Maadeva Movie: ವಿನೋದ್ ಪ್ರಭಾಕರ್ ಅಭಿನಯದ ʼಮಾದೇವʼ ಚಿತ್ರದ ‘ಎದೇಲಿ ತಂಗಾಳಿʼ ಸಾಂಗ್ ಔಟ್
Maadeva Movie: ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮೊಂತೆರೊ ನಾಯಕ - ನಾಯಕಿಯಾಗಿ ನಟಿಸಿರುವ ʼಮಾದೇವʼ ಚಿತ್ರಕ್ಕಾಗಿ ಪ್ರಸನ್ನ ಕುಮಾರ್ ಬರೆದಿರುವ, ಪ್ರದ್ಯೋತನ್ ಸಂಗೀತ ನೀಡಿರುವ ʼಎದೇಲಿ ತಂಗಾಳಿʼ ಎಂಬ ಹಾಡಿನ ಬಿಡುಗಡೆ ಹಾಗೂ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಈ ಕುರಿತ ವಿವರ ಇಲ್ಲಿದೆ.



ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್. ಕೇಶವ (ದೇವಸಂದ್ರ) ನಿರ್ಮಿಸಿರುವ, ನವೀನ್ ರೆಡ್ಡಿ ಬಿ. ನಿರ್ದೇಶನದ ಹಾಗೂ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮೊಂತೆರೊ ನಾಯಕ - ನಾಯಕಿಯಾಗಿ ನಟಿಸಿರುವ ʼಮಾದೇವʼ ಚಿತ್ರಕ್ಕಾಗಿ ಪ್ರಸನ್ನ ಕುಮಾರ್ ಬರೆದಿರುವ, ಪ್ರದ್ಯೋತನ್ ಸಂಗೀತ ನೀಡಿರುವ ʼಎದೇಲಿ ತಂಗಾಳಿʼ ಎಂಬ ಹಾಡಿನ ಬಿಡುಗಡೆ ಹಾಗೂ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಬಹು ನಿರೀಕ್ಷಿತ ಈ ಚಿತ್ರ ಜೂನ್ 6 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಈ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಒಂದು ವಿಭಿನ್ನ ಸಿನಿಮಾ. ಬೇರೆ ಹೆಸರು ತಂದುಕೊಡುತ್ತದೆ. ಹ್ಯಾಂಗ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರ ಏನಾದರೂ ಬೇರೆ ಭಾಷೆಗಳಿಗೆ ಹೋದರೆ, ಮೊದಲು ಹೋಗೋದು ಸಂಗೀತ ನಿರ್ದೇಶಕ ಪ್ರದ್ಯೋತ್ತನ್. ಅಷ್ಟು ಪ್ರತಿಭಾವಂತ. ಇಡೀ ಚಿತ್ರಕ್ಕೆ ಜೀವ ಕೊಟ್ಟಿದ್ದಾರೆ. ಮಾಲಾಶ್ರೀ ಅವರ ಜತೆಗೆ ನನ್ನ ದೃಶ್ಯಗಳಿಲ್ಲ. ಆದರೆ, ವಿಭಿನ್ನವಾದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಗೊಂದು ಅದ್ಭುತವಾದ ಡೈಲಾಗ್ ಇದೆ. ಸೋನಾಲ್, ಶ್ರೀನಗರ ಕಿಟ್ಟಿ, ಶೃತಿ ಅವರು ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಇದೊಂದು ಒಳ್ಳೆಯ ಸಿನಿಮಾ ಆಗುತ್ತದೆ. ಜೂನ್ 6ರಂದು ಚಿತ್ರ ತೆರೆಕಾಣಲಿದೆ. ಎಲ್ಲರೂ ನೋಡಿ ಆಶೀರ್ವಾದ ಮಾಡಿ ಎಂದರು ನಾಯಕ ವಿನೋದ್ ಪ್ರಭಾಕರ್.

ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ಈ ಚಿತ್ರ ನೋಡಿ ಹೊರ ಬಂದ ಮೇಲೆ, ವಿನೋದ್ ಪ್ರಭಾಕರ್ ಅವರ ಜತೆಗೆ ಶ್ರುತಿ ಅವರು ಸಹ ಮನಸ್ಸಲ್ಲಿ ಉಳಿಯುತ್ತಾರೆ. ಅವರು ಪಾತ್ರ ಭಯ ಹುಟ್ಟಿಸುತ್ತೆ. ಅವರು ಎಲ್ಲರಿಗೂ ಇಷ್ಟವಾಗುತ್ತಾರೆ ಎಂಬ ನಂಬಿಕೆ ಇದೆ. ನಮಗೆ ಒಳ್ಳೆಯ ಪಾತ್ರಧಾರಿಗಳು ಸಿಕ್ಕರು. ಅವರು ಅಭಿನಯಿಸುತ್ತಿದ್ದರೆ ಕರೆಕ್ಷನ್ ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ವಿನೋದ್ ಪ್ರಭಾಕರ್ ಮೊದಲ ಶಾಟ್ನಲ್ಲೇ ಅದ್ಭುತವಾದ ಅಭಿನಯ ನೀಡಿದರು. ಇದೊಂದು ಎಮೋಷನಲ್ ಜರ್ನಿ. ಚಿತ್ರ ನೋಡಿ ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ʼರಾಬರ್ಟ್ʼ ಚಿತ್ರದ ನಂತರ ನಾನು ಹಾಗೂ ವಿನೋದ್ ಪ್ರಭಾಕರ್ ಅವರು ಈ ಚಿತ್ರದಲ್ಲಿ ನಟಿಸಿದ್ದೇವೆ. ಹಿರಿಯ ಕಲಾವಿದರ ಜತೆಗೆ ನಟಿಸಿದ್ದು ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಸೋನಾಲ್ ಮೊಂತೆರೊ.

35 ವರ್ಷಗಳಾಗಿವೆ. 130 ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೂ ಆ ಸಿನಿಮಾಗಳಲ್ಲಿ ಸಿಕ್ಕ ತೃಪ್ತಿ, ಇದರಲ್ಲಿ ಜಾಸ್ತಿಯೇ ಸಿಕ್ಕಿದೆ. ಈ ತರಹದ ಪಾತ್ರಗಳಿಗೆ ನನ್ನನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುದೇ ಸಂತೋಷ. ಕಲಾವಿದೆಯಾಗಿ ನಾನು ಗೆದ್ದೆ ಎಂದು ನನಗೆ ಅನಿಸುವುದೇ ಆಗ. ಏಕತಾನತೆಯ ಪಾತ್ರಗಳಿದ್ದರೆ ಕಲಿಕೆ ಸಾಧ್ಯವಿರುವುದಿಲ್ಲ. ಈ ತರಹದ ಪಾತ್ರ ಕೊಟ್ಟಾಗ ಮೊದಲು ನಿರ್ದೇಶಕರಿಗೆ ಸವಾಲಿರುತ್ತದೆ. ಅವರ ಧೈರ್ಯವನ್ನು ಮೆಚ್ಚಬೇಕು. ನಾಯಕಿಯಾಗಿದ್ದಾಗ ಈ ತರಹದ ವಿಭಿನ್ನ ಪಾತ್ರ ಮಾಡುವುದಕ್ಕೆ ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಆ ಸವಾಲು ತೆಗೆದುಕೊಂಡೆ. ಅವರ ನಿರೀಕ್ಷೆಗೆ ತಕ್ಕಂತೆ ನಟಿಸಿದ್ದೀನಿ ಎಂದು ನಟಿ ಶೃತಿ ತಿಳಿಸಿದರು. ನಮ್ಮ ಚಿತ್ರ ಜೂನ್ 6 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರಮಂದಿರಗಳಲ್ಲೇ ನಮ್ಮ ಚಿತ್ರ ನೋಡಿ ಎಂದರು ನಿರ್ಮಾಪಕ ಆರ್ ಕೇಶವ್. ಸಂಗೀತ ನಿರ್ದೇಶಕ ಪ್ರದ್ಯೋತ್ತನ್ ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು.