Pravasi Prapancha: ಶ್ರೀ ಸಾಮಾನ್ಯರ ಪ್ರವಾಸೋದ್ಯಮಕ್ಕೆ ಪ್ರವಾಸಿ ಪ್ರಪಂಚ ಅಗತ್ಯ: ಸಚಿವ ಎಚ್.ಕೆ ಪಾಟೀಲ್
Pravasi Prapancha: ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಪ್ರವಾಸ, ಪ್ರವಾಸೋದ್ಯಮ ಮತ್ತು ಅತಿಥಿ ಕ್ಷೇತ್ರಕ್ಕೆ ಮೀಸಲಾದ ಕನ್ನಡದ ಪ್ರಪ್ರಥಮ ಏಕೈಕ ವಿನೂತನ ವಾರಪತ್ರಿಕೆ ʼಪ್ರವಾಸಿ ಪ್ರಪಂಚʼದ ಲೋಕಾರ್ಪಣೆ ಕಾರ್ಯಕ್ರಮ ಬುಧವಾರ ನೆರವೇರಿತು. ಈ ವೇಳೆ ಸಚಿವ ಎಚ್.ಕೆ.ಪಾಟೀಲ್ ಅವರು ಮಾತನಾಡಿದ್ದಾರೆ.


ಬೆಂಗಳೂರು: ರಾಜ್ಯದಲ್ಲಿ ಜನ ಸಾಮಾನ್ಯರೂ ಪ್ರವಾಸ ಮಾಡುವ ಮೂಲಕ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ʼಪ್ರವಾಸಿ ಪ್ರಪಂಚʼ (Pravasi Prapancha) ಪತ್ರಿಕೆ ನೆರವಾಗುವ ವಿಶ್ವಾಸ ಇದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರು ತಿಳಿಸಿದ್ದಾರೆ. ವಿಶ್ವವಾಣಿ ಸಮೂಹದ ವಿನೂತನ ʼಪ್ರವಾಸಿ ಪ್ರಪಂಚʼ ಪತ್ರಿಕೆಯ ವೆಬ್ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ಪ್ರವಾಸವು ಜನ ಸಾಮಾನ್ಯರ ಕೈಗೆಟಕುವಂತಿರಬೇಕು. ಜತೆಗೆ ಪ್ರವಾಸಿ ತಾಣಗಳೂ ಅಭಿವೃದ್ಧಿಯಾಗಬೇಕು. ಈ ಎರಡೂ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.
ರಾಜ್ಯದಲ್ಲಿ ಹುಬ್ಬಳ್ಳಿಯ ಸಿದ್ದಾರೂಢ ಮಠ, ಮುರುಡೇಶ್ವರ, ಇಡಗುಂಜಿ, ಕೊಲ್ಲೂರು, ಹೊರನಾಡು, ಉಡುಪಿ ಮೊದಲಾದ ಕ್ಷೇತ್ರಗಳಲ್ಲಿ ಯಾತ್ರಿಕರಿಗೆ ಭೋಜನದ ವ್ಯವಸ್ಥೆ ಇರುತ್ತದೆ. ಇದರಿಂದ ಜನ ಸಾಮಾನ್ಯರಿಗೆ ಕ್ಷೇತ್ರ ದರ್ಶನದ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪುಷ್ಟಿ ಸಿಗುತ್ತದೆ. ಸರಕಾರ ಕೂಡ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದೆ. ಉದಾಹರಣೆಗೆ ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ಪುರಾತತ್ತ್ವ ಉತ್ಖನನ ಕಾರ್ಯವೂ ನಡೆಯುತ್ತಿದೆ. ಪ್ರಾಚೀನ ಕಲಾಕೃತಿಗಳ ಸಂರಕ್ಷಣೆಯ ಕೆಲಸವೂ ನಡೆಯುತ್ತಿದೆ ಎಂದು ವಿವರಿಸಿದರು.

