Kiran Upadhyay Column: ಅಂದು ಕೃಷ್ಣ ತಾನೇ ರಾಧೆಯಾಗಲು ಬಯಸಿದ್ದನಂತೆ...
ರಥದ ಮುಂದೆ ಅಶ್ವಗಳನ್ನು ಕಟ್ಟಿಕೊಂಡು, ಸಾರಥಿ ರಥವನ್ನು ಮುನ್ನಡೆಸುವುದು, ರಥಿಕ ಒಳಗೆ ಕುಳಿತುಕೊಳ್ಳುವುದು, ಕೆಲವೊಮ್ಮೆ ರಥಿಕನೇ ರಥ ನಡೆಸುವುದು, ಈ ರೀತಿಯ ಹಲವಾರು ಘಟನೆಗಳನ್ನು ನಾವು ಕೇಳಿದ್ದೇವೆ. ಸೂರ್ಯನಿಂದ ಹಿಡಿದು, ಇತ್ತೀಚಿನ ರಾಜ-ಮಹಾರಾಜರುಗಳ ಕಾಲದ ವರೆಗೆ ಇಂಥ ಸಾಕಷ್ಟು ಕತೆ ಕೇಳಿದ್ದೇವೆ.


ವಿದೇಶವಾಸಿ
dhyapaa@gmail.com
ಬಹ್ರೈನ್ ಎಂಬ ಪುಟ್ಟ ದ್ವೀಪರಾಷ್ಟ್ರದಲ್ಲಿ ಭಾರತದ ಒಡಿಶಾ ರಾಜ್ಯದಿಂದ ಬಂದು ನೆಲೆಸಿದ ಒಂದಿಷ್ಟು ಜನರಿದ್ದಾರೆ. ಒಂದು ಸಣ್ಣ ಸಂಘವನ್ನು ಕಟ್ಟಿಕೊಂಡಿದ್ದಾರೆ. ಅವರು ತಮ್ಮ ಹಬ್ಬ- ಹರಿದಿನಗಳನ್ನೂ ಆಚರಿಸುತ್ತಾರೆ. ಹೆಚ್ಚು ಗೌಜು-ಗದ್ದಲ ಇಲ್ಲದೇ ತಮ್ಮ ಸಂಸ್ಕೃತಿ- ಸಂಪ್ರದಾಯ ವನ್ನು ಸಂಭ್ರಮಿಸುತ್ತಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಆ ಸಮಾಜದ ಮುಖಂಡರೊಬ್ಬರು ಕರೆ ಮಾಡಿದ್ದರು. “ಈ ವರ್ಷ ಪುರಿ ಜಗನ್ನಾಥ ರಥಯಾತ್ರೆಯ ಸಂಭ್ರಮವನ್ನು ಬಹ್ರೈನ್ನಲ್ಲಿಯೂ ಆಚರಿಸಬೇಕೆಂದಿ ದ್ದೇವೆ, ಅದಕ್ಕೆ ತಮ್ಮ ಸಹಕಾರ ಬೇಕು" ಎಂದು ಕೇಳಿ ದ್ದರು. ಅದಾಗಿ ಒಂದು ವಾರದಲ್ಲಿ ಆ ಸಮಾಜದ ಮುಖಂಡರೊಂದಿಗೆ ಒಂದು ಔಪಚಾರಿಕ ಮಾತುಕತೆಯೂ ನಡೆಯಿತು. ಜೂನ್ 27ರಂದು ಬಹ್ರೈನ್ ನಲ್ಲಿ ಜಗನ್ನಾಥ, ಬಲರಾಮ ಮತ್ತು ಅವರ ಸಹೋದರಿ ಸುಭದ್ರಾ ಆಸೀನರಾದ ರಥ ಎಳೆಯುವುದು ಎಂದು ನಿರ್ಣಯಿಸಲಾಯಿತು.
ಬಹ್ರೈನ್ನಲ್ಲಿ ಈ ರೀತಿಯ ಆಚರಣೆಗಳು, ಉತ್ಸವಗಳು, ರಥಗಳು ರಸ್ತೆಗೆ ಬರುವಂತಿಲ್ಲವಾದು ದರಿಂದ, ದೊಡ್ಡ ಸಭಾಂಗಣವನ್ನು ಬಾಡಿಗೆಗೆ ಪಡೆದು, ಅದರಲ್ಲಿ ರಥ ಎಳೆಯುವುದು, ಜತೆಗೆ ಹಬ್ಬದ ಆಚರಣೆ ನಡೆಸುವುದು ಎಂದು ನಿರ್ಧರಿಸಲಾಯಿತು. ಕ್ರಮೇಣ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ನಡೆದವು. ಮಕ್ಕಳಿಂದ ಒಡಿಶಾ ಸಂಸ್ಕೃತಿಯನ್ನು ಬಿತ್ತರಿಸುವ ನೃತ್ಯಗಳು, ಸಂಘದ ಪುರುಷರು ಮತ್ತು ಮಹಿಳೆಯರಿಂದ ಅವರ ಸಾಂಸ್ಕೃತಿಕ ಮತ್ತು ಜಾನಪದ ಹಾಡುಗಳು ಇತ್ಯಾದಿಗಳ ಅಭ್ಯಾಸ, ತಯಾರಿ ಆರಂಭವಾಯಿತು.
ಇದನ್ನೂ ಓದಿ: Kiran Upadhyay Column: ಕೊನೆಗೂ ಅವರಿಗೆ ಪದ್ಮಶ್ರೀ ಬರಲಿಲ್ಲ...
ಆದರೆ, ನನಗೆ ಕುತೂಹಲ ಇದ್ದದ್ದು ರಥದಲ್ಲಿ. ರಥವನ್ನು ಹೇಗೆ ನಿರ್ಮಿಸುತ್ತಾರೆ? ಹೇಗೆ ಶೃಂಗರಿಸು ತ್ತಾರೆ? ಅದನ್ನು ಹೇಗೆ ಎಳೆಯುತ್ತಾರೆ? ಇತ್ಯಾದಿ ವಿಷಯಗಳು ಕುತೂಹಲ ಕೆರಳಿಸಿದ್ದವು. ಏಕೆಂದರೆ, ಪುರಿ ಜಗನ್ನಾಥನ ರಥಯಾತ್ರೆಗೆ ಒಂದು ಅದ್ಭುತವಾದ ಹಿನ್ನೆಲೆ ಇದೆ. ಅದು ನಮ್ಮ ಇತಿಹಾಸದಲ್ಲಿ ನಡೆದ ಪ್ರಥಮ ರಥಯಾತ್ರೆ ಎಂಬ ಮಾತಿದೆ. ಹಾಗಾದರೆ ಅದಕ್ಕೂ ಮೊದಲು ಯಾರೂ ರಥದಲ್ಲಿ ಕುಳಿತಿಲ್ಲ, ರಥದಲ್ಲಿ ಸಂಚರಿಸಲಿಲ್ಲ ಎಂದರೆ ತಪ್ಪಾಗಬಹುದು.
ರಥದ ಮುಂದೆ ಅಶ್ವಗಳನ್ನು ಕಟ್ಟಿಕೊಂಡು, ಸಾರಥಿ ರಥವನ್ನು ಮುನ್ನಡೆಸುವುದು, ರಥಿಕ ಒಳಗೆ ಕುಳಿತುಕೊಳ್ಳುವುದು, ಕೆಲವೊಮ್ಮೆ ರಥಿಕನೇ ರಥ ನಡೆಸುವುದು, ಈ ರೀತಿಯ ಹಲವಾರು ಘಟನೆ ಗಳನ್ನು ನಾವು ಕೇಳಿದ್ದೇವೆ. ಸೂರ್ಯನಿಂದ ಹಿಡಿದು, ಇತ್ತೀಚಿನ ರಾಜ-ಮಹಾರಾಜರುಗಳ ಕಾಲದ ವರೆಗೆ ಇಂಥ ಸಾಕಷ್ಟು ಕತೆ ಕೇಳಿದ್ದೇವೆ.
ಈಗ ಉತ್ಸವಗಳಲ್ಲಿ ಕುದುರೆಯ ಬದಲು ವಾಹನ ಬಳಸುತ್ತಿದ್ದಾರೆ ಅಷ್ಟೇ. ಜೀಪಿನ, ಟ್ರ್ಯಾಕ್ಟರಿನ ಮೇಲೆ ರಥವನ್ನು ಕೂರಿಸಿ ಅಥವಾ ಅದಕ್ಕೆ ರಥವನ್ನು ಕಟ್ಟಿ, ರಥಯಾತ್ರೆ ಮಾಡುವುದು ಇಂದಿನ ಟ್ರೆಂಡ್. ಆದರೆ ಪುರಿಯ ಜಗನ್ನಾಥನ ರಥ ಹಾಗಲ್ಲ, ಅದರ ಹಿಂದೆ ಒಂದು ಕತೆ ಇದೆ. ಆ ಕತೆ ನಮ್ಮನ್ನು ಸುಮಾರು 5000 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ.
ಪುರಿಯ ದಕ್ಷಿಣ ಭಾಗದಲ್ಲಿ ಇರುವ ಒಂದು ಸರೋವರದಲ್ಲಿ, ಸೂರ್ಯಗ್ರಹಣ ಸಂಭವಿಸುವಾಗ ಲಕ್ಷಾಂತರ ಜನರು ಸ್ನಾನಕ್ಕಾಗಿ ಬರುತ್ತಿದ್ದರು. 5000 ವರ್ಷಗಳ ಹಿಂದೆ ಆರಂಭವಾದ ಈ ಸಂಪ್ರದಾಯ ಇಂದಿಗೂ ಅಸ್ತಿತ್ವದಲ್ಲಿದೆ. ಆ ಕಾಲದಲ್ಲಿ ಅಲ್ಲಿಯ ರಾಜ-ಮಹಾರಾಜರ ಆದಿಯಾಗಿ ಎಲ್ಲರೂ ಆ ಕೊಳದಲ್ಲಿ ಸ್ನಾನ ಮಾಡಿ ಬರುತ್ತಿದ್ದರು. ಅಲ್ಲಿ ಸ್ನಾನ ಮಾಡಲು ಯದುಕುಲದವರು, ಋಷಿಮುನಿಗಳೂ ಬರುತ್ತಿದ್ದರು. ಆ ವರ್ಷ ದ್ವಾರಕೆಯಲ್ಲಿರುವ ಕೃಷ್ಣನೂ ಆ ಕೊಳದಲ್ಲಿ ಮಿಂದು ಬರುವುದೆಂದು ಆಯಿತು.
ಕೃಷ್ಣ ಬರುತ್ತಿದ್ದಾನೆ ಎಂಬ ವಿಷಯ ಎಲ್ಲ ಕಡೆ ಪ್ರಚಾರವಾಯಿತು. ಈ ವಿಷಯ ತಿಳಿದ ಹದಿನಾರು ಸಾವಿರದ ಒಂದು ನೂರ ಎಂಟು ಗೋಪಿಕಾ ಸ್ತ್ರೀಯರೂ, ಕೃಷ್ಣನ ಅರಸಿಯರೂ, ಎಲ್ಲಕ್ಕಿಂತ ಮುಖ್ಯವಾಗಿ ರಾಧೆಯೂ ಬೃಂದಾವನದಿಂದ ಅಲ್ಲಿ ಬಂದು ತಲುಪಿದರು. ಆ ಕಾಲದಲ್ಲಿ ಕೃಷ್ಣ ಬೃಂದಾವನವನ್ನು ಬಿಟ್ಟು ಹೋಗಿ ಸುಮಾರು ನೂರು ವರ್ಷಗಳೇ ಕಳೆದಿತ್ತು.
ಕೃಷ್ಣ ಗೋಪಿಕೆಯರನ್ನು ಪ್ರೀತಿಸುತ್ತಿದ್ದನಾದರೂ ರಾಧೆಯನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಆದರೆ ಅಷ್ಟು ಕಾಲದೂರ ಇರಲು ಕಾರಣವೇನು ಎಂದು ಅವರಿಗೆ ತಿಳಿದಿರಲಿಲ್ಲ. ಅದಕ್ಕೆ ಉತ್ತರ, “ನಿಜವಾದ ಪ್ರೀತಿ ಬೇರ್ಪಡಿಕೆಯಿಂದ ಇನ್ನಷ್ಟು ಹತ್ತಿರ ವಾಗುತ್ತದೆ, ಗಟ್ಟಿಗೊಳ್ಳುತ್ತದೆ ಮತ್ತು ಪ್ರೀತಿ ನಿಸ್ವಾರ್ಥವಾಗಿದ್ದರೆ ಮಾತ್ರ ಚಿರವಾಗಿರುತ್ತದೆ" ಎನ್ನುವು ದಕ್ಕೆ ಇದೊಂದು ಉತ್ತಮ ಉದಾಹರಣೆ.
ಏಕೆಂದರೆ, ಬೇರ್ಪಡಿಕೆ ಎನ್ನುವುದು ಬಾಹ್ಯವಾದದ್ದು. ಅದು ಸಾಮಾನ್ಯ ಮನುಷ್ಯರ ಕಣ್ಣಿಗೆ ಕಾಣುವಂಥದ್ದು. ಆದರೆ ಪ್ರೀತಿ ಎನ್ನುವುದು ಒಂದು ಯೋಗ. ಅದು ಆಂತರಿಕವಾದದ್ದು. ಅದು ಸಾಮಾನ್ಯವಾಗಿ ಹೊರಗಿನ ಕಣ್ಣಿಗೆ ಕಾಣುವಂಥದ್ದಲ್ಲ. ಅದು ಅಂತಃಚಕ್ಷುವಿನ ಅರಿವಿಗೆ ಬರುವಂಥದ್ದು. ಗೋಪಿಕಾ ಸ್ತ್ರೀಯರ ಮತ್ತು ರಾಧೆಯ ಮನಸ್ಸು ಕೃಷ್ಣನೊಂದಿಗೆ ಅಷ್ಟು ನಿಕಟ ವಾಗಿ ಹೊಂದಿಕೊಂಡಿದ್ದರಿಂದ, ಗಟ್ಟಿಯಾಗಿ ಬೇರೂರಿದ್ದರಿಂದ ಅವರ ನಡುವಿನ ಪ್ರೀತಿ ಸ್ವಲ್ಪವೂ ಕಮ್ಮಿ ಆಗಿರಲಿಲ್ಲ.
ಬಹುಶಃ ಯಾವ ಪುರಾಣ, ಇತಿಹಾಸದಲ್ಲೂ ಈ ಪರಿಪ್ರಮಾಣದಲ್ಲಿ ಪ್ರೀತಿ ಮತ್ತು ಪರೀಕ್ಷೆಯ ಕಥೆ ಕಾಣಲಿಕ್ಕಿಲ್ಲ. ಅದರಲ್ಲೂ ಕೃಷ್ಣ-ರಾಧೆಯರ ಪ್ರೇಮವಂತೂ ಉಳಿದ ಪ್ರೇಮಕತೆಗಳಿಗಿಂತ ವಿಭಿನ್ನವಾಗಿಯೂ, ವಿಸ್ಮಯವಾಗಿಯೂ, ಉಚ್ಚವಾಗಿಯೂ ಕಾಣುತ್ತದೆ. ಪುರಿಗೆ ಕೃಷ್ಣ ಬರುತ್ತಾನೆ ಎಂದಾಗ, ಅದರಲ್ಲೂ ಇಷ್ಟೊಂದು ವರ್ಷದ ನಂತರ ನಾವು ಅವನನ್ನು ನೋಡುತ್ತಿದ್ದೇವೆ ಎಂದು ಪುಳಕಿತರಾಗಿದ್ದ ಗೋಪಿಕೆ ಯರಿಗೆ ಕೊನೆಗೂ ಜಗನ್ನಾಥನ ದರ್ಶನವಾಯಿತು.
ಕೃಷ್ಣನನ್ನು ಕಂಡ ಅವರು, ಒಂದು ಬಾರಿ ಬೃಂದಾವನಕ್ಕೆ ಭೇಟಿ ಕೊಡಬೇಕು ಎಂದು ಕೃಷ್ಣನಲ್ಲಿ ಕೇಳಿಕೊಂಡರು. ಅವರ ಮನವಿಗೆ ಮಣಿದ ಕೃಷ್ಣ, ಬೃಂದಾವನಕ್ಕೆ ಹೋಗಲು ಒಪ್ಪಿಕೊಂಡಿದ್ದೂ ಆಯಿತು. ಕೃಷ್ಣನನ್ನು ಕರೆದೊಯ್ಯಲು ಗೋಪಿಕೆಯರು ಒಂದು ರಥವನ್ನು ನಿರ್ಮಿಸಿದರು. ರಥವನ್ನು ಅಲಂಕರಿಸಿ, ಅದರಲ್ಲಿ ಕೃಷ್ಣ, ಬಲರಾಮ ಮತ್ತು ಸಹೋದರಿ ಸುಭದ್ರೆಯನ್ನು ಕುಳ್ಳಿರಿಸಿ, ರಥವನ್ನು ಎಳೆಯಲು ಆರಂಭಿಸಿದರು.
ಕತೆಯ ಪ್ರಕಾರ, ಆ ಸಂದರ್ಭದಲ್ಲಿ ಕೃಷ್ಣ ಅಪಾರವಾದ ಆನಂದವನ್ನು ಅನುಭವಿಸಿದ್ದ. ಅಷ್ಟೇ ಅಲ್ಲ, ಸಮಾಧಿ ಸ್ಥಿತಿಗೆ ತಲುಪಿದ್ದ. ಆದರೆ ರಥ ದಲ್ಲಿ ಕುಳಿತ ಕೃಷ್ಣ, ರಾಧೆಯ ಕುರಿತು ಯೋಚಿಸಿದ್ದ. ಕೃಷ್ಣನ ಮನಸ್ಸಿನಲ್ಲಿ ರಾಧೆಯ ಕುರಿತಾಗಿ ವಿಚಾರಗಳು ಮೂಡುತ್ತಿದ್ದವು. ‘ರಾಧೆ ಮತ್ತು ನನ್ನ ಪ್ರೀತಿಯ ಸ್ವರೂಪವೇನು? ರಾಧೆ ನನ್ನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ನನಗೆ ಅರ್ಥ ಮಾಡಿ ಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಾಧೆ ನನ್ನಲ್ಲಿ ಏನನ್ನು ಕಂಡು ಇಷ್ಟು ಆಕರ್ಷಿತಳಾಗಿzಳೆ? ಸದಾ ಕೃಷ್ಣ ಜಪವನ್ನು ಮಾಡುತ್ತಾಳೆ. ಅವಳ ದೇಹದ ಪ್ರತಿಯೊಂದು ರೋಮದಲ್ಲಿಯೂ ಕೃಷ್ಣ ಅಡಕವಾಗಿದ್ದಾನೆ. ಅವಳ ಚರ್ಮದ ಪ್ರತಿ ರಂಧ್ರದಿಂದಲೂ ಕೃಷ್ಣ ಎಂಬ ಶಬ್ದ ಹೊರಬರುತ್ತದೆ. ಅವಳ ರಕ್ತದ ಕಣಕಣದಲ್ಲೂ ನಾನೇ ತುಂಬಿಹೋಗಿದ್ದೇನೆ. ಅಷ್ಟೇ ಅಲ್ಲ, ನನ್ನ ಮೇಲಿನ ಭಕ್ತಿಯಲ್ಲಿ ಅವಳು ಅನುಭವಿಸುವ ಆನಂದ ವಾದರೂ ಏನು? ಈ ಎಲ್ಲ ಕುತೂಹಲಗಳಿಗೆ ನಾನು ಉತ್ತರವನ್ನು ಪಡೆಯುವುದು ಹೇಗೆ?’ ಎಂದು ಕೃಷ್ಣ ಯೋಚಿಸುತ್ತಾನೆ.
ಕೊನೆಗೆ, ‘ನಾನೇ ಸ್ವತಃ ರಾಧೆ ಯಾದರೆ ಮಾತ್ರ ರಾಧೆಯ ಪ್ರೀತಿ ಏನು ಎಂಬುದು ಅರ್ಥವಾಗುತ್ತದೆ, ಆಗ ಆ ಪ್ರೀತಿಯು ನನ್ನಲ್ಲಿ ಹೆಚ್ಚು ಕಾಲ ನೆಲೆಸುತ್ತದೆ. ರಾಧೆಯಾಗಿ ನಾನು ಕೃಷ್ಣನ ಭಕ್ತಿಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಅದು ಅರ್ಥವಾಗುತ್ತದೆ’ ಎಂದು ಕೃಷ್ಣ ತಿಳಿಯುತ್ತಾನೆ. ಹಾಗೆಯೇ ತಾನು ರಾಧೆಯಾಗಬೇಕೆಂದು ನಿರ್ಧರಿಸುತ್ತಾನೆ.
