Bidar News: ಹುಬ್ಬಳ್ಳಿ ಪ್ರಕರಣ ಬೆನ್ನಲ್ಲೇ ಬೀದರ್ನಲ್ಲಿ ಬಾಲಕಿ ಕಿಡ್ನ್ಯಾಪ್ಗೆ ಯತ್ನ
Bidar News: ಬೀದರ್ನ ವಿದ್ಯಾನಗರ ಬಡಾವಣೆಯ 11ನೇ ಕ್ರಾಸ್ನಲ್ಲಿರುವ ಸತೀಶ್ ಬಕ್ಕಾಚೌಡೇಕರ ಎಂಬುವವರ ಮನೆ ಬಳಿ ಘಟನೆ ನಡೆದಿದೆ. ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಾಗ, ಯುವಕನೊಬ್ಬ ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದಾನೆ. ಈ ವೇಳೆ ಪೋಷಕರು ಹೊರಬರುತ್ತಿದ್ದಂತೆ ಬೈಕ್ ಸಮೇತ ಯುವಕ ಪರಾರಿಯಾಗಿದ್ದಾನೆ.


ಬೀದರ್: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆ ಪ್ರಕರಣದ ಬೆನ್ನಲ್ಲೇ ಬೀದರ್ನಲ್ಲಿ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಲಾಗಿತ್ತು. ಇದೀಗ ಬೀದರ್ನಲ್ಲಿ ಗೇಟ್ ಬಳಿ ಆಡುತ್ತಿದ್ದ ಬಾಲಕಿಯನ್ನು ಯುವಕನೊಬ್ಬ ಅಪಹರಿಸಲು ಯತ್ನಿಸಿದ್ದು, ಈ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದೆ. ಬೀದರ್ನ ವಿದ್ಯಾನಗರ ಬಡಾವಣೆಯ 11ನೇ ಕ್ರಾಸ್ನಲ್ಲಿರುವ ಸತೀಶ್ ಬಕ್ಕಾಚೌಡೇಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಮನೆ ಮುಂದೆ ಬಾಲಕಿ ಆಟವಾಡುತ್ತಿದ್ದಾಗ, ಯುವಕನೊಬ್ಬ ಮನೆ ಮುಂದೆ ಬೈಕ್ ನಿಲ್ಲಿಸಿ, ಸ್ವಲ್ಪ ಹೊತ್ತು ನೋಡಿಕೊಂಡು ನಿಂತಿದ್ದಾನೆ. ಬಳಿಕ ಗೇಟ್ ಒಳಗೆ ಹೋಗಿ ಅಲ್ಲೇ ಆಟ ಆಡುತ್ತಿದ್ದ ಇಬ್ಬರು ಬಾಲಕಿಯರ ಪೈಕಿ ಒಬ್ಬಳನ್ನು ಅಪಹರಿಸಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಪೋಷಕರು ಹೊರಬರುತ್ತಿದ್ದಂತೆ ಬೈಕ್ ಸಮೇತ ಯುವಕ ಪರಾರಿಯಾಗಿದ್ದಾನೆ.
ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನ ಅಸಭ್ಯ ವರ್ತನೆಯ ಬಗ್ಗೆ ಬಾಲಕಿಯರು ಪೋಷಕರಿಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Siddaganga Mutt: ಸಿದ್ಧಗಂಗಾ ಮಠದಲ್ಲಿ ಬೃಹತ್ ಹೆಬ್ಬಾವು ಪತ್ತೆ!
ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ; ಎನ್ಕೌಂಟರ್ನಲ್ಲಿ ಬಿಹಾರದ ಆರೋಪಿ ಹತ್ಯೆ!
ಹುಬ್ಬಳ್ಳಿ: ನಗರದಲ್ಲಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ
(Hubli Girl Murder) ಮಾಡಿದ್ದ ಬಿಹಾರ ಮೂಲದ ಆರೋಪಿ, ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಐದು ವರ್ಷದ ಬಾಲಕಿಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಪೊಲೀಸರು ಆರೋಪಿಯ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಿದ್ದರು. ಆರೋಪಿ ಬಿಹಾರ ಮೂಲದ ರಿತೇಶ್ ಕುಮಾರ್ ಇರುವ ಜಾಗ ಪತ್ತೆಯಾಗಿದ್ದರಿಂದ ಆತನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಆದರೆ, ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕಾಲು ಮತ್ತು ಎದೆಯ ಭಾಗಕ್ಕೆ ಬುಲೆಟ್ ತಗುಲಿದ್ದರಿಂದ ಆರೋಪಿ ಕುಸಿದುಬಿದ್ದಿದ್ದಾನೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಬಾಲಕಿಯ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿತ್ತು. ಬಾಲಕಿ ತಾಯಿ ಮನೆಯೊಳಗೆ ಕೆಲಸ ಮಾಡುತ್ತಿದ್ದು ಹೊರೆಗೆ ಮಗು ಆಟವಾಡುತ್ತಿತ್ತು. ಇದನ್ನು ಗಮನಿಸಿದ ರಿತೇಶ್ ಕುಮಾರ್ ಚಾಕೋಲೆಟ್ ಕೊಡುವ ಆಸೆ ತೋರಿಸಿ ಬಾಲಕಿಯನ್ನು ಅಪಹರಿಸಿದ್ದ. ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಗಳು ಕಾಣೆಯಾಗಿದ್ದಾಳೆಂದು ತಾಯಿಗೆ ತಿಳಿದಾಗ, ಆಕೆ ಸ್ಥಳೀಯರೊಂದಿಗೆ ಸೇರಿ ಆಕೆಗಾಗಿ ಹುಡುಕಾಟ ಆರಂಭಿಸಿದರು. ಬಾಲಕಿಯ ಪೋಷಕರು ಕೊಪ್ಪಳದವರಾಗಿದ್ದು, ಪೇಂಟಿಂಗ್ ಕೆಲಸಕ್ಕಾಗಿ ಹುಬ್ಬಳ್ಳಿಗೆ ಬಂದಿದ್ದರು. ನಿರ್ಮಾಣ ಹಂತದ ಕಟ್ಟಡದ ಬಳಕೆಯಾಗದ ಶೌಚಾಲಯದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಘಟನೆ ಖಂಡಿಸಿ ಅಶೋಕ್ ನಗರ ಪೊಲೀಸ್ ಠಾಣೆಯ ಮುಂದೆ ಸ್ಥಳೀಯರಿಂದ ಬೃಹತ್ ಪ್ರತಿಭಟನೆ ನಡೆದಿತ್ತು. ಹೀಗಾಗಿ ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿ ಪ್ರತಿಭಟನಾ ನಿರತ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಇದರ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಗುಂಡೇಟಿಗೆ ಆರೋಪಿ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.