಾಟಲು ಮರದ ಸಾರ, ಅದನ್ನು ದಾಟಿ, ಹಾಡಿಯ ದಾರಿ ಹಿಡಿದು ಅರ್ಧ ಗಂಟೆ ನಡೆದಾಗ ನಮ್ಮೂರಿನ ಬಸ್ಸ್ಟಾಪ್ ಸಿಗುತ್ತಿತ್ತು.
ಅಲ್ಲಿಂದಾಚೆ ಹೆಚ್ಚಿನ ದಿನ ರಸ್ತೆಯ ಮೇಲೆ ನಡೆಯುವ ಕೆಲಸ. ನಮ್ಮೂರಿನ ಹತ್ತಿರವೇ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹೊಸ ಸೇತುವೆಯ ಮೇಲೆ ನಡೆಯುವಾಗ, ಕೆಳಗೆ ಹರಿಯುವ ನೀರನ್ನು ನೋಡುವ ಆಸೆ. ಮಳೆಗಾಲದಲ್ಲಾದರೆ, ಆ ನದಿಯಲ್ಲಿ ಹರಿಯುವ ಕೆಂಪನೆಯ ನೀರು, ಅದರಲ್ಲಿ ಒಮ್ಮೊಮ್ಮೆ ತೇಲಿಬರುವ ಬೃಹತ್ ಗಾತ್ರದ ಮರಗಳು! ಚಳಿಗಾಲದಲ್ಲಿ ಆ ನದಿಯ ತಿಳಿಯಾದ ನೀರಿನಲ್ಲಿ ಓಡಾಡುವ ಗೊದಮೊಟ್ಟೆಗಳ ಹಿಂಡು, ಮೀನುಗಳ ದಂಡು ಕಾಣಸಿಗುತ್ತಿತ್ತು.
ಸೇತುವೆ ದಾಟಿದ ನಂತರ, ರಸ್ತೆಯ ಇಕ್ಕೆಲದಲ್ಲೂ ಹಾಡಿ, ಕಾಡು, ಅಲ್ಲಲ್ಲಿ ಗುಡ್ಡ. ಬೇಸಗೆ ಹತ್ತಿರ ಬರುತ್ತಿದ್ದಂತೆ, ದಾರಿಯ ತುಸು ಒಳಭಾಗದಲ್ಲಿ ಕುರುಚಲು ಗಿಡಗಳ ನಡುವೆ ಬೆಳೆದ ಚೇಂಪಿ ಹಣ್ಣು ತಿನ್ನುವ ಅವಕಾಶ. ಚೇಂಪಿ ಹಣ್ಣು ರುಚಿ ಮತ್ತು ಗಾತ್ರದಲ್ಲಿ ದ್ರಾಕ್ಷಿಯನ್ನು ಹೋಲುತ್ತದೆ. ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಹಣ್ಣುಗಳು ತಿನ್ನಲು ಸಿಗುತ್ತಿದ್ದುದು ಒಂದು ಸೋಜಿಗವೇ!
ಗರ್ಚನ ಹಣ್ಣು, ಬೆಳಮಾರ ಹಣ್ಣು, ಕಾಟುಮಾವಿನ ಹಣ್ಣುಗಳು, ನೇರಳೆ ಹಣ್ಣು, ಸಳ್ಳೆ ಹಣ್ಣುಗಳು ಮಕ್ಕಳಿಗೆ ಬಲು ಇಷ್ಟ. ನಾವು ನಡೆಯುವ ಟಾರುರಸ್ತೆಯ ಮೇಲೆ ಅಲ್ಲಲ್ಲಿ ಕಪ್ಪೆಗಳ ಕಳೇಬರ! ರಾತ್ರಿ ಹೊತ್ತಿನಲ್ಲೋ ಏನೊ, ವೇಗವಾಗಿ ಸಾಗುವ ಲಾರಿಗಳ ಚಕ್ರಕ್ಕೆ ಸ್ಕಿಕಿದ ಅಬ್ಬೆಪಾರಿ ಕಪ್ಪೆಗಳ ಪಾಡು ಅದು. ಅದೇ ರಸ್ತೆಯಲ್ಲಿ ನಡೆದು, ಕಲ್ಕುಟುಕನ ದೇವಾಲಯದ ಬಳಿ ದಟ್ಟ ಹಾಡಿದಾರಿಯಲ್ಲಿ ಬಲಕ್ಕೆ ಸಾಗಿ ಮುಂದುವರಿದರೆ, ಹೈಸ್ಕೂಲು ಸಿಗುತ್ತದೆ. ಈಗ ಆ ಕಲ್ಕುಟಕನ ಹಾಡಿ ಸಂಪೂರ್ಣ ನಾಶವಾಗಿಬಿಟ್ಟಿದೆ; ಜೆಸಿಬಿಗಳು ಆ ಜಾಗವನ್ನು ಮಟ್ಟಸ ಮಾಡಿವೆ.
ದಿನಾ ಈ ಟಾರ್ರಸ್ತೆಯ ಮೇಲೆ ನಡೆಯಲು ಬೋರ್ ಎನಿಸಿದರೆ, ಒಂದು ಒಳದಾರಿಯಿತ್ತು. ಕಟ್ಟೆ ಮಕ್ಕಿ ಉಬ್ಬು ಏರಿದ ನಂತರ, ತುಸು ದೂರದಲ್ಲಿ ಎಡಭಾಗದ ಹಕ್ಕಲಿನೊಳಗೆ ಸಾಗುವ ದಾರಿಯಲ್ಲಿ ನಡೆದರೆ, ಇನ್ನಷ್ಟು ನಿರ್ಜನ ಎನಿಸುವ ಕಾಡುದಾರಿ. ಅದರಾಚೆ ಒಂದು ಗದ್ದೆಬೈಲು, ತೋಡು, ಸಂಕ. ಅಲ್ಲಿಂದಾಚೆ ಮತ್ತೊಂದು ಗುಡ್ಡ. ಅದನ್ನೇರಿ ಇಳಿದರೆ, ಶಂಕರನಾರಾಯಣ ದೇವಾಲಯದ ಹಿಂಭಾಗದಲ್ಲಿ, ಐತಾಳರ ಮನೆಯ ಹತ್ತಿರ ಸೌಡ ರಸ್ತೆಯನ್ನು ತಲುಪಬಹುದು. ಅಲ್ಲಿಂದ ಮತ್ತೆ ಟಾರುರಸ್ತೆಯಲ್ಲಿ ಒಂದು ಕಿ.ಮೀ. ನಡೆದರೆ ನಮ್ಮ ಹೈಸ್ಕೂಲು.
ಈ ಒಳದಾರಿ ಅಷ್ಟೇನೂ ಹತ್ತಿರದ ದಾರಿ ಎನ್ನಲಾಗದು. ಆದರೆ, ಆ ದಾರಿಯುದ್ದಕ್ಕೂ ಸಿಗುವ ಹಾಡಿ, ಹಕ್ಕಲು, ಗದ್ದೆ, ಗುಡ್ಡಗಳಲ್ಲಿ ನಡೆಯುವ ಅನುಭವಕ್ಕೆಂದೇ ನಾವೆಲ್ಲಾ ಅಲ್ಲಿ ನಡೆಯುತ್ತಿದ್ದೆವು ಎನಿಸುತ್ತದೆ. ಚಳಿಗಾಲ ಕಳೆದ ನಂತರ ಆ ದಾರಿಯುದ್ದಕ್ಕೂ ಮಾವಿನ ಮಿಡಿಗಳು ತಿನ್ನಲು ಸಿಗುತ್ತಿದ್ದವು. ಅಲ್ಲಲ್ಲಿ ಕೆಲವರು ಕಬ್ಬಿನಾಲೆ ಮಾಡುವವರು ಕಬ್ಬು ಕೊಡುತ್ತಿದ್ದರು.
ನಾನೊಮ್ಮೆ ಒಬ್ಬನೇ ಆ ದಾರಿಯಲ್ಲಿ ನಡೆದಾಗ, ಒಂದು ಪುಟಾಣಿ ಹಕ್ಕಿಯ ಗೂಡನ್ನು ಕಂಡ ನೆನಪಿದೆ. ಗದ್ದೆಯಂಚಿನ ತೋಡಿನ ಪಕ್ಕದ ಮುಂಡುಕದ ಮುಳ್ಳು ಎಲೆಗಳ ನಡುವೆ ಆ ಸಣ್ಣ ಹಕ್ಕಿ ಗೂಡು ಕಟ್ಟಿತ್ತು. 5 ಅಡಿ ಎತ್ತರದಲ್ಲಿ ಇದ್ದ ಆ ಗೂಡು, ಟ್ಯೂಬ್ ಆಕಾರದಲ್ಲಿತ್ತು. ಪೂರ್ತಿ ಎಲೆ ಗಳಿಂದಲೇ ನಿರ್ಮಾಣ. ಆ ಹಕ್ಕಿಯ ಹೆಸರು ಗೊತ್ತಿರಲಿಲ್ಲ. ನಾನು ಗೂಡನ್ನು ನೋಡುತ್ತಾ ನಿಂತಾಗ, ಆ ಹಕ್ಕಿಯು ಬೆದರಿ ಹಾರಿಹೋಗಿದ್ದು ನೆನಪಿದೆ.
‘ಓ, ನಾವೆಲ್ಲಾ ಈ ರೀತಿ ಹತ್ತಿರದಿಂದ ಅದನ್ನು ನೋಡಿದರೆ ಅದಕ್ಕೆ ತೊಂದರೆ’ ಎಂದರಿತ ನಾನು, ಬೇಗ ಬೇಗನೆ ಕಾಲು ಹಾಕಿದೆ. ಹೈಸ್ಕೂಲಿನ ಹಿಂಭಾಗದಲ್ಲಿ ಆರಂಭದಲ್ಲಿ, ಒಂದು ಕುರುಚಲು ಕಾಡಿದೆ. ಆ ನಂತರ ದಟ್ಟವಾದ ಕಾಡು, ಗುಡ್ಡ. ಶಾಲೆಯ ಹಿಂಭಾಗದ ಕುರುಚಲು ಗಿಡಗಳ ಒಂದು ಟೊಂಗೆಯಲ್ಲಿ ಹಕ್ಕಿಯೊಂದು ಕಟ್ಟಿದ್ದ ಗೂಡು ಇಂದಿಗೂ ನೆನಪಿದೆ. ಪಾಪ, ಆ ಹಕ್ಕಿಯು ಮೂರ ರಿಂದ ನಾಲ್ಕು ಅಡಿಗಳ ಎತ್ತರದಲ್ಲಿ ಗೂಡುಕಟ್ಟಿ ಮೊಟ್ಟೆಯಿಟ್ಟಿತ್ತು.
ಸಾಮಾನ್ಯವಾಗಿ ದರ್ಜಿ ಹಕ್ಕಿಗಳು ಅಷ್ಟು ಕಡಿಮೆ ಎತ್ತರದಲ್ಲಿ ಗೂಡು ಕಟ್ಟುತ್ತವೆ. ಅದೂ ದರ್ಜಿ ಹಕ್ಕಿಯ ಗೂಡು ಇರಬಹುದು. ನಾವು ಮಕ್ಕಳು ಪ್ರತಿದಿನ ಆ ಗೂಡನ್ನು ನೋಡುತ್ತಿದ್ದೆವು. ಹತ್ತಿರದಿಂದ, ತಲೆಬಗ್ಗಿಸಿ, ಮಾತನಾಡುತ್ತಾ ನಾವು ನೋಡುತ್ತಾ ನಿಂತಾಗ, ಆ ಹಕ್ಕಿಗೆ ಅದರಿಂದ ಅದೆಷ್ಟು ಕಿರಿಕಿರಿ ಆಯಿತೋ ಗೊತ್ತಿಲ್ಲ.
ಹೆಚ್ಚಿನ ದಿನ ನಮ್ಮ ಬುತ್ತಿಪಾತ್ರೆಯಲ್ಲಿ ಹಾಕಿಕೊಡುತ್ತಿದ್ದುದು, ಅನ್ನ ಅಥವಾ ಗಂಜಿ, ಅದರ ಜತೆ ಮೊಸರು, ಅದರ ಮೇಲೊಂದು ಉಪ್ಪಿನಕಾಯಿ ಹೋಳು. ಹೈಸ್ಕೂಲು ಸೇರಿದ ಹೊಸತರಲ್ಲಿ, ಮೂರು ಕಂಪಾಟ್ಮೆಂಟ್ ಇರುವ ಪುಟ್ಟ ಬುತ್ತಿಪಾತ್ರೆಯನ್ನು ನಮ್ಮಪ್ಪ ತೆಗೆಸಿಕೊಟ್ಟಿದ್ದರು. ಅದರಲ್ಲಿ ಪ್ರತ್ಯೇಕವಾಗಿ ಉಪ್ಪಿನಕಾಯಿ ಹಾಕಿಕೊಳ್ಳುವ ಅವಕಾಶ.
ಮಳೆಗಾಲದಲ್ಲಿ ನಮ್ಮ ಹೈಸ್ಕೂಲಿನ ಪಕ್ಕದಲ್ಲೇ ಹರಿಯುತ್ತಿದ್ದ ತಿಳಿನೀರಿನ ತೊರೆಯಲ್ಲಿ ಕೈ ತೊಳೆಯುವ, ಬುತ್ತಿಪಾತ್ರೆ ತೊಳೆಯುವ ಪರಿಪಾಠ. ಒಮ್ಮೊಮ್ಮೆ ಬುತ್ತಿಯೂಟ ತಿನ್ನಲು, ಶಾಲೆಯ ಹಿಂಭಾಗದ ಕಾಡಿನತ್ತ ಸಾಗಿದ್ದ ಗಾಡಿಜಾಡಿನಲ್ಲಿ ಸ್ವಲ್ಪ ದೂರ ನಡೆದು ಹೋಗುತ್ತಿದ್ದೆವು. ಅಲ್ಲಿ ಪುರಾತನ ಕಾಲದ ಹಲವು ಮರಗಳಿದ್ದವು, ಅವುಗಳ ದಪ್ಪನೆಯ ಬೇರು ನಮ್ಮ ಕುರ್ಚಿ, ಇನ್ನೊಂದು ಬೇರು ಟೇಬಲ್.
ಅದೊಂದು ದಟ್ಟ, ಸುಂದರ ಕಾಡು. ಊಟ ಮುಗಿಸಿದಾಗ, ಕೈತೊಳೆಯಲು ಅಲ್ಲೊಂದು ನೀರಿನಾ ಶ್ರಯವಿತ್ತು. ಸುಮಾರು ಹತ್ತು ಅಡಿ ವಿಶಾಲವಿದ್ದ ಆ ನೀರಿನ ಗುಮ್ಮಿಯಲ್ಲಿ ಬೇಸಗೆಯಲ್ಲೂ ನೀರಿರು ತ್ತಿತ್ತು. ಅದರ ಸುತ್ತಲೂ ಗಿಡ, ಪೊದೆ, ಬಳ್ಳಿ, ಮರಗಳಿದ್ದುದರಿಂದಲೇ ಇರಬೇಕು, ಅದರ ನೀರು ಒಣಗುತ್ತಿರಲಿಲ್ಲ. ಆದರೆ, ಆ ಗುಮ್ಮಿಗೆ ನಿರಂತರವಾಗಿ ಎಲೆಗಳು ಬೀಳುತ್ತಿದ್ದುದರಿಂದಾಗಿ, ಆ ನೀರನ್ನು ಬಾಯಿಗೆ ಹಾಕಿಕೊಂಡರೆ, ಎಲೆಕೊಳೆತ ರುಚಿ!
ಕೈತೊಳೆಯಲು, ಬುತ್ತಿಪಾತ್ರೆ ತೊಳೆಯಲು ಮಾತ್ರ ಅದರ ಉಪಯೋಗ. ಆ ಸುತ್ತಲೂ ಎಲ್ಲೂ ಮನೆಗಳಿರಲಿಲ್ಲ. ಅದು ಕಾಡುಪ್ರಾಣಿಗಳೇ ಮಾಡಿದ ಗುಮ್ಮಿ ಇರಬಹುದು. ಕಾಡುಪ್ರಾಣಿಗಳ ಉಪಯೋಗಕ್ಕೆ ಸೂಕ್ತವಾಗಿತ್ತು ಆ ಗುಮ್ಮಿಯ ನೀರು.
ಅದೇ ಗುಮ್ಮಿಯ ಪಕ್ಕ ಸಾಗಿದ್ದ ಗಾಡಿಜಾಡಿನಲ್ಲಿ ನಾನು ಮತ್ತು ಸಹಪಾಠಿ ಒಮ್ಮೆ ನಡೆದುಕೊಂಡು ಹೋಗಿದ್ದುಂಟು. ಅವರ ಮನೆಯು ನಮ್ಮ ಮನೆಗಿಂತಲೂ ಹೆಚ್ಚು ದುರ್ಗಮ ಸ್ಥಳದಲ್ಲಿತ್ತು. ಹೈಸ್ಕೂಲಿನ ಹಿಂಭಾಗದ ಆ ದಾರಿಯಲ್ಲಿ 5 ಕಿ.ಮೀ. ನಡೆದರೆ ಅವರ ಊರು ರಟ್ಟಾಡಿ. ಒಂದು ಸಂಜೆಕ್ಲಾಸ್ ಮುಗಿಸಿ, ನಾವಿಬ್ಬರು ಆ ದಾರಿ ಹಿಡಿದೆವು.
ಎಲ್ಲಾ ಕಡೆ ಕಾಡು, ಹಾಡಿ, ಗುಡ್ಡಗಳು! ನಡುನಡುವೆ ಗದ್ದೆಗಳು. ಅವುಗಳ ನಡುವೆ ದಾರಿಗಡ್ಡಲಾಗಿ ವಾರಾಹಿ ಹೊಳೆಯ ಉಪನದಿ! ಅವು ಬೇಸಗೆಯ ದಿನಗಳಾಗಿದ್ದರಿಂದ ನೀರು ಕಡಿಮೆಯಿತ್ತು. ಆ ನೀರಿನಲ್ಲಿ ನಡೆದರೆ ತೊಡೆ ಮಟ್ಟದ ನೀರು. ನಿಧಾನವಾಗಿ, ಜಾಗ್ರತೆಯಿಂದ ಆ ಹರಿಯುವ ನೀರಿನಲ್ಲಿ ನದಿಯನ್ನು ದಾಟುವಾಗ ನನ್ನ ಚಡ್ಡಿಯ ಅಂಚು ತುಸು ಒದ್ದೆಯಾಯಿತು. ಆದರೆ ಸಂಜೆಯ ಇಳಿ ಬಿಸಿಲಿನಲ್ಲಿ, ಆ ವಿಶಾಲ ನದಿಯ ಹರವನ್ನು ಕಾಲ್ನಡಿಗೆಯಲ್ಲೇ ದಾಟಿದ ಅನುಭವ ಮಾತ್ರ ಅಪೂರ್ವ.
ನಮ್ಮ ಹೈಸ್ಕೂಲಿನ ವಿಶೇಷತೆ ಎಂದರೆ, ಮುಂಭಾಗದಲ್ಲೊಂದು ವಿಶಾಲವಾದ ಆಟದ ಮೈದಾನ, ಹಿಂಭಾಗದಲ್ಲಿ ಅದಕ್ಕಿಂತಲೂ ವಿಶಾಲವಾದ ಇನ್ನೊಂದು ಆಟದ ಮೈದಾನ. ಹಿಂಭಾಗದ ಮೈದಾನ ಅದೆಷ್ಟು ವಿಶಾಲವೆಂದರೆ, ಫುಟ್ಬಾಲ್ ಆಟ ಆಡುವಷ್ಟು! ಅಲ್ಲಿದ್ದ ಹೆಬ್ಬಾರ್ ಎಂಬ ಪಿ.ಇ.ಟೀಚರ್, ಮಕ್ಕಳ ಸಹಾಯದಿಂದ ಅಷ್ಟು ದೊಡ್ಡ ಆಟದ ಮೈದಾನ ನಿರ್ಮಿಸಿದ್ದರು.
ಸಮಯ ಇದ್ದಾಗಲೆಲ್ಲಾ ಶಾಲಾ ಮಕ್ಕಳು ಗುಡ್ಡವನ್ನು ತರಿದು, ಕೈಗಾಡಿಯಲ್ಲಿ ಮಣ್ಣನ್ನು ತುಂಬಿಕೊಂಡು, ಇಳಿಜಾರಿಗೆ ತುಂಬಿಸುವ ಕೆಲಸ ಮಾಡಿದ್ದರು. ಈ ರೀತಿ ಹಲವು ವರ್ಷ ಮಾಡಿದ್ದ ರಿಂದ, ಅಷ್ಟು ದೊಡ್ಡ ಮೈದಾನ ಸಿದ್ಧವಾಗಿತ್ತು. ನಾನೂ ಆ ಮೈದಾನ ನಿರ್ಮಿಸಲು, ಮಣ್ಣನ್ನು ಕೈಗಾಡಿಯಲ್ಲಿ ತಳ್ಳಿ ತಂದು ಇಳಿಜಾರಿಗೆ ಹಾಕಿ, ಅಳಿಲುಸೇವೆ ಮಾಡಿದ್ದೆ.
ಆದರೆ, ಅಷ್ಟು ಹೊತ್ತಿಗೆ ಅದಾಗಲೇ, ಹಿಂದಿನ ವಿದ್ಯಾರ್ಥಿಗಳು ಮಣ್ಣು ಹೊತ್ತು, ಮಣ್ಣು ಹೊತ್ತು, ಸಾಕಷ್ಟು ವಿಶಾಲ ಮೈದಾನವನ್ನು ನಿರ್ಮಾಣ ಮಾಡಿದ್ದರು. ಮಕ್ಕಳೆಲ್ಲರೂ ಕ್ರಿಕೆಟ್, ಫುಟ್ಬಾಲ್, ಕಬಡ್ಡಿ, ಬಾಲ್ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋಬಾಲ್, ಖೋಖೋ ಆಡಲು ಪ್ರಶಸ್ತವಾದ ಮೈದಾನವದು!
ಮೈದಾನ ನಿರ್ಮಿಸಲು ನಾನೂ ಒಂದಷ್ಟು ಮಣ್ಣನ್ನು ತರಿದು, ಕೈಗಾಡಿಯಲ್ಲಿ ತಂದು ಒಂದು ಮೂಲೆಯಲ್ಲಿ ರಾಶಿ ಹಾಕಿದ್ದರಿಂದಾಗಿ, ‘ಶಾಲೆಗೆ ಮಣ್ಣು ಹೊತ್ತಿದ್ದು’ ಎಂಬ ನುಡಿಗಟ್ಟು ಇಲ್ಲಿ ನಿಜವಾಗಿಯೂ ಅನುಭವಕ್ಕೆ ಬಂದಿತ್ತು! ಈಗ ಆ ಹೈಸ್ಕೂಲು ಅಭಿವೃದ್ಧಿ ಕಂಡಿದೆ. ಅಲ್ಲೀಗ ಪ್ರಥಮದರ್ಜೆ ಕಾಲೇಜು ಆರಂಭಗೊಂಡಿದೆ.