ಆದರೆ ಕೃಷ್ಣಾವತಾರದಲ್ಲಿರುವಾಗ ಅವನಿಗೆ ರಾಧೆಯಾಗಲು ಅಥವಾ ತನ್ನ ದೈವಿಕ ಲೀಲೆಯಿಂದ ರಾಧೆಯಾಗಲು ಸಾಧ್ಯವಿರಲಿಲ್ಲ. ಒಂದು ವೇಳೆ ಆದರೂ ಅದರ ನಿಜವಾದ ಅನುಭವ ಸಿಗುವುದಿಲ್ಲ ಎಂದು ತಿಳಿದ ಕೃಷ್ಣ, ತನ್ನ ಭಕ್ತನಾದ, ಆದರೆ ರಾಧೆಯ ಭಾವವನ್ನು ಹೊಂದಿದ ಚೈತನ್ಯ ಮಹಾ ಪ್ರಭುವಿನಲ್ಲಿ ಹೆಸರಿನಲ್ಲಿ ಜನ್ಮವೆತ್ತುತ್ತಾನೆ.
ಒಂದು ಗಂಡು ದೇಹ, ಹೆಣ್ಣಾಗಲು ಸಾಧ್ಯವೇ? ಭೌತಿಕವಾಗಿ ಇದು ಸಾಧ್ಯವಿಲ್ಲ. ಆದರೆ ಗಂಡು- ಹೆಣ್ಣು ಎನ್ನುವುದು ಮನಸ್ಸಿನ ಮತ್ತು ಭಾವನೆಯ ಪ್ರಭೇದಗಳು. ಗಂಡಿನಲ್ಲೂ ಹೆಣ್ಣಿನ ಭಾವ, ಹೆಣ್ಣಿನಲ್ಲಿಯೂ ಗಂಡಿನ ಭಾವ ಒಂದು ಪ್ರಮಾಣದಲ್ಲಿ ಇದ್ದೇ ಇರುತ್ತದೆ. ಯಾವ ಭಾವಕ್ಕೆ ನಾವು ಹೆಚ್ಚು ಒತ್ತು ಕೊಡುತ್ತೇವೆಯೋ ಅದನ್ನವಲಂಬಿಸಿ ದೇಹ ಯಾವುದೇ ಇದ್ದರೂ, ಚಿತ್ತ ಅಥವಾ ಮನಸ್ಸು ಒಂದು ಪ್ರಭೇದಕ್ಕೆ ಒಗ್ಗಿಕೊಳ್ಳುತ್ತದೆ.
ಇದಕ್ಕೆ ಉತ್ತಮ ಉದಾಹರಣೆ ರಾಮಕೃಷ್ಣ ಪರಮಹಂಸರದ್ದು. ಓಶೋ ಒಂದು ಕಡೆ ಹೇಳುತ್ತಾರೆ- “ಕೃಷ್ಣನ ಭಕ್ತಿ ಯಲ್ಲಿ ಪರಮಹಂಸರು ಆಧ್ಯಾತ್ಮಿಕತೆ ಮತ್ತು ಪ್ರಜ್ಞೆಯ ಪುಲ್ಲಿಂಗ ಹಾಗೂ ಸೀಲಿಂಗ ಎರಡೂ ಅಂಶಗಳನ್ನು ಸಾಕಾರಗೊಳಿಸುವ ಸಾಮರ್ಥ್ಯಕ್ಕೆ ತಮ್ಮ ದೇಹವನ್ನು ಹೊಂದಿಸಿಕೊಂಡಿ ದ್ದರು. ಅವರು ಒಮ್ಮೊಮ್ಮೆ ಮಹಿಳೆಯಂತೆ ಉಡುಗೆ ತೊಟ್ಟು, ಸ್ತ್ರೀತ್ವದ ಮನಃಸ್ಥಿತಿಯಲ್ಲಿ ಮುಳುಗುತ್ತಿದ್ದರು. ಸೀಲಿಂಗದೊಂದಿಗೆ ಆಳವಾದ ಮಾನಸಿಕ ಭಾವವನ್ನು ಅನುಭವಿಸುತ್ತಿದ್ದರು.
ಈ ಪ್ರಯಾಣದಲ್ಲಿರುವಾಗ ಒಂದು ಕಾಲಘಟ್ಟದಲ್ಲಿ ಅವರಿಗೆ ಋತುಸ್ರಾವ ಆರಂಭವಾಯಿತು". ವೈದ್ಯಕೀಯವಾಗಿ ಇದು ಅಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತು. ಋತುಚಕ್ರ ಮಹಿಳೆಯರಿಗೆ ನಿರ್ದಿಷ್ಟವಾದ ಜೈವಿಕ ಪ್ರಕ್ರಿಯೆಯೇ ವಿನಾ, ಅದು ಪುರುಷರಲ್ಲಿ ಸಂಭವಿಸುವುದಿಲ್ಲ. ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಅಭ್ಯಾಸಗಳು ಸ್ತ್ರೀತ್ವದ ಆಳವಾದ ಪರಿಶೋಧನೆಯನ್ನು ಒಳಗೊಂಡಿ ದ್ದವು.
ಆಳವಾದ ಧ್ಯಾನದಲ್ಲಿರುವಾಗ ಕೆಲವೊಮ್ಮೆ ಅವರಿಗೆ ರಕ್ತಸ್ರಾವವಾಗುತ್ತಿತ್ತಾದರೂ, ಅವರು ದೈಹಿಕ ವಾಗಿ ಋತುಸ್ರಾವ ಅನುಭವಿಸಿದರು ಎಂಬ ಹೇಳಿಕೆಗೆ ವೈದ್ಯಕೀಯವಾಗಿ ಯಾವುದೇ ಆಧಾರವಿಲ್ಲ. ಇರಲಿ, ಈಗ ವಿಷಯ ಅದಲ್ಲ. ಚೈತನ್ಯ ಮಹಾ ಪ್ರಭುಗಳು ಪುರಿಗೆ ಬಂದು ನೆಲೆಸುವುದಕ್ಕಿಂತ ಮೊದಲೇ ಅಲ್ಲಿ ರಥಯಾತ್ರೆ ಸಂಪ್ರದಾಯ ಅಸ್ತಿತ್ವದಲ್ಲಿತ್ತು.
ವರ್ಷಕ್ಕೊಮ್ಮೆ ಜಗನ್ನಾಥ, ಬಲರಾಮ ಮತ್ತು ಸುಭದ್ರೆಯರನ್ನು ರಥದಲ್ಲಿ ಕೂರಿಸಲಾಗುತ್ತಿತ್ತು. ಭಕ್ತರು ರಥವನ್ನು ಮೂರು ಕಿಲೋಮೀಟರ್ ದೂರದಲ್ಲಿರುವ ‘ಗುಂಡಿಚಾ’ ಅಥವಾ ‘ಮೋಶೀಮಾ’ ಮಂದಿರದವರೆಗೆ ಎಳೆದುಕೊಂಡು ಹೋಗುತ್ತಿದ್ದರು. ಚೈತನ್ಯ ಮಹಾಪ್ರಭುಗಳು ಅಲ್ಲಿ ಇರುವಷ್ಟು ದಿವಸ ಜಗನ್ನಾಥನನ್ನು ರಾಧೆ ಕೃಷ್ಣನನ್ನು ಕಾಣುವಂತೆಯೇ ಕಾಣುತ್ತಿದ್ದರು.
ಆದರೆ ಅವರು ಬಹಳ ಸಮೀಪ ಹೋಗುತ್ತಿರಲಿಲ್ಲ. ಹತ್ತಿರ ಹೋದರೆ ವಿಗ್ರಹದಲ್ಲಿ ದೋಷಗಳನ್ನು ಹುಡುಕುವ ಬುದ್ಧಿ ಬೆಳೆಯಬಹುದು ಎಂದು ಅವರು ತಿಳಿದಿದ್ದರು. ಹಾಗೇನಾದರೂ ದೋಷ ಹುಡುಕಿದರೆ ಭಕ್ತಿಯ ಪ್ರಯೋಜನ ಸಿಗುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಆದ್ದರಿಂದ ಅವರು ಗರುಡ ಸ್ತಂಭದ ಬಳಿ ನಿಂತು, ದೂರದಿಂದಲೇ ಜಗನ್ನಾಥನನ್ನು ಕಾಣುತ್ತಿದ್ದರು. ಅವರು ಕಲ್ಲಿನ ಬಾಗಿಲಿನ ಚೌಕಟ್ಟಿನ ಮೇಲೆ ತಮ್ಮ ಕೈಯನ್ನು ಇಡುತ್ತಿದ್ದರು.
ಅವರ ಪ್ರೀತಿಯ ತೀವ್ರತೆ ಎಷ್ಟಿತ್ತು ಎಂದರೆ, ಕಲ್ಲು ಕರಗುವಷ್ಟಿತ್ತು. ಈಗಲೂ ಅಲ್ಲಿ ಚೈತನ್ಯ ಮಹಾಪ್ರಭುಗಳ ಬೆರಳಚ್ಚುಗಳನ್ನು ಕಾಣಬಹುದು. ಚೈತನ್ಯ ಮಹಾಪ್ರಭುಗಳು ರಥಯಾತ್ರೆಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಭಕ್ತರನ್ನು ವಿಭಿನ್ನ ಗುಂಪುಗಳಲ್ಲಿ ಜೋಡಿಸು ತ್ತಿದ್ದರು. ಮೃದಂಗ ವಾದಕರು, ಗಾಯಕರು ಇತ್ಯಾದಿಗಳನ್ನು ಹೊಂದಿಸುತ್ತಿದ್ದರು. ರಥದ ಮುಂದೆ ಅವರೆಲ್ಲರೂ ನೃತ್ಯ ಮಾಡುತ್ತಿದ್ದರು.
‘ನಾನೇ ರಾಧೆ, ಈಗ ನನ್ನ ಕೃಷ್ಣನನ್ನು ನಾನು ಬೃಂದಾವನಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ’ ಎಂದು ನಂಬಿದ್ದ ಅವರು, ರಾಧೆಯಂತೆಯೇ ರಥದ ಮುಂದೆ ನರ್ತಿಸುತ್ತಿದ್ದರು. ಹಾಗಾಗಿ ಪುರಿ ಜಗನ್ನಾಥನ ರಥಯಾತ್ರೆಗೆ ಅಷ್ಟೊಂದು ಮಹತ್ವ. ದೇವನೊಬ್ಬ ಮಾನವನಾಗಿ ಹುಟ್ಟಿ, ತನ್ನ ಎದುರೇ ತನ್ನ ಗುಣಗಾನ ಮಾಡುಕೊಳ್ಳುತ್ತ, ಹಾಡುತ್ತ, ಕುಣಿಯುತ್ತ, ತನ್ನ ರಥ ಎಳೆಯುವುದರಲ್ಲಿ ಭಾಗಿಯಾಗುವ ಮೊದಲ ಹಾಗೂ ಏಕೈಕ ಕತೆ ಇದು.
ಹೀಗೆ, 5000 ವರ್ಷಗಳ ಹಿಂದೆ ಆರಂಭವಾದ ರಥಯಾತ್ರೆ ಇಂದು ಪ್ರಪಂಚದಾದ್ಯಂತ ಸಾವಿರಾರು ನಗರಗಳನ್ನು ತಲುಪಿದೆ. ಅಂದು ಪುರಿಯಲ್ಲಿ ಆರಂಭಗೊಂಡ ರಥಯಾತ್ರೆ ಇಂದು ಕೊಲ್ಲಿ ರಾಷ್ಟ್ರವಾದ ಬಹ್ರೈನ್ಗೂ ತಲುಪಿದೆ. ಕಳೆದ ಕೆಲವು ವರ್ಷಗಳಿಂದ ಈ ಆಚರಣೆ ಇಲ್ಲಿ ನಡೆಯುತ್ತಾ ಬಂದಿದ್ದು, ರಥವನ್ನು ನಿರ್ಮಿಸಿ, ಅಲಂಕರಿಸಿ, ಅದರಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರೆ ಯನ್ನು ಕುಳ್ಳಿರಿಸಿ, ಅವರಿಗೆ ಚಾಮರಸೇವೆಯನ್ನು ಮಾಡುತ್ತಾ, ರಥವನ್ನು ಎಳೆಯುತ್ತಾರೆ. ಈ ವರ್ಷ ಸುಮಾರು 12 ಅಡಿ ಎತ್ತರದ ರಥ ನಿರ್ಮಾಣಗೊಂಡಿತ್ತು.
ಐದು ನೂರಕ್ಕೂ ಹೆಚ್ಚು ಜನ ಈ ಕಾಯಕಕ್ಕೆ ಕೈಜೋಡಿಸಿದ್ದರು. ಭಾರತದ ರಾಯಭಾರಿ ಕೂಡ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.