ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mohan Vishwa Column: ದಕ್ಷಿಣ ಭಾರತದ ಸಿನೆಮಾಗಳ ನಾಗಾಲೋಟ

1980ರಿಂದ 2010ರ ನಡುವಿನ ಅವಧಿಯನ್ನು ಗಮನಿಸಿದರೆ, ಬಾಲಿವುಡ್ ಅಂಗಳದಲ್ಲಿ ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಚಿತ್ರಗಳು ಹೆಚ್ಚಾಗಿ ನಿರ್ಮಾಣ ವಾಗಲಿಲ್ಲ. ಹೆಚ್ಚಾಗಿ ಪ್ರೇಮಕಥೆಗಳು, ಭೂಗತ ಲೋಕದ ಕಥೆಗಳು, ಮುಸಲ್ಮಾನರನ್ನು ಓಲೈಸುವ ಪಾತ್ರಗಳು, ಗ್ರಾಫಿಕ್ ಹೆಚ್ಚಾಗಿರುವ ಕಥಾಹಂದರದ ಚಿತ್ರಗಳು ನಿರ್ಮಾಣವಾಗಿದ್ದವು.

ದಕ್ಷಿಣ ಭಾರತದ ಸಿನೆಮಾಗಳ ನಾಗಾಲೋಟ

-

ವೀಕೆಂಡ್‌ ವಿತ್‌ ಮೋಹನ್

ಒಂದಾನೊಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗವೆಂದರೆ ‘ಬಾಲಿವುಡ್’ಗೆ ಮಾತ್ರ ಸೀಮಿತವಾಗಿತ್ತು. ನ್ಯೂಯಾರ್ಕ್ ನಗರದ ಕೆಂಪು ಹಾಸಿನ ಮೇಲೆ ನಡೆಯುವ ‘ಆಸ್ಕರ್’ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಾಲಿವುಡ್ ಗಣ್ಯರು ಮಾತ್ರ ಕಾಣಿಸಿಕೊಳ್ಳುತ್ತಿದ್ದರು.

ಎ.ಆರ್.ರೆಹಮಾನ್ ಸಂಗೀತ ನೀಡಿದ್ದ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರಕ್ಕೆ ಆಸ್ಕರ್ ಬಂದಿತ್ತು. ಆದರೆ ಆ ಚಿತ್ರವನ್ನು ನಿರ್ಮಾಣ ಮಾಡಿದ್ದು ಭಾರತೀಯ ನಿರ್ಮಾಪಕನಲ್ಲ. ಪಾಶ್ಚಿಮಾತ್ಯ ಚಿತ್ರರಂಗದ ಅನೇಕರು ತಮ್ಮ ಚಲನಚಿತ್ರಕ್ಕೆ ಸಿಗಬೇಕಾದ ಆಸ್ಕರ್ ಪ್ರಶಸ್ತಿ ಗಾಗಿ ಲಾಬಿ ಮಾಡುವ ವಿಷಯ ರಹಸ್ಯವಾಗಿ ಉಳಿದಿಲ್ಲ.

ಬಹುತೇಕ ಬಾರಿ ಹಾಲಿವುಡ್ ಚಲನಚಿತ್ರಗಳಿಗೆ ಮಾತ್ರ ಆಸ್ಕರ್ ಪ್ರಶಸ್ತಿ ಸಿಗುವಂತೆ ಮಾಡಿ ಅಲ್ಲಿನ ಚಿತ್ರರಂಗವನ್ನು ಜಗತ್ತಿನ ‘ನಂಬರ್-1’ ಮಾಡಿರುವ ಇತಿಹಾಸವಿದೆ. ಮಹಾ ಭಾರತದ ಅನೇಕ ಪಾತ್ರಗಳನ್ನು ಬಳಸಿಕೊಂಡು, ಆ ಪಾತ್ರಗಳಿಗೆ ಮರುನಾಮಕರಣ ಮಾಡಿ ಹಾಲಿವುಡ್ ಚಿತ್ರಗಳನ್ನು ನಿರ್ಮಿಸಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿರುವ ಉದಾಹರಣೆಗಳು ಇವೆ.

