ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinnaswamy Stadium Rampade: ಆರ್‌ಸಿಬಿ ಹುಚ್ಚು: ಪೋಷಕರ ಕನಸಿಗೆ ಕೊಳ್ಳಿ

ಆರ್‌ಸಿಬಿ ತಂಡದ ಮೇಲಿನ ಅತಿಯಾದ ಕ್ರೇಜ್ 11 ಅಭಿಮಾನಿಗಳನ್ನು ಬಲಿ ಪಡೆದಿದೆ. ಕಪ್ ಗೆದ್ದ ನೆಚ್ಚಿನ ತಂಡ, ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಬಂದಿದ್ದವರು ದುರಂತ ಅಂತ್ಯ ಕಂಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಿಂದ ಉಜ್ವಲ ಭವಿಷ್ಯ ಕಾಣಬೇಕಿದ್ದ 11 ಅರಳುವ ಹಂತದಲ್ಲಿದ್ದ ಹೂವುಗಳು ಮುದುಡಿವೆ. ದುರಂತದಲ್ಲಿ ಯುವಕ-ಯುವತಿಯರು ಸೇರಿ 11 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 47ಕ್ಕೂ ಹೆಚ್ಚು ಮಂದಿಗೆ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಾವನ್ನಪ್ಪಿದ ಒಬ್ಬೊಬ್ಬರ ಹಿನ್ನೆಲೆ ಯೂ ಕರುಣಾಜನಕವಾಗಿದೆ.

ಆರ್‌ಸಿಬಿ ಹುಚ್ಚು: ಪೋಷಕರ ಕನಸಿಗೆ ಕೊಳ್ಳಿ

ಮಗನ ಪಾರ್ಥಿವ ಶರೀರದ ಮುಂದೆ ಕೂತು ಬಿಕ್ಕಿಬಿಕ್ಕಿ ಅತ್ತ ಭೂಮಿಕ್ ತಂದೆ.

Profile Ashok Nayak Jun 6, 2025 10:21 AM

ಕಾಲ್ತುಳಿತ ದುರಂತದಲ್ಲಿ ಅಪ್ಪಚ್ಚಿಯಾದ 11 ಅರಳುವ ಹೂವುಗಳು

ಒಬ್ಬೊಬ್ಬರ ಕಥೆ ಕರುಣಾಜನಕ

100 ಕೋಟಿ ರು. ಆಸ್ತಿ ಅನುಭವಿಸಲು ಮಗ ಇಲ್ಲ

ಹಾಸನ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿದ ದುರಂತದಲ್ಲಿ ಹಾಸನದ ಬೇಲೂರು ತಾಲೂಕಿನ ಭೂಮಿಕ್ (20) ಮೃತಪಟ್ಟಿದ್ದಾನೆ. ಮನಗ ಪಾರ್ಥಿವ ಶರೀರದ ಮುಂದೆ ಕಣ್ಣೀರು ಹಾಕಿದ ಮೃತ ಭೂಮಿಕ್ ತಂದೆ 100 ಕೋಟಿ ರು. ಆಸ್ತಿ ಮಾಡಿದ್ದೀನಿ, ಆರ್ ಸಿಬಿ ಟೀಂ ನೋಡಲು ಹೋಗಿ ಒಬ್ಬನೇ ಮಗ ಬೀದಿ ಹೆಣವಾಗಿದ್ದಾನೆ. ಈಗ ಅದನ್ನೆಲ್ಲ ಅವನು ಹೊತ್ಕೊಂಡು ಹೋದ್ನಾ? ಅವನು ಹೆಂಗೆ ಇದ್ದನೋ ಹಾಗೆ ಅವನನ್ನು ಕಳಿಸಿಕೊಡ್ತೀನಿ. ನಾನು ಬೇರೆಯವರಿಗೋಸ್ಕರ ಬದುಕಿಲ್ಲ, ಅವನಿಗೋಸ್ಕರ ಬದುಕಿದ್ದೀನಿ. ನನಗೆ ಯಾರಿಂದಲೂ ಸಲಹೆ ಕೇಳೋದು ಬೇಕಾಗಿಲ್ಲ. ಅವನು ಯಾರ ಮಾತನ್ನು ಕೇಳುತ್ತಿರಲಿಲ್ಲ, ಈಗಲೂ ನಾನು ಕೂಡ ಯಾರ ಮಾತನ್ನು ಕೇಳೋದಿಲ್ಲ ಎಂದು ಕಣ್ಣೀರು ಹಾಕಿದರು.

