ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ; 20 ಭಾರತೀಯ ಸಿಬ್ಬಂದಿಯಿದ್ದ ‘ಜಲವೀರ್’ ನೌಕೆಯಲ್ಲಿ ಆತಂಕ

ಒಮಾನ್‌ನ ಶಿನಾಸ್ ಬಂದರು ಸಮೀಪ ಸರಕು ಸಾಗಣೆ ನೌಕೆಯೊಂದರ ಮೇಲೆ ಭದ್ರತಾ ಘಟನೆ ನಡೆದಿರುವ ಬಗ್ಗೆ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ಗಿನಿ-ಬಿಸೌ ಧ್ವಜ ಹೊಂದಿರುವ ‘ಜಲವೀರ್’ ತೈಲ ಟ್ಯಾಂಕರ್‌ನಲ್ಲಿ ಭಾರತೀಯ ಸಿಬ್ಬಂದಿ ಇದ್ದರೂ, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ–ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಗಲ್ಫ್ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿಗಳ ಸಂಖ್ಯೆ ಏರಿಕೆಯಾಗಿದ್ದು, ಈ ವಾರ ಭಾರತೀಯ ಸಿಬ್ಬಂದಿಯಿದ್ದ ಹಡಗುಗಳಿಗೆ ಸಂಬಂಧಿಸಿದ ಮೂರನೇ ಘಟನೆ ಇದಾಗಿದೆ.

ಇರಾನ್-ಅಮೆರಿಕ ಯುದ್ಧದ ಮಧ್ಯೆ ಭಾರತೀಯರಿದ್ದ 'ಜಲವೀರ್' ಹಡಗಿಗೆ ಕಂಟಕ!

'ಜಲವೀರ್' ಹಡಗಿಗೆ ಕಂಟಕ -

Profile
Sushmitha Jain Jun 11, 2026 5:46 PM

ಓಮನ್‌ (Oman)ನ ಶಿನಾಸ್ (Shinas) ಬಂದರು ಸಮೀಪ ಸರಕು ಸಾಗಣೆ ನೌಕೆ ಯೊಂದರ ಮೇಲೆ 'ದಾಳಿ' ನಡೆದಿರುವ ಬಗ್ಗೆ ಓಮನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ. ಅಮೆರಿಕ ಪಡೆಗಳಿಂದ ದಾಳಿಗೆ ಒಳಗಾದ ಭಾರತೀಯ ಸಿಬ್ಬಂದಿಯಿರುವ ಮೂರನೇ ವಾಣಿಜ್ಯ ಹಡಗು ಇದಾಗಿದೆ. ಗಿನಿ-ಬಿಸೌ ಧ್ವಜ ಹೊಂದಿರುವ ‘ಜಲವೀರ್’ ತೈಲ ಟ್ಯಾಂಕರ್‌ನಲ್ಲಿದ್ದ ಎಲ್ಲಾ ಸಿಬ್ಬಂದಿ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಏಪ್ರಿಲ್ 8 ರ ಕದನ ವಿರಾಮದ ನಂತರ ಅಮೆರಿಕ ಮತ್ತು ಇರಾನ್ ನಡುವೆ ಇದೀಗ ಯುದ್ಧ ತೀವ್ರಗೊಂಡಿದೆ. ಬುಧವಾರ ಅಮೆರಿಕದ ಸೇನಾ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ಇರಾನ್‌ ಕ್ರಮಕ್ಕೆ ಪ್ರತಿಯಾಗಿ ವಾಷಿಂಗ್ಟನ್ ವಾಯುದಾಳಿ ಆರಂಭಿಸಿದೆ. ಇದರಿಂದ ಇಡೀ ಗಲ್ಫ್ ಪ್ರದೇಶದಲ್ಲಿ ಆತಂಕದ ಸೈರನ್ ಮೊಳಗಿದೆ.

ಭಾರತ ತೀವ್ರ ಕಳವಳ

ಇದೇ ವಾರದಲ್ಲಿ ಒಮಾನ್ ಕೊಲ್ಲಿಯಲ್ಲಿ ಭಾರತೀಯ ಸಿಬ್ಬಂದಿಯಿದ್ದ ಎರಡನೇ ಹಡಗಿನ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದ ನಂತರ, ಭಾರತವು ಬುಧವಾರ ಹಿರಿಯ ಅಮೆರಿಕನ್ ರಾಜತಾಂತ್ರಿಕರಿಗೆ ಸಮನ್ಸ್ ಜಾರಿ ಮಾಡಿದೆ. 'ಸೆಟ್ಟೆಬೆಲ್ಲೊ' ಎಂಬ ಹಡಗಿನಲ್ಲಿ 24 ಭಾರತೀಯ ಸಿಬ್ಬಂದಿ ಇದ್ದು, ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 21 ಜನರನ್ನು ರಕ್ಷಿಸಲಾಗಿದೆ. ಇದಕ್ಕೂ ಮೊದಲು, ಇರಾನ್ ತೈಲ ವ್ಯಾಪಾರದಲ್ಲಿ ತೊಡಗಿರುವ ಶಂಕೆಯ ಮೇಲೆ 'ಮಾರಿವೆಕ್ಸ್' ಎಂಬ ಖಾಲಿ ಟ್ಯಾಂಕರ್ ಮೇಲೆ ಅಮೆರಿಕ ಪಡೆಗಳು ಗುಂಡು ಹಾರಿಸಿದ್ದವು. ಅದರಲ್ಲಿದ್ದ 24 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಲಾಗಿತ್ತು.

ಒಮಾನ್ ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ಅಮೆರಿಕ ಕ್ಷಿಪಣಿ ದಾಳಿ; ವಿದೇಶಾಂಗ ಇಲಾಖೆಯಿಂದ ಖಂಡನೆ

ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಾರ, ನಿಯಮ ಪಾಲಿಸದ 8 ಹಡಗುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು 134 ಹಡಗುಗಳ ಮಾರ್ಗ ಬದಲಾಯಿಸಲಾಗಿದೆ. ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಮುಂದುವರಿದಿರುವುದರಿಂದ ಕುವೈತ್ ತನ್ನ ವೈಮಾನಿಕ ವಲಯವನ್ನು ತಾತ್ಕಾಲಿಕವಾಗಿ ಮುಚ್ಚಿದೆ.

ದಾಳಿ ಖಂಡಿಸಿದ ವಿದೇಶಾಂಗ ಸಚಿವಾಲಯ

ಭಾರತದ ವಿದೇಶಾಂಗ ಸಚಿವಾಲಯವು ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಕಾಣೆಯಾಗಿರುವ ಮೂವರು ಭಾರತೀಯರಿಗಾಗಿ ಒಮಾನ್ ಅಧಿಕಾರಿಗಳೊಂದಿಗೆ ಸೇರಿ ತೀವ್ರ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಪ್ರಾದೇಶಿಕ ಸಂಘರ್ಷದ ನೇರ ಪರಿಣಾಮವಾಗಿ ಹಡಗುಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಲು ಭಾರತ ಒತ್ತಾಯಿಸಿದೆ. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಮತ್ತು ಅಡೆತಡೆಯಿಲ್ಲದ ಸಂಚರಿಸಲು ಹಾಗೂ ವಾಣಿಜ್ಯಕ್ಕೆ ಮುಕ್ತ ಅವಕಾಶ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ.