ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಆನೆ ಮಾಂಸವನ್ನು ಒಬ್ಬ ವ್ಯಕ್ತಿ ಸೇವಿಸುವುದು ಸಾಧ್ಯವಾ ? ಹೂಂ ಸಾಧ್ಯ..

ಸಾಮಾನ್ಯವಾಗಿ ಏಷ್ಯಾದಲ್ಲಿ ಕಂಡುಬರುವ ಆನೆಗಳು ಆಫ್ರಿಕಾದ ಆನೆಗಳಿಗಿಂತ ಚಿಕ್ಕದಾಗಿದ್ದರೂ, ಸುಮಾರು ನಾಲ್ಕರಿಂದ ಐದು ಸಾವಿರ ಕೆಜಿ ಭಾರ ಹೊಂದಿರುತ್ತವೆ. ಒಂದು ಆನೆ ಸರಾಸರಿ ಮೂರೂವರೆ ಸಾವಿರ ಕೆಜಿ ತೂಕದ್ದು ಎಂದು ಭಾವಿಸಿ ದರೂ, ಮನುಷ್ಯನಿಗೆ ಅದನ್ನು ಸೇವಿಸುವುದು ಅಸಾಧ್ಯದ ಮಾತೇ.

ಆನೆ ಮಾಂಸವನ್ನು ಒಬ್ಬ ವ್ಯಕ್ತಿ ಸೇವಿಸುವುದು ಸಾಧ್ಯವಾ ? ಹೂಂ ಸಾಧ್ಯ..

ಇದೇ ಅಂತರಂಗ ಸುದ್ದಿ

vbhat@me.com

ಚೇತನ್ ಭಗತ್ ಬರೆದ ‘ಜೀವನಕ್ಕೆ ಹನ್ನೊಂದು ನಿಯಮಗಳು’ ಎಂಬ ಪುಸ್ತಕವನ್ನು ಇತ್ತೀಚೆಗೆ ನಾನು ಓದುತ್ತಿದ್ದೆ. ಆ ಕೃತಿಯಲ್ಲಿ Eat The Elephant ಎಂಬ ಅಧ್ಯಾಯ ನನ್ನ ಗಮನ ಸೆಳೆಯಿತು. ‘ಆನೆಯನ್ನು ತಿನ್ನುವುದು ಹೇಗೆ?’ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಎಂದಾದರೂ ಹಾದುಹೋಗಿ ದ್ದುಂಟಾ? ನನ್ನ ಮನಸ್ಸಿನಲ್ಲಿ ಈ ಪ್ರಶ್ನೆಯಂತೂ ಎಂದೂ ಹಾದು ಹೋಗಿರಲಿಲ್ಲ. ಕಾರಣ ಯಾರೂ ಆನೆ ಮಾಂಸವನ್ನು ಸೇವಿಸುವುದಿಲ್ಲವಲ್ಲ. ಆದರೂ ಒಂದು ವೇಳೆ ಆನೆ ಮಾಂಸವನ್ನು ಸೇವಿಸು ತ್ತಾರೆ ಎಂದು ಒಂದು ಕ್ಷಣ ಭಾವಿಸೋಣ. ಆಗಲೂ ಇಡೀ ಆನೆ ಮಾಂಸವನ್ನು ಸೇವಿಸುವುದು ಸಾಧ್ಯವೇ ಇಲ್ಲ.

ಕಾರಣ ಆನೆ ಗಾತ್ರದಲ್ಲಿ ಬಹಳ ದೊಡ್ಡದು. ಸಾಮಾನ್ಯವಾಗಿ ಏಷ್ಯಾದಲ್ಲಿ ಕಂಡುಬರುವ ಆನೆಗಳು ಆಫ್ರಿಕಾದ ಆನೆಗಳಿಗಿಂತ ಚಿಕ್ಕದಾಗಿದ್ದರೂ, ಸುಮಾರು ನಾಲ್ಕರಿಂದ ಐದು ಸಾವಿರ ಕೆಜಿ ಭಾರ ಹೊಂದಿರುತ್ತವೆ. ಒಂದು ಆನೆ ಸರಾಸರಿ ಮೂರೂವರೆ ಸಾವಿರ ಕೆಜಿ ತೂಕದ್ದು ಎಂದು ಭಾವಿಸಿ ದರೂ, ಮನುಷ್ಯನಿಗೆ ಅದನ್ನು ಸೇವಿಸುವುದು ಅಸಾಧ್ಯದ ಮಾತೇ.

ಆದರೆ ಈ ಪ್ರಶ್ನೆಗೆ ಬೇರೆ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸೋಣ. ನಾವು ಮನುಷ್ಯ ರು ಪ್ರತಿದಿನ ಸುಮಾರು ಒಂದೂವರೆ ಕೆಜಿಯಷ್ಟು ಆಹಾರವನ್ನು ಸೇವಿಸುತ್ತೇವೆ ಎಂದಿಟ್ಟು ಕೊಳ್ಳೋಣ. ಒಂದು ಆನೆ ಮೂರೂವರೆ ಸಾವಿರ ಕೆಜಿ ತೂಕವುಳ್ಳದ್ದು ಎಂದು ಭಾವಿಸಿದರೂ, ದಿನಕ್ಕೆ ಒಂದೂವರೆ ಕೆಜಿಯಂತೆ ಸೇವಿಸಲು ನಮಗೆ 2333 ದಿನಗಳು ಅಥವಾ ಆರೂವರೆ ವರ್ಷಗಳು ಬೇಕು.

