ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿದೆಯೇ ಕಾವಿಯ ಕರಾಮತ್ತು ?!

ಮಾತಿಗೆ ದೇಹ ಮತ್ತು ಮನಸ್ಸು ಸಹಕರಿಸದಿದ್ದರೂ, ಇದ್ದಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡ ಸ್ವಾಮೀಜಿ, “ಬುದ್ಧೀ, ನಿಮ್ಮ ಕಾಲಿಗೆ ಬೀಳ್ತೀನಿ. ದಯವಿಟ್ಟು ನನಗೆ ಪಾದಪೂಜೆ ಮಾಡಿಸಬೇಡಿ. ನಿಮ್ಮೊಂದಿಗೆ ಏಕಾಂತದಲ್ಲಿ ಒಂದಿಷ್ಟು ಮಾತಾಡುವುದಿದೆ. ಆ ಸೌಭಾಗ್ಯವನ್ನಷ್ಟೇ ನನಗೆ ದೊರಕಿಸಿ ಕೊಟ್ಟರೆ ಸಾಕು" ಎಂದು ಅವಧೂತರಿಗೆ ಮಾತ್ರವೇ ಕೇಳಿಸುವಷ್ಟು ಮೆಲುದನಿಯಲ್ಲಿ ಹೇಳುತ್ತಾ ಮತ್ತೊಮ್ಮೆ ಕೈಮುಗಿದರು.

ಕಳ್ಳಬೆಕ್ಕಿನ ಕಥನದಲ್ಲಿದೆಯೇ ಕಾವಿಯ ಕರಾಮತ್ತು ?!

ರಸದೌತಣ

(ಭಾಗ-5)

naadigru@gmail.com

ತಾವಿದ್ದ ಕಾರು ಮನೆಯ ಹತ್ತಿರವೇ ಬಂದಿದ್ದರೂ ಅವಧೂತರು ಕೆಲ ಕ್ಷಣದವರೆಗೆ ಅದರಿಂದ ಕೆಳಗಿಳಿಯಲಿಲ್ಲ. ಅವರ ಉಸಿರಾಟವು ವಾಡಿಕೆಯಂತಿರದೆ ತೀವ್ರಗತಿಯಲ್ಲಿದ್ದುದನ್ನು ಕಾರೊಳಗಿದ್ದ ಶಿಷ್ಯರು ಮತ್ತು ಚಾಲಕ ಗಮನಿಸಿದರು. ಅವಧೂತರ ದೇಹಭಾಷೆಯನ್ನು ಅರಿತಿದ್ದ ಅವರಿಗೆ, ಸದ್ಯದಲ್ಲೇ ಯಾರಿಗೋ ಗ್ರಹಚಾರ ವಕ್ಕರಿಸಿಕೊಂಡಿದೆ ಎಂಬುದು ಖಾತ್ರಿಯಾಗಿತ್ತು. ಆದರೆ ಅವಧೂತರ ದೃಷ್ಟಿಯು ತಮ್ಮ ಮನೆಯೆದುರು ನಿಂತಿದ್ದ ಆ ಕೇಸರಿ ಬಣ್ಣದ ಕಾರಿನಿಂದ ಆಚೀಚೆ ಕದಲದೆ ಸ್ಥಿರವಾಗಿತ್ತು. ‘ಹಾಗಾದರೆ, ಮಠದ ಸ್ವಾಮೀಜಿಯ ಮೇಲೆ ಅವಧೂತರಿಗೆ ಕೋಪ ಬಂದಿದೆಯೇ? ವಾರಾಣಸಿಗೆ ತೆರಳುವಂತೆ ಅವಧೂತರು ಸೂಚಿಸಿದ್ದರ ಹೊರತಾಗಿಯೂ ಸ್ವಾಮೀಜಿ ಹೀಗೆ ಮನೆಗೆ ಬಂದಿದ್ದರ ಹಿಂದೆ ಏನಾದರೂ ಸಮೀಕರಣಗಳಿವೆಯೇ?’ ಎಂದೆಲ್ಲಾ ಶಿಷ್ಯರು ಮನದಲ್ಲಿ ಲೆಕ್ಕಿಸುತ್ತಿದ್ದರು.

ಆದರೆ ಅದು ಕೆಲವೇ ಕ್ಷಣದವರೆಗಿನ ಒಂದು ‘ಸ್ಥಿತ್ಯಂತರ’ ಅಷ್ಟೇ! ಅವಧೂತರ ಮನದಲ್ಲಿ ಬೀಸುತ್ತಿದ್ದ ಬಿರುಗಾಳಿ ನಿಂತಿತು, ಸಾತ್ವಿಕ ಕೋಪಕ್ಕೆ ಒಡ್ಡಿಕೊಂಡಿದ್ದ ಅವರ ಮನೋಸಾಗರದ ಉಬ್ಬರ ಇಳಿಯಿತು. ಎರಡೂ ಕೈಗಳನ್ನು ಒಮ್ಮೆ ಪರಸ್ಪರ ತಿಕ್ಕಿಕೊಂಡು ಅದರ ಶಾಖವನ್ನು ಮುಖಕ್ಕೆ ಸವರಿಕೊಂಡ ಅವಧೂತರು, ಒಮ್ಮೆ ಲಘುವಾಗಿ ಗಂಟಲು ಸರಿಮಾಡಿಕೊಂಡರು. ಅದು ಕಾರಿನಿಂದ ಕೆಳಗಿಳಿಯುವುದಕ್ಕೆ ಅವರು ಸಜ್ಜಾಗಿದ್ದುದರ ಸೂಚಕ.

ಇದನ್ನೂ ಓದಿ: Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !

ಅಷ್ಟು ಹೊತ್ತಿಗೆ, ಅವಧೂತರು ಮರಳಿದ್ದು ಗೊತ್ತಾಗಿ ಮನೆಯೊಳಗಿಂದ ಒಂದಷ್ಟು ತಲೆಗಳು ಕಿಟಕಿಯಿಂದಾಚೆಗೆ ಹಣಕಿದವು. ಅವುಗಳಲ್ಲಿ ಮಠದ ಸ್ವಾಮೀಜಿಯ ತಲೆಯೂ ಸೇರಿತ್ತು. ಮನೆ ಯೊಳಗಿಂದ ಹೊರಬಂದ ಸ್ವಾಮೀಜಿ, ಅವಧೂತರೆಡೆಗೆ ಧಾವಿಸಿ ಕೈ ಮುಗಿದು ನಿಂತರು, ಏನೂ ಮಾತನಾಡದೆಯೇ ಅವರ ಕಂಗಳನ್ನೇ ನೋಡುತ್ತಾ ನಿಂತುಬಿಟ್ಟರು. ಎಡಗೈಯಲ್ಲಿ ಒಮ್ಮೆ ಗಡ್ಡವನ್ನು ನೀವಿಕೊಂಡ ಅವಧೂತರು, “ಮಠದ ಸ್ವಾಮೀಜಿ ಬಂದಿದ್ದಾರೆ, ಪಾದಪೂಜೆಗೆ ಸಜ್ಜುಮಾಡ್ರಯ್ಯಾ..." ಎಂದು ತಮ್ಮೊಂದಿಗಿದ್ದ ಶಿಷ್ಯರಿಗೆ ಆಜ್ಞಾಪಿಸಿದರು. ಶಿಷ್ಯರಿಗೋ ಅಯೋ ಮಯ. ಆದರೆ ಅವಧೂತರ ನಿಲುವು ಅಚಲವಾಗಿತ್ತು. ಕೆಲ ಕ್ಷಣದ ಹಿಂದೆ, ಮಠದ ಸ್ವಾಮೀಜಿಯ ಮೇಲೆ ಅವರಿಗೆ ಅಸಮಾಧಾನ ಮತ್ತು ಕೋಪ ಉಂಟಾಗಿದ್ದು ನಿಜ. ಆದರೆ, ಅದಕ್ಕಿಂತ ಮಿಗಿಲಾಗಿ ಅವರು ‘ಮನೆಗೆ ಬಂದಿರುವ ಅತಿಥಿ’ ಎಂಬ ದಿವ್ಯಪ್ರಜ್ಞೆಯು ಆ ಅಸಮಾಧಾನ ಮತ್ತು ಕೋಪವನ್ನು ಬದಿಗೆ ಸರಿಸಿತ್ತು. ‘ಅತಿಥಿ ದೇವೋಭವ’ ಎಂಬ ಆಶಯಕ್ಕೆ ಅವಧೂತರ ಹೃದಯವೈಶಾಲ್ಯವೂ ಸೇರಿಕೊಂಡಿದ್ದರ ಪರಿಣಾಮವದು. ಜತೆಗೆ, ಅವರು ಗುರುಪೀಠವೊಂದನ್ನು ಪ್ರತಿನಿಧಿಸುವ ಚೇತನವಾಗಿದ್ದುದರಿಂದ ‘ಸ್ಥಾನಕ್ಕೆ ಸಲ್ಲಬೇಕಾದ ಮರ್ಯಾದೆ ಸಲ್ಲಬೇಕು’ ಎಂಬ ಗ್ರಹಿಕೆಯು ಹೆಚ್ಚು ತೂಕವನ್ನು ತೂಗಿತ್ತು. ಹೀಗಾಗಿ ಸ್ವಾಮೀಜಿಯ ಪಾದಪೂಜೆಗೆ ಸಜ್ಜಾಗುವಂತೆ ಅವರು ಶಿಷ್ಯಗಣಕ್ಕೆ ಸೂಚಿಸಿದ್ದು. ಕೆಲ ಕ್ಷಣದ ಹಿಂದೆ ಬಿರುಗಾಳಿ ಮತ್ತು ಜ್ವಾಲಾಮುಖಿಯ ಪ್ರತಿರೂಪದಂತೆ ಕಂಡಿದ್ದ ಅವಧೂತರು ಈಗ, ತಂಗಾಳಿಯಾಗಿ ಮತ್ತು ನಂದಾದೀಪದ ದಿವ್ಯಕಾಂತಿಯಾಗಿ ಮಾರ್ಪಟ್ಟಿದ್ದರು. ಹೀಗಾಗಿ, ವಯಸ್ಸಿನಲ್ಲಿ ತಮಗಿಂತ ಸಾಕಷ್ಟು ಚಿಕ್ಕವರಾಗಿದ್ದರೂ ಸ್ವಾಮೀಜಿಯೆಡೆಗೆ ಗೌರವ ತೋರಿ, ಅವರ ಕೈಹಿಡಿದು ಕೊಂಡು ಮನೆಯೊಳಗೆ ಕರೆ ತಂದರು.