ಭಾರತದಲ್ಲಿಯೂ ಅವರು ಸೃಷ್ಟಿಸುವ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಆದರೆ ನಮ್ಮದೇ ಪಾತ್ರಗಳನ್ನು ಬಳಸಿಕೊಂಡು ಆಧುನಿಕ ಸ್ಪರ್ಶ ನೀಡಿ ನಮ್ಮ ಮುಂದಿಟ್ಟಿರು ವುದು ಅನೇಕ ಭಾರತೀಯರ ಅರಿವಿಗೆ ಬರುತ್ತಿರಲಿಲ್ಲ. ‘ಹಲ್ಕ್’ ಎಂಬ ಪಾತ್ರಧಾರಿಯನ್ನು ಮಹಾನ್ ದೈತ್ಯನನ್ನಾಗಿ ಬಿಂಬಿಸಿ ಆಧುನಿಕ ಸ್ಪರ್ಶ ನೀಡಿ ದೊಡ್ಡ ಚಿತ್ರವನ್ನು ನಿರ್ಮಾಣ ಮಾಡಿದರು. ಈ ಪಾತ್ರಕ್ಕೆ ಸ್ಪೂರ್ತಿ ಮಹಾಭಾರತದ ‘ಭೀಮ’ನೆಂಬುದು ಸ್ಪಷ್ಟ. ಭಾರತೀಯರು ‘ಹಲ್ಕ್’ ಪಾತ್ರಕ್ಕೆ ಶಿಳ್ಳೆ ಹೊಡೆದರು.

ಇದನ್ನೂ ಓದಿ: Mohan Vishwa Column: ಜರ್ಮನಿಯ ಹಿಟ್ಲರ್‌ʼಗೆ ಸ್ವಸ್ತಿಕ್‌ ಸಿಕ್ಕ ಕಥೆ

ಭಾರತೀಯರ ಮಕ್ಕಳ ಆಟಿಕೆಗಳಲ್ಲಿ ಹಲ್ಕ್ ಗೊಂಬೆ ಸಾಮಾನ್ಯವಾಗಿ ಬಿಟ್ಟಿದೆ. ವಿದೇಶ ಗಳಲ್ಲಿ ‘ಹಾಲೋವೀನ್’ ಹಬ್ಬ ಆಚರಿಸಿ ದೆವ್ವದ ವೇಷಧಾರಿಗಳನ್ನು ಸೃಷ್ಟಿಸಲಾಗುತ್ತದೆ. ಇಂದು ಇಡೀ ಜಗತ್ತಿಗೆ ಈ ಆಚರಣೆ ಹಬ್ಬಿದೆ. ಭಾರತೀಯರು ಕೂಡ ತಮ್ಮ ಮಕ್ಕಳಿಗೆ ದೆವ್ವಗಳ ವೇಷ ಧರಿಸಿ ರಸ್ತೆಗೆ ಇಳಿಸುತ್ತಾರೆ.

ಹಾಗಾಗಿ ನಮ್ಮ ಪೋಷಕರು ಮಹಾಭಾರತದ ಭೀಮನ ಬಗ್ಗೆ ಸಣ್ಣ ವಯಸ್ಸಿನಿಂದಲೂ ಮಕ್ಕಳಿಗೆ ಹೇಳಿಕೊಡಬೇಕು. ಮಹಾಲಯ ಅಮಾವಾಸ್ಯೆಯ ಸಂದರ್ಭದ ಪಿತೃ ಪಕ್ಷದ ಮಹತ್ವವನ್ನು ಮಕ್ಕಳಿಗೆ ಹೇಳಿಕೊಡಬೇಕು.

1980ರಿಂದ 2010ರ ನಡುವಿನ ಅವಧಿಯನ್ನು ಗಮನಿಸಿದರೆ, ಬಾಲಿವುಡ್ ಅಂಗಳದಲ್ಲಿ ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಚಿತ್ರಗಳು ಹೆಚ್ಚಾಗಿ ನಿರ್ಮಾಣವಾಗಲಿಲ್ಲ. ಹೆಚ್ಚಾಗಿ ಪ್ರೇಮಕಥೆಗಳು, ಭೂಗತ ಲೋಕದ ಕಥೆಗಳು, ಮುಸಲ್ಮಾನ ರನ್ನು ಓಲೈಸುವ ಪಾತ್ರಗಳು, ಗ್ರಾಫಿಕ್ ಹೆಚ್ಚಾಗಿರುವ ಕಥಾಹಂದರದ ಚಿತ್ರಗಳು ನಿರ್ಮಾಣವಾಗಿದ್ದವು.

ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದ ‘ಖಾನ್’ಗಳು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಲಿಲ್ಲ. ಆಸ್ಕರ್ ಅಂಗಳಕ್ಕೆ ಭಾರತ ಚಿತ್ರರಂಗದ ಚೆಂಡು ಬಿದ್ದದ್ದು ಬಹಳ ಕಡಿಮೆ. ಒಂದು ಕಾಲದಲ್ಲಿ ಹಾಲಿವುಡ್ ಮೋಹ ಕ್ಕೊಳಗಾದ ಬಾಲಿವುಡ್ ಮಂದಿ ಅದೇ ಮಾದರಿಯ ಚಿತ್ರಗಳನ್ನು ನಿರ್ಮಾಣ ಮಾಡ ಹೊರಟು ಕೈ ಸುಟ್ಟುಕೊಂಡಿದ್ದರು. ಈಗ ಕಾಲ ಬದಲಾಗಿದೆ.

RRR

ದಕ್ಷಿಣ ಭಾರತದ ಚಿತ್ರಗಳು ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡಂಥ ಚಿತ್ರಗಳ ನಿರ್ಮಾಣ ವಾಗುತ್ತಿದೆ. ದೇಶದಾದ್ಯಂತ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಬರುತ್ತಿದ್ದಾರೆ, ದಕ್ಷಿಣ ಭಾರತದ ‘ಪ್ಯಾನ್ ಇಂಡಿಯಾ’ ಸಿನಿಮಾಗಳು ಉತ್ತರ ಭಾರತದಲ್ಲಿಯೂ ಹಣ ಗಳಿಸುತ್ತಿವೆ.

ರಾಜಮೌಳಿ ನಿರ್ದೇಶಿಸಿದ ‘ಬಾಹುಬಲಿ’ ಚಿತ್ರದ ಎರಡೂ ಅವತರಣಿಕೆಗಳು ಸಾವಿರ ಕೋಟಿ ಗೂ ಅಧಿಕ ಹಣವನ್ನು ಗಳಿಸಿದ್ದವು. ರಾಜಮೌಳಿ ನಿರ್ದೇಶನದ ಮತ್ತೊಂದು ಚಿತ್ರ ‘ಆರ್.ಆರ್.ಆರ್’ ಚಿತ್ರದ ಗೀತೆಯು ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಇಡೀ ಜಗತ್ತಿಗೆ ದಕ್ಷಿಣ ಭಾರತದ ಸಿನಿಮಾಗಳ ತಾಕತ್ತನ್ನು ತೋರಿಸಿತ್ತು. ಆ ಚಿತ್ರದ ‘ನಾಟು ನಾಟು’ ಹಾಡನ್ನು ಒಮ್ಮೆ ಕೇಳಿದರೆ ಪುನಃ ಕೇಳಬೇಕೆನಿಸುತ್ತದೆ.

ಬ್ರಿಟಿಷರ ಗುಲಾಮಿ ಮನಸ್ಥಿತಿಯನ್ನು ಬಿಚ್ಚಿಡುವ ಚಿತ್ರ ಅದಾಗಿತ್ತು. ಅಂಥ ಚಿತ್ರದ ಹಾಡನ್ನು ಪಾಶ್ಚಿಮಾತ್ಯರು ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಆ ಚಿತ್ರದಲ್ಲಿ ಬಾಲಿ ವುಡ್ ಶೈಲಿಯ ಕಥೆಯಿಲ್ಲ, ಆಂಧ್ರಪ್ರದೇಶದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ನೈಜ ಕಥೆಯನ್ನಾಧರಿಸಿ ಮಾಡಲಾಗಿತ್ತು.

ಹಾಡಿನ ಸಾಹಿತ್ಯವು ಟೈಟಾನಿಕ್ ಸಿನಿಮಾ ರೀತಿಯಲ್ಲಿ ನಿರ್ಮಾಣವಾಗಿಲ್ಲ. ಸ್ಥಳೀಯ ಪರಂಪರೆಯನ್ನು ಬಿಂಬಿಸುವ ವಿಷಯಗಳನ್ನು ಹಾಡಿನಲ್ಲಿ ಸಾಹಿತ್ಯದ ಮೂಲಕ ಹೇಳಲಾಗಿದೆ. ಆಂಧ್ರಪ್ರದೇಶದ ಬುಡಕಟ್ಟು ಜನಾಂಗದವರನ್ನು ಪ್ರತಿನಿಧಿಸುವ ಸಾಹಿತ್ಯ ವನ್ನು ಬಳಸಿಕೊಂಡು ಎಂ.ಎಂ ಕೀರವಾಣಿ ಅದ್ಭುತವಾಗಿ ಹಾಡನ್ನು ಸಂಯೋಜಿಸಿದ್ದರು.

ಒಂದು ಸಣ್ಣ ಬುಡಕಟ್ಟು ಜನಾಂಗದ ಕಥೆಯನ್ನಾಧರಿಸಿದ ಈ ಚಿತ್ರ ನ್ಯೂಯಾರ್ಕ್ ಅಂಗಳದಲ್ಲಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್ ಪಡೆಯುವುದು ಸಾಮಾನ್ಯದ ಮಾತಲ್ಲ.

ಕನ್ನಡದ ‘ಕಾಂತಾರ’ ಸಿನಿಮಾ ದಕ್ಷಿಣ ಕನ್ನಡದ ದೈವಾರಾಧನೆಯನ್ನು ಬಿಂಬಿಸುತ್ತದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಒಡನಾಟವನ್ನು ಬಿಂಬಿಸುವ ಈ ಸಿನಿಮಾ ದೇಶದಾ ದ್ಯಂತ 400 ಕೋಟಿಗೂ ಅಧಿಕ ಗಳಿಕೆಯನ್ನು ಮಾಡಿತ್ತೆಂಬ ವರದಿಯಿದೆ. ಈ ಚಿತ್ರದಲ್ಲಿ ಬಾಲಿವುಡ್ ಮಾದರಿಯಲ್ಲಿ ಪ್ರೇಮಕಥೆಯನ್ನು ಅತಿಯಾಗಿ ತೋರಿಸಿರಲಿಲ್ಲ.

ವೀಕ್ಷಕರಿಗೆ ಇಷ್ಟವಾದದ್ದು ದೈವಾರಾಧನೆಯೇ ಹೊರತು ಪ್ರೇಮಕಥೆಯಲ್ಲ. ಕಾಡಂಚಿನ ಸಣ್ಣ ಹಳ್ಳಿಯಲ್ಲಿ ನಡೆಯುವ ಚಿತ್ರಕತೆ ಭಾರತದಾದ್ಯಂತ ಈ ಮಟ್ಟದ ಯಶಸ್ಸನ್ನು ಗಳಿಸುತ್ತದೆಯೆಂದು ಯಾರೂ ಊಹಿಸಿರಲಿಲ್ಲ. ನಂತರ ಬಿಡುಗಡೆಯಾದ ಕಾಂತಾರದ ಮತ್ತೊಂದು ಪಾರ್ಟ್ ದೇಶದಾದ್ಯಂತ ಜನರ ಮೆಚ್ಚುಗೆ ಗಳಿಸಿತು.

ಸ್ಥಳೀಯ ಪಾಳೇಗಾರ ಮತ್ತು ಕಾಡಿನಲ್ಲಿ ವಾಸಿಸುವ ಆದಿವಾಸಿಗಳ ನಡುವೆ ನಡೆಯುವ ತಿಕ್ಕಾಟದಲ್ಲಿ, ದೈವಬಲವನ್ನು ಅದ್ಭುತವಾಗಿ ತೋರಿಸಲಾಗಿತ್ತು. ಉತ್ತರ ಭಾರತದ ಪ್ರೇಕ್ಷಕರು ಕೂಡ ಕಾಂತರಾದ ಎರಡೂ ಭಾಗಗಳನ್ನು ಶ್ಲಾಘಿಸಿದರು.

‘ಕೆ.ಜಿ.ಎಫ್’ ಮತ್ತೊಂದು ಮೈಲಿಗಲ್ಲನ್ನು ಮುಟ್ಟಿಸಿದ ಕನ್ನಡದ ಚಿತ್ರ. ಮೊದಲ ಭಾಗ ಸುಮಾರು 400 ಕೋಟಿ ಗಳಿಸಿತ್ತೆಂಬ ವರದಿಯಿದೆ. ಮತ್ತೊಂದೆಡೆ ಬಾಲಿವುಡ್ ಅಂಗಳದಲ್ಲಿ ಎರಡನೇ ಭಾಗವು ಹಿಂದಿ ಮಾರುಕಟ್ಟೆಯಲ್ಲಿ ಸುಮಾರು 400 ಕೋಟಿ ಬಾಚಿಕೊಂಡಿದ್ದ ವರದಿಗಳಿವೆ. ‌

ಬಾಲಿವುಡ್ ಅನ್ನು ಮೀರಿಸುವಂತೆ ಭೂಗತ ಜಗತ್ತನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿತ್ತು. ಬಾಲಿವುಡ್ ಸಾಮ್ರಾಜ್ಯದ ರಾಜಧಾನಿ ಎನಿಸಿಕೊಂಡಿರುವ ಮುಂಬೈ ನಗರದ ಪ್ರೇಕ್ಷಕರಿಗೆ ಕನ್ನಡದ ನಟ ‘ಯಶ್’ ನೂತನ ಹೀರೋ ಆಗಿ ಹೊರಹೊಮ್ಮಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ಅವರ ಅದ್ಭುತ ಕಾರ್ಯವೈಖರಿ ತೆರೆಯ ಮೇಲೆ ಎದ್ದು ಕಂಡಿದ್ದು ಸುಳ್ಳಲ್ಲ. ಈ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರವನ್ನು ಹೊಂದಿವೆ.

ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಬಾಲಿವುಡ್ ಚಿತ್ರಗಳನ್ನು ಮೀರಿಸುವ ಗಳಿಕೆ ಯನ್ನು ಮಾಡಿವೆ. ಬಾಲಿವುಡ್ ನಿರ್ಮಾಪಕರು ದಕ್ಷಿಣ ಭಾರತದ ನಿರ್ದೇಶಕರ ಮನೆಯ ಮುಂದೆ ನಿಂತು ತಮ್ಮ ಸಿನಿಮಾಗಳಿಗೆ ದಿನಾಂಕ ನಿಗದಿಮಾಡುವಂತೆ ಮಾಡಿವೆ.

ಭಾರತೀಯ ಚಿತ್ರರಂಗವೆಂದರೆ ಈಗ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಸಿನಿಮಾ ಗಳೆಂಬುದು ಜಗತ್ತಿಗೆ ತಿಳಿದಿದೆ. ಒಂದು ಕಾಲದಲ್ಲಿ ಖಾನ್ ಬಳಗದ ನಾಯಕರು ಚಿತ್ರ ನಿರ್ಮಿಸುತ್ತಿದ್ದರು, ಅವರ ಚಿತ್ರಗಳಲ್ಲಿ ಭಾರತೀಯತೆ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ಭಾರತೀಯ ಪುರಾತನ ಆಚರಣೆಗಳು ಅವರಿಗೆ ಕೆಳಮಟ್ಟದಲ್ಲಿ ಇದ್ದಂತೆ ಕಾಣುತ್ತಿತ್ತು.

ಆ ಆಚರಣೆಗಳನ್ನೊಳಗೊಂಡ ಚಿತ್ರಗಳು ನಿರ್ಮಾಣವಾದರೆ ಹಣ ಗಳಿಸಲಾಗುವು ದಿಲ್ಲವೆಂಬ ಮನಸ್ಥಿತಿ ಅವರಲ್ಲಿತ್ತು. ಈಗ ಕಾಲ ಬದಲಾಗಿ ಬಾಲಿವುಡ್ ಅಂಗಳದಲ್ಲಿ ದೇಶ, ಭಾಷೆ, ಸಂಸ್ಕೃತಿ, ಹಿಂದುತ್ವ, ಮಿಲಿಟರಿ ಆಧಾರಿತ ಸಿನಿಮಾಗಳು ತೆರೆಗೆ ಬರುತ್ತಿರುವುದನ್ನು ಕಾಣಬಹುದು.

ಬದಲಾದ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಭಾರತೀಯ ಪುರಾತನ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೆರೆದಿಡುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳಿಂದ ಪ್ರೇರೇಪಿತರಾಗಿ ಬಾಲಿವುಡ್ ನಿರ್ದೇಶಕರುಗಳು ದಕ್ಷಿಣದ ಸೊಗಡಿನ ಸಿನಿಮಾಗಳ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳು ಕೇವಲ ಸಂಸ್ಕೃತಿಯ ಬಿಂಬನಕ್ಕೆ ಸೀಮಿತವಾಗದೆ ಉತ್ತಮ ಗಳಿಕೆಯಲ್ಲೂ ಮುಂದಿರುವುದನ್ನು ಸಾಬೀತುಪಡಿಸಿವೆ. ಕರೋನ ನಂತರದ ಕಾಲಘಟ್ಟ ದಲ್ಲಿ ಮನೆಯಲ್ಲಿ ಕುಳಿತು ಸಿನಿಮಾ ನೋಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಯಾಗಿದೆ.

1970 ಮತ್ತು 1980ರ ದಶಕದಲ್ಲಿ ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದರು. ಒಂದೊಂದು ಸಿನಿಮಾ ಒಂದೊಂದು ಕಥೆಯನ್ನು ಹೇಳುತ್ತಿತ್ತು. ಒಂದು ಸಿನಿಮಾಕ್ಕೂ ಮತ್ತೊಂದು ಸಿನಿಮಾಕ್ಕೂ ಸಂಬಂಧವೇ ಇರುತ್ತಿರಲಿಲ್ಲ. ‘ರಂಗನಾಯಕಿ’ಯಂಥ ಸಿನಿಮಾವನ್ನು 1980ರ ದಶಕದಲ್ಲಿ ನಿರ್ಮಿಸುವುದು ಸುಲಭದ ಮಾತಾಗಿರಲಿಲ್ಲ.

ತಾವು ನಿರ್ದೇಶಿಸಿದ ಚಿತ್ರಗಳನ್ನು ಕನ್ನಡಿಗರ ಮನೆಗೆ ತಲುಪಿಸುವಲ್ಲಿ ಪುಟ್ಟಣ್ಣ ಕಣಗಾಲ್ ಅಂದೇ ಯಶಸ್ವಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳು ಇಂದೇನಾ ದರೂ ತೆರೆಗೆ ಅಪ್ಪಳಿಸಿದ್ದರೆ ಅದೆಷ್ಟು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದವೋ ದೇವರೇ ಬಲ್ಲ. ದಿವಂಗತ ಶಂಕರ್ ನಾಗ್ ಅವರು ಅಂದಿನ ಕಾಲದಲ್ಲಿ ಮಾಲ್ಡೀನಲ್ಲಿ ಸಮುದ್ರದ ನೀರಿನ ಒಳಗಡೆ ರಾಜಕುಮಾರ್ ಅವರು ದೈತ್ಯ ಆಕ್ಟೋಪಸ್ ಜತೆ ಸೆಣಸುವ ದೃಶ್ಯವನ್ನು ಚಿತ್ರೀಕರಿಸಿದ್ದರು.

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿದ್ದ ಕೆಲವು ಮಾಫಿಯಾ ದೊರೆಗಳು ದಕ್ಷಿಣ ಭಾರತದ ಚಿತ್ರಗಳು ಮುನ್ನೆಲೆಗೆ ಬರುವುದನ್ನು ತಡೆದಿದ್ದರು. ಬದಲಾದ ಕಾಲಘಟ್ಟದಲ್ಲಿ ದಕ್ಷಿಣದ ಸಿನಿಮಾಗಳು ಹಿಂದಿ ಚಿತ್ರರಂಗವನ್ನು ಮೀರಿಸುವಂತೆ ಬೆಳೆಯುತ್ತಿವೆ. ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎಂಬಂತೆ ದಕ್ಷಿಣ ಭಾರತದ ಸಿನಿಮಾಗಳು ಇಂದು ಜಗತ್ತಿನೆಲ್ಲೆಡೆ ಹೆಸರು ಮಾಡುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ.

ನ್ಯೂಯಾರ್ಕ್ ನಗರದ ಕೆಂಪುಹಾಸಿನ ಮೇಲೆ ತೆಲುಗು ಚಿತ್ರರಂಗದ ಸಂಗೀತಗಾರನೊಬ್ಬ ಹೆಜ್ಜೆ ಹಾಕಿ ಆಸ್ಕರ್ ಪ್ರಶಸ್ತಿ ಸ್ವೀಕರಿಸುವುದು ಸಾಮಾನ್ಯದ ವಿಷಯವಲ್ಲ. ಕೆಲವು ಬಾಲಿವುಡ್ ಮಂದಿ ‘ಆರ್.ಆರ್.ಆರ್’ ಚಿತ್ರಕ್ಕೆ ಆಸ್ಕರ್ ಬಂದಿರುವುದನ್ನು ಸಹಿಸಲಾಗದೆ ಬಾಯಿಗೆ ಬಂದಂತೆ ಮಾತನಾಡಿದ್ದರು.

ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಚಿತ್ರಗಳು ಅವರಿಗೆ ಬೇಕಿಲ್ಲ, ಭಾರತೀಯ ಚಿತ್ರರಂಗದ ಅಡಿಪಾಯವೇ ತಾವೆಂಬಂತೆ ಬಿಂಬಿಸಿಕೊಂಡು ಬಂದಂಥ ಈ ಮಂದಿಯ ಚಿತ್ರಗಳನ್ನು ಜನರು ನೋಡುತ್ತಿಲ್ಲ. ‘ಕಾಶ್ಮೀರ್ ಫೈಲ್ಸ್’ ಚಿತ್ರ ದೇಶದಾದ್ಯಂತ ಪ್ರಶಂಸೆ ಪಡೆಯಲು ಕಾರಣ ಇತಿಹಾಸದಲ್ಲಿ ಮುಚ್ಚಿಟ್ಟ ಕರಾಳ ಅದ್ಯಾಯವೊಂದರ ಅನಾವರಣ. ‌

ಇತಿಹಾಸದ ಒಂದು ಮಜಲನ್ನು ಮಾತ್ರ ಭಾರತೀಯರಿಗೆ ತೋರಿಸುತ್ತಿದ್ದ ಬಾಲಿವುಡ್ ಈಗ ಬದಲಾಗಿದೆ. ದೀಪಿಕಾ ಪಡುಕೋಣೆ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದಲ್ಲಿ ನಡೆದ ಪ್ರತಿಭಟನೆಯಲ್ಲಿ ದೇಶವಿರೋಧಿಗಳ ಪರವಾಗಿ ನಿಂತಿದ್ದನ್ನು ಕಂಡಂಥ ಭಾರತೀಯ ಆಕೆಯ ‘ಚೆಪಾಕ್’ ಸಿನಿಮಾವನ್ನು ಮೂಲೆಗುಂಪುಮಾಡಿದ. ಒಟ್ಟಿನಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳು ಇಡೀ ದೇಶದ ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುತ್ತಿರುವುದು ಹೆಮ್ಮೆಯ ವಿಷಯ.