Karnataka SIR: ಎನ್ಯುಮರೇಶನ್ ಫಾರಂ ಭರ್ತಿ ಮೂಲಕ ಎಸ್ಐಆರ್ ಪ್ರಕ್ರಿಯೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ
CM DK Shivakumar: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಆರಂಭವಾಗಿದ್ದು, ನನ್ನ ಮನೆಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನನ್ನ ಎನ್ಯುಮರೇಷನ್ ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಸಲ್ಲಿಕೆ ಮಾಡಿರುವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಎನ್ಯುಮರೇಶನ್ ಫಾರಂ ಭರ್ತಿ ಮೂಲಕ ಎಸ್ಐಆರ್ ಪ್ರಕ್ರಿಯೆಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. -
ಬೆಂಗಳೂರು, ಜೂ.30: ತಮ್ಮ ಎನ್ಯುಮರೇಶನ್ ಫಾರಂ (ಗಣತಿ ನಮೂನೆ) ಭರ್ತಿ ಮಾಡುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar), ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಚಾಲನೆ ನೀಡಿದರು. ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಅವರು ಗಣತಿ ನಮೂನೆ ತುಂಬಿದರು. ನಂತರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಆರಂಭವಾಗಿದ್ದು, ನನ್ನ ಮನೆಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನನ್ನ ಎನ್ಯುಮರೇಷನ್ ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಸಲ್ಲಿಕೆ ಮಾಡಿರುವೆ. ನೀವು ನಿಮ್ಮ ಹೆಸರಿನ ಜತೆಗೆ ಈ ಹಿಂದೆ ಮತದಾರ ಪಟ್ಟಿ ಸಮಯದಲ್ಲಿ ನೀಡಲಾಗಿದ್ದ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇಲ್ಲವಾದರೆ ಹೊಸ ಮೊಬೈಲ್ ಸಂಖ್ಯೆಯನ್ನು ಅಧಿಕಾರಿಗಳ ಮೂಲಕ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಯಾವ ಸಂಖ್ಯೆ ನೀಡಿರುತ್ತಿರೋ ಅದೇ ಸಂಖ್ಯೆಗೆ ಒಟಿಪಿ ಬರಲಿದೆ ಎಂದು ಮಾಹಿತಿ ನೀಡಿದರು.
ಕುಟುಂಬದವರ ಪರವಾಗಿ ಒಬ್ಬರು ಸಹಿ ಮಾಡಿದರೂ ಅರ್ಜಿ ಸ್ವೀಕಾರ
ನೀವು ನಿಮ್ಮ ಹೆಸರಿನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ಬಿಎಲ್ಎ, ಬಿಎಲ್ಓ ಹಾಗೂ ಮೇಲ್ವಿಚಾರಕರು ಈಗಾಗಲೇ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಪೈಕಿ ಒಬ್ಬರು ಸಹಿ ಮಾಡಿದರೂ ಸಾಕು. ಕುಟುಂಬದವರ ಪರವಾಗಿ ಒಬ್ಬರೇ ಎಲ್ಲರ ಅರ್ಜಿ ತುಂಬಬಹುದು. ಅದನ್ನು ಸ್ವೀಕಾರ ಮಾಡಿಕೊಳ್ಳಲಾಗುವುದು. ನಿಮ್ಮ ಫೋಟೋ ಬದಲಾಯಿಸಿಕೊಳ್ಳಬೇಕಾದರೆ ಅರ್ಜಿಯಲ್ಲಿ ಹೊಸ ಫೋಟೋ ನೀಡಬಹುದು. ಹೊಸ ಮತದಾರರು ನಿವಾಸ ದೃಢೀಕರಣ ಪತ್ರ ನೀಡಬೇಕು. ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ಅಗತ್ಯ ಪ್ರಮಾಣಪತ್ರ ನೀಡಲು ಮುಂದಾಗಿದೆ. ಎಲ್ಲರೂ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಬೇಕು. ಉಳಿಸಿಕೊಳ್ಳದಿದ್ದರೆ ಸರ್ಕಾರ ಸೌಲಭ್ಯ, ಕಾರ್ಯಕ್ರಮಗಳನ್ನು ಪಡೆಯುವುದು ಕಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.
ಕೆಲವು ಅನಕ್ಷರಸ್ಥರಿಗೆ ಆಪ್ ಬಳಸುವುದರ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ಕೇಳಿದಾಗ, ʼಆಪ್ ಬಳಸುವ ವಿಚಾರದಲ್ಲಿ ನನಗೂ ಮಾಹಿತಿ ಇಲ್ಲ. ನಾನು ಬೇರೆಯವರ ಸಹಾಯ ಪಡೆದೆ. ಈ ಕಾರಣಕ್ಕೆ ಬಿಎಲ್ಓಗಳ ಮೂಲಕ ಅರ್ಜಿ ಪಡೆದು ಆಫ್ಲೈನ್ ಮೂಲಕವೇ ಅರ್ಜಿ ತುಂಬಬಹುದುʼ ಎಂದು ತಿಳಿಸಿದರು.
ಕರ್ನಾಟಕದ ವಿಚಾರದಲ್ಲಿ ಈ ಪ್ರಕ್ರಿಯೆ ಬಹಳ ಪ್ರಮುಖವಾಗಿದೆ ಎಂದು ಕೇಳಿದಾಗ, ʼಬೇರೆ ರಾಜ್ಯಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಕೇವಲ ಮತದಾರರಿಗೆ ಮಾತ್ರ ನೀಡುತ್ತಿದ್ದು, ಮತದಾನ ಹಕ್ಕು ಇಲ್ಲದವರಿಗೆ ಸೌಲಭ್ಯ ಹಿಂಪಡೆಯಲಾಗುತ್ತಿದೆ. ಅದೇ ವ್ಯವಸ್ಥೆ ರಾಜ್ಯದಲ್ಲೂ ಬರಬಹುದುʼ ಎಂದು ಹೇಳಿದರು.
ವಿದ್ಯುತ್ ನಿಗಮಗಳ ಖಾಸಗೀಕರಣ ಬೇಡ ಎನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಭರವಸೆ
ಇಲ್ಲಿನ ಮತದಾರರಿಗೆ ನಾವು ಗ್ಯಾರಂಟಿ ನೀಡಬಹುದು. ಬೇರೆ ರಾಜ್ಯದ ಮತದಾರರಿಗೆ ನಾವು ಯಾಕೆ ಗ್ಯಾರಂಟಿ ನೀಡಬೇಕು? ನಮ್ಮ ರಾಜ್ಯದವರಿಗೆ ಮಾತ್ರ ಗ್ಯಾರಂಟಿ ನೀಡಬೇಕು ಎಂಬುದು ನಮ್ಮ ಆಲೋಚನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.