ವಾಹನ ಸವಾರರಿಗೆ ಗುಡ್ ನ್ಯೂಸ್; ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ಡಿಸ್ಕೌಂಟ್ ಘೋಷಣೆ
ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ. ಮತ್ತೊಮ್ಮೆ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿ ಗುರುವಾರ ಆದೇಶಿಸಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ (Traffic Rules) ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ. ಮತ್ತೊಮ್ಮೆ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿ ಗುರುವಾರ ಆದೇಶಿಸಿದೆ. ಈ ಹಿಂದೆ ಶೇ. 50ರಷ್ಟು ರಿಯಾಯಿತಿ ನೀಡಿ ಭಾರಿ ಮೊತ್ತದ ದಂಡ ಸಂಗ್ರಹಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಮ್ಮೆ ರಿಯಾಯಿತಿ ಘೋಷಣೆ ಮಾಡಿದ್ದು, ಜೂನ್ 21 ರಿಂದ ಜುಲೈ 10ರವರೆಗೆ ದಂಡದ ಅರ್ಧದಷ್ಟು ಹಣ ಪಾವತಿಸಲು ವಾಹನ ಸವಾರರಿಗೆ 20 ದಿನಗಳ ಅವಕಾಶ ಕಲ್ಪಿಸಲಾಗಿದೆ.
ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ಗಳಲ್ಲಿ 2026ರ ಮೇ ತಿಂಗಳಿಗಿಂತ ಮೊದಲು ದಾಖಲಾಗಿರುವ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರವರೆಗಿನ ಸುದೀರ್ಘ ಅವಧಿಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಅರ್ಧದಷ್ಟು ವಿನಾಯಿತಿ ನೀಡಲಾಗಿದೆ. ಈ ಸುದೀರ್ಘ ಅವಧಿಯ ಸಂಚಾರ ನಿಯಮ ಉಲ್ಲಂಘನೆ ದಂಡದ ಬಾಕಿಯನ್ನು ಸವಾರರು ಸುಲಭವಾಗಿ ಪಾವತಿಸಲು ಇದೇ ಜೂನ್ 21ರಿಂದ ಜುಲೈ 10ರವರೆಗೆ ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿದೆ.
ಇನ್ನು ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ನಲ್ಲಿ ಮೇ 2026 ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ, ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಾಹನ ಸವಾರರು ತಮ್ಮ ಬಾಕಿ ದಂಡದ ಮೊತ್ತವನ್ನು ಸುಲಭವಾಗಿ ಪಾವತಿಸಲು ಸರ್ಕಾರ ಹಲವು ಆಯ್ಕೆಗಳನ್ನು ನೀಡಿದೆ. ಸಾರ್ವಜನಿಕರು ಅಸ್ತ್ರಂ ಆ್ಯಪ್, ಕೆಎಸ್ಪಿಎಸ್ ಆ್ಯಪ್ ಹಾಗೂ ರಾಜ್ಯಾದ್ಯಂತ ಇರುವ ಕರ್ನಾಟಕ ಒನ್ ಕೇಂದ್ರಗಳು ಸೇರಿದಂತೆ ಅಧಿಕೃತ ಡಿಜಿಟಲ್ ವೇದಿಕೆಗಳ ಮೂಲಕ ಶೇಕಡಾ 50ರಷ್ಟು ವಿನಾಯಿತಿಯ ದಂಡವನ್ನು ಪಾವತಿಸಬಹುದಾಗಿದೆ. ಬೆಂಗಳೂರು ಒನ್ ವೆಬ್ ಸೈಟ್ ಗಳಲ್ಲಿ ದಂಡದ ವಿವರ ಪಡೆದು ಅಲ್ಲೇ ಹಣ ಪಾವತಿಸಬಹುದು. ರಿಯಾತಿ ಬಳಸಿಕೊಳ್ಳಲು ಸರ್ಕಾರ ಸೂಚಿಸಿದೆ. ಕಳೆದ ಬಾರಿ ಕೂಡ ಆಫರ್ ನೀಡಲಾಗಿದ್ದು, ಭರ್ಜರಿ ದಂಡದ ಕಲೆಕ್ಷನ್ ಆಗಿತ್ತು.