ಆದರೆ, ನಖಶಿಖಾಂತವಾಗಿ ಆಂದೋಲನಕ್ಕೆ ಒಳಗಾಗಿದ್ದ ಸ್ವಾಮೀಜಿ ಈ ಆತಿಥ್ಯವನ್ನು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಅವರ ಶರೀರ ಲಘುವಾಗಿ ಕಂಪಿಸುತ್ತಿತ್ತು, ಮಾತಾಡಲು ಹೊರಟರೆ ಕಂಠ ಗದ್ಗದಿತವಾಗಿತ್ತು. ಕಾವಿಯಂಥ ‘ಪರಮ-ಪವಿತ್ರ’ ಸಂಕೇತವನ್ನು ಧರಿಸಿಯೂ ತಮ್ಮ ಕಡೆಯಿಂದ ಆಗಿರುವ ಅಪಚಾರವನ್ನು ಮನಗಂಡು ಅವರೊಳಗೆ ಸುರಿಸಿದ್ದ ತಪ್ಪಿತಸ್ಥ ಭಾವನೆಯ ಫಲಶ್ರುತಿ ಅದು. ಮಾತಿಗೆ ದೇಹ ಮತ್ತು ಮನಸ್ಸು ಸಹಕರಿಸದಿದ್ದರೂ, ಇದ್ದಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡ ಸ್ವಾಮೀಜಿ, “ಬುದ್ಧೀ, ನಿಮ್ಮ ಕಾಲಿಗೆ ಬೀಳ್ತೀನಿ. ದಯವಿಟ್ಟು ನನಗೆ ಪಾದಪೂಜೆ ಮಾಡಿಸಬೇಡಿ. ನಿಮ್ಮೊಂದಿಗೆ ಏಕಾಂತದಲ್ಲಿ ಒಂದಿಷ್ಟು ಮಾತಾಡುವುದಿದೆ. ಆ ಸೌಭಾಗ್ಯವನ್ನಷ್ಟೇ ನನಗೆ ದೊರಕಿಸಿಕೊಟ್ಟರೆ ಸಾಕು" ಎಂದು ಅವಧೂತರಿಗೆ ಮಾತ್ರವೇ ಕೇಳಿಸುವಷ್ಟು ಮೆಲುದನಿಯಲ್ಲಿ ಹೇಳುತ್ತಾ ಮತ್ತೊಮ್ಮೆ ಕೈಮುಗಿದರು.

