Mohan Vishwa Column: ಸೀಮೆಎಣ್ಣೆಯಿಂದ ಅಡುಗೆ ಅನಿಲದವರೆಗಿನ ಹಾದಿ !
ಎತ್ತಿನಗಾಡಿಯಲ್ಲಿ ಸೀಮೆಎಣ್ಣೆ ಬಂದೊಡನೆ ಪಡಿತರ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ವರಿಗೆ ಎಲ್ಲಿಲ್ಲದ ಸಂಭ್ರಮ. ಪಡಿತರ ಅಂಗಡಿಯ ಮಾಲೀಕ ಪುಸ್ತಕವೊಂದನ್ನು ಹೊರ ತೆಗೆದು ನಮ್ಮ ತಿಂಗಳ ಪಡಿತರದ ಸೀಮೆಎಣ್ಣೆ ಪಾಲನ್ನು ಬರೆಯುತ್ತಿದ್ದ. ಸರತಿ ಸಾಲಿನಲ್ಲಿ ಮೊದಲು ನಿಂತವರಿಗೆ ಸೀಮೆಎಣ್ಣೆ ಸಿಕ್ಕಕೂಡಲೆ ಎಲ್ಲಿಲ್ಲದ ಸಂಭ್ರಮ. ಕೊನೆಯಲ್ಲಿ ಇದ್ದವರಿಗೆ ಸೀಮೆಎಣ್ಣೆ ಸಿಗದೆ ಬೇಜಾರಿನಲ್ಲಿ ಮನೆಗೆ ಹೊರಡುವ ದೃಶ್ಯಗಳು ಸಾಮಾನ್ಯವಾಗಿತ್ತು.


ವೀಕೆಂಡ್ ವಿತ್ ಮೋಹನ್
camohanbn@gmail.com
ಒಂದು ಕಾಲದಲ್ಲಿ ಬಡ ಮತ್ತು ಮಧ್ಯಮ ವರ್ಗದ ಮನೆಯಲ್ಲಿ ವಾರದಲ್ಲಿ ಮೂರೂ ದಿನ ಪಡಿತರ ಅಂಗಡಿಯ ಮುಂದೆ ಸೀಮೆಎಣ್ಣೆಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಸರತಿ ಸಾಲಿನಲ್ಲಿ ನಮ್ಮ ಮನೆಯ ಸೀಮೆಎಣ್ಣೆ ಡಬ್ಬ ಮೊದಲು ಇರಬೇಕೆಂದು ಕಲ್ಲು ಅಥವಾ ಖಾಲಿ ಡಬ್ಬವಿಟ್ಟು ಮನೆಗೆ ಬಂದು ಮಲಗಿ ಮತ್ತೆ ಎರಡು ಗಂಟೆಯ ನಂತರ ಸೀಮೆಎಣ್ಣೆ ಹೊತ್ತುತರುವ ಎತ್ತಿನಗಾಡಿಗಾಗಿ ಕಾಯಬೇಕಿತ್ತು.
ಎತ್ತಿನಗಾಡಿಯಲ್ಲಿ ಸೀಮೆಎಣ್ಣೆ ಬಂದೊಡನೆ ಪಡಿತರ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ವರಿಗೆ ಎಲ್ಲಿಲ್ಲದ ಸಂಭ್ರಮ. ಪಡಿತರ ಅಂಗಡಿಯ ಮಾಲೀಕ ಪುಸ್ತಕವೊಂದನ್ನು ಹೊರ ತೆಗೆದು ನಮ್ಮ ತಿಂಗಳ ಪಡಿತರದ ಸೀಮೆಎಣ್ಣೆ ಪಾಲನ್ನು ಬರೆಯುತ್ತಿದ್ದ. ಸರತಿ ಸಾಲಿನಲ್ಲಿ ಮೊದಲು ನಿಂತವರಿಗೆ ಸೀಮೆಎಣ್ಣೆ ಸಿಕ್ಕಕೂಡಲೆ ಎಲ್ಲಿಲ್ಲದ ಸಂಭ್ರಮ. ಕೊನೆಯಲ್ಲಿ ಇದ್ದವರಿಗೆ ಸೀಮೆಎಣ್ಣೆ ಸಿಗದೆ ಬೇಜಾರಿನಲ್ಲಿ ಮನೆಗೆ ಹೊರಡುವ ದೃಶ್ಯಗಳು ಸಾಮಾನ್ಯವಾಗಿತ್ತು. ನಂತರ ಮನೆಗೆ ಬಂದು ಪಂಪ್ ಸ್ಟೋವ್ ಗೆ ಸೀಮೆಎಣ್ಣೆ ಸುರಿದು ಬಾಕಿ ಉಳಿದ ಸೀಮೆ ಎಣ್ಣೆಯನ್ನು ಡಬ್ಬದಲ್ಲಿ ಭದ್ರವಾಗಿ ತಿಂಗಳ ಬಳಕೆಗಾಗಿ ಸಂಗ್ರಹಿಸಲಾಗುತ್ತಿತ್ತು.
ಮತ್ತೊಂದೆಡೆ ಪಂಪ್ ಸ್ಟೋವ್ ಹಚ್ಚುವುದು ಮತ್ತೊಂದು ಕಥೆ. ಸಣ್ಣದೊಂದು ಸೂಜಿ ಮಾದರಿಯ ಕಡ್ಡಿಯಲ್ಲಿ ಒಲೆಯ ಉರಿಯುವ ಭಾಗಕ್ಕೆ ಚುಚ್ಚಿ ಸೀಮೆಎಣ್ಣೆ ಆಚೆ ಬಂದ ತಕ್ಷಣ ಬೆಂಕಿ ಹಚ್ಚಿ ಅಡುಗೆಗೆ ತಯಾರಿ ನಡೆಯುತ್ತಿತ್ತು. ಅಂದು ಅಡುಗೆ ಅನಿಲವೆಂಬುದು ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ನಿಲುಕದ ನಕ್ಷತ್ರವಾಗಿತ್ತು.
ಇದನ್ನೂ ಓದಿ:Mohan Vishwa Column: ಭಾರತ ಜಪಾನ್ ಮೀರಿಸಿದರೆ ಎಡಚರರಿಗೆ ಉರಿ
ಸರಕಾರಿ ನೌಕರರು ಅಥವಾ ವ್ಯವಹಾರಸ್ಥರ ಮನೆಯಲ್ಲಿ ಮಾತ್ರ ಅಡುಗೆ ಅನಿಲ ಹೆಚ್ಚಾಗಿ ಕಾಣಿಸುತ್ತಿತ್ತು. ನಂತರದ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಅಡುಗೆ ಅನಿಲದ ಬಳಕೆಯಲ್ಲಿ ಏರಿಕೆ ಯಾದರೂ, ವರ್ಷಕ್ಕೆ ಮೂರರಿಂದ ಐದು ಸಿಲಿಂಡರ್ ಮಾತ್ರ ಸಿಗುತ್ತಿತ್ತು.
ಹಳ್ಳಿ ಜನರಿಗೆ ಅದೂ ಸಿಗುತ್ತಿರಲಿಲ್ಲ. ‘ಗರೀಬಿ ಹಟಾವೋ’ ಎಂದು ಹೇಳಿಕೊಂಡೇ ಚುನಾವಣೆ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಬಡವರ ಮನೆಯಲ್ಲಿ ನಡೆಯುತ್ತಿದ್ದ ಸೀಮೆಎಣ್ಣೆ ಮತ್ತು ಗ್ಯಾಸ್ ಸಿಲಿಂಡರ್ ಕಥೆ ಇದು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದಾದ್ಯಂತ ಪ್ರತಿಯೊಂದು ಹಳ್ಳಿ ಮತ್ತು ನಗರಪ್ರದೇಶದ ಜನರಿಗೆ ಅಡುಗೆ ಅನಿಲದ ಸಂಪರ್ಕವನ್ನು ಕಲ್ಪಿಸುವ ಕೆಲಸ ಮಾಡಿದರು. ಕಳೆದ 11 ವರ್ಷಗಳಲ್ಲಿ ಸುಮಾರು 11 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಿಗುವ ಹಾಗೆ ಮಾಡಿದರು.
ಸೀಮೆಎಣ್ಣೆ ಮತ್ತು ಪಂಪ್ ಸ್ಟೋವ್ ಎಂಬ ಪದ ಈಗಿನ ಪೀಳಿಗೆಯ ಮಕ್ಕಳ ಕಿವಿಗೆ ಬೀಳುವುದೇ ಇಲ್ಲದಂತಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಇದ್ದ ಹಾಗೆ ವರ್ಷಕ್ಕೆ ಬಳಸಬಹುದಾದ ಅಡುಗೆ ಅನಿಲದ ಮೇಲೆ ನಿಯಂತ್ರಣವಿಲ್ಲ. ಮನೆಯಲ್ಲಿ ಸಿಲಿಂಡರ್ ಖಾಲಿ ಆದಾಗಲೆಲ್ಲ ತರಿಸಿಕೊಳ್ಳಬಹುದು. ಹಳ್ಳಿ ಹಳ್ಳಿಗೂ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ, ಒಲೆಯ ಮುಂದೆ ಕುಳಿತು ಅರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದ ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ.
ಗರೀಬಿ ಹಟಾವೋ’ ಎಂದವರ ಕಾಲದ ಮತ್ತೊಂದು ದೃಶ್ಯವನ್ನು ನೆನಪಿಸಿಕೊಳ್ಳಬೇಕು. ಹಳ್ಳಿಗಳಿಗೆ ಬೆಳಗಿನ ಜಾವ ಭೇಟಿ ನೀಡಿದರೆ ಶೌಚಕ್ಕೆಂದು ಕೈಯಲ್ಲಿ ಚೊಂಬು ಹಿಡಿದು ಹೊಲದ ಕಡೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಮತ್ತೊಂದೆಡೆ ರಸ್ತೆ ಬದಿಗಳಲ್ಲಿ ಕಕ್ಕ ಮಾಡುವ ದೃಶ್ಯ, ಹೊಲಗಳಲ್ಲಿ ನಡೆದುಕೊಂಡು ಹೋದಾಗ ಅದನ್ನು ತುಳಿದುಕೊಂಡು ಹೋಗಿದ್ದ ಅನೇಕ ಪ್ರಸಂಗಗಳು ಇನ್ನೂ ನೆನಪಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ 67 ವರ್ಷಗಳ ನಂತರವೂ ಹಳ್ಳಿಗಳಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಂತೆ ಮಾಡಿದ್ದು ಕಾಂಗ್ರೆಸ್ಸಿನ ದೊಡ್ಡ ಸಾಧನೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸ್ವಚ್ಛ ಭಾರತ್ ಅಭಿಯಾನದಲ್ಲಿ ಮನೆಮನೆಗೆ ಶೌಚಾಲಯಗಳ ನಿರ್ಮಾಣಕ್ಕೆ ಕೈಹಾಕಿದರು. ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಬಯಲಿನಲ್ಲಿ ಶೌಚಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಾಯಿತು. ಅನೇಕ ಕಡೆಗಳಲ್ಲಿ ಹೆಣ್ಣುಮಕ್ಕಳು ಶೌಚಕ್ಕೆ ಹೋದಾಗ ಅತ್ಯಾಚಾರವಾಗುತ್ತಿದ್ದವು.
ಹೆಣ್ಣುಮಕ್ಕಳು ಧೈರ್ಯದಿಂದ ಹೊರನಡೆಯಲು ಸಾಧ್ಯವಿರಲಿಲ್ಲ. ಅನೇಕ ಹೆಣ್ಣುಮಕ್ಕಳು ಭಯದಿಂದ ಶೌಚಕ್ಕೆ ಹೋಗುತ್ತಿರಲಿಲ್ಲ. ಹೆಣ್ಣುಮಕ್ಕಳ ಸಬಲೀಕರಣದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿಯವರು ತಮ್ಮ ಮುತ್ತಜ್ಜನ ಕಾಲದಿಂದ, ಅಮ್ಮನ ಆಡಳಿತದ ಅವಧಿಯವರೆಗೂ ಕಾಂಗ್ರೆಸ್ ಪಕ್ಷ ಹೆಣ್ಣು ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಮಾಡಿರಲಿಲ್ಲವೆಂಬುದನ್ನು ತಿಳಿಯಬೇಕು.
