Naveen Sagar Column: ಹಣೆ ಮೇಲೆ ಬೋರ್ಡ್ ಹಾಕ್ಕೊಂಡ್ ಓಡಾಡಬೇಕಾ ?
ಕೆಲವರು ಸಾಕಷ್ಟು ನೋವಿನ ಮಧ್ಯೆಯೂ ಹೊರಗೆ ನಗುತ್ತ ಆರಾಮಾಗಿರುವ ಹಾಗೆ ನಟಿಸುತ್ತಿರು ತ್ತಾರೆ. ಅಂಥವರನ್ನೂ ನಾವು ಒಳಹೊಕ್ಕು ನಿಜ ಅರಿಯಬೇಕು ಅಂತೇನಿಲ್ಲ. ಅದು ಆತ್ಮೀಯರ ನಡುವೆ ಆಗುವಂಥದ್ದು. ಆದರೆ ದೈನಂದಿನ ಜೀವನದಲ್ಲಿ ನಾವು ವ್ಯವಹರಿಸುವ ಜನ ಮತ್ತು ನಮ್ಮ ಬದುಕಿನಲ್ಲಿ ಹಾದುಹೋಗುವ ಅಪರಿಚಿತರನ್ನು ನಾವು ಆ ಪರಿ ಒಳಹೊಕ್ಕು ಅರಿಯೋ ಅಗತ್ಯ ಇಲ್ಲದಿದ್ದರೂ, ಸ್ಟಿಕರ್/ಬೋರ್ಡ್ ಇಲ್ಲದೆಯೂ ಅವರ ಪರಿಸ್ಥಿತಿ ಏನಿದೆಯೋ ಏನೋ ಪಾಪ ಎಂಬಷ್ಟು ಅರ್ಥ ಮಾಡಿ ಕೊಳ್ಳಲು ಸಾಧ್ಯವಾಗಿಬಿಟ್ಟರೆ, ಬದುಕು ಸುಂದರವಾಗಿ ಬಿಡುತ್ತದೆ.


ಪದಸಾಗರ
ಅದೊಂದು ಚಿಕ್ಕ ಇಂಟರ್ನೆಟ್ ಪೋಸ್ಟ್. ಬಹಳ ವರ್ಷಗಳ ಹಿಂದೆ ಓದಿದ್ದು. ಆದರೆ ದಿನಕ್ಕೊಮ್ಮೆ ಅಥವಾ ಪದೇಪದೆ ನೆನಪಾಗುತ್ತಲೇ ಇರುತ್ತದೆ. ಯಾಕಂದ್ರೆ ಪ್ರತಿದಿನವೂ ಆ ಪೋಸ್ಟ್ ನೆನಪಾಗು ವಂಥದ್ದೇನೋ ಒಂದು ಘಟನೆ ನನ್ನ ಸುತ್ತ ನಡೆದೇ ಇರುತ್ತದೆ. ಒಂದರ್ಥದಲ್ಲಿ ಅದು ಪ್ರತಿ ಬಾರಿ ನನ್ನನ್ನು ನೀಚನಾಗದಂತೆ ತಡೆದು ಮನುಷ್ಯನನ್ನಾಗಿಸುತ್ತಾ ಇರುವಲ್ಲಿ ಸಫಲವಾಗಿರುವ ಬರಹ. ಸದಾ ನನ್ನನ್ನು ಆತ್ಮಾವಲೋಕನಕ್ಕೀಡು ಮಾಡುವ ಮೆಸೇಜು. ಜಗತ್ತಿನಲ್ಲಿ ಎಲ್ಲರೂ ಈ ಪೋಸ್ಟ್ ವನ್ನೊಮ್ಮೆ ಓದಿ ಮನಸಲ್ಲಿ ಅದನ್ನು ಗಟ್ಟಿಯಾಗಿ ಸ್ಥಾಪಿಸಿಕೊಂಡು ಬಿಟ್ಟರೆ ಈ ಪ್ರಪಂಚ ಎಷ್ಟು ಸುಂದರ ಮತ್ತು ಮಾನವೀಯ ಆಗಿಬಿಡುತ್ತಲ್ಲ ಎಂದು ಆಸೆ ಹುಟ್ಟಿಸುವ ಚಿಕ್ಕ ಬರವಣಿಗೆ ಅದು. ಅದೇ ಹೊತ್ತಲ್ಲಿ ಮತ್ತಷ್ಟು ಜಿಜ್ಞಾಸೆ ಹಾಗೂ ಪ್ರಶ್ನೆಗಳಿಗೂ ಆಸ್ಪದ ಕೊಡುವ ಶಕ್ತಿ ಆ ಪುಟ್ಟ ಬರಹಕ್ಕಿತ್ತು. ವಾಟ್ಸಾಪ್, ಫೇಸ್ಬುಕ್ ಯೂನಿವರ್ಸಿಟಿಗಳಲ್ಲಿ ನಾವು ಇತಿಹಾಸ ರಾಜಕೀಯ ವಿಜ್ಞಾನ ಇತ್ಯಾದಿ ವಿಷಯಗಳನ್ನು ಕಲಿಯದೇ ಹೋದರೆ ಅದು ಒಳ್ಳೆಯದೇ.
ಆದರೆ ಇಂಥ ವಿಷಯಗಳನ್ನು ಹೆಕ್ಕಿ ಮನಸಿನಲ್ಲಿ ಹಾಕಿಕೊಳ್ಳಬೇಕು. ಕಡೇ ಪಕ್ಷ ಇಂಥ ವಿಷಯಗಳು ನಮ್ಮ ಮನಸಿನಲ್ಲಿ ಹರಿದಾಡುತ್ತಾ, ನಮ್ಮೊಳಗೇ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ, ಉತ್ತರಗಳನ್ನು ಪಡೆದುಕೊಳ್ಳುತ್ತಾ, ಸಂವಾದಿಸುತ್ತಾ ಇದ್ದರೆ, ತಂತಾನೇ ನಾವು ಚೂರುಚೂರೇ ಒಳ್ಳೆಯವರಾಗಿ ಬದಲಾಗುತ್ತಿರುತ್ತೇವೆ.
ಪೀಠಿಕೆ ಜಾಸ್ತಿ ಆಯ್ತು.. ಅದ್ಯಾವ ಪೋ ನಿನ್ನನ್ನು ಅಷ್ಟು ಪ್ರಭಾವಿಸಿಬಿಟ್ಟಿದೆ ಹೇಳು ಮಾರಾಯಾ ಅಂತಿದೀರಾ? ನಿಮಗದು ನನಗನಿಸಿದಷ್ಟು ಗಾಢ ಅನಿಸಲೂಬಹುದು ಅನಿಸದೆಯೂ ಇರಬಹುದು. ಆ ಬರಹವನ್ನು ಯಥಾವತ್ ಇಲ್ಲಿ ನೀಡುತ್ತೇನೆ. ‘ಅಫೀಸಿಗೆ ಲೇಟಾಗಿತ್ತು. ಇನ್ ಫ್ಯಾಕ್ಟ್ ನಾನೇ ತಡಮಾಡಿಕೊಂಡು ಹೊರಟಿದ್ದು. ಬೆಳಗ್ಗೆ ಹತ್ತು ಗಂಟೆ. ಟ್ರಾಫಿಕ್ ವಿಪರೀತ ಎಂಬಷ್ಟಿತ್ತು. ಈ ಟ್ರಾಫಿಕ್ಕಲ್ಲಿ ಕಾರು ಓಡಿಸೋದು ನಿಜವಾಗಲೂ ಯಮಹಿಂಸೆ. ಕಾರು ಹತ್ತಿ ಹೊರಟೆ. ಅರ್ಧಗಂಟೇಲಿ ಆಫೀಸು ತಲುಪಬೇಕು ಅಂತ ಜೋರಾಗಿ ಓಡಿಸುತ್ತಿದ್ದೆ.

ಎದುರಲ್ಲಿ ಒಂದು ಕಾರ್ ಹೋಗ್ತಾ ಇದೆ. ಆ ಕಾರ್ ಸೈಡ್ ಕೂಡ ಕೊಡ್ತಾ ಇಲ್ಲ. ವೇಗವಾಗಿಯೂ ಹೋಗ್ತಾ ಇಲ್ಲ. ಆಮೆಗತಿಯಲ್ಲಿ, ಎಮ್ಮೆಗತಿಯಲ್ಲಿ ಮೆಲ್ಲಗೆ ಹೋಗ್ತಾ ಇದೆ. ನಾನು ದಾರಿಗಾಗಿ ಮತ್ತೆ ಮತ್ತೆ ಹಾರ್ನ್ ಮಾಡಿದರೂ ಜಾಗ ಬಿಡ್ತಾ ಇಲ್ಲ. ವೇಗ ಹೆಚ್ಚಿಸುತ್ತಲೂ ಇಲ್ಲ. ನನಗೆ ಸಿಟ್ಟು, ಇರಿಟೇಷನ್ ಎಲ್ಲವೂ ಹೆಚ್ಚಾಗ್ತಾ ಇದೆ. ಗ್ಲಾಸ್ ಏರಿಸಿದ ಕಾರೊಳಗೆ ಕೂತು ಬಾಯಿಗೆ ಬಂದ ಬಯ್ಗುಳವನ್ನೆಲ್ಲ ಬಳಸುತ್ತಾ, ಇನ್ನೂ ಜೋರಾಗಿ ಹಾರ್ನ್ ಮಾಡಿದೆ. ಉಹೂಂ.
ನನ್ನ ಹಾಂಕಿಂಗಿಗೆ, ನನ್ನ ಅರ್ಜೆನ್ಸಿಗೆ ಮರ್ಯಾದೆಯೇ ಸಿಕ್ತಾ ಇಲ್ಲ. ಮೊದಲೇ ತಡವಾಗಿದೆ. ನನ್ನ ಸಿಟ್ಟು ನೆತ್ತಿಗೇರಿತು. ಸ್ಥಿಮಿತ ಕಳೆದುಕೊಂಡೆ. ಹಿಂದಿಂದ ಕಾರಿಗೆ ಗುದ್ದಿಬಿಡೋಣ ಅನಿಸುವಷ್ಟು ಕೋಪ ಬಂತು. ಕಾರಿಗೆ ಪೂರ್ತಿ ಹತ್ತಿರ ಹೋಗಿ ನನಗ ಕರ್ಕಶವೆನಿಸುವಷ್ಟು ಜೋರಾಗಿ ಹಾರ್ನ್ ಕೂಗಿಸತೊಡಗಿದೆ.
ಹಾಗೆ ಮಾಡ್ತಾ ಇರುವಾಗ ಕಾರಿನ ಹಿಂಬದಿಯಲ್ಲಿ ಅಂಟಿಸಿದ್ದ ಒಂದು ಸಣ್ಣ ಸ್ಟಿಕರ್ ಕಾಣಿಸಿತು. ಅದರ ಮೇಲೆ ಹೀಗೆ ಬರೆದಿತ್ತು. ’ Physically Challenged; please be patient’ ಒಳಗಡೆ ಅಂಗವಿಕಲ ವ್ಯಕ್ತಿ ಇದ್ದಾರೆ. ದಯವಿಟ್ಟು ತಾಳ್ಮೆ ವಹಿಸಿ’. ಅಂತ. ಆ ಕ್ಷಣದ ತನಕ ಇದ್ದ ಕೋಪ ಜರ್ರನೆ ಜಾರಿ ಇಳಿದೋಯ್ತು. ಅಷ್ಟೊಂದು ಹಾರ್ನ್ ಮಾಡಿದ ನನ್ನ ಬಗ್ಗೆ ನನಗೇ ಬೇಸರವಾಯ್ತು. ಬಾಯಿಗೆ ಬಂದ ಬಯ್ಗುಳವೆಲ್ಲ ಬಳಸಿದ ನನಗೇ ನನ್ನ ಮೇಲೆ ಅಸಹ್ಯವಾಯ್ತು. ನನ್ನ ಅಸಹನೆ ಕೋಪ ಎಲ್ಲವೂ ಆ ಕಾರಿನವನ ಮೇಲಿನ ಕನಕರ ಕಾಳಜಿಯಾಗಿ ಬದಲಾಯ್ತು. ಕೊಂಚ ಮುಂದೆ ಸಾಗಿದಂತೆ, ಪಕ್ಕಕ್ಕೆ ದಾರಿ ಹಿರಿದಾಯ್ತು. ಆ ಕಾರಿನೆಡೆ ನೋಡಿ ಕ್ಷಮಿಸಿ ಎಂಬಂತೆ ಸನ್ನೆಯ ಹೇಳಿ ಪಾಸ್ ಆದೆ. ಆ ಕಾರಿನಲ್ಲಿರುವವರ ಒಳಿತಿಗೆ ಪ್ರಾರ್ಥಿಸುತ್ತಾ ಆಫೀಸ್ ಸೇರಿಕೊಂಡೆ.
ಇದನ್ನೂ ಓದಿ: Naveen Sagar Column: 8 ವರ್ಷದ ಹಿಂದೆ ನಡೆದಿತ್ತು ಆಪರೇಷನ್ ಸಿಂದೂರ್ !
ತಮ್ಮ ಆಫೀಸ್ ತಲುಪಿದರೂ ಒಂದು ಸಣ್ಣ ಗಿಲ್ಟ್. ಆ ಘಟನೆಯ ಬಗ್ಗೆಯೇ ಯೋಚನೆ. ಆಫೀಸ್ ತಲುಪಿದಾಗ ಒಂದೈದೋ ಹತ್ತೋ ನಿಮಿಷ ಲೇಟ್ ಆಗಿತ್ತು. ಅದು ಜಗತ್ತು ಮುಳುಗೋ ವಿಚಾರ ವೇನಲ್ಲ ಅನಿಸಿತು. ಆ ಸಮಯದಲ್ಲಿ ನನ್ನನ್ನು ಕಾಡಿದ್ದು ಏನು ಗೊತ್ತಾ? ಆ ಸ್ಟಿಕರ್ ಮೇಲಿನ ಬರಹ ಓದದೇ ಹೋಗಿದ್ದರೆ ನಾನು ಈ ರೀತಿ ಶಾಂತವಾಗಿ ಇರುತ್ತಿದ್ದೇನಾ? ಇನ್ನೊಬ್ಬರ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸೋದಕ್ಕೆ, ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳೋದಕ್ಕೆ ನಮಗೆ ಸದಾ ಇಂಥದ್ದೊಂದು ಸ್ಟಿಕರ್ ಬೇಕೇ ಬೇಕಾ? ನಾವು ನಾವು ಇನ್ನೊಬ್ಬರನ್ನು ಅರ್ಥ ಮಾಡಿ ಕೊಳ್ಳಲು ಸದಾ ಅವರು ನಮಗಾಗಿ ಹಣೆ ಮೇಲೆ ಅವರ ಪರಿಸ್ಥಿತಿ/ಮನಸ್ಥಿತಿಯ ಸ್ಟಿಕರ್ ಅಂಟಿಸಿಕೊಂಡೇ ಓಡಾಡಬೇಕಾ? ನಾವು ಇನ್ನೊಬ್ಬರಿಗೆ ಅರ್ಥವಾಗಲು ಸದಾ ನಮ್ಮ ಮೈಗೊಂದು ಬೋರ್ಡ್ ಹಾಕಿಕೊಂಡೇ ಇರಬೇಕಾ? ಮನೆಯಲ್ಲಿ ಸಾವಾಗಿದೆ, ನೋವಲ್ಲಿದ್ದೇನೆ. ಕೆಲಸ ಕಳೆದು ದಿಕ್ಕುತೋಚ ದಂತಾಗಿದ್ದೇನೆ. ಪ್ರೇಯಸಿಯಿಂದ ಮೋಸವಾಗಿದೆ, ಡಿವೋರ್ಸ್ ಬಡಿದಾಟದಲ್ಲಿ ಹೈರಾಣಾಗಿದ್ದೇನೆ. ಕ್ಯಾನ್ಸರ್ ಭಾದಿಸುತ್ತಾ ಇದೆ. ತುಂಬಾ ಪ್ರೀತಿಯಿಂದ ಸಾಕಿದ್ದ ನಾಯಿ ಕಾಯಿಲೆ ಬಿದ್ದಿದೆ. ವ್ಯವಹಾರದಲ್ಲಿ ದೊಡ್ಡ ನಷ್ಟ ಅನುಭವಿಸಿ ಕಂಗಾಲಾಗಿದ್ದೇನೆ. ಬಾಸ್ನ ಟಾರ್ಚರ್ನಿಂದ ನೆಮ್ಮದಿ ಕಳ್ಕೊಂಡಿದೀನಿ. ಮಕ್ಕಳ ಫೀಸ್ ಕಟ್ಟೋಕೆ ನಾಳೆ ಲಾಸ್ಟ್ ಡೇಟ್, ಇಎಂಐ ಕಟ್ಟಬೇಕು, ಬಾಡಿಗೆ ಕಟ್ಟಬೇಕು ಸಂಬಳ ಬಂದಿಲ್ಲ.
ವಯಸ್ಸು ಮೀರುತ್ತಿದೆ, ಮದುವೆ ಫಿಕ್ಸ್ ಆಗ್ತಿಲ್ಲ. ಭವಿಷ್ಯದ ಚಿಂತೆಯಲ್ಲಿ ಗೊಂದಲಕ್ಕೀಡಾಗಿದ್ದೇನೆ. ಗಂಡ ಹಾದಿ ತಪ್ಪಿದ್ದಾನೆ. ಪ್ರಿಯತಮ ಡಂಪ್ ಮಾಡಿದ್ದಾನೆ. ಲವ್ ಫೇಲಾಗಿದೆ. ......... ಹೀಗೆ ಪ್ರತಿಯೊಂದನ್ನೂ ಜನ ತಮ್ಮ ಹಣೆಗೆ ಬೆನ್ನಿಗೆ ಅಂಟಿಸಿಕೊಂಡು ಓಡಾಡಬೇಕಾ? ಇಲ್ಲವಾದರೆ ನಮಗೆ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲವಾ? ಇಂಥ ಸ್ಟಿಕರ್ ಇಲ್ಲದೆಯೂ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿ ಅರ್ಥ ಮಾಡಿಕೊಳ್ಳೋದು ಅಷ್ಟು ಕಷ್ಟವಾ? ಆಫೀಸಿನಲ್ಲಿ ಪಕ್ಕದಲ್ಲಿ ಕೂತು ಕೆಲಸ ಮಾಡುವ ಯುವತಿ ದಿನವೂ ನಗುನಗುತ್ತಾ ಮಾತಾಡುತ್ತಾ ಚಕಚಕನೆ ಕೆಲಸ ಮಾಡುವವಳು, ಅಂದ್ಯಾಕೋ ಗುಮ್ಮನಂತಿದ್ದಾಳೆ, ಸಿಡುಕುತ್ತಿದ್ದಾಳೆ.
ಓರ್ವ ರಿಯಾಕ್ಟ್ ಮಾಡುತ್ತಿದ್ದಾಳೆ ಅಂದರೆ ಆಕೆ ಮುಟ್ಟಿನ ಅವಧಿಯಲ್ಲಿದ್ದಾಳೆ. ಮೂಡ್ ಸ್ವಿಂಗ್ಸ್ ಭಾದಿಸುತ್ತಿದೆ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಎಮೋಷನಲಿ ಆಕೆ ಸೆನ್ಸಿಟಿವ್ ಇದ್ದಾಳೆ ಅನ್ನೋದನ್ನು ಅರ್ಥ ಮಾಡಿಕೊಳ್ಳದಷ್ಟು ನಾವು ಅಸೂಕ್ಷ್ಮರಾಗಬಹುದಾ? ಆ ಯುವತಿ ಇಂದಿನಿಂದ ಮೂರು ದಿನ ನನ್ನ ಪೀರಿಯಡ್ಸ್ ಇರುತ್ತೆ. ಅರ್ಥ ಮಾಡಿಕೊಳ್ಳಿ, ಅಂತ ಬೋರ್ಡ್ ಹಾಕ್ಕೋಬೇಕಾ? ಮನೆಯಲ್ಲಿ ಎಂದೂ ಮಗುವನ್ನು ಗದರದ ತಂದೆ, ಅಂದು ಪ್ರೀತಿಯ ಮಗುವಿಗೆ ಒಂದು ಪೆಟ್ಟು ಕೊಟ್ಟಿರುತ್ತಾನೆ.