ಮಗನಿಗೆ ಬಂತು ಅಮ್ಮನ ಕೊನೆ ಕರೆ

ಯಾದಗಿರಿ: ತುತ್ತಿನ ಚೀಲ ತುಂಬಿಸಲು ಯಾದಗಿರಿಯಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಯಾದಗಿರಿಯ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಸಣ್ಣೂರಿನಲ್ಲಿ ಸಿಮೆಂಟ್ ಇಟ್ಟಿಗೆ ತಯಾರಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ತಿಮ್ಮಮ್ಮ ಚಂದಪ್ಪ ಕುಂಬಾರ ದಂಪತಿ ಪುತ್ರ ಶಿವು (17) ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ್ದಾನೆ. ಮೂವರು ಮಕ್ಕಳಲ್ಲಿ ಮೃತ ಶಿವು ಕೂಡ ಒಬ್ಬನು. ಕೂಲಿ ಕೆಲಸ ಮಾಡಿದರು ಮಗನ ವಿದ್ಯಾಭ್ಯಾಸಕ್ಕೆ ಕೊರತೆ ಮಾಡಿರಲಿಲ್ಲ. ಯಲಹಂಕದ ಸರಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಆರ್ಟ್ಸ್ ಓದುತ್ತಿದ್ದ ಶಿವು. ಮಧ್ಯಾಹ್ನ ಅಮ್ಮನಿಗೆ ಹೇಳಿ ಆರ್‌ಸಿಬಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ. ದುರಂತದ‌ ಕೆಲ ಗಂಟೆ ಮುಂಚೆ ಮಗನಿಗೆ ಕರೆ ಮಾಡಿದ್ದ ತಾಯಿ ಜೋಪಾನ ಮಗನೇ ಎಂದು ಹೇಳಿದ್ದರು. ಸಂಜೆ ಯಾದರು ಮನೆಗೆ ಮಗ ಬರಲಿಲ್ಲ ಎಂದು ತಾಯಿ ಕರೆ ಮಾಡಿದಾಗ ಶಿವು ಜೇಬಿನಲ್ಲಿದ್ದ ಮೊಬೈಲ್ ಸ್ವೀಕರಿಸಿದ ಆಸ್ಪತ್ರೆ ಸಿಬ್ಬಂದಿ ನಿಮ್ಮ ಮಗನಿಗೆ ಆಕ್ಸಿಡೆಂಟ್ ಆಗಿದೆ ಬೌರಿಂಗ್ ಆಸ್ಪತೆಗೆ ಬನ್ನಿ ಎಂದಿದ್ದಾರೆ. ಕೂಲಿಗಾಗಿ ಊರು ತೊರೆದು ಬೆಂಗಳೂರು ಸೇರಿದ್ದ ಕುಟುಂಬಕ್ಕೆ ಮಗನ ಸಾವು ಆಘಾತ ತಂದಿದೆ.

ಇದನ್ನೂ ಓದಿ: IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್‌ಸಿಬಿ ಪ್ರತಿಕ್ರಿಯೆ!