ಮೋದಿಯವರು ಶೌಚಾಲಯದ ಬಗ್ಗೆ ಮಾತನಾಡಿದಾಗ ಕಾಂಗ್ರೆಸ್ ಪಕ್ಷದವರು ನಕ್ಕಿದ್ದರು. ಪ್ರಧಾನಿ ಯಾಗಿ ಇಷ್ಟು ಸಣ್ಣ ವಿಷಯದ ಬಗ್ಗೆ ಮಾತನಾಡುತ್ತಾರೆಂದು ಆಡಿಕೊಂಡಿದ್ದರು. ಮೋದಿಯವರ ಅವಧಿಯಲ್ಲಿ ಕಳೆದ 11 ವರ್ಷಗಳಲ್ಲಿ 12 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣವಾಗಿದೆ.
ಹೆಣ್ಣುಮಕ್ಕಳು ಧೈರ್ಯದಿಂದ ಓಡಾಡುವಂತಾಗಿದೆ, ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆ. ಮೋದಿಯವರ ಅವಧಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಹೆದ್ದಾರಿಗಳು, ವಿಮಾನ ನಿಲ್ದಾಣ ಗಳು ಮತ್ತು ಉತ್ತಮ ರೈಲ್ವೆ ವ್ಯವಸ್ಥೆಯ ಜತೆಗೆ ಬಡ ಹಾಗೂ ಮಧ್ಯಮವರ್ಗದವರಿಗೆ ಅತ್ಯವಶ್ಯಕ ವಾಗಿ ಬೇಕಿದ್ದ ಅಡುಗೆ ಅನಿಲ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಒಂದು ಕಾಲದಲ್ಲಿ ಬೆಂಗಳೂರಿನಂಥ ಪ್ರದೇಶದಲ್ಲಿ ಒಂದು ರಸ್ತೆಗೆ ಒಂದು ‘ಬೋರ್ ವೆಲ್’ ಅಥವಾ ರಸ್ತೆ ಕೊನೆಯಲ್ಲಿ ‘ನೀರಿನ ನಲ್ಲಿ’ ಇರುತ್ತಿತ್ತು. ವಾರದಲ್ಲಿ ಎರಡರಿಂದ ಮೂರು ಬಾರಿ ನೀರನ್ನು ಬಿಡಲಾಗುತ್ತಿತ್ತು. ನಲ್ಲಿಗಳ ಮುಂದೆ ಬಿಂದಿಗೆಯನ್ನಿಟ್ಟು ಸರತಿ ಸಾಲಿನಲ್ಲಿ ನೀರಿಗಾಗಿ ಕಾಯುವ ದೃಶ್ಯ ಸಾಮಾನ್ಯವಾಗಿತ್ತು. ನಲ್ಲಿ ಅಥವಾ ಬೋರ್ ವೆಲ್ನಿಂದ ನೀರು ತಂದು ಮನೆಯಲ್ಲಿರುವ ದೊಡ್ಡ ಹಂಡೆಗಳಿಗೆ ತುಂಬಿಸುವುದು ದೊಡ್ಡ ಕೆಲಸವಾಗಿತ್ತು.