ಅವತ್ತಿಡೀ ಅವನು ಅವನಾಗಿ ಇರೋದಿಲ್ಲ. ದಿನವೂ ಎಲ್ಲರೊಂದಿಗೆ ನಗುನಗುತ್ತಾ ವರ್ತಿಸುವವ, ಕೆಲಸದಲ್ಲಿ ಚುರುಕಿರುವವ ಅಂದು ಕೆಲಸದಲ್ಲಿ ಕಾನ್ಸಂಟ್ರೇಟ್ ಮಾಡೋಕಾಗದೇ ಒದ್ದಾಡುತ್ತಿರುತ್ತಾನೆ. ಆತ ಬೋರ್ಡ್ ಅಂಟಿಸ್ಕೋಬೇಕಾ? ಪ್ರತಿ ದಿನ ಹೀಗಿರೋದಿಲ್ಲ ಇವತ್ತು ಹೀಗಿದ್ದಾನೆ ಅಂದರೆ ಅವನು ಇಂಥದ್ದೇನೋ ಒಂದು ನೋವಿನಲ್ಲಿದ್ದಾನೆ.. ಅವನು ಸರಿಯಾಗೋಕೆ ಸಮಯ ಕೊಡೋಣ, ಅಥವಾ ಅವನನ್ನು ಚಿಯರ್ ಅಪ್ ಮಾಡೋಣ ಅಂತ ನಮಗ್ಯಾಕೆ ಅನಿಸೋದಿಲ್ಲ. ಟ್ರಾಫಿಕ್ಕಲ್ಲಿ ಏನೋ ಕಿರಿಕಿರಿ ಅನುಭವಿಸಿ ಆಫೀಸಿಗೆ ಅದೇ ಮೂಡಲ್ಲಿ ಬಂದಿರ್ತಾನೆ. ಅವನು ಸೆಟ್ಲ್ ಆಗಿ ಶಾಂತವಾಗೋದಕ್ಕೆ ಕೆಲನಿಮಿಷಗಳ ಅಗತ್ಯ ಇರುತ್ತದೆ.
ಹಾಗಂತ ಅವನು ಅದನ್ನು ಹಣೆಮೇಲೆ ಬರೆದುಕೊಂಡು ಎಲ್ಲರಿಗೂ ತಿಳಿಸಬೇಕಾ? ಬಂದಕೂಡ್ಲೆ ಅವ್ನು ಗುಡ್ ಮಾರ್ನಿಂಗ್ ಹೇಳಲಿಲ್ಲ, ನಗಿಸಲಿಲ್ಲ, ದುರಹಂಕಾರ ಅಂತ ಜಡ್ಜ್ ಮಾಡಿ ಬಿಡಬಹುದಾ? ಸಮಯ ಕೊಡಬಹುದಲ್ವಾ? ದಿನವೂ ಟೈಮಿಗೆ ಸರಿಯಾಗಿ ತಿಂಡಿ ರೆಡಿಮಾಡುವ ಅಮ್ಮ ಇಂದ್ಯಾಕೋ ಹತ್ತು ನಿಮಿಷ ತಡ ಮಾಡಿದ್ದಾಳೆಂದರೆ ಅಥವಾ ತಿಂಡಿ ತಯಾರು ಮಾಡಿಲ್ಲವೆಂದರೆ ಸಡನ್ನಾಗಿ ಆಕೆಯ ಮೇಲೆ ರೇಗಿಬಿಡಬಹುದಾ? ತಿಂಡಿಗೆ ಬೇಕಾದ ಪರಿಕರ ಇಲ್ಲದಿರಬಹುದು. ಏನು ಮಾಡಬೇಕು ಅಂತ ತೋಚಿಲ್ಲದಿರಬಹುದು.
ಹಿಂದಿನ ದಿನದ ಕೆಲಸದ ಸುಸ್ತಲ್ಲಿ ನಿದ್ದೆಯಿಂದೇಳೋದು ತಡವಾಗಿರಬಹುದು. ಪ್ರತಿದಿನವೂ ಮಾಡಿ ಮಾಡಿ ಕೆಲವೊಮ್ಮೆ ಬೇಸರವೂ ಕಾಡಬಹುದು. ಇದನ್ನೆಲ್ಲ ಅಮ್ಮ ಹಣೆಮೇಲೆ ಅಂಟಿಸಿಕೊಂಡು ಓಡಾಡಲಾಗುತ್ತಾ? ಅಮ್ಮನನ್ನು ಅರ್ಥ ಮಾಡಿಕೊಳ್ಳಲೂ ನಮಗೆ ಸ್ಟಿಕರ್ ಬೇಕಾಗುತ್ತಾ? ನಿತ್ಯ ಜೀವನದಲ್ಲಿ ಎದುರಾಗುವ ಪ್ರತಿಯೊಬ್ಬರೂ ಹೊರ ನೋಟಕ್ಕೆ ನಮಗೆ ಕಾಣಿಸದ ಯಾವುದೋ ಒಂದು ಒದ್ದಾಟ, ತೊಳಲಾಟ, ತೊಂದರೆ, ದೈಹಿಕ, ಮಾನಸಿಕ, ಆರ್ಥಿಕ ಸಂಕಷ್ಟ ಅನುಭವಿಸುತ್ತಾ ಇರುತ್ತಾರೆ.
ಎಲ್ಲವನ್ನೂ ಅವರು ಹೇಳಿಯೇ ವ್ಯಕ್ತಪಡಿಸಬೇಕಾ? ನಮ್ಮೊಂದಿಗೆ ದಯವಿಟ್ಟು ಸ್ವಲ್ಪ ಸಮಾಧಾನ ಸಂಯಮದಿಂದ ವರ್ತಿಸಿ ಅಂತ ಗೋಗರೆಯಬೇಕಾ? ಕೆಲವರು ಸಾಕಷ್ಟು ನೋವಿನ ಮಧ್ಯೆಯೂ ಹೊರಗೆ ನಗುತ್ತ ಆರಾಮಾಗಿರುವ ಹಾಗೆ ನಟಿಸುತ್ತಿರುತ್ತಾರೆ. ಅಂಥವರನ್ನೂ ನಾವು ಒಳಹೊಕ್ಕು ನಿಜ ಅರಿಯಬೇಕು ಅಂತೇನಿಲ್ಲ. ಅದು ಆತ್ಮೀಯರ ನಡುವೆ ಆಗುವಂಥದ್ದು. ಆದರೆ ದೈನಂದಿನ ಜೀವನದಲ್ಲಿ ನಾವು ವ್ಯವಹರಿಸುವ ಜನ ಮತ್ತು ನಮ್ಮ ಬದುಕಿನಲ್ಲಿ ಹಾದುಹೋಗುವ ಅಪರಿಚಿತ ರನ್ನು ನಾವು ಆ ಪರಿ ಒಳಹೊಕ್ಕು ಅರಿಯೋ ಅಗತ್ಯ ಇಲ್ಲದಿದ್ದರೂ, ಸ್ಟಿಕರ್ /ಬೋರ್ಡ್ ಇಲ್ಲದೆಯೂ ಅವರ ಪರಿಸ್ಥಿತಿ ಏನಿದೆಯೋ ಏನೋ ಪಾಪ ಎಂಬಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿ ಬಿಟ್ಟರೆ, ಬದುಕು ಸುಂದರವಾಗಿಬಿಡುತ್ತದೆ.
ಇಲ್ಲಿ ನಾವೇ ಪ್ರತಿಯೊಬ್ಬರನ್ನೂ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಅವರಿಗೆ ನಾವು ಅರ್ಥ ಆಗೋದ್ಯಾವಾಗ ಅನ್ನೋ ಪ್ರಶ್ನೆ ಉದ್ಭವ ಆಗ ಕೂಡದು. ಇಲ್ಲಿ ನಾವು ಕೂಡ ಅವರಿಗೆ ಇನ್ನೊಬ್ಬ ವ್ಯಕ್ತಿಯೇ ಆಗಿರುತ್ತೇವೆ. ಅವರಿಗೂ ಇದೇ ಸೂತ್ರ ಅಪ್ಲೈ ಆಗಿರುತ್ತದೆ. ಕನ್ನಡಿಯಂತೆ, ಪ್ರತಿಧ್ವನಿ ಯಂತೆ ನಮ್ಮ ವರ್ತನೆಗಳು ನಮಗೆ ಪ್ರತಿಫಲಿಸುತ್ತವೆ, ಪ್ರತಿಧ್ವನಿಸುತ್ತವೆ.
ಈ ನಡುವೆ ಇನ್ನೂ ಒಂದು ಪ್ರಶ್ನೆ ಹುಟ್ಟಬಹುದು. ಪ್ರತಿಯೊಂದನ್ನೂ ನಾವು ಅವರು ಹೇಳದೆಯೇ ಅರ್ಥ ಮಾಡ್ಕೊಳೋದು ಅಥವಾ ನಾವು ಹೇಳದೆಯೇ ಅವರು ಅರ್ಥ ಮಾಡ್ಕೊಳ್ಲಿ ಅಂತ ಬಯಸೋದು ತಪ್ಪಲ್ಲವಾ? ಅದು ಅತಿಯಾದ ನಿರೀಕ್ಷೆ ಅಲ್ಲವಾ? ಅದರ ಬದಲು ಹೇಳಿಕೊಂಡು ಬಿಟ್ಟರೆ ಅರ್ಥ ಮಾಡಿಕೊಳ್ಳುವುದು ಸುಲಭ ಅಲ್ಲವಾ? ಕಮ್ಯುನಿಕೇಶನ್ ಚೆಂದವಿದ್ದಷ್ಟೂ ಅಂಡರ್ ಸ್ಟಾಂಡಿಂಗ್ ಚೆನ್ನಾಗಿರುತ್ತದಲ್ಲವಾ ಅಂತ ಕೇಳಬಹುದು. ಖಂಡಿತ ಹೌದು.
ಆದರೆ ಎಲ್ಲವನ್ನೂ ಹೇಳಿಯೇ ಅರ್ಥ ಮಾಡಿಸಲಾಗುವುದಿಲ್ಲ. ಅದೇ ರೀತಿ ಎಲ್ಲ ಸಮಸ್ಯೆಗಳೂ, ನೋವುಗಳೂ ನಮಗೆ ವಿವರವಾಗಿ ಅರ್ಥವಾಗಬೇಕಾಗಿಯೂ ಇಲ್ಲ. ಸ್ಟೆಪಿಂಗ್ ಇನ್ ಟು ಅದರ್ಸ್ ಶೂಸ್ ಅಂತಾರಲ್ವಾ? ಅವರ ಜಾಗದಲ್ಲಿ ನಿಂತು ಒಮ್ಮೆ ನೋಡೋದು ಅಂತ. ಹಾಗೆ ನಾವೂ ಅಂಥ ಪರಿಸ್ಥಿತಿಗಳಲ್ಲಿ ತೊಳಲಾಡಿ ಬಂದಿರ್ತೀವಿ ಅಥವಾ ನಮ್ಮನ್ನು ನಾವು ಆ ಜಾಗದಮ್ಮೆ ನಿಂತು ಯೋಚಿಸಿ ಬಿಟ್ಟರೆ ಸಾಕು ಅರ್ಥವಾಗಿಬಿಡುತ್ತದೆ. ನಮ್ಮ ರಿಯಾಕ್ಷನ್ ಗಳು ತಾನಾಗಿ ಸಂಯಮಯುತ ವಾಗಿಬಿಡುತ್ತವೆ. ಆ ಮನಸ್ಥಿತಿ ಮತ್ತು ಪ್ರಬುದ್ಧತೆ ಗಳಿಸಿಕೊಳ್ಳಬೇಕಷ್ಟೆ. ಕಷ್ಟವೇನಲ್ಲ. ಅಲ್ವಾ ?