ಆದ್ದರಿಂದ ಈ ಪ್ರಶ್ನೆಗೆ ಸರಳವಾದ ಒಂದು ಉತ್ತರವೇನೆಂದರೆ, ಆನೆಯನ್ನು ಸಣ್ಣ ಸಣ್ಣ ಭಾಗಗಳಾಗಿ ಕತ್ತರಿಸಿ ಹಲವು ವರ್ಷಗಳ ತನಕ ಸೇವಿಸುವುದು. ಚೇತನ್ ಭಗತ್ ಈ ಉದಾಹರಣೆ ನೀಡಿದ್ದು ನಿಜಕ್ಕೂ ಆನೆಯನ್ನು ಸೇವಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲಿಕ್ಕಲ್ಲ. ಅವರು ಈ ನಿದರ್ಶನವನ್ನು ನೀಡಿದ ಉದ್ದೇಶವೇ ಬೇರೆ. ಇದನ್ನು ಒಂದು ಉಪಮೆ ಅಥವಾ ರೂಪಕವಾಗಿ ಅವರು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Vishweshwar Bhat Column: ಶಬ್ದಬ್ರಹ್ಮ ತಿ.ತಾ.ಶರ್ಮ

ನಮ್ಮ ಮುಂದೆ, ಆನೆ ಮಾಂಸವನ್ನು ಸೇವಿಸುವಂಥ ಪರಿಸ್ಥಿತಿ ಎದುರಾದರೂ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಹೇಳಲು ಈ ನಿದರ್ಶನವನ್ನು ಹೇಳಿದ್ದಾರಷ್ಟೇ. ನಿಮ್ಮ ಮುಂದೆ ನೀವು ಊಹಿಸದಂಥ ದೊಡ್ಡ ಸಮಸ್ಯೆ ಎದುರಾದರೆ ಅದನ್ನು ಹೇಗೆ ಪರಿಹರಿಸುತ್ತೀರಿ? ಆಗ ನೀವು ಆನೆ ಮಾಂಸ ಸೇವನೆಯ ಉದಾಹರಣೆಯನ್ನು ನೆನಪಿಸಿಕೊಳ್ಳಿ. ನಿಮ್ಮ ಮುಂದಿರುವ ದೊಡ್ಡ ಸಮಸ್ಯೆಯನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ವಿಭಜಿಸುತ್ತಾ, ತುಂಡರಿಸುತ್ತಾ ಹೋಗಿ. ಸಣ್ಣ ಸಣ್ಣ ಮಾಂಸದ ತುಂಡುಗಳನ್ನು ಸೇವಿಸುವುದು ಸುಲಭ. ದೊಡ್ಡ ಆನೆಯನ್ನು ಒಂದೇ ಸಲಕ್ಕೆ ಸೇವಿಸುವುದು ಕಷ್ಟ. ಹಾಗೆಯೇ ದೊಡ್ಡ ಸಮಸ್ಯೆಯನ್ನು ಒಂದೇ ಸಲಕ್ಕೆ ಪರಿಹರಿಸುವುದು ಕಷ್ಟ.

ಅದನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸುತ್ತಾ ಹೋದರೆ, ಆ ಸಣ್ಣ ಭಾಗವನ್ನು ಹ್ಯಾಂಡಲ್ ಮಾಡುವುದು ಸುಲಭ. ಒಂದೇ ಸಲ ನೂರು ಕೆಜಿ ಭಾರದ ವಸ್ತುವನ್ನು ಎತ್ತಿಕೊಂಡು ಸಾಗಿಸುವುದು ಕಷ್ಟ. ಅದೇ ನೀವು ಅದನ್ನು ಇಪ್ಪತ್ತು ಭಾಗಗಳಾಗಿ ವಿಂಗಡಿಸಿದರೆ, ಐದು ಕೆಜಿಯನ್ನು ಒಬ್ಬರೇ ಸುಲಭವಾಗಿ ಸಾಗಿಸಬಹುದು. ನಿಮ್ಮ ದೊಡ್ಡ ಸಮಸ್ಯೆಯನ್ನು ನೀವು ಹೇಗೆ ಸಣ್ಣ ತುಂಡುಗಳಾಗಿ ಕತ್ತರಿಸುತ್ತೀರಿ ಮತ್ತು ಆ ಸಣ್ಣ ತುಂಡುಗಳನ್ನು ಒಂದೊಂದಾಗಿ ಹೇಗೆ ಪರಿಹರಿಸುತ್ತಾ ಹೋಗುತ್ತೀರಿ ಎಂಬುದು ನಿಮ್ಮ ಜೀವನದಲ್ಲಿ ಯಶಸ್ಸನ್ನು ನಿರ್ಧರಿಸುತ್ತದೆ.

ಆನೆಯನ್ನು ನೋಡಿದ ತಕ್ಷಣ ಅದರ ಮಾಂಸವನ್ನು ಒಬ್ಬನೇ ಸೇವಿಸುವುದು ಹೇಗೆ ಎಂಬ ಪ್ರಶ್ನೆ ಧುತ್ತನೆ ಕವಿಯುವಂತೆ, ನಿಮ್ಮ ಮುಂದೆ ಅಗಾಧವಾದ ಸಮಸ್ಯೆ ಎದುರಾದಾಗಲೂ ಅದೇ ಪ್ರಶ್ನೆ ಮೂಡುತ್ತದೆ.

ಇದನ್ನೂ ಓದಿ: IPL 2025: ʻಜಸ್‌ಪ್ರೀತ್‌ ಬುಮ್ರಾ ಇರುವವರೆಗೂ ಪಂದ್ಯ ಮುಗಿಯಲ್ಲʼ-ಎಬಿ ಡಿ ವಿಲಿಯರ್ಸ್‌!

“ನನ್ನ ಜೀವನದಲ್ಲಿ ನಾನು ಅನೇಕ ಆನೆಗಳನ್ನು ತಿಂದಿದ್ದೇನೆ" ಎಂದು ಚೇತನ್ ಭಗತ್ ಹೇಳಿದ್ದಾರೆ. ಅಂದರೆ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿದ್ದೇನೆ ಎಂದರ್ಥ. “ಆರಂಭದಲ್ಲಿ ಯಾವುದು ಸಾಧ್ಯವಿಲ್ಲವೆಂದು ಭಾವಿಸಿದ್ದಾನೋ, ಆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ್ದೇನೆ" ಎಂದು ಅವರು ಹೇಳುತ್ತಾರೆ. ಅಷ್ಟಕ್ಕೂ ಆನೆಯನ್ನು ಸೇವಿಸಿ ( Eat the Elephant ) ಎಂಬ ಮಾತು ಒಂದು ಜನಪ್ರಿಯ ಇಂಗ್ಲಿಷ್ ನುಡಿಗಟ್ಟಿನ ಕನ್ನಡ ರೂಪಾಂತರ.

ಇದರ ಮೂಲ ಆಶಯ How do you eat an elephant? One bite at a time ಅಂದರೆ, ‘ನೀವು ಆನೆಯನ್ನು ಹೇಗೆ ತಿನ್ನುತ್ತೀರಿ ಅಂದ್ರೆ ಒಂದೊಂದು ತುತ್ತಾಗಿ’ ಎಂಬುದಾಗಿದೆ. ಇದನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಈ ನುಡಿಗಟ್ಟು ಮತ್ತಷ್ಟು ಚೆನ್ನಾಗಿ ಅರ್ಥವಾಗುತ್ತದೆ. ನಮ್ಮ ಜೀವನದಲ್ಲಿ ಕೆಲವೊಮ್ಮೆ ಬಹಳ ದೊಡ್ಡ ಅಥವಾ ಭಯ ಹುಟ್ಟಿಸುವಂಥ ಗುರಿಗಳು ಅಥವಾ ಸಮಸ್ಯೆಗಳು ಎದುರಾಗುತ್ತವೆ.

ಉದಾಹರಣೆಗೆ, ಒಂದು ದೊಡ್ಡ ಪ್ರಾಜೆಕ್ಟ್ ಪೂರ್ಣಗೊಳಿಸುವುದು, ಹೊಸ ವ್ಯಾಪಾರ ಪ್ರಾರಂಭಿಸು ವುದು, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು, ಒಂದು ಕಷ್ಟಕರ ವಿಷಯವನ್ನು ಕಲಿಯುವುದು ಅಥವಾ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದು. ಇಂಥ ಸಂದರ್ಭಗಳಲ್ಲಿ, ಆ ಕೆಲಸದ ಗಾತ್ರವನ್ನು ನೋಡಿ ನಾವು ಮಾನಸಿಕವಾಗಿ ಕುಗ್ಗಬಹುದು ಅಥವಾ ಅದನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿಯದೇ ಗೊಂದಲಕ್ಕೊಳಗಾಗಬಹುದು.

ಇದನ್ನೂ ಓದಿ: Vishweshwar Bhat Column: ಸಾಯಂಕಾಲ ಐದು ಗಂಟೆ ಸಂಗೀತ

ಉದಾಹರಣೆಗೆ, ನೀವು ಪುಸ್ತಕ ಬರೆಯಲು ಬಯಸಿದರೆ, ಒಂದೇ ದಿನದಲ್ಲಿ ಸಂಪೂರ್ಣ ಪುಸ್ತಕವನ್ನು ಬರೆಯಲು ಸಾಧ್ಯವಿಲ್ಲ. ಬದಲಿಗೆ, ಪ್ರತಿದಿನ ಕೆಲವು ಪುಟಗಳನ್ನು ಬರೆಯುವುದು, ಅಧ್ಯಾಯ ಗಳನ್ನು ವಿಭಜಿಸುವುದು, ಸಂಶೋಧನೆ ಮಾಡುವುದು- ಇವು ಸಣ್ಣ ಸಣ್ಣ ‘ತುತ್ತುಗಳು’. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಎಲ್ಲ ವಿಷಯಗಳನ್ನು ಒಮ್ಮೆಲೇ ಓದಲು ಹೋಗದೇ, ಪ್ರತಿದಿನ ಒಂದು ನಿರ್ದಿಷ್ಟ ವಿಷಯದ ಕೆಲವು ಅಧ್ಯಾಯಗಳನ್ನು ಓದುವುದು ಒಂದು ‘ತುತ್ತು’.

ದೊಡ್ಡ ಕೆಲಸಗಳನ್ನು ಸಾಧಿಸಲು ಅವನ್ನು ಕೇವಲ ವಿಭಜಿಸಿದರೆ ಸಾಲದು. ಪ್ರತಿ ಸಣ್ಣ ಹಂತ ವನ್ನೂ ಕ್ರಮಬದ್ಧವಾಗಿ ಮತ್ತು ಸ್ಥಿರವಾಗಿ ಪೂರ್ಣಗೊಳಿಸಬೇಕು. ಇದು ತಾಳ್ಮೆ ಮತ್ತು ಸತತ ಪ್ರಯತ್ನವನ್ನು ಬೇಡುತ್ತದೆ. ಪ್ರತಿದಿನ ಒಂದೊಂದು ಸಣ್ಣ ಹೆಜ್ಜೆ ಇಡುತ್ತಾ ಹೋದರೆ, ಅಂತಿಮ ವಾಗಿ ದೊಡ್ಡ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಆನೆಯನ್ನು ಒಂದೇ ದಿನದಲ್ಲಿ ಹೇಗೆ ತಿನ್ನಲು ಸಾಧ್ಯವಿಲ್ಲವೋ, ಅದೇ ರೀತಿ ದೊಡ್ಡ ಕೆಲಸವನ್ನೂ ಒಂದೇ ದಿನದಲ್ಲಿ ಮಾಡಲು ಸಾಧ್ಯ ವಿಲ್ಲ.

ಅದಕ್ಕೆ ಸಮಯ ಮತ್ತು ಅನೇಕ ಸಣ್ಣ ತುತ್ತುಗಳು ಬೇಕು. ಈ ವಿಧಾನವು ಕೆಲಸದಲ್ಲಿ ದಕ್ಷತೆ ( Efficiency and Progress) ಮತ್ತು ಪ್ರಗತಿಯನ್ನು ತರುತ್ತದೆ. ಸಣ್ಣ ಹಂತಗಳ ಮೇಲೆ ಗಮನ ಕೇಂದ್ರೀ ಕರಿಸುವುದರಿಂದ, ನಾವು ಗೊಂದಲಕ್ಕೊಳಗಾಗುವುದಿಲ್ಲ ಮತ್ತು ಪ್ರತಿ ಹಂತವನ್ನು ಪೂರ್ಣಗೊಳಿಸಿ ದಾಗ ಪ್ರಗತಿಯ ಸಂತೃಪ್ತಿ ದೊರೆಯುತ್ತದೆ. ಈ ಪ್ರಗತಿಯು ಮತ್ತಷ್ಟು ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ.

ನಿಧಾನವೇ ಆಧುನಿಕ

ಒತ್ತಡದ ಬದುಕಿನಿಂದ ರೋಸಿಹೋದ ನಗರವಾಸಿಗಳು ಇದಕ್ಕೊಂದು ಉತ್ತರ ಕಂಡುಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ. ಹಾಗೆ ನೋಡಿದರೆ, ಒತ್ತಡದ ಜೀವನದ ಬವಣೆ ಇಂದಿನದಲ್ಲ. ಹತ್ತೊಂಬತ್ತನೇ ಶತಮಾನದಷ್ಟು ಹಿಂದೆಯೇ ಅಮೆರಿಕದ ಸಾಹಿತಿ, ಕವಿ, ತತ್ವeನಿ ಹೆನ್ರಿ ಡೇವಿಡ್ ಥೋರೋ ತನಗೆ ತೀವ್ರ ಒತ್ತಡವನ್ನುಂಟು ಮಾಡುತ್ತಿದ್ದ ನಾಗರಿಕತೆಯಿಂದ ಪಲಾಯನ ಮಾಡಿ ಎರಡು ವರ್ಷ, ಎರಡು ತಿಂಗಳು ಮತ್ತು ಎರಡು ದಿನಗಳನ್ನು ಕಾಡಿನಲ್ಲಿ ಒಂದು ಸಣ್ಣ ಗುಡಿಸಲಲ್ಲಿ ಕಳೆದದ್ದು ಗೊತ್ತಿರಬಹುದು.

ಈಗ ಅಮೆರಿಕ, ಜಪಾನ್ ಮತ್ತು ಬ್ರಿಟನ್‌ಗಳಲ್ಲಿ ನಿಧಾನ ಜೀವನದ ಬಗ್ಗೆ ಚಳವಳಿಗಳು ಆರಂಭ‌ ವಾಗುತ್ತಿವೆ. Slowness is also modern (ನಿಧಾನವೂ ಆಧುನಿಕ) ಎಂಬ ಮಾತು ಎಡೆ ಕೇಳಿಬರುತ್ತಿದೆ. ವ್ಯಾಪಕವಾಗಿ ಹರಡುತ್ತಿರುವ ಫಾಸ್ಟ್‌ ಫುಡ್ ಸರಪಳಿಗಳ ಬದಲು, ಸ್ಲೋ ಫುಡ್ ಸಂಸ್ಥೆಗಳು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ. ದಿನದ ಕೊನೆಯಲ್ಲಿ, ಜೀವನದ ಎಲ್ಲ ಅಂಶಗಳಲ್ಲಿ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವುದು ಮತ್ತು ಮಾಡಿದ ಕೆಲಸಗಳಲ್ಲಿ ಮಾನಸಿಕ ಶಾಂತಿ ಹಾಗೂ ಧನ್ಯತೆ ಕಾಣುವುದು ಇದರ ಹಿಂದಿನ ಉದ್ದೇಶ.

66

ಕಡಿಮೆ ಬಟ್ಟೆ ಆದರೆ ಹೆಚ್ಚು ಕಾಲ ಬಾಳಿಕೆ ಬರುವ ಬಟ್ಟೆಗಳನ್ನು ಬಳಸುವುದು, ಕಡಿಮೆ ಮಾಂಸ ಆದರೆ ನೈಸರ್ಗಿಕವಾಗಿ ಬೆಳೆಸಿದ ಮಾಂಸ ಸೇವಿಸುವುದು, ಕಡಿಮೆ ಕೆಲಸ ಮಾಡಿದರೂ ಮಧ್ಯೆ ಮಧ್ಯೆ ವಿರಾಮ ಸಮಯವನ್ನು ಹೆಚ್ಚು ತೆಗೆದುಕೊಳ್ಳುವುದು, ಮನೆಯಲ್ಲಿ ಅಗತ್ಯವಿರುವ ವಸ್ತುಗಳನ್ನು ಇಟ್ಟುಕೊಳ್ಳುವುದು ಮತ್ತು ಅಗತ್ಯಕ್ಕಿಂತ ಒಂದೇ ಒಂದು ಸಾಮಾನನ್ನು ಖರೀದಿಸದೇ ಇರುವುದು, ಮೊಬೈಲ್ ಬಳಸಿದರೂ, ಜನರೊಂದಿಗೆ ಹೆಚ್ಚು ಕಾಲ ಕಳೆಯುವುದು, ಬಹಳ ಜನ ಸ್ನೇಹಿತರನ್ನು ಹೊಂದುವ ಬದಲು, ನಮ್ಮನ್ನು ಇಷ್ಟಪಡುವ ಮತ್ತು ನಮ್ಮ ಬಗ್ಗೆ ಕಾಳಜಿ ವಹಿಸುವ ಕೆಲವೇ ಸ್ನೇಹಿತರನ್ನು ಹೊಂದುವುದು... ಇವು ನಿಧಾನ ಚಳವಳಿಯ ಪ್ರಮುಖ ಅಂಶಗಳಾಗಿವೆ.

ಮನುಷ್ಯನ ಜೀವನದ ಪರಮ ಗುರಿ ಮಾನಸಿಕ ಶಾಂತಿ, ಸಂತೋಷ ಮತ್ತು ನೆಮ್ಮದಿ. ಎಷ್ಟೇ ದುಡಿದು ಇವನ್ನು ಹೊಂದಲು ಸಾಧ್ಯವಾಗದಿದ್ದರೆ, ಜೀವನದ ಉದ್ದೇಶವೇ ಸೋತಂತೆ. ಈ ಕಾರಣ ದಿಂದ ‘ನಿಧಾನ ಚಳವಳಿ’ಯ ಮಹತ್ವ ಎಲ್ಲರಿಗೂ ಆಪ್ತವಾಗುತ್ತಿದೆ.

‘ಫಾಸ್ಟ್‌ ಫುಡ್’ಗೆ ಬದಲು ‘ಸ್ಲೋ ಫುಡ್’ ಚಳವಳಿಯೂ ಇದಕ್ಕೆ ಪೂರಕ ಬೆಂಬಲ ನೀಡುತ್ತಿದೆ. ಸ್ಲೋ ಫುಡ್ ಚಳವಳಿ ಇಂದು-ನಿನ್ನೆಯದಲ್ಲ. 1986ರಲ್ಲಿ ಸಾಮಾಜಿಕ ಚಿಂತಕ, ರಾಜಕೀಯ ಹೋರಾಟ ಗಾರ ಮತ್ತು ಆಹಾರ ಪರಂಪರೆಯ ಪರಿಪಾಲಕನೆಂದೇ ಪ್ರಸಿದ್ಧನಾದ ಇಟಲಿಯ ಕಾರ್ಲೋ ಪೆಟ್ರಿನಿ ಜಾಗತಿಕ ಆಹಾರ ಸಂಸ್ಕೃತಿಗೆ ವಿಭಿನ್ನ ದೃಷ್ಟಿಕೋನವನ್ನು ನೀಡಿ, ’ಸ್ಲೋ ಫುಡ್ ಚಳವಳಿ’ಯ ಮಹತ್ವವನ್ನು ಪ್ರತಿಪಾದಿಸಿದ್ದ.

ಆಹಾರವು ಕೇವಲ ಜೀರ್ಣಕ್ರಿಯೆಗೆ ಬೇಕಾದ ಪದಾರ್ಥವಲ್ಲ, ಅದು ಒಂದು ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಚಟುವಟಿಕೆಯೇ. ರೋಮ್‌ನ ಪಿಯಾಜಾ ದಿ ಸ್ಪಾನ್ಯಾದಲ್ಲಿ ಮೆಕ್ಡೊನಾಲ್ಡ್ ಫಾಸ್ಟ್‌ ಫುಡ್ ಸಂಸ್ಥೆ ತೆರೆಯಲು ಆತ ಆ ದಿನಗಳ ವಿರೋಧಿಸಿ ಪ್ರತಿಭಟಿಸಿದ್ದ. ಈ ಘಟನೆಯೇ ‘ಸ್ಲೋ ಫುಡ್’ ಚಳವಳಿಗೆ ಮೂಲವಾಯಿತು. ಅಂದು ಕಾರ್ಲೋ ಪೆಟ್ರಿನಿ ಆರಂಭಿಸಿದ ಚಳವಳಿ ಇಂದು ಬೃಹತ್ ಸ್ವರೂಪವನ್ನು ತಾಳುತ್ತಿದೆ.

ಈ ಘಟನೆ ನಂತರ 1989ರಲ್ಲಿ ಫ್ರಾನ್ಸ್, ಜರ್ಮನಿ, ಜಪಾನ್, ಅಮೆರಿಕ ಮತ್ತು ಇತರೆ ರಾಷ್ಟ್ರಗಳ ಬೆಂಬಲದೊಂದಿಗೆ ‘ಸ್ಲೋ ಫುಡ್ ಇಂಟರ್‌ನ್ಯಾಷನಲ್’ ಎಂಬ ಜಾಗತಿಕ ಸಂಸ್ಥೆಯನ್ನು ಸ್ಥಾಪಿಸ‌ ಲಾಯಿತು. ಸ್ಥಳೀಯ ಆಹಾರದ ಪರಂಪರೆ ಉಳಿಸಿಕೊಳ್ಳುವುದು, ಆಧುನಿಕ ಕೃಷಿ ಪದ್ಧತಿಗಳ ವಿರುದ್ಧವಾಗಿ ಮೂಲ ಕೃಷಿಗೆ ಉತ್ತೇಜನ ನೀಡುವುದು, ಗ್ರಾಹಕರಿಗೆ ಆಹಾರದ ಮೂಲ ಮತ್ತು ಗುಣಮಟ್ಟದ ಅರಿವು ಮೂಡಿಸುವುದು ಹಾಗೂ ಸಾಂಸ್ಕೃತಿಕ ವೈವಿಧ್ಯ ಸಂರಕ್ಷಿಸುವುದು ಇದರ ಉದ್ದೇಶ.

ಪೆಟ್ರಿನಿಯ ಚಳವಳಿಯಿಂದ ಪ್ರಭಾವಿತಗೊಂಡು ಇಟಲಿಯ ಹಲವು ಪ್ರದೇಶಗಳಲ್ಲಿ ಸ್ಥಳೀಯ ಆಹಾರ ಉತ್ಸವಗಳು ಆರಂಭವಾದವು. ನಂತರದ ದಶಕಗಳಲ್ಲಿ ಈ ಚಳವಳಿಯು ಜಾಗತಿಕ ಮಟ್ಟ ದಲ್ಲಿ ಪರಿಚಿತವಾಯಿತು. ಇತ್ತೀಚೆಗೆ ಅಮೆರಿಕ, ಭಾರತ, ಜಪಾನ್, ಬ್ರೆಜಿಲ್, ಆಫ್ರಿಕಾ ದೇಶ ಗಳಲ್ಲಿಯೂ ‘ಸ್ಲೋ ಫುಡ್ ಚಳವಳಿ’ ಬೆಳೆಯುತ್ತಿದೆ. ಇದು ಕೇವಲ ಆಹಾರ ಸೇವನೆಯ ಪರಂಪರೆ‌ಯ ಉಳಿವು ಮಾತ್ರವಲ್ಲ, ಬದಲಾಗಿ ಸ್ಥಳೀಯ ಕೃಷಿಕರು, ಬೆಳೆಗಾರರು, ಅಡುಗೆ ಕಲಾವಿದರು ಮತ್ತು ಆಹಾರದ ಚಿಂತಕರು- ಎಲ್ಲರಿಗೂ ಸಮಾನವಾಗಿ ಮಹತ್ವ ನೀಡುವ ಸಮಾನತೆಯ ಚಳವಳಿ ಯಾಗಿದೆ.

‘ನಿಧಾನವೇ ಆಧುನಿಕ’ ಚಳವಳಿಯು ನಮಗಾಗಿ, ನಮ್ಮ ಪ್ರೀತಿಪಾತ್ರರಿಗಾಗಿ ಮತ್ತು ನಮಗೆ ಸೂರ್ತಿ ನೀಡುವುದಕ್ಕೆ ಸಮಯವನ್ನು ಮೀಸಲಿಡುವ ಆಶಯ ಮತ್ತು ಮಹತ್ವವನ್ನು ಹೊಂದಿದೆ. ಜೀವನ ವನ್ನು ಆನಂದಿಸುವುದು ನಾವೆಲ್ಲರೂ ಹೊಂದಿರುವ ಉದ್ದೇಶ. ಆದರೆ ಈ ದಿನಗಳಲ್ಲಿ ಅದನ್ನೇ ನಾವು ಮರೆತು ಬಿಟ್ಟಿದ್ದೇವೆ. ‘ನಿಧಾನಗತಿಯ ಜೀವನ’ವು ನಮಗೆ ನಿಯಂತ್ರಣವನ್ನು ಮರಳಿ ಪಡೆಯಲು ಮತ್ತು ಪ್ರಕೃತಿಯ ಲಯದೊಂದಿಗೆ ಮರುಸಂಪರ್ಕ ಸಾಧಿಸಲು ಅನುವು ಮಾಡಿ ಕೊಡುತ್ತದೆ. ನಾವು ಸರಳ, ಶುದ್ಧ, ಹೆಚ್ಚು ತೃಪ್ತಿಕರ ಮತ್ತು ಹೆಚ್ಚು ಸಮಾಧಾನದ ಜೀವನವನ್ನು ಆರಿಸಿಕೊಳ್ಳುವಂತಾಗಬೇಕು.

‘ನಿಧಾನ ಜೀವನ’ವನ್ನು ಅಳವಡಿಸಿಕೊಳ್ಳುವುದಾದರೂ ಹೇಗೆ? ದೈನಂದಿನ ಜೀವನದಲ್ಲಿ ನಾವು ಮಾಡಬೇಕಾಗಿರುವುದು ಸಣ್ಣ ವಿಷಯಗಳಿಗೆ ಗಮನ ಕೊಡುವುದು ಮತ್ತು ನಮ್ಮ ಆಚರಣೆಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದು. ಉದಾಹರಣೆಗೆ, ದಿನದ ನಿರ್ದಿಷ್ಟ ಸಮಯದ ನಂತರ ನಿಮ್ಮ ಮೊಬೈಲ್ ಅನ್ನು ಏರೋಪ್ಲೇನ್ ಮೋಡ್‌ನಲ್ಲಿ ಇಡುವುದು. ಸಾಮಾಜಿಕ ಜಾಲತಾಣಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸುವುದು. ಎಲ್ಲ ಸಾಮಾಜಿಕ ತಾಣಗಳಲ್ಲಿ ಇರುವ ಬದಲು ಯಾವುದಾದರೂ ಒಂದರಲ್ಲಿ ಮಾತ್ರ ಇರುವುದು.

ಸುದ್ದಿಯನ್ನು ವೀಕ್ಷಿಸಲು ಅಥವಾ ಓದಲು ಒಂದೇ ಮಾಧ್ಯಮ ಮತ್ತು ದಿನದ ಒಂದು ನಿರ್ದಿಷ್ಟ ಸಮಯವನ್ನು ಆರಿಸಿಕೊಳ್ಳುವುದು ಮತ್ತು ಉತ್ತಮವಾಗಿ ಬದುಕಲು ಸಹಾಯ ಮಾಡುವ ಸುದ್ದಿ ಮೇಲೆ ಹೆಚ್ಚಿನ ಸಮಯವನ್ನು ಕೇಂದ್ರೀಕರಿಸುವುದು.

ಸುಸ್ಥಿರ ಮತ್ತು ಪರಿಸರ ಉತ್ಪನ್ನಗಳು ಹಾಗೂ ಬಟ್ಟೆಗಳಿಗೆ ಒಲವು ತೋರಿಸುವುದು, ತಾಜಾ ಮಾರುಕಟ್ಟೆ ಉತ್ಪನ್ನಗಳನ್ನು ಖರೀದಿಸಲು ಮತ್ತು ಬೇಯಿಸಲು ಸಮಯವನ್ನು ಮಾಡಿಕೊಳ್ಳು ವುದು ಮತ್ತು ನಿಮ್ಮ ಊಟದ ಟೇಬಲ್ ಮೇಲೆ ಆತುರವಿಲ್ಲದೇ ಸಮಯ ಕಳೆಯುವುದು.

ಕೆಲಸದ ಸ್ಥಳದಲ್ಲಿ ಎಷ್ಟು ಬೇಕೋ ಅಷ್ಟೇ ಸಮಯ ಕಳೆಯುವುದು, ಆದರೆ ಮಾಡುವ ಕೆಲಸವನ್ನು ಪೂರ್ಣ ಮನಸ್ಸಿನಿಂದ ಮಾಡುವುದು. ವರ್ಚುವಲ್‌ಗಿಂತ ಭೌತಿಕ ಮುಖಾಮುಖಿಗಳಿಗೆ ಆದ್ಯತೆ ನೀಡುವುದು.. ಇತ್ಯಾದಿ.

ಎಲ್ಲವೂ ಝೆನ್

‘ನಿಧಾನಗತಿಯ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಬಯಸುವವರು ಐಫೋನ್ ಬಳಸಬಾರದೇ?’ ಈ ಪ್ರಶ್ನೆ ಹಾದುಹೋಗುವಾಗ ಯಾವುದೋ ಒಂದು ಪುಸ್ತಕದಲ್ಲಿ ಓದಿದ ಒಂದು ಪ್ರಸಂಗ ನೆನಪಾಯಿತು. ಒಮ್ಮೆ ಝೆನ್ ಗುರು ಪರ್ವತಗಳಲ್ಲಿರುವ ದೇವಾಲಯದ ಸುತ್ತಲೂ ನಡೆಯುತ್ತಿದ್ದಾಗ, ಆತನಿಗೆ ತನ್ನನ್ನು ದೂರದ ಭೂತಕಾಲಕ್ಕೆ ಕರೆದೊಯ್ದಂತೆ ಭಾಸವಾಯಿತು. ಝೆನ್ ಗುರು ಬೌದ್ಧ ದೇವಾಲಯಕ್ಕೆ ಹೋಗಿ ಸನ್ಯಾಸಿಗಳು ಧ್ಯಾನ ಮಾಡುವುದನ್ನು ನೋಡಿದರು.

ಧ್ಯಾನದ ಅವಧಿ ಮುಗಿದ ಬಳಿಕ ಪ್ರತಿಯೊಬ್ಬ ಸನ್ಯಾಸಿಯೂ ತಮ್ಮ ತಮ್ಮ ಕೆಲಸಗಳಿಗೆ ಮರಳಿ ದರು. ಅವರಲ್ಲಿ ಒಬ್ಬರು ತೋಟಕ್ಕೆ ಬಂದು ಗ್ರೀನ್ ಟೀ ಕುಡಿಯುತ್ತಾ ಬೆಂಚಿನ ಮೇಲೆ ಕುಳಿತರು. ಒಳಗಿನ ಜೇಬಿನಿಂದ ಅವರು ಐಫೋನ್ ತೆಗೆಯುವುದನ್ನು ನೋಡಿ ಝೆನ್ ಗುರುವಿಗೆ ಆಶ್ಚರ್ಯ ವಾಯಿತು. ಅವರು ಸಂದೇಶಗಳಿಗೆ ಉತ್ತರಿಸುವಾಗ ಸಂತೋಷದಿಂದ ನಗುತ್ತಿದ್ದರು. ಅವರು ಹೊಟ್ಟೆಯಿಂದ ವಿಚಿತ್ರವಾದ ನಗುವನ್ನು ಸಹ ಹೊರಹಾಕುತ್ತಿದ್ದರು.

ನಂತರ ಅವನು ಐಫೋನ್ ಅನ್ನು ತಮ್ಮ ಜೇಬಿನಲ್ಲಿಟ್ಟು, ಝೆನ್ ಗುರು ಕಡೆಗೆ ತಿರುಗಿ, ‘ನಿಮ್ಮ ಹೆಸರೇನು ಮತ್ತು ಎಲ್ಲಿಂದ ಬಂದಿದ್ದೀರಿ?’ ಎಂದು ಕೇಳಿದರು. ಅದಕ್ಕೆ ಝೆನ್ ಗುರು ಉತ್ತರಿಸಿದರು.

ನಂತರ ಝೆನ್ ಗುರು, ‘ನೀವು ಝೆನ್ ಅಭ್ಯಾಸ ಮಾಡುವಾಗ ಐಫೋನ್ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವುದಿಲ್ಲವೇ?’ ಎಂದು ಕೇಳಿದರು. ಅದಕ್ಕೆ ಆ ಸನ್ಯಾಸಿ ‘ಕುಳಿತುಕೊಳ್ಳುವುದು ಝೆನ್, ನಡೆಯುವುದು ಝೆನ್, ಐಫೋನ್ ಕೂಡ ಝೆನ್’ ಎಂದರು. ಈ ಮಾತನ್ನು ಕೇಳಿಸಿಕೊಂಡ ಝೆನ್ ಗುರು ಹೇಳಿದರು- “ಸನ್ಯಾಸಿಯ ಉತ್ತರವು ಹೇಗಿದೆ ಅಂದ್ರೆ ಕುಳಿತುಕೊಳ್ಳಿ, ಕುಳಿತುಕೊಳ್ಳಿ. ಬೇಕಾದ್ರೆ ನಡೆಯಿರಿ, ನಡೆಯಿರಿ. ಆದರೆ ಎಡವಿ ಬೀಳಬೇಡಿ ಎಂದು ಹೇಳಿದಂತಿದೆ".

ಕ್ಯಾಲಿಗ್ರಾಫರ್ ಮನೆಯಲ್ಲಿ ಕಳ್ಳ ನೀವು ರಿಯೋಕನ್ ತೈಗು ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಆತ ಆಪಲ್ ಕಂಪನಿಯ ದಿವಂಗತ ಸ್ಟೀವ್ ಜಾಬ್ಸ್ ಇಷ್ಟಪಟ್ಟ ಕ್ಯಾಲಿಗ್ರಾಫರ್ (ಸುಂದರ ಕೈಬರಹಗಾರ) ಆಗಿದ್ದ. ತೈಗು ಸನ್ಯಾಸಿಯ ಬದುಕು ಸಾಗಿಸಿದವ. ಆತನಿಗೆ ಕವನಗಳೆಂದರೆ ಅಚ್ಚುಮೆಚ್ಚು. ಕ್ಯಾಲಿಗ್ರಫಿ ಮತ್ತು ಕವನಗಳನ್ನು ಬಿಟ್ಟು ಆತನಿಗೆ ಬೇರೆಯದರಲ್ಲಿ ಆಸಕ್ತಿ ಇರಲಿಲ್ಲ. ಆತನನ್ನು ಜಪಾನಿನ ಸಾರ್ವಕಾಲಿಕ, ಅತ್ಯುತ್ತಮ ಕ್ಯಾಲಿಗ್ರಾಫರ್‌ಗಳಲ್ಲಿ ಒಬ್ಬ ಎಂದು ಪರಿಗಣಿಸ ಲಾಗಿದೆ.

ಒಂದು ರಾತ್ರಿ ತೈಗು ಮನೆಗೆ ಕಳ್ಳ ನುಗ್ಗಿದ. ಆದರೆ ಆತನಿಗೆ ಇಡೀ ಮನೆಯನ್ನು ಹುಡುಕಿದ ನಂತರ ಬೆಲೆಬಾಳುವ ಯಾವ ವಸ್ತುವೂ ಸಿಗಲಿಲ್ಲ. ತೈಗು ಕಳ್ಳನಿಗೆ ಹೇಳಿದ- “ನೀನು ಬರಿಗೈಯಲ್ಲಿ ಹೋಗಬಾರದು. ನನ್ನ ಬಟ್ಟೆಗಳನ್ನು ಉಡುಗೊರೆಯಾಗಿ ತೆಗೆದುಕೋ".

ಕಳ್ಳ ಬಟ್ಟೆಗಳನ್ನು ಸ್ವೀಕರಿಸಿ ಹೊರಟುಹೋದ. ನಂತರ ತೈಗು ಬೆತ್ತಲೆಯಾಗಿ ಕುಳಿತು, ಕಿಟಕಿಯಲ್ಲಿ ರಾತ್ರಿ ಆಕಾಶವನ್ನು ನೋಡುತ್ತಾ ಯೋಚಿಸಿದ- “ಬಡಪಾಯಿ ಕಳ್ಳ- ನಾನು ಅವನಿಗೆ ಈ ಸುಂದರ ಚಂದ್ರನನ್ನು ನೀಡಬಹುದಿತ್ತಲ್ಲವೇ?". ರಾತ್ರಿ ಮುಗಿಯುತ್ತಿದ್ದಂತೆ, ತೈಗು ತನ್ನ ಬಣ್ಣದ ಕುಂಚ ಹೊರ ತೆಗೆದು ಒಂದು ಹೈಕು ಬರೆದ-

‘ಕಳ್ಳ ಅತ್ಯಂತ ಮುಖ್ಯವಾದ

ವಸ್ತುವನ್ನೇ ಬಿಟ್ಟು ಹೋದ;

ಚಂದ್ರ

ನನ್ನ ಕಿಟಕಿಯಲ್ಲಿ’.