ನನ್ನ ಮೊಮ್ಮಗಳ ಸಾವಿಗೆ ಸರಕಾರವೇ ನೇರ ಹೊಣೆ: ದಿವ್ಯಾಂಶಿ ಅಜ್ಜ ಕಿಡಿ

ಬೆಂಗಳೂರು: ನನ್ನ ಮೊಮ್ಮಗಳ ಸಾವಿಗೆ ಸರಕಾರವೇ ನೇರ ಹೊಣೆ ಎಂದು ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಮೃತಪಟ್ಟ ಯಲಹಂಕದ ದಿವ್ಯಾಂಶಿಯ ಅಜ್ಜ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ೪:೩೦ಕ್ಕೆ ಕರೆ ಮಾಡಿ ದಿವ್ಯಾಂಶಿ ಮೃತಪಟ್ಟ ಮಾಹಿತಿ ನೀಡಿದರು. ನನ್ನ ಮೊಮ್ಮಗಳ ಸಾವಿಗೆ ಸರಕಾರವೇ ನೇರ ಹೊಣೆ. ಯಾವುದೇ ಪೊಲೀಸ್ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೇಟ್ ನಂಬರ್ 15ರ ಒಳಗೆ ಹೋದಾಗ ಈ ಘಟನೆ ನಡೆದಿದೆ. ಬಿದ್ದ ಮೊಮ್ಮಗಳನ್ನು ಜತೆಗೆ ಇದ್ದವರೇ ಆಟೋದಲ್ಲಿ ಕರೆದುಕೊಂಡು ಹೋದರು. ಸರಕಾರ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ತಾಯಿ, ಚಿಕ್ಕಮ್ಮ ಜತೆಗೆ ಹೋಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ೯ನೇ ತರಗತಿ ಓದುತ್ತಿದ್ದ ದಿವ್ಯಾಂಶಿ ಕಾಲ್ತುಳಿತದ ವೇಳೆ ಅಸ್ವಸ್ಥಗೊಂಡು ಮೃತಪಟ್ಟಿzಳೆ. ಸದ್ಯ ದಿವ್ಯಾಂಶಿ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

ಕನ್ಯೆ ನೋಡಿ ಬಂದಿದ್ದ

ಮಂಡ್ಯ: ಪಾಂಡವಪುರದಲ್ಲಿ ಕನ್ಯೆ ನೋಡಿ, ನೆಚ್ಚಿನ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಸಿವಿಲ್ ಎಂಜಿನಿಯರ್ ಪೂರ್ಣಚಂದ್ರ(೨೬) ದುರಂತ ಅಂತ್ಯ ಅಂತ್ಯಕಂಡಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟ ಕೆ.ಆರ್ .ಪೇಟೆಯ ರಾಯಸಮುದ್ರ ಪೂರ್ಣಚಂದ್ರ ಮೈಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ. ಪಾಂಡವಪುರಕ್ಕೆ ಹುಡುಗಿ ನೋಡಲು ಬಂದಿದ್ದವ ಆರ್‌ಸಿಬಿ ಸಂಭ್ರಮಾ ಚರಣೆ ಸುದ್ದಿ ಕೇಳಿ ಬೆಂಗಳೂರಿಗೆ ಬಂದಿದ್ದ.

rampade 2

ಮಗಳ ಮದುವೆ ಕನಸು ಕಂಡಿದ್ದ ಆಸೆ ನುಚ್ಚುನೂರು

ಕೋಲಾರ: 18 ವರ್ಷಗಳ ಬಳಿಕ ಕಪ್ ಗೆದ್ದ ನೆಚ್ಚಿನ ತಂಡವನ್ನು ನೋಡಲು ಬಂದಿದ್ದ ಕೋಲಾರದ ಕೆಜಿಎಫ್ ತಾಲೂಕಿನ ಬಡಕಮಾರನಹಳ್ಳಿಯ ಸಹನಾ ದುರಂತ ಅಂತ್ಯ ಕಂಡಿದ್ದಾರೆ. ಟೆಕ್ಕಿ‌ ಸಹನಾಗೆ ಪಂಚಪ್ರಾಣವಾಗಿದ್ದ ಆರ್ ಸಿಬಿ. ಅದೇ ಆರ್‌ಸಿಬಿ ಸಂಭ್ರಮವೇ ಬಾಳಿ ಬದುಕಬೇಕಿದ್ದ ಸಹನಾ ಚಿತೆಗೆ ಕೊಳ್ಳಿ ಹಿಡಿಸಿದೆ. ಶಿಕ್ಷಕ ದಂಪತಿಯಾದ ಸುರೇಶ್ ಬಾಬು ಹಾಗೂ ಮಂಜುಳಾ ಮೊದಲನೇ ಪುತ್ರಿ ಸಹನಾ ಕಾಲ್ತುಳಿತದ ದುರಂತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ ವೇರ್ ಎಂಜಿನಿಯರ್ ಆಗಿದ್ದ ಸಹನಾಗೆ ಪೋಷಕರು ಕೆಲ ತಿಂಗಳಲ್ಲೇ ಮದುವೆ ಮಾಡುವ ಯೋಚನೆಯನ್ನು ಮಾಡಿದ್ದರು.

