ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ 'ಬಸವ ವಿಭೂಷಣ' ಪುರಸ್ಕಾರ
ಗೌರವಾನ್ವಿತ ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ ಹಾಗೂ ಬಸವ ಸಮಿತಿಯ ಸಂಸ್ಥಾಪನಾ ದಿನಾಚರಣೆಯನ್ನು ಸೆ.10ರಂದು ಬೆಳಗ್ಗೆ 11.30ಕ್ಕೆ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ರೈಲ್ವೆ ಖಾತೆ, ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.

-

ಬಸವ ಸಮಿತಿಯು ಸರ್ವಸಮಾನತೆಯ ಆಧಾರ, ಆದರ್ಶ ಸಮಾಜ ರಚನೆಗೆ ಶ್ರಮಿಸಿದ ಯುಗ ಪುರುಷ ಮಹಾತ್ಮ ಬಸವೇಶ್ವರರು ಹಾಗೂ ಸಮಕಾಲೀನ ಶರಣರು ಬೋಧಿಸಿದ ತತ್ವಪ್ರಸಾರದ ಕಾರ್ಯಗಳನ್ನು ಮುಂದುವರಿಸುತ್ತಾ, ಅವರ ವಚನಗಳಲ್ಲಿನ ಮಾನವೀಯ ಮೌಲ್ಯಗಳ ಹಾಗೂ ನೈತಿಕ ಶಕ್ತಿಯ ಸಂಪತ್ತನ್ನು ರಕ್ಷಿಸುವುದರ ಜೊತೆಗೆ ಮನುಕುಲದ ಉದ್ಧಾರಕ್ಕಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದಲ್ಲಿ ಬಸವ ತತ್ವಗಳನ್ನು ಬಿತ್ತರಿಸಬೇಕೆಂಬ ಪ್ರಮುಖ ಉದ್ದೇಶದಿಂದ 1964ರಲ್ಲಿ ಬಸವ ಸಮಿತಿಯು ಸ್ಥಾಪಿತವಾಯಿತು.
ಭಾರತ ದೇಶದ ಮಾಜಿ ಹಂಗಾಮಿ ರಾಷ್ಟ್ರಪತಿಗಳು ಹಾಗೂ ಬಸವ ಸಮಿತಿಯ ಸಂಸ್ಥಾಪಕರು ಆಗಿದ್ದ ಡಾ. ಬಿ.ಡಿ. ಜತ್ತಿಯವರು ತಮ್ಮ ಕೊನೆಯ ಉಸಿರು ಇರುವವರೆಗೂ ಬಸವ ಸಮಿತಿಯ ಸ್ಥಾಪನೆಯ ಪ್ರಮುಖ ಉದ್ದೇಶದ ಸಫಲತೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಮಹಾನು ಭಾವರು.
ಗೌರವಾನ್ವಿತ ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವ ಹಾಗೂ ಬಸವ ಸಮಿತಿಯ ಸಂಸ್ಥಾಪನಾ ದಿನಾಚರಣೆಯನ್ನು ಸೆ.10ರಂದು ಬೆಳಗ್ಗೆ 11.30ಕ್ಕೆ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ರೈಲ್ವೆ ಖಾತೆ, ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿಯವರು ವಹಿಸಲಿದ್ದಾರೆ. ದಿವ್ಯಸಾನಿಧ್ಯವನ್ನು ಪೂಜ್ಯ ಶ್ರೀ ಶಿವರುದ್ರಮಹಾಸ್ವಾಮಿಗಳು, ಬೇಲಿಮಠಾಧ್ಯಕ್ಷರು, ಬೆಂಗಳೂರು ಇವರು ವಹಿಸಲಿದ್ದಾರೆ.
ಬಸವ ಮಣಿಹದಲ್ಲಿ ಸಾಧನೆಗೈದಿರುವ ಹಿರಿಯ ಸಾಹಿತಿಗಳಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ 'ಬಸವ ವಿಭೂಷಣ' ಪುರಸ್ಕಾರ, ಸಿ.ಎಂ.ಚಂದ್ರಶೇಖರ್, ಯುನೈಟೆಡ್ ಅಕಾಡೆಮಿ, ಹಾಸನ ಇವರಿಗೆ 'ಬಸವಶ್ರೀ' ಪುರಸ್ಕಾರ ಮತ್ತು ಬೆಂಗಳೂರಿನ ವಚನ ಜ್ಯೋತಿ ಬಳಗದ ಶ್ರೀ ಎಸ್.ಪಿನಾಕಪಾಣಿಯವರಿಗೆ 'ಬಸವಶ್ರೀ' ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
ಹಾಗೂ ದತ್ತಿ ದಾನಿಗಳಾದ ಶಂಕರ್ ಮಹಾದೇವ ಬಿದರಿ, ಐ.ಪಿ.ಎಸ್. ಕರ್ನಾಟಕ ರಾಜ್ಯ ಡೈರೆಕ್ಟರ್ ಜನರಲ್ ಮತ್ತು ಪೊಲೀಸ್ ಮಹಾ ನಿರ್ದೇಶಕರು (ನಿ)ರವರು ಲಿಂ. ಶ್ರೀಮತಿ ಸಂಗವ್ವ ಜತ್ತಿಯವರ ಸಂಸ್ಮರಣೆಯಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬಸವ ಸಮಿತಿಯ ಕೆ.ಎಲ್.ಇ. ಬಸವ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.