ಅಧ್ಯಾತ್ಮದ ಸಿದ್ಧಿ ಮತ್ತು ಸಾಧನೆಯಲ್ಲಿ ಸ್ವಾಮೀಜಿ ಇನ್ನಷ್ಟು ಮೆಟ್ಟಿಲುಗಳನ್ನು ಹತ್ತುವುದು ಬಾಕಿಯಿದ್ದರೂ, ಗುರುಪೀಠವೊಂದನ್ನು ಪ್ರತಿನಿಧಿಸುವ ಅವರ ‘ಸ್ವಾಮಿತ್ವ’ ವನ್ನು ಗೌರವಿಸಬೇಕು ಹಾಗೂ ಅವರೆಡೆಗೆ ಭಕ್ತರಿಗಿರುವ ಶ್ರದ್ಧಾಭಕ್ತಿಗಳಿಗೆ ಧಕ್ಕೆಯಾಗಬಾರದು ಎಂಬ ಆಶಯದೊಂದಿಗೆ ಪಾದಪೂಜೆಗೆ ಸೂಚಿಸಿದ್ದರು ಅವಧೂತರು. ಆದರೆ, ಬೇರೆಯದೇ ಹೊಯ್ದಾಟದಲ್ಲಿ ಅಕ್ಷರಶಃ ತರಗೆಲೆಯಾಗಿದ್ದ ಸ್ವಾಮೀಜಿ ಏಕಾಂತದ ಸಮಾಲೋಚನೆಗೆ ಕೋರಿದ್ದರಿಂದ ಅವಧೂತರು ಅದಕ್ಕೆ ಒಪ್ಪಿ ಕೋಣೆಯೊಳಗೆ ಅವರನ್ನು ಕರೆದೊಯ್ದರು. ಅವಧೂತರು ಒಂದೆರಡು ದಿನ ಊರಿನಲ್ಲಿ ಇಲ್ಲದಿದ್ದ ಕಾರಣಕ್ಕೆ, ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಬರುವವರು ಅಂದು ಅಲ್ಲಿರಲಿಲ್ಲ. ಅಲ್ಲಿದ್ದುದು ಮನೆಯ ಕೆಲ ಜನರು, ಸ್ವಾಮೀಜಿಯ ಜತೆಗಿದ್ದ ಆಪ್ತರು ಹಾಗೂ ಅವಧೂತರ ನಾಲ್ಕಾರು ಶಿಷ್ಯರು. ಹೀಗಾಗಿ, ಅವಧೂತರು ಕಾರಿನಿಂದ ಇಳಿದ ಕ್ಷಣದಿಂದ ಮೊದಲ್ಗೊಂಡು ಕೋಣೆಯೊಳಗೆ ಸಾಗುವವರೆಗೆ ಜತೆಯಾದ ಸ್ವಾಮೀಜಿಯ ದೇಹಭಾಷೆ-ಮೌನಭಾಷೆ-ಮೆದುಭಾಷೆ ಕಂಡಿದ್ದು ಕೇಳಿದ್ದು ಅವಧೂತರಿಗೆ ಮಾತ್ರವೇ!