ಕ್ಯಾಸಿನೊಗಳಿಗೆ ರಾಜ್ಯದಲ್ಲಿ ಅವಕಾಶ ಇಲ್ಲ:
ಪ್ರವಾಸೋದ್ಯಮವನ್ನು ಕೇವಲ ಅದಾಯದ ದೃಷ್ಟಿಯಿಂದ ನೋಡಬಾರದು. ಪ್ರವಾಸೋದ್ಯಮವು ಜನರ ಜ್ಞಾನವನ್ನು, ತಿಳಿವಳಿಕೆಯನ್ನು ಹೆಚ್ಚಿಸಬೇಕು. ಇತಿಹಾಸದ ದರ್ಶನವನ್ನು ಮಾಡಿಸುವಂತಿರಬೇಕು. ರಾಜ್ಯದಲ್ಲಿ ಗೋವಾ ಮಾದರಿಯ ಕ್ಯಾಸಿನೊಗಳನ್ನು ನಿರ್ಮಿಸಲು ಅವಕಾಶ ನೀಡಲಾಗುವುದಿಲ್ಲ. ಅದಕ್ಕೆ ಪ್ರೋತ್ಸಾಹ ನೀಡುವುದು ಸರಿಯೂ ಅಲ್ಲ. ರಾಜ್ಯದಲ್ಲಿ 320 ಕಿಲೋಮೀಟರ್ ಕರಾವಳಿ ಇರುವುದರಿಂದ ಕ್ಯಾಸಿನೊಗಳಿಗೆ ಅನುಮತಿ ಕೊಟ್ಟರೆ ಹೆಚ್ಚು ಆದಾಯ ಬರಬಹುದು ಎಂಬ ಸಲಹೆಯನ್ನು ಕೆಲವು ಕೊಟ್ಟಿದ್ದರು. ಆದರೆ ಸರಕಾರವು ಕ್ಯಾಸಿನೊಗಳಿಗೆ ಉತ್ತೇಜನ ನೀಡುವುದಿಲ್ಲ ಎಂದರು.
ಜಕ್ಕೂರಿನಲ್ಲಿ ಮಾದರಿ ಗ್ರಾಮವನ್ನು ನಿರ್ಮಿಸಲಾಗಿದೆ. ಬೆಂಗಳೂರು ಸೇರಿದಂತೆ ನಗರಗಳಲ್ಲಿರುವ ಜನರಿಗೆ ಮತ್ತು ಮಕ್ಕಳಿಗೆ ಗ್ರಾಮೀಣ ಜನ ಜೀವನದ ಪರಿಚಯ ಮಾಡಿಕೊಡುವುದು ಇದರ ಉದ್ದೇಶ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Pravasi Prapancha: ಪ್ರವಾಸಿಗರಿಗೆ ಮೌಲ್ಯಯುತ ಮಾರ್ಗದರ್ಶಿ ʼಪ್ರವಾಸಿ ಪ್ರಪಂಚʼ: ಸಿಎಂ ಸಿದ್ದರಾಮಯ್ಯ
ವಿಧಾನಸೌಧವೇ ಪ್ರವಾಸಿ ಕೇಂದ್ರ:
ವಿಧಾನಸೌಧ ಅತ್ಯಂತ ಆಕರ್ಷಕ ಮತ್ಯು ಐತಿಹಾಸಿಕ ಕೇಂದ್ರ. ಇದನ್ನೇ ಪ್ರವಾಸಿ ಕೇಂದ್ರವಾಗಿ ರೂಪಿಸಬಹುದು. ಈ ನಿಟ್ಟಿನಲ್ಲಿ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಕಾರ್ಯಕ್ರಮ ಆರಂಭವಾಗಿದೆ. ಇಂಥ ವಿನೂತನ ಪರಿಕಲ್ಪನೆ ಹಿಂದೆ ಯಾರಿಗೂ ಹೊಳೆದಿರಲಿಲ್ಲ. ರಾಜ್ಯದ ಪ್ರವಾಸೋದ್ಯಮವನ್ನು ಇತರ ಕಡೆಗಳ ಪ್ರವಾಸೋದ್ದಿಮೆಗೆ ಹೋಲಿಸಬಾರದು. ಪ್ರವಾಸೋದ್ಯಮದಲ್ಲಿ ಎರಡು ಭಾಗವಿದೆ. ಒಂದು ಐಷಾರಾಮಿ ಟೂರಿಸಂ. ಮತ್ತೊಂದು ಶ್ರೀ ಸಾಮಾನ್ಯರ ಪ್ರವಾಸ ಎಂದು ವಿವರಿಸಿದರು.
ರಾಜ್ಯದ ಪ್ರವಾಸಿ ತಾಣಗಳಲ್ಲಿ 11 ರೋಪ್ ವೇಗಳನ್ನು ನಿರ್ಮಿಸಲಾಗುತ್ತಿದೆ. ಕೇಬಲ್ ಕಾರುಗಳು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದರು.