Pravasi Prapancha: ಪ್ರವಾಸಿಗರಿಗೆ ಮೌಲ್ಯಯುತ ಮಾರ್ಗದರ್ಶಿ ʼಪ್ರವಾಸಿ ಪ್ರಪಂಚʼ: ಸಿಎಂ ಸಿದ್ದರಾಮಯ್ಯ
Pravasi Prapancha: ವಿಶ್ವವಾಣಿಯ ವಿನೂತನ ಪತ್ರಿಕೆಯಾದ ʼಪ್ರವಾಸಿ ಪ್ರಪಂಚʼವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿರುವ ಅವರು, ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸಿ ಪ್ರಪಂಚ ಪತ್ರಿಕೆಯ ಅಗತ್ಯವಿದ್ದು, ಪ್ರವಾಸಿಗರಿಗೆ ಮೌಲ್ಯಯುತವಾದ ಮಾರ್ಗದರ್ಶಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.


ಬೆಂಗಳೂರು: ವಿಶ್ವವಾಣಿಯ ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಮೀಸಲಾದ ಕನ್ನಡದ ಪ್ರಪ್ರಥಮ, ಏಕೈಕ ಹಾಗೂ ವಿನೂತನ ಪತ್ರಿಕೆಯಾದ ʼಪ್ರವಾಸಿ ಪ್ರಪಂಚʼವನ್ನು (Pravasi Prapancha) ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಲೋಕಾರ್ಪಣೆ ಮಾಡಿದರು. ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸಿ ಪ್ರಪಂಚ ಪತ್ರಿಕೆಯ ಅಗತ್ಯವಿದ್ದು, ಪ್ರವಾಸಿಗರಿಗೆ ಮೌಲ್ಯಯುತವಾದ ಮಾರ್ಗದರ್ಶಿಯಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಭ ಹಾರೈಸಿದರು.
ಪ್ರವಾಸಕ್ಕೆ ಅದರದ್ದೇ ಆದ ಮಹತ್ವ ಇದೆ. ಕೇವಲ ತಿರುಗಾಟದಿಂದ ಪ್ರವಾಸದ ಉದ್ದೇಶ ಈಡೇರುವುದಿಲ್ಲ. ಪ್ರವಾಸದಿಂದ ಜ್ಞಾನಾರ್ಜನೆಯೂ ಆಗಬೇಕು. ಆಗ ಅದು ಸಾರ್ಥಕವಾಗುತ್ತದೆ. ಆದ್ದರಿಂದಲೇ ನಮ್ಮಲ್ಲಿ 'ದೇಶ ಸುತ್ತಬೇಕು-ಕೋಶ ಓದಬೇಕುʼ ಎಂಬ ಗಾದೆ ಮಾತು ಉಂಟಾಗಿದೆ. ಮನುಷ್ಯನಾದವನು ದೇಶ ಸುತ್ತಬೇಕು, ಜತೆಗೆ ಬದುಕನ್ನು ಪ್ರೀತಿಸಬೇಕು, ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿವರಿಸಿದರು.
ಶಕ್ತಿ ಯೋಜನೆ ಪ್ರವಾಸೋದ್ಯಮಕ್ಕೆ ಪೂರಕ:
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಜಾರಿಗೊಳಿಸಿರುವ ಶಕ್ತಿ ಯೋಜನೆ ಮತ್ತು ಮಾಸಿಕ 2,000 ರುಪಾಯಿಗಳ ನೆರವು ನೀಡುವ ಗೃಹ ಲಕ್ಷ್ಮಿ ಯೋಜನೆಯು ಪ್ರವಾಸೋದ್ಯಮ ಅಭಿವೃದ್ಧಿಗೆ ಪುಷ್ಟಿ ನೀಡಿದೆ. ಹೋಟೆಲ್, ರೆಸ್ಟೊರೆಂಟ್ಗಳಲ್ಲಿ ವ್ಯಾಪಾರ ವೃದ್ಧಿಗೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಕ್ತಿ ಯೋಜನೆಯಿಂದಾಗಿ ಮಹಿಳೆಯರಲ್ಲಿ ವಸ್ತುಗಳು ಮತ್ತು ಸೇವೆಗಳನ್ನು ಖರೀದಿಸುವ ಅಥವಾ ಕೊಂಡುಕೊಳ್ಳುವ ಶಕ್ತಿ ವೃದ್ಧಿಸಿದೆ. ಯೋಜನೆಯ ಉದ್ದೇಶ ಕೂಡ ಇದುವೇ ಆಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಸಬಲೀಕರಣದ ಆಶಯಗಳನ್ನು ಪ್ರತಿಪಾದಿಸಿದ್ದರು. ಶಕ್ತಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಕೆಲವು ಟೀಕಿಸುತ್ತಾರೆ. ಆದರೆ ನಾನು ಟೀಕೆಗಳನ್ನು ಸ್ವಾಗತಿಸುತ್ತೇನೆ. ಏಕೆಂದರೆ ಟೀಕೆಗಳಲ್ಲಿ ಕೂಡ ತಿಳಿದುಕೊಳ್ಳುವ ವಿಚಾರಗಳಿರುತ್ತವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ವೀರೇಂದ್ರ ಹೆಗ್ಗಡೆಯವರ ಪತ್ರವನ್ನು ಸ್ಮರಿಸಿದ ಸಿಎಂ:
ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ ಬಳಿಕ ಉಂಟಾಗಿರುವ ಸಕಾರಾತ್ಮಕ ಸಾಮಾಜಿಕ, ಆರ್ಥಿಕ ಪ್ರಗತಿಯ ಬದಲಾವಣೆಯನ್ನು ಸ್ಮರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯಸಭೆಯ ಸದಸ್ಯರೂ ಆಗಿರುವ ವೀರೇಂದ್ರ ಹೆಗ್ಗಡೆಯವರು ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಧರ್ಮಸ್ಥಳ ಮತ್ತು ಇತರ ಯಾತ್ರಾ ಸ್ಥಳಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದನ್ನು ಹಾಗೂ ಸ್ಥಳೀಯ ಪ್ರವಾಸೋದ್ಯಮಕ್ಕೆ, ಹೋಟೆಲ್, ರೆಸ್ಟೊರೆಂಟ್ ಮತ್ತು ಆತಿಥ್ಯೋದ್ಯಮ ವಲಯದಲ್ಲಿ ಚಟುವಟಿಕೆಗಳು ವೃದ್ಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರದ ಮೂಲಕ ತಿಳಿಸಿದ್ದರೆಂದು ಸ್ಮರಿಸಿಕೊಂಡರು. ವೀರೇಂದ್ರ ಹೆಗ್ಗಡೆಯವರ ಪತ್ರಕ್ಕೆ ತಾವೂ ಪ್ರತಿಯಾಗಿ ಪತ್ರ ಬರೆದು, ಯೋಜನೆಯ ಅಶಯಗಳನ್ನು ವಿವರಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಸ್ಮರಿಸಿಕೊಂಡರು.
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ: ಸಿಎಂ ಭರವಸೆ
ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅತ್ಯುತ್ತಮ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಚಾಲುಕ್ಯರ ರಾಜಧಾನಿಯಾಗಿದ್ದ ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹಿರಿಯ ಸಚಿವರಾದ ಎಚ್.ಕೆ ಪಾಟೀಲ್ ನೇತೃತ್ವದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದರು.
ವಿಶ್ವೇಶ್ವರ ಭಟ್ಟರ ಸಾಹಸ ಪ್ರವೃತ್ತಿಯ ಫಲಶ್ರುತಿ:
ವಿಶ್ವೇಶ್ವರ ಭಟ್ ಅವರ ಸಾಹಸ ಪ್ರವೃತ್ತಿ ದೊಡ್ಡದು. ಅವರು ದೇಶ-ವಿದೇಶಗಳನ್ನು ಸುತ್ತಿದ್ದಾರೆ. 99 ದೇಶಗಳನ್ನು ಭೇಟಿಯಾಗಿದ್ದಾರೆ. ಒಂದೇ ದೇಶಕ್ಕೆ ಹತ್ತಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ ಹಲವಾರು ನಿದರ್ಶನಗಳೂ ಇವೆ. ನಿರಂತರವಾಗಿ ದೇಶ-ವಿದೇಶಗಳ ಪ್ರವಾಸದಿಂದ ಅಪಾರ ಅನುಭವವನ್ನು, ಜ್ಞಾನವನ್ನು ಗಳಿಸಿದ್ದಾರೆ. ಇದರ ಫಲಶ್ರುತಿಯಾಗಿ ಪ್ರವಾಸಿ ಪ್ರಪಂಚ ಇವತ್ತು ಬಿಡುಗಡೆಯಾಗುತ್ತಿದೆ. ತಮ್ಮ ಪ್ರವಾಸದ ಅನುಭವಗಳನ್ನು ಮಾಧ್ಯಮದ ಮೂಲಕ ಜನತೆಯ ಜತೆಗೆ ಹಂಚಬೇಕು ಎಂಬುದು ಅವರ ಆಶಯ. ಜೀವನದಲ್ಲಿ ಸಾಹಸ ಪ್ರವೃತ್ತಿ ಇರುವವರು ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯವಿದೆ ಎಂದು ಮುಖ್ಯಮಂತ್ರಿಯವರು ಪ್ರಶಂಸಿಸಿದರು.
ಈ ಸುದ್ದಿಯನ್ನೂ ಓದಿ | Pravasi Prapancha : ಪ್ರವಾಸೋದ್ಯಮಕ್ಕೆ ಪೂರಕವಾಗಲಿರುವ ʼಪ್ರವಾಸಿ ಪ್ರಪಂಚʼ: ವಿಶ್ವೇಶ್ವರ ಭಟ್
ನಿತ್ಯ ವಿಶ್ವವಾಣಿ ತಪ್ಪದೆ ಓದುತ್ತೇನೆ: ಸಿಎಂ ಸಿದ್ದರಾಮಯ್ಯ
ವಿಶ್ವೇಶ್ವರ ಭಟ್ಟರು ನಾಡಿನ ಹೆಸರಾಂತ ಪತ್ರಕರ್ತರು. ವಿಜಯ ಕರ್ನಾಟಕ, ಕನ್ನಡಪ್ರಭ, ಸುವರ್ಣ ಸೇರಿದಂತೆ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯನ್ನು, ಜವಾಬ್ದಾರಿಗಳನ್ನು ವಹಿಸಿ, ಆಯಾ ಸಂಸ್ಥೆಗಳನ್ನು ಬೆಳೆಸಿದವರು. ತಮ್ಮದೇ ವಿಶ್ವವಾಣಿ ಪತ್ರಿಕೆಯನ್ನು ಹೊಸ ಎತ್ತರಕ್ಕೆ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕೇವಲ ಪತ್ರಕರ್ತರಾಗಿರದೆ, ಅಂಕಣ ಬರಹಗಳನ್ನು ನಿರಂತರವಾಗಿ ಬರೆದಿದ್ದಾರೆ. 97 ಪುಸ್ತಕಗಳನ್ನೂ ಬರೆದಿರುವ ಲೇಖಕರೂ ಆಗಿದ್ದಾರೆ. ವಿಶ್ವವಾಣಿ ಪತ್ರಿಕೆಯನ್ನು 2016ರಲ್ಲಿ ನಾನೇ ಲೋಕಾರ್ಪಣೆ ಮಾಡಿದ್ದೆ. ಅಂದಿನಿಂದ ಇಂದಿನವರೆಗೂ ಪ್ರತಿ ದಿನ ತಪ್ಪದೆ ವಿಶ್ವವಾಣಿ ಪತ್ರಿಕೆಯನ್ನು ಓದುತ್ತೇನೆ. ನಿತ್ಯ ಒಂದು ಗಂಟೆಗಳ ಕಾಲ ಪತ್ರಿಕೆಗಳನ್ನು ಓದಲು ಸಮಯವನ್ನು ಮೀಸಲಿಡುತ್ತೇನೆ. ಪಾಟೀಲ ಪುಟ್ಟಪ್ಪನವರು ನಡೆಸುತ್ತಿದ್ದ ಹಾಗೂ ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ವಿಶ್ವವಾಣಿ ದಿನಪತ್ರಿಕೆಯನ್ನು ಖರೀದಿಸಿ, ಅದನ್ನು 6 ಆವೃತ್ತಿಗಳಲ್ಲಿ ಹೊಸ ಎತ್ತರಕ್ಕೆ ಬೆಳೆಸಿದ ಯಶಸ್ಸು ವಿಶ್ವೇಶ್ವರ ಭಟ್ ಅವರಿಗೆ ಸಲ್ಲುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಮೆಚ್ಚುಗೆ ವ್ಯಕ್ತಪಡಿಸಿದರು.