ಪಟ್ಟಣದ ಸಮಾಜಸೇವಾ ಸಂಸ್ಥೆಯಿಂದ ಬೀಳ್ಕೊಂಡು ಹೀಗೆ ಮನೆಗೆ ಬರುವವರೆಗೂ ಅವಧೂತರು ಹೇಳಿದ ಪ್ರಸಂಗಗಳನ್ನೂ, ಸಾಕ್ಷಿಯಾಗಿಸಿದ ಸಂದರ್ಭಗಳನ್ನೂ ಮೈಗೂಡಿಸಿಕೊಂಡಿದ್ದ ಶಿಷ್ಯರು, ಈಗ ಮಠದ ಸ್ವಾಮೀಜಿ ಅವಧೂತರ ಮನೆಗೇ ಧಾವಿಸಿ ಬಂದಿದ್ದರ ಹಿಂದೆ ಇರಬಹುದಾದ ಕಾರಣ ಮತ್ತು ಸಾಧ್ಯಾಸಾಧ್ಯತೆಗಳನ್ನು ‘ಇಂಟರ್‌ಲಿಂಕ್’ ಮಾಡುವ ಕಸರತ್ತಿಗೆ ಒಳಗೊಳಗೇ ಒಡ್ಡಿಕೊಂಡಿದ್ದರು. ಅಂದರೆ, ಬಡ ವಿದ್ಯಾರ್ಥಿನಿ ಶಾರದೆಯು ಅಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಎದುರಿಸುತ್ತಿರಬಹುದಾದ ದೈಹಿಕ-ಮಾನಸಿಕ ಕಿರಿಕಿರಿ, ಅವಳು ಹಾದುಹೋಗುತ್ತಿರುವ ಮತ್ತು ಹೊರಗೆಲ್ಲೂ ಹೇಳಿಕೊಳ್ಳ ಲಾಗದ ತೊಳಲಾಟ ಇತ್ಯಾದಿಗಳಿಗೂ, ವಾರಾಣಸಿಗೆ ತೆರಳಬೇಕೆಂಬ ಅವಧೂತರ ಸೂಚನೆಯ ಹೊರತಾಗಿಯೂ ಸ್ವಾಮೀಜಿ ಹೀಗೆ ಏಕಾಏಕಿ ಅವರಿದ್ದಲ್ಲಿಗೇ ಬಂದಿರುವುದಕ್ಕೂ ಏನಾದರೂ ಸಂಬಂಧವಿದೆಯೇ? ಸಾಮಾಜಿಕ-ಧಾರ್ಮಿಕ-ಆಧ್ಯಾತ್ಮಿಕ ಆಯಾಮಗಳಿಂದ ಕೂಡಿದೆ ಎಂದು ತಾವು ಅಂದುಕೊಂಡಿದ್ದ ಸಮಾಜ ಸೇವಾ ಸಂಸ್ಥೆಯ ಚಟುವಟಿಕೆಗಳಲ್ಲಿ ‘ದಿವ್ಯಪರಿಮಳ’ ಹೊಮ್ಮುವ ಬದಲು ‘ಮುಗ್ಗುಲುವಾಸನೆ’ ಹೊಡೆಯುತ್ತಿದೆಯೇ? ಎಂಬೆಲ್ಲಾ ಶಂಕೆಗಳನ್ನು ಇಟ್ಟುಕೊಂಡು ಶಿಷ್ಯರು ತಮ್ಮತಮ್ಮಲ್ಲೇ ಪಿಸುಗುಡುತ್ತಿದ್ದರು.

ಕೆಲ ಕ್ಷಣದ ನಂತರ ಕೋಣೆಯ ಬಾಗಿಲು ತೆರೆದುಕೊಂಡಿತು. ಅಲ್ಲಿಂದ ಮೊದಲು ಹೊರಬಂದಿದ್ದು ಸ್ವಾಮೀಜಿ, ನಂತರ ಅವಧೂತರು. ಸ್ವಾಮೀಜಿಯ ಕಣ್ಣುಗಳಲ್ಲಿ ಕಂಡೂ ಕಾಣದಂತೆ ನೀರು ಪೊರೆಗಟ್ಟಿತ್ತು. ಲಘುವಾದ ಗದ್ಗದಿತ ಕಂಠದಲ್ಲೇ ಸ್ವಾಮೀಜಿ, “ನಮಗೆ ಹೊರಡುವುದಕ್ಕೆ ಅಪ್ಪಣೆ ಕೊಡಿ ಬುದ್ಧೀ..." ಎಂದರು. ಅಭಯಮುದ್ರೆಯಿತ್ತ ಅವಧೂತರು ಸ್ವಾಮೀಜಿಯನ್ನು ಬೀಳ್ಕೊಟ್ಟರು. ಮನೆಯ ಹಜಾರದಲ್ಲಿದ್ದ ಆರಾಮಕುರ್ಚಿಯಲ್ಲಿ ಅರೆಕ್ಷಣ ವಿರಮಿಸಿ, ಕಂಗಳನ್ನು ಮುಚ್ಚಿಕೊಂಡು ಕೈಬೆರಳುಗಳಲ್ಲಿ ಅದೇನೋ ಲೆಕ್ಕಾಚಾರ ಹಾಕಿ, ಒಂದೆರಡು ಬಾರಿ ನೀಳವಾಗಿ ಉಸಿರೆಳೆದುಕೊಂಡರು. ನಂತರ ಶಿಷ್ಯರೊಬ್ಬರ ಕಡೆಗೆ ತಿರುಗಿ, “ಸ್ನಾನಕ್ಕೆ ಸಿದ್ಧಮಾಡ್ರಪ್ಪಾ" ಎಂದರು. ಅದು ತಮ್ಮನ್ನೂ ಒಳಗೊಂಡಂತೆ ಶಿಷ್ಯರೆಲ್ಲರೂ ಪ್ರಯಾಣದ ದಣಿವನ್ನು ಕಳೆದುಕೊಳ್ಳಲೆಂದು ಸ್ನಾನ ಮಾಡಿ, ತರುವಾಯ ಸಂಜೆಯ ಆರತಿಗೆ ಸಜ್ಜಾಗಬೇಕು ಎಂಬುದಕ್ಕೆ ಅವಧೂತರು ಹೊರಡಿಸಿದ ‘ದಿವ್ಯಫರ್ಮಾನು’.

