Belagavi Digital Arrest: ಬೆಳಗಾವಿಯಲ್ಲಿ ವೃದ್ಧ ಉದ್ಯಮಿಯ ಡಿಜಿಟಲ್ ಅರೆಸ್ಟ್; ಬರೋಬ್ಬರಿ 15 ಕೋಟಿ ರೂ. ಪೀಕಿದ ಸೈಬರ್ ವಂಚಕರು!
ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಕೆ ಹಾಕಿರುವ ಸೈಬರ್ ಕಳ್ಳರು, ಉದ್ಯಮಿಯಿಂದ ಹಂತ ಹಂತವಾಗಿ 15 ಕೋಟಿ ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ನಗರ ಸಿಇಎನ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ -
ಬೆಳಗಾವಿ, ಮಾರ್ಚ್ 21: ವೃದ್ಧ ಉದ್ಯಮಿಯೊಬ್ಬರು ಡಿಜಿಟಲ್ ಅರೆಸ್ಟ್ಗೆ (Belagavi Digital Arrest) ಒಳಗಾಗಿ ಬರೋಬ್ಬರಿ 15 ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಗೆ ವಿಡಿಯೊ ಕಾಲ್ ಮಾಡಿದ್ದ ಸೈಬರ್ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಅಕ್ರಮ ಹಣ ವರ್ಗಾವಣೆ ಲಿಸ್ಟ್ನಲ್ಲಿ ಇದೆ. ನೀವು ಮನಿ ಲಾಂಡರಿಂಗ್ ಮಾಡುತ್ತಿದ್ದೀರಿ ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ ತಾವು ಹೇಳಿದಂತೆ ಕೇಳಿದರೆ ನಿಮ್ಮನ್ನು ಕಾನೂನು ಸಂಕಷ್ಟದಿಂದ ಪಾರು ಮಾಡುತ್ತೇವೆ ಎಂದು ಹೇಳೀ, ಹಂತ ಹಂತವಾಗಿ 15 ಕೋಟಿ ಹಣ ಹಾಕಿಸಿಕೊಂಡು, ವಂಚನೆ ಎಸಗಿದ್ದಾರೆ.
ಮೊದಲಿಗೆ ನಿಮ್ಮ ಹಣ ಬೇರೆ ಖಾತೆಗೆ ವರ್ಗಾಯಿಸಿ ಎಂದು ಉದ್ಯಮಿಗೆ ವಂಚಕರು ಅಕೌಂಟ್ ನಂಬರ್ ಕೊಟ್ಟಿದ್ದಾರೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ಮರಳಿಸುತ್ತೇವೆ ಎಂದು ನಂಬಿಸಿದ್ದಾರೆ. ಈ ರೀತಿ ವೃದ್ಧನಿಂದ ಹಂತ ಹಂತವಾಗಿ 15 ಕೋಟಿ ಹಣ ಹಾಕಿಸಿಕೊಂಡಿದ್ದಾರೆ. ಬಳಿಕ ಸಂಪರ್ಕಕ್ಕೆ ಸಿಗದೇ ಇದ್ದಾಗ ಸಂತ್ರಸ್ತನಿಗೆ ಅನುಮಾನ ಬಂದಿದೆ.
ಮಾ.18 ರಂದು ಉದ್ಯಮಿ ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದರು. ಬಳಿಕ ಬೆಳಗಾವಿ ನಗರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಸಿಇಎನ್ ಪೊಲೀಸರು ಸೈಬರ್ ವಂಚಕರ ಅಕೌಂಟ್ ಫ್ರೀಜ್ ಮಾಡಿದ್ದಾರೆ. ಅಲ್ಲದೇ ಸೈಬರ್ ವಂಚಕರ ಬಂಧನಕ್ಕೆ ಬೆಳಗಾವಿ ಪೊಲೀಸ್ ಕಮಿಷನರ್ ವಿಶೇಷ ತಂಡ ರಚಿಸಿದ್ದಾರೆ. ಈ ರೀತಿ ಸೈಬರ್ ವಂಚಕರ ಬೆದರಿಕೆ ಕರೆಗಳು ಬಂದರೆ ಹೆದರದೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪೂಜೆ ಹೆಸರಲ್ಲಿ ವಂಚನೆ; ಬೆಂಗಳೂರಿನಲ್ಲಿ ಆರೋಪಿ ಬಂಧನ
ಬೆಂಗಳೂರು: ನಗರದಲ್ಲಿ ಪೂಜೆ ಹೆಸರಲ್ಲಿ ಅರ್ಚಕರು ಮತ್ತು ಭಕ್ತರಿಗೆ ವಂಚನೆ ಮಾಡುತ್ತಿದ್ದ ಆರೋಪಿಯನ್ನು ರಾಜಾಜಿನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪ್ರವೀಣ್ ಭಟ್ ಎಂದು ಗುರುತಿಸಲಾಗಿದೆ.
ಆರೋಪಿಯು ಮೊದಲು ದೇವಸ್ಥಾನಗಳಿಗೆ ತೆರಳಿ, ಹೆಚ್ಚಿನ ಮೊತ್ತದ ದಕ್ಷಿಣೆ ನೀಡಿ ಅರ್ಚಕರ ವಿಶ್ವಾಸ ಗಳಿಸುತ್ತಿದ್ದ. ನಂತರ ಪರಿಚಯ ಬೆಳೆಸಿ, ಮನೆಯಲ್ಲಿ ವಿಶೇಷ ಪೂಜೆ ಇದೆ, ಮುತ್ತೈದೆಯರ ಪೂಜೆಗೆ ಮಹಿಳೆಯರನ್ನು ಕಳುಹಿಸಿ ಎಂದು ಮನವೊಲಿಸುತ್ತಿದ್ದ. ಈ ರೀತಿ ರಾಘವೇಂದ್ರ ಎಂಬುವವರ ಸಂಪರ್ಕಿಸಿದ ಆರೋಪಿ, ಅವರ ಮನೆಯ ಮಹಿಳೆಯರನ್ನು ಪೂಜೆಯ ಹೆಸರಿನಲ್ಲಿ ಕಳುಹಿಸಲು ಕೇಳಿದ್ದಾನೆ. ಬಳಿಕ ಮಹಿಳೆಯರು ಆಟೋದಲ್ಲಿ ಸೂಚಿಸಿದ ಸ್ಥಳಕ್ಕೆ ತೆರಳಿದಾಗ, ಅವರ ಬಳಿ ಇದ್ದ ಚಿನ್ನಾಭರಣ ಪಡೆದು ವಂಚಿಸಿದ್ದಾನೆ.
285 ರೂಪಾಯಿ ಬಾಡಿಗೆ ಮೊತ್ತಕ್ಕೆ 5,950 ರೂ. ಬಿಲ್! ಬೆಂಗಳೂರಿನ ಕ್ಯಾಬ್ ಚಾಲಕನಿಂದ ವಂಚನೆ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಪ್ರಸ್ತುತ, ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.