ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಾಹನ ಮಾಲೀಕರಿಗೆ ಕನಿಷ್ಠ ಒಂದು ಲಕ್ಷ ರೂ ವಿಶೇಷ ಪ್ಯಾಕೇಜ್ ಘೋಷಿಸಿ: ಡಾ. ಆನಂದ ಕುಮಾರ್

ಎಥೆನಾಲ್ ಮಿಶ್ರಣದ ಪೆಟ್ರೋಲ್ ಮಾರಾಟ ಅಳಿಸಲಾಗದ ಹಾನಿಯುಂಟು ಮಾಡಲಿದೆ. ಹೆಚ್ಚು ಉದ್ಯೋಗ ನೀಡಿರುವ ಸಾಗಾಣೆ ವಲಯಕ್ಕೆ ಇದು ಪ್ರತಿಕೂಲ ಪರಿಣಾಮ ಬೀರುತ್ತಿದೆ. ಎಥೆನಾಲ್ ಮಿಶ್ರಣದ ನಂತರವೂ ಪೆಟ್ರೋಲ್ ದರ ಕಡಿಮೆಯಾಗಿಲ್ಲ. "ಅದೇ ಬೆಲೆ, ಆದರೆ ದೂರ ಕಡಿಮೆ" ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದ ಜನರ ಸಾವಿರಾರು ಕೋಟಿ ರೂ ತೈಲ ಕಂಪೆನಿಗಳ ಜೇಬಿಗೆ ಸೇರುತ್ತಿದೆ.

ವಾಹನ ಮಾಲೀಕರಿಗೆ ಕನಿಷ್ಠ ಒಂದು ಲಕ್ಷ ರೂ ವಿಶೇಷ ಪ್ಯಾಕೇಜ್ ಘೋಷಿಸಿ

-

Profile
Ashok Nayak Aug 11, 2026 12:27 PM

ಬೆಂಗಳೂರು: ವೈಜ್ಞಾನಿಕ ಪ್ರಯೋಗಗಳಿಲ್ಲದೇ ಪೆಟ್ರೋಲ್ ನಲ್ಲಿ ಶೇ 20 ರಷ್ಟು ಎಥನಾಲ್ ಮಿಶ್ರಣ ಮಾಡುತ್ತಿರುವುದು ದೇಶದ ಅತಿ ದೊಡ್ಡ ಹಗರಣವಾಗಿದ್ದು, ಇದರಿಂದ ದೇಶದ ಸಾಗಾಣೆ ವ್ಯವಸ್ಥೆ ಯೇ ಕುಸಿದು ಬೀಳಲಿದೆ. ವಾಹನಗಳ ಮೈಲೇಜ್ ತಗ್ಗುವ ಜೊತೆಗೆ ಕೋಟ್ಯಂತರ ವಾಹನಗಳು ಕೆಟ್ಟು ನಿಲ್ಲುವ ಆತಂಕ ಎದುರಾಗಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ.ಆನಂದ ಕುಮಾರ್ ಟೀಕಿಸಿದ್ದಾರೆ.

ಎಥೆನಾಲ್ ಮಿಶ್ರಣದ ಪೆಟ್ರೋಲ್ ಮಾರಾಟ ಅಳಿಸಲಾಗದ ಹಾನಿಯುಂಟು ಮಾಡಲಿದೆ. ಹೆಚ್ಚು ಉದ್ಯೋಗ ನೀಡಿರುವ ಸಾಗಾಣೆ ವಲಯಕ್ಕೆ ಇದು ಪ್ರತಿಕೂಲ ಪರಿಣಾಮ ಬೀರುತ್ತಿದೆ. ಎಥೆನಾಲ್ ಮಿಶ್ರಣದ ನಂತರವೂ ಪೆಟ್ರೋಲ್ ದರ ಕಡಿಮೆಯಾಗಿಲ್ಲ. "ಅದೇ ಬೆಲೆ, ಆದರೆ ದೂರ ಕಡಿಮೆ" ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದ ಜನರ ಸಾವಿರಾರು ಕೋಟಿ ರೂ ತೈಲ ಕಂಪೆನಿಗಳ ಜೇಬಿಗೆ ಸೇರುತ್ತಿದೆ.

ಕೋಟ್ಯಂತರ ವಾಹನಗಳ ಸಾಮರ್ಥ್ಯ ತಗ್ಗಿ ಕೆಟ್ಟು ನಿಲ್ಲಲಿದೆ. ಇದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೇರ ಹೊಣೆಯಾಗಿದ್ದಾರೆ. ಇದಕ್ಕಾಗಿಯೇ ಮ್ಯಾಕಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಇದೀಗ ಭಾರೀ ಬೇಡಿಕೆ ಕಂಡು ಬಂದಿದೆ. ಜನ ಸಾಮಾನ್ಯರ ಮೇಲೆ ಎಥೆನಾಲ್ ಪ್ರಯೋಗ ಸರಿಯಲ್ಲ. ಆತಂಕದಲ್ಲಿರುವ ಚಾಲಕರು, ವಾಹನ ಮಾಲೀಕರಿಗೆ ವಿಶೇಷ ಪ್ಯಾಕೇಜ್ ನಡಿ ಒಂದು ಲಕ್ಷ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ಎಥೆನಾಲ್ ನಿಂದ ದೀರ್ಘಕಾಲಕ್ಕಿಂತ ತಕ್ಷಣದ ಪ್ರತಿಕೂಲ ಪರಿಣಾಮಗಳ ಬಗ್ಗೆ ವಾಹನ ಮಾಲೀಕರು ಚಿಂಚಿತರಾಗಿದ್ದಾರೆ. ಉತ್ತರ ಭಾರತದಲ್ಲಿ ಎಥೆನಾಲ್ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ದಕ್ಷಿಣದಲ್ಲಿ ಬಿಸಿ ತಟ್ಟುತ್ತಿದೆ. ದ್ವಿಚಕ್ರ, ಕಾರು, ಆಟೋ ಮತ್ತಿತರ ವಾಹನ ಚಾಲಕರಿಗೆ ನಮ್ಮ ವಾಹನದ ಎಂಜಿನ್ ಗತಿ ಏನು? ಕೆಟ್ಟು ನಿಂತರೆ ಯಾರು ಜವಾಬ್ದಾರರು ಎಂಬ ಆತಂಕ ಕಾಡುತ್ತಿದೆ.

ಹಳೆಯ ಅಥವಾ ಇ20-ಗೆ ಹೊಂದಿಕೆಯಾಗದ ಎಂಜಿನ್ ಗಳಲ್ಲಿ ಉಂಟಾಗ ಬಹುದಾದ ಸಮಸ್ಯೆಗಳ ಬಗ್ಗೆ ಕಳವಳ ಉಂಟಾಗಿದೆ. ಪರಿಸರ ಉಳಿಸುವುದು ಒಂದು ನೆಪವಾಗಿದ್ದು, ಜನರ ಜೇಬಿಗೆ ಸರ್ಕಾರ ನೇರವಾಗಿ ಕೊಳ್ಳಿ ಇಟ್ಟಿದೆ. "ಹಸಿರು ಇಂಧನ" ಎಂದು ಬಿಂಬಿಸುತ್ತಿದ್ದು, ಈ ಹಸಿರು ನೀತಿಯ ಹೊರೆ ಹೊರುತ್ತಿರುವವರು ಸಾಮಾನ್ಯ ವಾಹನ ಮಾಲೀಕರು ಎಂದು ಹೇಳಿದ್ದಾರೆ.

ಹಳೆಯ ವಾಹನಗಳಲ್ಲಿ ರಬ್ಬರ್ ಪೈಪ್ ಗಳು, ಗ್ಯಾಸ್ಕೆಟ್ ಗಳು ಮತ್ತು ಪ್ಲಾಸ್ಟಿಕ್ ಭಾಗಗಳ ಮೇಲೆ ಎಥನಾಲ್ ನಿಂದ ಪರಿಣಾಮ ಬೀರಲಿದೆ. ಇಂಧನ ಸೋರಿಕೆ, ತುಕ್ಕು ಹಿಡಿಯವ ಜೊತೆಗೆ ನಿರ್ವಹಣಾ ವೆಚ್ಚ ಹೆಚ್ಚಲಿದೆ. ಪರಿಸರ ಸಂರಕ್ಷಣೆ ನೆಪದಲ್ಲಿ ಸಾಮಾನ್ಯ ಜನರ ಮೇಲೆ ಪ್ರಯೋಗ ನಡೆಸುತ್ತಿರುವುದು ಸರಿ ಇಲ್ಲ. ಪರಿಸರವೂ ಉಳಿಯಬೇಕು, ವಾಹನಗಳ ಆಯುಷ್ಯ ಹೆಚ್ಚಾಗಬೇಕು. ಜನರ ಆರ್ಥಿಕ ಸ್ಥಿತಿಯೂ ಹದಗೆಡಬಾರದು. ಈ ಗುರಿಗಳನ್ನು ಸಮತೋಲನಗೊಳಿಸುವ ನೀತಿಯೇ ನಿಜವಾದ ಜನಪರ ಇಂಧನ ನೀತಿಯಾಗಬೇಕು. ಆದರೆ ಏಕಾಏಕಿ ಇ20 ನೀತಿ ಜಾರಿಗೆ ತಂದಿರುವುದರ ಹಿಂದೆ ಸಾಮಾನ್ಯ ಜನರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.

ಇ20-ಗೆ ಹೊಂದಿಕೆಯಾಗದ ವಾಹನಗಳ ಪರಿವರ್ತನೆಗೆ ಆರ್ಥಿಕ ನೆರವು ನೀಡಬೇಕು. ಗ್ರಾಹಕರ ಹಿತಾಸಕ್ತಿಯ ರಕ್ಷಣೆ ಇಲ್ಲದಿದ್ದಲ್ಲಿ "ಎಥನಾಲ್ ಕ್ರಾಂತಿ" ಎಂಬ ಹೆಸರಿನಲ್ಲಿ ಸಾಮಾನ್ಯ ವಾಹನ ಸವಾರರೇ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಉಂಟಾಗಬಹುದು. ಎಲ್ಲಾ ವಾಹನಗಳಿಗೆ ಒಂದೇ ರೀತಿಯ ಪರಿಹಾರ ಎಂದು ಪರಿಗಣಿಸುವುದು ವೈಜ್ಞಾನಿಕ ದೃಷ್ಟಿಯಿಂದ ಸರಿಯಲ್ಲ. ಎಥನಾಲ್ ನೀತಿಯ ಯಶಸ್ಸು ಕೇವಲ ಮಿಶ್ರಣದ ಪ್ರಮಾಣದಲ್ಲಲ್ಲ; ಅದು ವೈಜ್ಞಾನಿಕ ಸಂಶೋಧನೆ, ವಾಹನ ತಂತ್ರಜ್ಞಾನ, ಗ್ರಾಹಕರ ವಿಶ್ವಾಸ ಮತ್ತು ಪಾರದರ್ಶಕ ಅನುಷ್ಠಾನದ ಮೇಲೆ ಅವಲಂಬಿತವಾಗ ಬೇಕು ಎಂದು ಹೇಳಿದ್ದಾರೆ.