ಅಂತೆಯೇ ಎಲ್ಲರ ಸ್ನಾನವಾಗಿ, ದೇವರು-ಗುರುಗಳ ಪಟಗಳಿಗೆ ಆರತಿ ಮಾಡಿದ್ದಾಯಿತು. ಎರಡು ದಿನಗಳ ಪ್ರಯಾಣದಿಂದ ಬಳಲಿದ್ದ ಶಿಷ್ಯರಿಗೆ ಕೊಂಚ ವಿರಮಿಸಬೇಕು ಎನಿಸುತ್ತಿದ್ದರೂ, ಶಾರದೆಯ ಕಥೆಯ ಮುಂದುವರಿದ ಭಾಗವನ್ನು ಕೇಳುವ ತವಕವೂ ಜತೆಗೇ ಹೆಡೆಯಾಡಿಸುತ್ತಿತ್ತು. ಅದನ್ನು ಅರಿತವರಂತೆ ಅವಧೂತರು, “ಬನ್ನಿ, ಎಲ್ಲರೂ ಹಿತ್ತಲಿಗೆ ಹೋಗೋಣ" ಎಂದು ಕರೆದೊಯ್ದರು. ಅದು ಬೇಸಗೆಯಾದ್ದರಿಂದ, ಮನೆಯೊಳಗಿಗಿಂತ ಅಂಗಳದಲ್ಲೋ ಹಿತ್ತಲಲ್ಲೋ ವಿರಮಿಸುವುದಕ್ಕೆ ಅವಧೂತರು ಆದ್ಯತೆ ನೀಡುತ್ತಿದ್ದರು. ಜತೆಗೆ ಅಂದು ಹುಣ್ಣಿಮೆಯ ಬೆಳದಿಂಗಳೂ ಮೈಚೆಲ್ಲಿಕೊಂಡಿತ್ತು. ಅವಧೂತರ ಸುತ್ತ ಕೂತು ಶಾರದೆಯ ಕಥೆ ಕೇಳುವುದಕ್ಕೆ ಶಿಷ್ಯರಿಗೆ ಇದಕ್ಕಿಂತ ಸೊಗಸಾದ ವಾತಾವರಣ ಸಿಗುವುದುಂಟೇ? ಇದಕ್ಕೆ ತಕ್ಕಂತೆ, ಬಿಸಿಬಿಸಿ ಕಾಫಿಯಿದ್ದ ಕೆಟಲ್ ಮತ್ತು ಈರುಳ್ಳಿ ಪಕೋಡಾ ತುಂಬಿದ್ದ ಬಿದಿರಿನ ಹೆಡಿಗೆ ಅಡುಗೆಮನೆಯಿಂದ ಹಿತ್ತಲಿಗೆ ಬಂತು. ಸರಿ, ಜಮಖಾನ ಹಾಸಿ ಎಲ್ಲರೂ ಜಮೆಯಾದರು.

ಅವಧೂತರು ಇನ್ನೇನು ಮಾತಿಗೆ ಶುರುವಿಟ್ಟುಕೊಳ್ಳಬೇಕು ಎನ್ನುವಷ್ಟರಲ್ಲಿ ಶಿಷ್ಯರೊಬ್ಬರು, “ಗುರುಗಳೇ, ಆ ಸಂಸ್ಥೆಯಿಂದ ಬೀಳ್ಕೊಂಡು ಹೊರಟಾಗ ಮಾರ್ಗಮಧ್ಯದಲ್ಲಿ ಕರೆ ಮಾಡಿದ ಮ್ಯಾನೇಜರ್ ತಮ್ಮ ತಪ್ಪನ್ನು ಮನ್ನಿಸುವಂತೆ ಅಳುತ್ತಾ ಅಲವತ್ತುಕೊಂಡರು. ಅದನ್ನು ಕೇಳಿಸಿಕೊಂಡ ನಾವೂ ಒಂದಷ್ಟು ಲೆಕ್ಕಾಚಾರ ಹಾಕಿಕೊಂಡಿದ್ದೆವು. ಇಂದು ನೋಡಿದರೆ, ನಿಮ್ಮ ಸೂಚನೆಯಂತೆ ಉನ್ನತ ವ್ಯಾಸಂಗಕ್ಕೆಂದು ಮತ್ತು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಲೆಂದು ವಾರಾಣಸಿಗೆ ತೆರಳಬೇಕಿದ್ದ ಮಠದ ಸ್ವಾಮೀಜಿ ಅಲ್ಲಿಗೆ ಹೋಗುವ ಬದಲು ನಿಮ್ಮಲ್ಲಿಗೆ ದೌಡಾಯಿಸಿ ಬಂದರು. ನೀವಾಗೇ ಪಾದಪೂಜೆಗೆ ಶಿಷ್ಯರಿಗೆ ಸೂಚಿಸಿದರೂ, ಅದನ್ನು ಸ್ವೀಕರಿಸಲು ಅವರ ಮನಸ್ಸು ಒಪ್ಪಲಿಲ್ಲ. ಇದು ತಪ್ಪಿತಸ್ಥ ಭಾವನೆಯ ದ್ಯೋತಕವೇ? ಹಾಗಾದರೆ ಸಂಸ್ಥೆಯ ಆವರಣದಲ್ಲಿರುವ ಕಳ್ಳಬೆಕ್ಕು ಯಾರು? ಅದು ಸಂಸ್ಥೆಯ ಮ್ಯಾನೇಜರ್ ಅವರೇ? ಅಥವಾ... ಅಥವಾ.... ಸ್ವತಃ ಸ್ವಾಮೀಜಿಯೇ? ಮಠದೊಳಗಿನ ಈ ಮಾರ್ಜಾಲವೇ ಆ ಸಮಾಜಸೇವಾ ಸಂಸ್ಥೆಗೆ ಮಬ್ಬಾಗಿ ಮುಸುಕಿದೆಯೇ?" ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

ಈ ಮಾತಿಗೆ ಮನದುಂಬಿ ನಕ್ಕ ಅವಧೂತರು, “ಅಯ್ಯಾ, ಕಳ್ಳಬೆಕ್ಕಿನ ಕಥಾನಕದ ಕ್ಲೈಮ್ಯಾಕ್ಸ್ ಕೇಳಲು ನೀವೆಲ್ಲಾ ಅದೆಷ್ಟು ಚಡಪಡಿಸುತ್ತಿದ್ದೀರಿ ಅಂತ ನನಗೂ ಗೊತ್ತು. ಇಷ್ಟನ್ನೇ ಹೇಳಿರೋ ನಾನು ಅದನ್ನು ಹೇಳದೇ ಇರುತ್ತೇನೆಯೇ? ಆದರೆ ಅದಕ್ಕೂ ಮುನ್ನ ಒಂದು ಸೂಕ್ಷ್ಮವನ್ನು ನಮ್ಮ ಜನರು ಅರ್ಥಮಾಡಿಕೊಳ್ಳಬೇಕು. ಸಮಾಜದ ವಿವಿಧ ಸ್ತರಗಳಲ್ಲಿನ ಉದ್ಯೋಗ, ಕಸುಬು, ವ್ಯವಹಾರ ಇತ್ಯಾದಿಗಳಿಗೆ ಒಂದೊಂದು ಕಾರ್ಯಶೈಲಿ, ಅದಕ್ಕೊಂದು ಸೂಚಿತ ಸಮವಸ್ತ್ರ ಇರುತ್ತದೆ. ಹೊಲ-ಗದ್ದೆಯಲ್ಲಿ ಬೆವರು ಸುರಿಸಿ ಗೇಯುವವನು ಸೂಟು-ಬೂಟು ಹಾಕುವುದಿಲ್ಲ; ಕಚೇರಿಯಲ್ಲಿ ಅಧಿಕಾರಿಯಾಗಿರುವವನು ಪಟ್ಟಾಪಟ್ಟಿ ಚಡ್ಡಿ ಮತ್ತು ಬನಿಯನ್ ಧರಿಸಿದ್ದರೆ ಅದು ಅವನಿಗೆ ಶೋಭೆಯಲ್ಲ; ಗಿಜಿಗಿಜಿ ಮಾರುಕಟ್ಟೆಯಲ್ಲಿ ಮೂಟೆಗಳ ನಡುವೆ ವ್ಯವಹರಿಸುವ ವ್ಯಾಪಾರಿಗೆ ‘ರೇಷ್ಮೆ ಮಗುಟ-ಶಲ್ಯ’ ಧರಿಸು ಅಂತ ಯಾರಾದರೂ ಹೇಳಿದರೆ ಅದು ಮುಠ್ಠಾಳತನವಾದೀತು. ಆಯಾ ವಲಯಕ್ಕೆ ಅದರದ್ದೇ ಆದ ಸಮವಸ್ತ್ರವಿದೆ. ಇವನ್ನು ಹೊರತುಪಡಿಸಿದ ಇನ್ನೂ ಮೂರು ಸಮವಸ್ತ್ರಗಳಿವೆ. ಅವುಗಳೇ- ‘ಖಾಕಿ, ಖಾದಿ ಮತ್ತು ಕಾವಿ’. ಕಾರ್ಯಭಾರದ ನಿಮಿತ್ತ ಧಾರಣೆಗೆಂದು ಇವನ್ನು ಆಯ್ಕೆ ಮಾಡಿಕೊಂಡವರು ಭಾರಿ ಹುಷಾರಾಗಿರಬೇಕು. ಇವು ನಿರ್ದಿಷ್ಟ ‘ಅಧಿಕಾರ-ಭಾಗ್ಯ’ವನ್ನು ದಕ್ಕಿಸಿಕೊಡುವ ದಿರಿಸು ಗಳು ಎಂದೇ ಬಹುತೇಕರು ಭಾವಿಸಿದ್ದಾರೆ. ಒಂದು ಮಟ್ಟಕ್ಕೆ ಆ ಗ್ರಹಿಕೆ ನಿಜವೂ ಹೌದು. ಆದರೆ ಅದಕ್ಕಿಂತ ಮಿಗಿಲಾಗಿ ಈ ಮೂರು ದಿರಿಸುಗಳು ಸಮವಸಗಳಷ್ಟೇ ಅಲ್ಲ, ‘ಸೆರಗಿನ ಕೆಂಡಗಳೂ’ ಹೌದು ಎಂಬುದು ಅಪ್ರಿಯಸತ್ಯ.." ಎಂದು ಹೇಳಿ ಗಡ್ಡವನ್ನೊಮ್ಮೆ ನೀವಿಕೊಂಡರು.

ಆಗ ಶಿಷ್ಯರೊಬ್ಬರು, “ಗುರುಗಳೇ, ನೀವು ಕಥೆಯನ್ನು ಮುಂದುವರಿಸುತ್ತಲೇ ಇಲ್ಲ" ಎಂದು ಲಘುವಾಗಿ ಅಸಮಾಧಾನವನ್ನು ತೋಡಿಕೊಂಡರು, ಲೋಕಾಭಿರಾಮದ ಮಾತಿನ ವೇಳೆ ಗುರುಗಳು ಕೋಪಗೊಳ್ಳುವುದಿಲ್ಲ ಎಂಬ ಧೈರ್ಯದಲ್ಲಿ.

ಅದಕ್ಕೆ ಅವಧೂತರು, “ತಾಳ್ಮೆ ಇರಲಿ ಕಣಯ್ಯಾ, ಮೊದಲು ಎದುರಿಗೆ ಎಟ್ಟಿರುವ ಬಿಸಿಬಿಸಿ ಪಕೋಡಾ- ಕಾಫಿಯ ಸಮಾರಾಧನೆ ಆಗಲಿ. ರಾತ್ರಿ ಊಟವಾದ ಮೇಲೆ ಬೆಳದಿಂಗಳಲ್ಲಿ ಎಲ್ಲರೂ ಈ ಹಿತ್ತಲಲ್ಲೇ ಮಲಗ್ತೀವಲ್ಲಾ... ಆಗ ಕಥೆ ಮುಂದುವರಿಸುವೆ" ಎಂದು ಹೇಳಿ ಕಣ್ಣು ಮಿಟುಕಿಸಿದರು...

(ಮುಂದುವರಿಯುವುದು)