Fraud Rushi Movie: ʼಫ್ರಾಡ್ ಋಷಿʼ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡಿದ ಕರವೇ ನಾರಾಯಣ ಗೌಡ
Fraud Rushi Movie: ನಮ್ ಋಷಿ ನಿರ್ಮಾಣ, ನಿರ್ದೇಶನ ಹಾಗೂ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿರುವ ʼಫ್ರಾಡ್ ಋಷಿʼ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದರು.


ಬೆಂಗಳೂರು: ಈವರೆಗೂ ಮೂವತ್ತು ಕೋಟಿ ಜನರು ವೀಕ್ಷಣೆ ಮಾಡಿ, ಇಂದಿಗೂ ಟ್ರೆಂಡಿಂಗ್ನಲ್ಲಿರುವ ʼಒಳಿತು ಮಾಡು ಮನುಸ. ನೀ ಇರೋದು ಮೂರು ದಿವಸʼ ಹಾಡನ್ನು ಬರೆದಿರುವ ನಮ್ ಋಷಿ, ಈಗ ನೂತನ ಚಿತ್ರದ ನಿರ್ಮಾಣ ಹಾಗೂ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಾಮಿಡಿ ಜಾನರ್ನ ಈ ಚಿತ್ರಕ್ಕೆ ʼಫ್ರಾಡ್ ಋಷಿʼ (Fraud Rushi Movie) ಎಂದು ಹೆಸರಿಟ್ಟಿದ್ದಾರೆ. ಸಾಮಾನ್ಯವಾಗಿ ಚಿತ್ರೀಕರಣ ಪೂರ್ಣವಾದ ಮೇಲೆ ಹಾಡು ಬಿಡುಗಡೆ ಮಾಡುವುದು ವಾಡಿಕೆ. ಆದರೆ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಆನಂತರ ಚಿತ್ರೀಕರಣ ಆರಂಭಿಸುತ್ತಿರುವುದು ಈ ಚಿತ್ರದ ವಿಶೇಷ. ಇತ್ತೀಚೆಗೆ ʼಫ್ರಾಡ್ ಋಷಿʼ ಚಿತ್ರದ ಮೊದಲ ಹಾಡನ್ನು (ಆಗದಿರುವ ಕೆಲಸ) ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ನಮ್ ಋಷಿ ಅವರು, ಲೋಕವೇ ಮೆಚ್ಚಿಕೊಂಡಿರುವ ʼಒಳಿತು ಮಾಡು ಮನುಸʼ ಹಾಡಿನ ಮೂಲಕ ನಾನು ಎಲ್ಲರಿಗೂ ಚಿರ ಪರಿಚಿತ. ಆದರೆ, ನನ್ನ ಮಿತಿಮೀರಿದ ಕುಡಿತ ಹಲವರಿಗೆ ಬೇಸರ ತಂದಿತ್ತು. ಅದರಲ್ಲಿ ನಮ್ಮ ಅಧ್ಯಕ್ಷರಾದ ನಾರಾಯಣ ಗೌಡರು ಒಬ್ಬರು. ನಾನು ಕರವೇ ಗಾಗಿ ಹಾಡನ್ನು ಬರೆಯಲು ಹೋಗಿದ್ದಾಗ ಕುಡಿದು ಹೋಗಿದ್ದೆ. ಅದನ್ನು ಗಮನಿಸಿದ ಅಧ್ಯಕ್ಷರು ನನಗೆ ಹೇಳಿದ ಬುದ್ಧಿಮಾತು ಕಳೆದ ನಾಲ್ಕು ತಿಂಗಳಿನಿಂದ ನನ್ನನ್ನು ಕುಡಿತದಿಂದ ದೂರ ಮಾಡಿದೆ. ಈ ಸಂದರ್ಭದಲ್ಲಿ ಅವರಿಗೆ ಅನಂತ ಧನ್ಯವಾದ.

ಇನ್ನು ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʼಫ್ರಾಡ್ ಋಷಿʼ ಚಿತ್ರದ ಬಗ್ಗೆ ಹೇಳುವುದಾದರೆ, ಇದೊಂದು ಕಾಮಿಡಿ ಜಾನರ್ನ ಚಿತ್ರ. ಜತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಚಿತ್ರವೂ ಹೌದು. ಚಿತ್ರದಲ್ಲಿ ಏಳು ಹಾಡುಗಳಿವೆ. ಅದರಲ್ಲಿ ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಿ, ಸೆಪ್ಟೆಂಬರ್ನಿಂದ ಚಿತ್ರೀಕರಣ ಆರಂಭಿಸುತ್ತೇವೆ. ನಾನೇ ನಮ್ಮ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇನೆ. ಸಾಕಷ್ಟು ಜನ ಸ್ನೇಹಿತರು ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ. ನಿರ್ದೇಶನ, ಕಥೆ, ಚಿತ್ರಕಥೆ, ಗೀತರಚನೆ, ಸಂಭಾಷಣೆ ಕೂಡ ನನ್ನದೆ. ಜತೆಗೆ ಪ್ರಮುಖಪಾತ್ರದಲ್ಲೂ ಅಭಿನಯಿಸುತ್ತಿದ್ದೇನೆ. ನಮ್ಮ ಚಿತ್ರಕ್ಕೆ ಕಥೆಯೇ ನಾಯಕ. ನಾಯಕಿಯರು ಮೂರು ಜನ ಇರುತ್ತಾರೆ. ನಾಯಕಿಯರಲ್ಲೊಬ್ಬರಾದ ಸ್ವಾತಿ ಇಂದು ಆಗಮಿಸಿದ್ದಾರೆ. ನಮ್ಮ ಚಿತ್ರದ ಮೊದಲ ಹಾಡನ್ನು ಮಂಜು ಕವಿ ಹಾಡಿದ್ದಾರೆ. ಅಂದುಕೊಂಡ ಹಾಗೆ ಆದರೆ ಇದೇ ಡಿಸೆಂಬರ್ ಒಳಗೆ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ. ರಮೇಶ್ ಕೃಷ್ಣ ಸಂಗೀತ ನಿರ್ದೇಶನ, ಶಂಕರ್ ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನ ನಮ್ಮ ಚಿತ್ರಕ್ಕಿದೆ ಎಂದು ತಿಳಿಸಿದರು.
ರಾಮಕೃಷ್ಣ ಪರಮಹಂಸರ ಕಥೆಯೊಂದಿಗೆ ಮಾತು ಆರಂಭಿಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು, ನಾವು ಒಬ್ಬರಿಗೆ ಏನಾದರೂ ಹೇಳಬೇಕಾದರೆ, ನಾವು ಆ ವಿಷಯದಲ್ಲಿ ಸರಿ ಇರಬೇಕು. ನಾನು ಋಷಿ ಅವರಿಗೆ ಅದೇ ಹೇಳಿದೆ. ನೀವು ʼಒಳಿತು ಮಾಡು ಮನುಸʼ ದಂತಹ ಅರ್ಥಗರ್ಭಿತ ಗೀತೆ ಬರೆದವರು. ಈ ಹಾಡಿನಿಂದ ಎಷ್ಟೋ ಜನ ಬದಲಾಗಿದ್ದಾರೆ. ಇಂತಹ ಗೀತೆ ಬರೆದಿರುವ ನೀವು ಕುಡಿತ ಬಿಟ್ಟು ಇತರರಿಗೆ ಮಾದರಿಯಾಗ ಬೇಕು ಅಂತ ಹೇಳಿದ್ದೆ. ನನ್ನ ಮಾತಿಗೆ ಗೌರವ ನೀಡಿ ನಾಲ್ಕು ತಿಂಗಳಿನಿಂದ ಅವರು ಕುಡಿತ ಬಿಟ್ಟಿದಾರಂತೆ. ಇದು ಹಾಗೆ ಮುಂದುವರೆಯಲಿ. ಈಗ ಸ್ನೇಹಿತರೊಂದಿಗೆ ಸೇರಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರ ನಿರ್ಮಾಣ ಅಷ್ಟು ಸುಲಭವಲ್ಲ. ಜಾಗರೂಕತೆಯಿಂದ ನಿರ್ಮಾಣ ಮಾಡಿ. ನಿಮ್ಮ ಹಾಗೂ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ಸುದ್ದಿಯನ್ನೂ ಓದಿ | Festival Fashion 2025: ಗೌರಿ ಹಬ್ಬದ ಸೀಸನ್ನಲ್ಲಿ ಬಂತು ವೈವಿಧ್ಯಮಯ ಅತ್ಯಾಕರ್ಷಕ ಬಳೆಗಳು
ಗಾಯಕ ಮಂಜು ಕವಿ, ನಾಯಕಿ ಸ್ವಾತಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.