ನೀರಿಗಾಗಿ ನಾರಿಯರು ನಲ್ಲಿಗಳ ಮುಂದೆ ಜಗಳವಾಡುವ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಅಪ್ಪಿ ತಪ್ಪಿ ಆ ವಾರ ನೀರು ಬರಲಿಲ್ಲವೆಂದರೆ ಮನೆಯಲ್ಲಿ ನೀರಿನ ಮಿತಬಳಕೆಯ ಆಜ್ಞೆ ಅಮ್ಮನಿಂದ ಬರುತ್ತಿತ್ತು. ಮತ್ತೊಂದೆಡೆ ಹಳ್ಳಿಗಳ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ನೀರಿಗಾಗಿ ನಾರಿಯರು ಕಿಲೋ ಮೀಟರುಗಟ್ಟಲೆ ನಡೆದುಹೋಗಬೇಕಿತ್ತು.
ಆಳವಾದ ಬಾವಿಯಲ್ಲಿ ಬಿಂದಿಗೆಯನ್ನು ಬಿಟ್ಟು ನೀರು ಸೇದುವ ದೃಶ್ಯ ಸಾಮಾನ್ಯವಾಗಿತ್ತು. ಗರೀಬಿ ಹಟಾವೋ ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷ ಭಾರತೀಯರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿತ್ತು. ಮನೆಗಳಿಗೆ ನೇರವಾಗಿ BWSSB ವತಿಯಿಂದ ನೀರಿನ ಸಂಪರ್ಕ ಪಡೆಯುವುದು ಬಡ ಮತ್ತು ಮಧ್ಯಮ ವರ್ಗಕ್ಕೆ ಸವಾಲಿನ ಕೆಲಸವಾಗಿತ್ತು.
ನೀರಿನ ಸಂಪರ್ಕವಿರುವ ಮನೆಯ ಬಾಡಿಗೆ ಹೆಚ್ಚಿರುತ್ತಿತ್ತು. ನೀರಿನ ಸಂಪರ್ಕವಿಲ್ಲದ ಮನೆಯ ಬಾಡಿಗೆ ಕಡಿಮೆ ಇರುತ್ತಿತ್ತು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಮೂಲೆಮೂಲೆ ಗಳಲ್ಲಿ ಮನೆಗಳ ಮುಂದೆ ನಲ್ಲಿನೀರಿನ ವ್ಯವಸ್ಥೆ ಮಾಡಿದರು. ಕಳೆದ 11 ವರ್ಷಗಳಲ್ಲಿ ದೇಶದಾ ದ್ಯಂತ ಸುಮಾರು 15 ಕೋಟಿ ಕುಟುಂಬಗಳಿಗೆ ಮನೆಮುಂದೆ ಇಂಥ ವ್ಯವಸ್ಥೆ ಕಲ್ಪಿಸಲಾಗಿದೆ.
ನೀರಿಗಾಗಿ ರಸ್ತೆ ತುದಿಯ ನಲ್ಲಿಯ ಮುಂದೆ ಜಗಳವಾಡುವ ದೃಶ್ಯಗಳು ಇಲ್ಲದಂತಾಗಿದೆ. ಮೋದಿ ಯವರು ಕೇವಲ ಅಂಬಾನಿ ಮತ್ತು ಅದಾನಿಯವರಿಗೆ ಸಹಾಯ ಮಾಡುತ್ತಾರೆಂದು ಬೊಬ್ಬೆ ಹೊಡೆಯುವ ರಾಹುಲ್ ಗಾಂಧಿಯವರು ಉತ್ತರಿಸಬೇಕಾದ ಪ್ರಶ್ನೆಯೆಂದರೆ, ಮೋದಿಯವರು ಅಂಬಾನಿ ಮತ್ತು ಅದಾನಿಗೆ ಶೌಚಾಲಯ ಕಟ್ಟಿಸಲಿಲ್ಲ.
ಅಂಬಾನಿ ಮತ್ತು ಅದಾನಿ ಮನೆ ಮುಂದೆ ನಲ್ಲಿ ನೀರಿನ ವ್ಯವಸ್ಥೆ ಮಾಡಲಿಲ್ಲ, ಅವರ ಕುಟುಂಬಕ್ಕೆ ಉಚಿತ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಿಲ್ಲ. 2014ರಲ್ಲಿ ಒಂದು ಜಿಬಿ ಇಂಟರ್ನೆಟ್ ಬೆಲೆ 270 ರುಪಾಯಿ ಇತ್ತು. ಆದರೆ ಮೋದಿಯವರ ಅಧಿಕಾರಾವಧಿಯ 11 ವರ್ಷಗಳ ನಂತರ ಒಂದು ಜಿಬಿ ಇಂಟರ್ ನೆಟ್ ಬೆಲೆ 10 ರುಪಾಯಿಗೆ ಇಳಿದಿದೆ. ಇಂಟರ್ನೆಟ್ ಮೂಲಕ ಯುಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ತಿಂಗಳಿಗೆ ಲಕ್ಷಾಂತರ ರುಪಾಯಿ ದುಡಿಯುವ ಉದ್ಯೋಗಗಳು ಸೃಷ್ಟಿಯಾಗಿವೆ.
ಮನೆಯಲ್ಲಿ ಕುಳಿತು ಅಡುಗೆ ವಿಡಿಯೋ ಮಾಡಿ ಅನೇಕ ಗೃಹಿಣಿಯರು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 1997ರವರೆಗೂ ಭಾರತದಲ್ಲಿ ಕೇವಲ 337 ಕಿಲೋಮೀಟರುಗಳಷ್ಟು ನಾಲ್ಕು ಪಥದ ರಸ್ತೆಗಳಿದ್ದವು. ಸ್ವಾತಂತ್ರ್ಯ ಬಂದು 50 ವರ್ಷ ಕಳೆದಿದ್ದರೂ ಇಷ್ಟು ಕಡಿಮೆಯ ನಾಲ್ಕು ಪಥದ ರಸ್ತೆಗಳಿದ್ದವೆಂದರೆ ತೆರಿಗೆ ಹಾಗೂ ಸಾಲದ ಹಣವನ್ನು ಕಾಂಗ್ರೆಸ್ ಸರಕಾರ ಯಾವ ಪುರುಷಾರ್ಥಕ್ಕೆ ಬಳಸುತ್ತಿತ್ತೆಂಬುದನ್ನು ಅರ್ಥಮಾಡಿ ಕೊಳ್ಳಿ.
ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯಲ್ಲಿ ಕೇವಲ ಐದು ವರ್ಷಗಳಲ್ಲಿ ‘ಸುವರ್ಣ ಚತುಷ್ಪಥ’ ಯೋಜನೆಯ ಮೂಲಕ ದೇಶದ ನಾಲ್ಕು ಮಹಾನಗರಗಳನ್ನು ಸಂಪರ್ಕಿಸಲಾಯಿತು. ಇಂದಿನ ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ರೂವಾರಿ ಸುವರ್ಣ ಚತುಷ್ಪಥ ಯೋಜನೆ. ಅವರದ್ದೇ ದಾರಿಯಲ್ಲಿ ಸಾಗುತ್ತಿರುವ ಮೋದಿಯವರು ಪ್ರತಿನಿತ್ಯ ಸುಮಾರು 38 ಕಿಲೋ ಮೀಟರು ಗಳಷ್ಟು ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕ ಬೆಳವಣಿಗೆಯ ಚಟುವಟಿಕೆಗೆ ಮತ್ತಷ್ಟು ಚುರುಕು ಮುಟ್ಟಿಸಿದ್ದಾರೆ.
ನರೇಂದ್ರ ಮೋದಿಯವರ ಅಂತಾರಾಷ್ಟ್ರೀಯ ಪ್ರವಾಸಗಳ ಬಗ್ಗೆ ಬಾಯಿಗೆ ಬಂದಂತೆ ಮಾತ ನಾಡುವ ಕಾಂಗ್ರೆಸ್ಸಿಗರಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಕಂಡಿರುವ ಯಶಸ್ಸಿನ ಬಗ್ಗೆ ಮಾತನಾಡಲಾಗುವುದಿಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಮೋದಿಯವರು ಯಶಸ್ವಿಯಾಗಿದ್ದಾರೆ.
ಉತ್ತಮ ವಿದೇಶಾಂಗ ನೀತಿಯ ಫಲವಾಗಿ ಇಂದು ಭಾರತಕ್ಕೆ ವಿದೇಶಿ ಬಂಡವಾಳದ ಸುರಿಮಳೆ ಯಾಗುತ್ತಿದೆ. ನೋಡನೋಡುತ್ತಲೇ ಚೀನಾ ದೇಶಕ್ಕೆ ಆರ್ಥಿಕವಾಗಿ ಶಾಕ್ ನೀಡಿದ ಮೋದಿ, ಚೀನಾ ದೇಶದಲ್ಲಿದಂಥ ಹಲವು ಕಂಪನಿಗಳು ಭಾರತಕ್ಕೆ ತಮ್ಮ ವ್ಯವಹಾರವನ್ನು ಸ್ಥಳಾಂತರಿಸು ವಂತೆ ಮಾಡಿದ್ದರು. ದಕ್ಷಿಣ ಕೊರಿಯಾ ದೇಶದ SAMSUNG ಮೊಬೈಲ್ ಸಂಸ್ಥೆಯು ತನ್ನ ಎರಡನೇ ಉತ್ಪಾದನಾ ಘಟಕವನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಿದೆ, APPLE ಕಂಪನಿ ಅಂಧ್ರಪ್ರದೇಶದ ಪೆನುಕೊಂಡ ಬಳಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ, KIA ಕಂಪನಿ ತನ್ನ ಉತ್ಪಾದನಾ ಘಟಕವನ್ನು ಕೋಲಾರದ ನರಸಾಪುರದಲ್ಲಿ ಸ್ಥಾಪಿಸಿದೆ.
ಚೀನಾ ದೇಶದ XIOMI ಮೊಬೈಲ್ ಉತ್ಪಾದನಾ ಘಟಕ ವಿಶಾಖಪಟ್ಟಣದಲ್ಲಿದೆ, TESLA ಕಂಪನಿ ಬೆಂಗಳೂರಿನಲ್ಲಿ ನೋಂದಣಿ ಮಾಡಿಸಿದೆ. AMAZON ಹಾಗೂ TESLA ಕಂಪನಿಯ ಸಂಸ್ಥಾಪಕರು ಉಪಗ್ರಹಗಳ ಮೂಲಕ ದೇಶದ ಮೂಲೆ ಮೂಲೆಗಳನ್ನು ತಲುಪುವ ಅಂತರ್ಜಾಲ ಸೇವೆಯನ್ನು ನೀಡಲು ಭಾರತಕ್ಕೆ ಬರುತ್ತಿದ್ದಾರೆ.
ಕಳೆದ 11ವರ್ಷಗಳಲ್ಲಿ ಬದಲಾದ ಭಾರತದಲ್ಲಿ ಸೀಮೆಎಣ್ಣೆ ಬಳಸುತ್ತಿದ್ದ ಅಡುಗೆ ಮನೆಯಲ್ಲಿ ಅಡುಗೆ ಅನಿಲ ಬಂದಿದೆ. ಬಯಲಿನಲ್ಲಿನ ಶೌಚಕ್ಕೆ ಬ್ರೇಕ್ ಬಿದ್ದಿದೆ. ರಸ್ತೆ ತುದಿಯ ನಲ್ಲಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ನಾರಿಯರು ನೀರು ತರುವ ಪರಿಸ್ಥಿತಿಯಿಲ್ಲ. ಕೇವಲ ಅಂಬಾನಿ ಮತ್ತು ಅದಾನಿಯನ್ನು ಮುನ್ನೆಲೆಗೆ ತಂದು ಮಾತನಾಡುವ ಕಾಂಗ್ರೆಸ್ಸಿಗರು ಮೋದಿಯವರು ಬಡ ಮತ್ತು ಮಧ್ಯಮ ವರ್ಗದವರ ಜೀವನದಲ್ಲಿ ತಂದಂಥ ಆಮೂಲಾಗ್ರ ಬದಲಾವಣೆಯ ಬಗ್ಗೆ ತುಟಿ ಬಿಚ್ಚುವುದಿಲ್ಲ.