ಆದರೆ ಅದೆಲ್ಲವನ್ನು ಜವರಾಯ ಕಸಿದುಕೊಂಡಿದ್ದಾನೆ. ಮದುವೆ ಕೂಡ ಮಾಡಬೇಕು ಎಂದು ಕೊಂಡಿದ್ದೆವು. ನಮಗೆ ತಿಳಿಸಿ ಆರ್ ಸಿಬಿ ವಿಜಯೋತ್ಸವಕ್ಕೆ ತೆರಳಿದ್ದಳು. ಈ ಮೊದಲು ಆರ್‌ಸಿಬಿ ಮ್ಯಾಚ್ ನೋಡೋದಕ್ಕೆ ಹೋಗಿದ್ದಳು. ಆದರೆ ಮಗಳ ಸಾವಿನ ಸುದ್ದಿ ಕೇಳಿ ಏನು ತೋಚದಂತಾ ಗಿದೆ ಎಂದು ಪೋಷಕರು ಅಳಲು ತೋಡಿ ಕೊಂಡಿದ್ದಾರೆ. ಬುಡಕಮಾರನಹಳ್ಳಿಯ ತೋಟದ ಮನೆಯ ಆವರಣದಲ್ಲಿ ಸಹನಾ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೊಹ್ಲಿಯ ಅಭಿಮಾನಿ ಚಿನ್ಮಯಿ

ಪುತ್ತೂರು: ಸೂಪರ್ ಡ್ಯಾನ್ಸರ್, ಓದಿನಲ್ಲೂ ಪ್ರತಿಭಾವಂತೆ, ಬಾಸ್ಕೆಟ್ ಬಾಲ್ ಆಟಗಾರ್ತಿ ೨೦ ವರ್ಷದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಚಿನ್ಮಯಿ ಶೆಟ್ಟಿ ಕಾಲ್ತುಳಿತದಿಂದ ಅಸುನೀಗಿದ್ದಾರೆ. ಬೆಂಗಳೂರಿನ ಕನ ಕಪುರ ರಸ್ತೆಯ ಯಲಚನಹಳ್ಳಿ ಜ್ಯೋತಿ ಎಂಜಿನಿಯಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಬೆಂಗಳೂರಿನ ಯಕ್ಷತರಂಗ ತಂಡದ ಅತ್ಯುತ್ತಮ ಯಕ್ಷಗಾನ ಕಲಾವಿದೆಯಾಗಿದ್ದರು. ಈಕೆಗೆ ಆರ್‌ಸಿಬಿ ಎಂದರೆ ಪಂಚಪ್ರಾಣ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ.. ಬೆಂಗಳೂರಿನಲ್ಲಿ ನಡೆದ ಆರ್‌ಬಿಯ ಹಲವು ಪಂದ್ಯಗಳನ್ನು ಕ್ರೀಡಾಂಗಣಕ್ಕೆ ತೆರಳಿ ವೀಕ್ಷಣೆ ಮಾಡಿದ್ದರು. ಕ್ರೀಡಾಂಗಣದಲ್ಲಿ ಸಂಭ್ರಮ ನೋಡಲು ಹೋಗಿದ್ದ ಚಿನ್ನಯಿ ಶೆಟ್ಟಿ ಉಸಿರು ಚೆಲ್ಲಿದ್ದಾರೆ.

