Vishweshwar Bhat Column: ಶಬ್ದಬ್ರಹ್ಮ ತಿ.ತಾ.ಶರ್ಮ
‘ಥಿಯರಿ ಆಫ್ ರಿಲೇಟಿವಿಟಿ’ ಯನ್ನು ಸಾಪೇಕ್ಷವಾದ ಎಂದು ಟಂಕಿಸಿದವರೂ ತಿ.ತಾ.ಶರ್ಮರೇ. ಸುಗ್ರೀವಾಜ್ಞೆ, ಭರತವಾಕ್ಯ, ಚಕ್ರಗೋಷ್ಠಿ, ಕ್ರಿಯಾಲೋಪ (ಪಾಯಿಂಟ್ ಆಫ್ ಆರ್ಡರ್), ಗೊತ್ತು ವಳಿ (ಮೋಷನ್), ಕಂಠಕೌಪೀನ (ಟೈ), ಬಡ ಬೋರೇಗೌಡ, ಮಾತಿನ ಮಲ್ಲ ಮುಂತಾದ ಪದಗಳು ಶರ್ಮ ರಿಂದ ಟಂಕಿಸಲಾದವುಗಳು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಕುರಿತ ವರದಿಗೆ ತಿ.ತಾ. ಶರ್ಮರು, ‘ಧರ್ಮ ಸಂಗ್ರಾಮ : ಲವಣಾಸುರ ವಧೆ’ ಎಂಬ ಶೀರ್ಷಿಕೆ ನೀಡಿದ್ದು ಆ ದಿನಗಳಲ್ಲಿ ಗಮನ ಸೆಳೆದಿತ್ತು


ಸಂಪಾದಕರ ಸದ್ಯಶೋಧನೆ
ಸುದ್ದಿಮನೆಯನ್ನು ‘ಪದ ಟಂಕಸಾಲೆ’ ಅಂತಾನೂ ಕರೆಯುತ್ತಾರೆ. ಕಾರಣ ಸುದ್ದಿಮನೆಯ ಮುಖ್ಯಧಾತುವೇ ಪದಗಳು. ಎಲ್ಲರಿಗೂ ಪರಿಚಿತ ಪದಗಳನ್ನು ಬಳಸಬೇಕು ಎನ್ನುವುದು ಸುದ್ದಿಮನೆ ಧರ್ಮ. ಆದರೆ ಎಲ್ಲಾ ಸಂದರ್ಭಗಳಲ್ಲೂ ಇದು ಸಾಧ್ಯವಾಗಲಿಕ್ಕಿಲ್ಲ. ಅದಕ್ಕಿಂತ ಮುಖ್ಯವಾಗಿ, ಆಗಾಗ ಹೊಸ ಪದಗಳನ್ನು ಟಂಕಿಸಬೇಕಾದ ಸನ್ನಿವೇಶಗಳು ಪ್ರತಿದಿನವೂ ಬರುತ್ತವೆ. ಬೆಂಗಳೂರು ನಗರದಲ್ಲಿ ಕಾರು ಚಾಲಕರು ದ್ವಿಚಕ್ರ ವಾಹನ ಸವಾರರಿಗೆ ತಾಕಿಸಿ, ಅಪಘಾತ ಮಾಡಿ ಪರಾರಿ ಯಾಗುವ ಘಟನೆಗಳು ಹೆಚ್ಚಾದಾಗ Hit and run ಎಂಬ ಪದಪುಂಜ ಮೇಲಿಂದ ಮೇಲೆ ಬಳಕೆ ಯಾಗಲಾರಂಭಿಸಿದಾಗ, ಅದನ್ನು ಕನ್ನಡಕ್ಕೆ ‘ಗುದ್ದೋಡು’ ಎಂದು ಟಂಕಿಸಲಾಯಿತು.
ಅದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಪದ. ಪ್ರತಿದಿನವೂ ಸುದ್ದಿಮ ನೆಯಲ್ಲಿ ಹೊಸ ಹೊಸ ಪದಗಳನ್ನು ಟಂಕಿಸಬೇಕಾಗುತ್ತದೆ. ಇದೊಂದು ವಿಶೇಷ ಪರಿಣತಿ. ಮೊದಲ ಬಾರಿಗೆ ‘ವ್ಯಾಕ್ಯೂಮ್ ಕ್ಲೀನರ್’ ಮಾರುಕಟ್ಟೆಗೆ ಬಂದಾಗ, ಅದಕ್ಕೆ ಕನ್ನಡದಲ್ಲಿ ಏನನ್ನೋದು ಎಂಬ ಪ್ರಶ್ನೆ ಎದುರಾದಾಗ, ಹೀರು ಪೊರಕೆ ಎಂದು ಅನುವಾದ ಮಾಡಲಾಯಿತು. ಅದು ‘ವ್ಯಾಕ್ಯೂಮ್ ಕ್ಲೀನರ್’ನ ಕಾರ್ಯ ವನ್ನು ಸಹ ತಿಳಿಸಿಕೊಡುವುದರಿಂದ ಉತ್ತಮ ಅನುವಾದ ಎನಿಸಿಕೊಂಡಿತು.
ಇದನ್ನೂ ಓದಿ: Vishweshwar Bhat Column: ಇದು ಹೂವುಗಳ ಅಲಂಕಾರವಷ್ಟೇ ಅಲ್ಲ
ಅಷ್ಟೇ ಅಲ್ಲ, ಅದು ಕನ್ನಡಕ್ಕೆ ಸಿಕ್ಕ ಹೊಸ ಪದ. ಟಿವಿ ಮಾರುಕಟ್ಟೆಗೆ ಬಂದಾಗ ಕನ್ನಡದಲ್ಲಿ ಅದನ್ನು ಏನೆಂದು ಕರೆಯುವುದು ಎಂಬ ಜಿಜ್ಞಾಸೆ ಕನ್ನಡದ ಸುದ್ದಿಮನೆಗಳಲ್ಲಿ ಮೂಡಿತ್ತು. ಆಗ ಪತ್ರಕರ್ತ ವೈಎನ್ಕೆ, ಶ್ರವಣ ಸಾಧನವನ್ನು ‘ರೇಡಿಯೋ’ ಎಂದು ಕರೆಯಬಹುದಾದರೆ, ಟಿವಿಯನ್ನು ‘ನೋಡಿಯೋ’ ಎಂದು ಏಕೆ ಕರೆಯಬಾರದು ಎಂದು ಹೇಳಿದ್ದರು. ಆದರೆ ಟಿವಿ ಅತ್ಯಂತ ಚಿಕ್ಕ ಪದವಾಗಿರುವುದರಿಂದ, ಹೆಡ್ಲೈನ್ ನಲ್ಲಿ ; ‘ನೋಡಿಯೋ’ ಬಳಕೆಯಾಗಲಿಲ್ಲ ಎನ್ನುವುದು ಬೇರೆ ಮಾತು.
ಇಂದು ನಾವು ಬಳಸುವ ಅವೆಷ್ಟೋ ಪದಗಳನ್ನು ಸುಮಾರು ಅರವತ್ತು-ಎಪ್ಪತ್ತು ವರ್ಷಗಳ ಹಿಂದೆ, ಕನ್ನಡದ ಸುದ್ದಿಮನೆಗಳಲ್ಲಿ ಟಂಕಿಸಿದವುಗಳೇ. ಮೊಟ್ಟ ಮೊದಲ ಬಾರಿಗೆ ಲಂಡನ್ನಲ್ಲಿ 1930 ರಲ್ಲಿ ‘ರೌಂಡ್ ಟೇಬಲ್ ಕಾನರೆನ್ಸ್’ ನಡೆದಾಗ, ಅದರಲ್ಲಿ ಗಾಂಧೀಜಿ ಭಾಗವಹಿಸಿದಾಗ, ಆ ಪದಕ್ಕೆ ಕನ್ನಡ ದಲ್ಲಿ ಏನೆಂದು ಕರೆಯುವುದು ಎಂಬ ಪ್ರಶ್ನೆ ತಲೆದೋರಿತು. ಅದಕ್ಕಿಂತ ಮುಂಚೆ ಆ ಪದವನ್ನು ಸುದ್ದಿಮನೆಯಲ್ಲಿ ಯಾರೂ ಕೇಳಿರಲಿಲ್ಲ. ಇಂಥ ಸಂದರ್ಭದಲ್ಲಿ ಸುದ್ದಿಮನೆಯಲ್ಲಿರುವ ‘ಶಬ್ದ ಬ್ರಹ್ಮ’ರು ಒದಗಿ ಬರುತ್ತಾರೆ.
‘ರೌಂಡ್ ಟೇಬಲ್ ಕಾನ್ಫರೆನ್ಸ್ ’ಗೆ ಕನ್ನಡದ ಬೇರೆ ಬೇರೆ ಪತ್ರಿಕೆಗಳು ಒಂದೊಂದು ರೀತಿಯಲ್ಲಿ ಬರೆದಿದ್ದವು. ವಿಜಯಪುರದ ‘ಕರ್ನಾಟಕ ವೈಭವ’ದಲ್ಲಿ ದುಂಡು ಮೇಜಿನ ಪರಿಷತ್ತು, ವರ್ತುಲ ಪರಿಷತ್ತು, ಗದಗಿನ ‘ಕರ್ನಾಟಕ ಬಂದೂರ್ನಲ್ಲಿ ತಿಗರಿ ಪರಿಷತ್, ಬಂಡಿ ಗಾಲಿ ಪರಿಷತ್ತು, ಹುಬ್ಬಳ್ಳಿ ಯ ‘ವಿಶ್ವಕರ್ನಾಟಕ’ದಲ್ಲಿ ಚಕ್ರಗೋಷ್ಠಿ, ಧಾರವಾಡದ ‘ರಾಜಹಂಸ’ ಪತ್ರಿಕೆಯಲ್ಲಿ ಮಂಡಲಾ ಕಾರದ ಪರಿಷತ್ತು ಎಂಬ ಪದಗಳನ್ನು ಬಳಸಲಾಗಿತ್ತು ಎಂದು ಪತ್ರಕರ್ತ ಡಾ.ಎಸ್.ಆರ್. ರಾಮಸ್ವಾಮಿ ಅವರು ತಿ.ತಾ.ಶರ್ಮ ಅವರ ಬಗ್ಗೆ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ.
‘ಥಿಯರಿ ಆಫ್ ರಿಲೇಟಿವಿಟಿ’ ಯನ್ನು ಸಾಪೇಕ್ಷವಾದ ಎಂದು ಟಂಕಿಸಿದವರೂ ತಿ.ತಾ.ಶರ್ಮರೇ. ಸುಗ್ರೀವಾಜ್ಞೆ, ಭರತವಾಕ್ಯ, ಚಕ್ರಗೋಷ್ಠಿ, ಕ್ರಿಯಾಲೋಪ (ಪಾಯಿಂಟ್ ಆಫ್ ಆರ್ಡರ್), ಗೊತ್ತು ವಳಿ (ಮೋಷನ್), ಕಂಠಕೌಪೀನ (ಟೈ), ಬಡ ಬೋರೇಗೌಡ, ಮಾತಿನ ಮಲ್ಲ ಮುಂತಾದ ಪದಗಳು ಶರ್ಮರಿಂದ ಟಂಕಿಸಲಾದವುಗಳು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಕುರಿತ ವರದಿಗೆ ತಿ.ತಾ. ಶರ್ಮರು, ‘ಧರ್ಮ ಸಂಗ್ರಾಮ : ಲವಣಾಸುರ ವಧೆ’ ಎಂಬ ಶೀರ್ಷಿಕೆ ನೀಡಿದ್ದು ಆ ದಿನಗಳಲ್ಲಿ ಗಮನ ಸೆಳೆದಿತ್ತು.
ಸಿದ್ದವನಹಳ್ಳಿ ಕೃಷ್ಣ ಶರ್ಮ ಅವರೂ ಈ ನಿಟ್ಟಿನಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ಆ ದಿನಗಳಲ್ಲಿ ಇಂಥ ಶಬ್ದಬ್ರಹ್ಮರು ಟಂಕಿಸಿದ ಅನೇಕ ಪದಗಳನ್ನು ನಾವು ಇಂದಿಗೂ ಬಳಸುತ್ತಿದ್ದೇವೆ. ವಿಧಾನ ಮಂಡಲದ ಕಾರ್ಯಕಲಾಪಗಳ ಹೆಚ್ಚಿನ ಪದಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಇವರಿಬ್ಬರು ಅನುವಾದಿಸಿದ್ದು ಎಂಬುದು ಗಮನಾರ್ಹ.