ಗಂಡನ ಜತೆ ಬಂದ ಪತ್ನಿ ದುರಂತ ಅಂತ್ಯ

ಕಾರವಾರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಉತ್ತರ ಕನ್ನಡ ಜಿಯ ಸಿzಪುರ ನಗರದ ಅಕ್ಷತಾ (27) ದಾರುಣವಾಗಿ ಸಾವನ್ನಪ್ಪಿದ್ದಾರೆ. ನೂರು ವರುಷ ನಿನ್ನ ಜತೆ ಇರ್ತಿನಿ ಎಂದು ಗಂಡನ ಜತೆ ಒಂದುವರೆ ವರ್ಷದ ಹಿಂದೆ ಸಪ್ತಪದಿ ತುಳಿದಿದ್ದ ಅಕ್ಷತಾ ಅರ್ಧಕ್ಕೆ ಬಾಳ ಪಯಣ ಮುಗಿಸಿದ್ದಾರೆ. ಮೂಲತಃ ಅಕ್ಷತಾ ಮಂಗಳೂರಿನ ಮೂಲ್ಕಿಯವರಾಗಿದ್ದು ಸಿಎ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದರು. ಒಂದೂವರೆ ವರ್ಷದ ಹಿಂದೆ ಎಂಜಿನಿಯರ್ ಆಗಿರುವ ಸಿzಪುರ ನಗರದ ಆಶಯ್ ಅವರೊಂದಿಗೆ ವಿವಾಹವಾಗಿದ್ದರು. ಗಂಡ ಹೆಂಡತಿ ಇಬ್ಬರೂ ಆರ್‌ಸಿಬಿ ಅಭಿಮಾನಿಗಳಾಗಿದ್ದರು.

ಹೀಗಾಗಿ ಬುಧವಾರ ಮಧ್ಯಾಹ್ನ ಕಚೇರಿಗೆ ರಜೆ ಹಾಕಿ, ಇಬ್ಬರೂ ಆರ್‌ಸಿಬಿ ಟೀಶರ್ಟ್ ಧರಿಸಿ ರೋಡ್ ಶೋಗೆ ಭಾಗವಹಿಸಲು ತೆರಳಿದ್ದರು. ರೋಡ್ ಶೋ ಕ್ಯಾನ್ಸಲ್ ಆಗಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂ ಗಣಕ್ಕೆ ಇಬ್ಬರೂ ತೆರಳಿದ್ದರು. ಕಾಲ್ತುಳಿತ ಉಂಟಾದಾಗ ಅಕ್ಷತಾ, ಆಶಯ್‌ನಿಂದ ಬೇರ್ಪಟ್ಟಿದ್ದರು. ಈ ವೇಳೆ ಇಬ್ಬರೂ ಕಾಲ್ತುಳಿತಕ್ಕೊಳಗಾದರೂ ಓರ್ವ ಮಹಿಳೆ, ಆಶಯ್‌ನನ್ನು ರಕ್ಷಣೆ ಮಾಡಿದ್ದರು. ಆದರೆ ಅಕ್ಷತಾ ಜನರ ಕಾಲಡಿ ಸಿಕ್ಕಿ ಅಲ್ಲಿಯೇ ಮೃತಪಟ್ಟಿದ್ದಾರೆ. ಪತಿಯ ಊರು ಉತ್ತರ ಕನ್ನಡದ ಶಿರಸಿಯಲ್ಲಿ ಅಕ್ಷತಾ ಅಂತ್ಯಕ್ರಿಯೆ ನೆರವೇರಿದೆ.

ಹಣ ಬೇಡ ಮಗನ ಜೀವ ತಂದು ಕೊಡಿ: ತಂದೆ ಅಳಲು

ತುಮಕೂರು: ‘ಪಾನಿಪುರಿ ವ್ಯಾಪಾರ ಮಾಡಿ ಮಗನ ಭವಿಷ್ಯದಬಗ್ಗೆ ಕನಸು ಕಂಡಿದ್ದೆ ನನ್ನ ಕನಸುಗಳೆಲ್ಲ ನುಚ್ಚು ನೂರಾಗಿದೆ. ನನಗೆ ಹಣ ಬೇಡ. ಮಗನನ್ನು ತಂದು ಕೊಡಿ, ತಿನ್ನುವ ತುತ್ತನ್ನೂ ನನಗೆ ಹಾಕಿ ಹೋದ. ಅದೇ ಕೊನೆಯ ತುತ್ತಾಯಿತು. ನಂತರ ಬರಲೇ ಇಲ್ಲ’ ಎಂದು ಬೆಂಗಳೂರಿನ ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲು ತುಳಿತಕ್ಕೆ ಒಳಗಾಗಿ ಮೃತಪಟ್ಟ ಮನೋಜ್ ತಂದೆ ದೇವರಾಜ್ ಅವರ ನೋವಿನ ನುಡಿಗಳಿವು. ಟಿವಿಯಲ್ಲಿ ಬರುತ್ತಿದ್ದ ವಿಚಾರ ನೋಡಿ ಮಗನಿಗೆ ಪೋನ್ ಮಾಡಿದೆ. ಆದರೆ ಮಗನ ಫೋನ್ ಬೇರೊಬ್ಬರ ಬಳಿಯಿತ್ತು. ನಂತರ ಆತನ ಸ್ನೇಹಿತರಿಗೆ ಫೋನ್ ಮಾಡಿದೆ. ಅವರು ನಾನು ಬೇರೆ ಕಡೆ ಇದ್ದೇವೆ. ಮನೋಜ್ ಬೇರೆ ಕಡೆ ಇದ್ದಾನೆ ಎಂದರು. ನಂತರ ಪದೇ ಪದೇ ಮಗನ ನಂಬರ್‌ಗೆ ಕರೆ ಮಾಡಿದೆ. ಸ್ವಲ್ಪ ಸಮಯದಲ್ಲಿ ಪೊಲೀಸರು ಕರೆ ಮಾಡಿ ಬರಲು ಹೇಳಿದರು ಎಂದು ದೇವರಾಜ್ ತಮ್ಮ ದುಖಃವನ್ನು ಹೊರ ಹಾಕಿದರು.

ಮನೆಗೆ ಬೆಳಕಾಗಬೇಕಿದ್ದ ಪ್ರತಿಭಾವಂತ ಶ್ರವಣ್

ಚಿಕ್ಕಬಳ್ಳಾಪುರ: ಆರ್‌ಸಿಬಿ ತಂಡದ ವಿಜಯೋತ್ಸವ ವೀಕ್ಷಣೆಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಗ್ರಾಮದ ದಂತವೈದ್ಯ ವಿದ್ಯಾರ್ಥಿ ಕೆ.ಟಿ. ಶ್ರವಣ್ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಪ್ರತಿಭಾವಂತ ಆಗಿದ ಶ್ರವಣ್, ಬೆಂಗಳೂರಿನ ಡಾ.ಅಂಬೇಡ್ಕರ್ ಡೆಂಟಲ್ ಕಾಲೇಜಿಗೆ ಉಚಿತ ಪ್ರವೇಶ ಪಡೆದು ಎರಡನೇ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿದ್ದ. ಸ್ನೇಹಿತರ ಜತೆ ಆರ್‌ಸಿಬಿ ಸಂಭ್ರಮಾಚರಣೆ ನೋಡಲು ಬಂದು ಕಾಲ್ತುಳಿತ ದುರಂತದಲ್ಲಿ ಉಸಿರು ಚೆಲ್ಲಿದ್ದಾನೆ. ಕ್ಷೇತ್ರದ ಶಾಸಕ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್ ಕೂಡ ಆಸ್ಪತ್ರೆಗೆ ಶ್ರವಣ್ ತೆರಳಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹ ಗುರುವಾರ ಕುರಟಹಳ್ಳಿ ಗ್ರಾಮಕ್ಕೆ ತರಲಾಗಿದ್ದು ಸ್ವಗ್ರಾಮ ತೋಟದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು.

10 ದಿನದಲ್ಲೇ ಅಜ್ಜಿ-ಮೊಮ್ಮಗ ಸಾವು: ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದ ಪ್ರಜ್ವಲ್ (25) ಭಾರೀ ಕಾಲ್ತುಳಿಕ್ಕೆ ಮೃತಪಟ್ಟಿದ್ದಾರೆ. ೧೦ ದಿನಗಳ ಹಿಂದೆ ಪ್ರಜ್ವಲ್ ಅಜ್ಜಿ ಅನಾರೋಗ್ಯದಿಂದ ತೀರಿಕೊಂಡಿದ್ದರು. ಅದೇ ದುಖಃದಿಂದ ಹೊರಬಬೇಕಿದ್ದ ಕುಟುಂಬ ಅಳೆತ್ತರಕ್ಕೆ ಬೆಳೆದ 25 ವರ್ಷದ ಮಗನನ್ನು ಕಳೆದುಕೊಂಡು ಅತೀವ ದುಖಃದಲ್ಲಿದ್ದಾರೆ.

ಟೇಬಲ್ ಮೇಲೆ ಇನ್ನೂ ಇದೆ ಲ್ಯಾಪ್‌ಟಾಪ್... ದೇವಿ ಇಲ್ಲ

ಬೆಂಗಳೂರು: ಬೆಂಗಳೂರಿ ಖಾಸಗಿ ಕಂಪನಿಯಲ್ಲಿ ಟೆಕ್ಕಿ ಆಗಿದ್ದ ತಮಿಳು ಮೂಲದ ದೇವಿ ಬೆಂಗಳೂರಿನಲ್ಲೇ ಓದು ಮುಗಿಸಿ ಇಲ್ಲಿಯೇ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿ. ಬೆಂಗಳೂರಿನಲ್ಲಿ ನಡೆದಿದ್ದ ಎಲ್ಲ ಪಂದ್ಯಗಳನ್ನು ಕ್ರೀಡಾಂಗಣದಲ್ಲೇ ನೋಡಿದ್ದರಂತೆ. ಆರ್‌ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಹೋಗಲು ಮ್ಯಾನೇಜರ್ ಬಳಿ ಕಾಡಿಬೇಡಿ ರಜೆ ಗಿಟ್ಟಿಸಿಕೊಂಡಿದ್ದರು. ಬುಧವಾರ ಮಧ್ಯಾಹ್ನ ೨.೩೦ ಸುಮಾರಿಗೆ ದೇವಿ ರಜೆಗೆ ಮ್ಯಾನೇಜರ್ ಅನುಮತಿ ಕೊಟ್ಟಿದ್ದರು.

ಮ್ಯಾನೇಜರ್ ರಜೆ ಕೊಟ್ಟಿದ್ದೆ ತಡ ಬ್ಯಾಗ್ ಹಾಗೂ ಲ್ಯಾಪ್‌ಟಾಪ್ ಅನ್ನು ಟೇಬಲ್ ಮೇಲೆಯೇ ಬಿಟ್ಟು ಕ್ರೀಡಾಂಗಣದತ್ತ ಹೊರಟು ಹೋಗಿದ್ದಾರೆ. ಕ್ರೀಡಾಂಗಣದ ಗೇಟ್‌ನಲ್ಲಿ ಪ್ರವೇಶ ಟಿಕೆಟ್ ಕೊಡುತ್ತಾರೆಂದು ಗೇಟ್ ಬಳಿ ಹೋಗಿದ್ದ ದೇವಿ ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಕಚೇರಿಯ ಟೇಬಲ್ ಮೇಲೆ ದೇವಿ ಹೊರಡುವ ವೇಳೆ ಇಟ್ಟಿದ ಲ್ಯಾಪ್‌ಟಾಪ್, ಬ್ಯಾಗ್ ಅಲ್ಲಿಯೇ ಇದೆ. ಆದರೆ ದೇವಿ ಮಾತ್ರ ಇಲ್ಲ.

*

ಬೆಂಗಳೂರಿನಲ್ಲಿ ಆರ್ ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ರಾಜ್ಯ ಸರಕಾನೀ ಚತನದ ಪರಮಾವಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಜನರು ಹಾಗೂ ಕಾಲ್ತುಳಿತದಲ್ಲಿ ಸಾವಿಗೀಡಾದವರ ಕುಟುಂಬದವರ ಕ್ಷಮೆ ಕೇಳಬೇಕು. ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

-ಆರಗ ಜ್ಞಾನೇಂದ್ರ, ಶಾಸಕ

*

ಆರ್‌ಸಿಬಿ ತಂಡಕ್ಕೆ ಸನ್ಮಾನ ಸಮಾರಂಭ ಆಯೋಜಿಸಬೇಕು ಎಂದು ಹೇಳುತ್ತಿದ್ದ ಬಿಜೆಪಿ ಈಗ ನಾಟಕ ಮಾಡುತ್ತಿದೆ. ಕಾರ್ಯಕ್ರಮ ಆಯೋಜನೆಯಲ್ಲಿ ತಪ್ಪಾಗಿರುವುದು ಸತ್ಯ. ಯಾರು ತಪ್ಪು ಮಾಡಿzರೆ ಎಂಬುದನ್ನು ಪತ್ತೆ ಹಚ್ಚಲೆಂದೇ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶ ನೀಡಲಾಗಿದ್ದು, ವಿಚಾರಣಾಧಿಕಾರಿಯನ್ನೂ ನೇಮಿಸಲಾಗಿದೆ. ಇಂಥವರೇ ತಪ್ಪಿತಸ್ಥರೆಂದು ಈಗಲೇ ನಿರ್ಧಾರಕ್ಕೆ ಬರಲಾಗದು.

-ಡಾ.ಯತೀಂದ್ರ ಸಿದ್ದರಾಮಯ್ಯ,

ವಿಧಾನಪರಿಷತ್ ಸದಸ್ಯ

*

ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಗೆಲುವನ್ನು ಆಚರಿಸಲು ಬಂದಿದ್ದ ಅಭಿಮಾನಿಗಳ ದುರಂತ ಸಾವು ಮತ್ತು ಗಾಯಗಳಾಗಿರು ವುದನ್ನು ತಿಳಿದು ಆಘಾತವಾಗಿದೆ. ಆರ್‌ಸಿಬಿ ತಂಡದ ಅಪಾರ ಬೆಂಬಲ, ಜನರ ಆಚರಣೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ ಸರಕಾರಕ್ಕೆ ಗೊತ್ತಿದ್ದರೂ ಸರಿಯಾಗಿ ನಿಭಾಯಿಸದೇ, ಪೂರ್ವ ಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ರೀತಿಯ ಘಟನೆ ನಡೆದಿದೆ.

- ಯದುವೀರ್‌ಒಡೆಯರ್, ಸಂಸದ

*

ಲಕ್ಷಾಂತರ ಅಭಿಮಾನಿಗಳು ಬಂದಿದ್ದರಿಂದ ಎಡವಟ್ಟಾಗಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಜನರು ಆರ್‌ಸಿಬಿ ತಂಡವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಇದ್ದರು. ಈ ಹಿನ್ನೆಲೆ ಸರಕಾರ ಮುನ್ನೆಚ್ಚರಿಕೆ ವಹಿಸಿದ್ದರೂ ಲಕ್ಷಾಂತರ ಅಭಿಮಾನಿಗಳು ಬಂದಿದ್ದರಿಂದ ಎಡವಟ್ಟಾಗಿದೆ. -ಪ್ರದೀಪ್ ಈಶ್ವರ್, ಶಾಸಕ