Gauribidanur News: ಗುರುಪೌರ್ಣಿಮೆ ಸಂಭ್ರಮ: ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಭಕ್ತಸಾಗರ
ಗುರುಪೌರ್ಣಿಮೆಯ ಅಂಗವಾಗಿ ದೇವಾಲಯಕ್ಕೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್( Yelahanka MLA S.R. Vishwanath), ಮಾಜಿ ಸಚಿವ ಶಿವಶಂಕರ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ, ಎನ್.ಎಂ. ರವಿನಾರಾಯಣ ರೆಡ್ಡಿ, ಹೆಚ್.ವಿ. ಮಂಜುನಾಥ್, ಮಾರ್ಕೆಟ್ ಮೋಹನ್, ಪ್ರಸನ್ನ, ಶ್ರೀನಿವಾಸ್ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆದರು.
-
ಗೌರಿಬಿದನೂರು: ಗುರುಪೌರ್ಣಿಮೆಯ ಅಂಗವಾಗಿ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಾಲಯ ದಲ್ಲಿ ಬುಧವಾರ ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ಸಂಭ್ರಮದ ನಡುವೆ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಿತು. ಬೆಳಗ್ಗಿನ ಜಾವದಿಂದಲೇ ವಿಶೇಷ ಪೂಜೆಗಳು, ಧಾರ್ಮಿಕ ವಿಧಿವಿಧಾನ ಗಳು ಹಾಗೂ ಕಲ್ಯಾಣೋತ್ಸವ ನೆರವೇರಿದ್ದು, ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಗುರುಪೌರ್ಣಿಮೆಯ ಪ್ರಯುಕ್ತ ಕಾಕಡಾ ಆರತಿ, ಮೂಲ ವಿಗ್ರಹಕ್ಕೆ ಅಭಿಷೇಕ, ಗುರು ಹಾಗೂ ಗಣಪತಿ ಪ್ರಾರ್ಥನೆ, ಕಳಶಸ್ಥಾಪನೆ, ಸತ್ಯನಾರಾಯಣ ಸ್ವಾಮಿ ವ್ರತ, ಸ್ವಸ್ತಿವಾಚನ, ದೇವನಾಂದಿ, ರಕ್ಷಾಸೂತ್ರಧಾರಣೆ, ನವಚಂಡಿಕಾ ಯಾಗ, ಕುಮಾರಿ ಪೂಜೆ, ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಶ್ರೀರಾಮ ಸಮೇತ ಸತ್ಯನಾರಾಯಣ ಸ್ವಾಮಿ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಇದನ್ನೂ ಓದಿ: Gurupurnime: ಕೈವಾರದಲ್ಲಿ ಗುರುಪೂಜಾ ಸಂಗೀತ ಮಹೋತ್ಸವಕ್ಕೆ ಭರದ ಸಿದ್ಧತೆ
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರು ಮಾತನಾಡಿ, "ಗಾವೋ ವಿಶ್ವಸ್ಯ ಮಾತರಃ" ಎಂಬ ವೇದೋಕ್ತಿಯಂತೆ ಸನಾತನ ಧರ್ಮದಲ್ಲಿ ಗೋವನ್ನು ತಾಯಿಯ ಸ್ಥಾನದಲ್ಲಿ ಪೂಜಿಸಲಾಗು ತ್ತದೆ. ಗೋಮಾತೆ ಮುಕ್ಕೋಟಿ ದೇವತೆಗಳ ಸ್ವರೂಪವಾಗಿದ್ದು, ಗೋಪೂಜೆ ಮಾಡುವುದರಿಂದ ಪಿತೃಗಳಿಗೆ ಸದ್ಗತಿ ಲಭಿಸುವುದರ ಜೊತೆಗೆ ಕುಟುಂಬದ ಅಭ್ಯುದಯವೂ ಆಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಗುರುಪೌರ್ಣಿಮೆಯಂದು ಗೋಮಾತಾ ವ್ರತವನ್ನು ಆಚರಿಸಲಾಗಿದ್ದು, 34 ದೇಶಿ ತಳಿಯ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು.
ಗುರುಪೌರ್ಣಿಮೆಯ ಅಂಗವಾಗಿ ದೇವಾಲಯಕ್ಕೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್( Yelahanka MLA S.R.Vishwanath), ಮಾಜಿ ಸಚಿವ ಶಿವಶಂಕರ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ಎನ್.ಎಂ. ರವಿನಾರಾಯಣ ರೆಡ್ಡಿ, ಹೆಚ್.ವಿ. ಮಂಜುನಾಥ್, ಮಾರ್ಕೆಟ್ ಮೋಹನ್, ಪ್ರಸನ್ನ, ಶ್ರೀನಿವಾಸ್ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ಸಾಯಿಬಾಬಾ ದರ್ಶನ ಪಡೆದರು.
ದಿನವಿಡೀ ಭಕ್ತರು ಸರದಿಯಲ್ಲಿ ನಿಂತು ಸಾಯಿಬಾಬಾ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ದೇವಾಲಯ ಟ್ರಸ್ಟ್ ವತಿಯಿಂದ ಭಕ್ತರಿಗೆ ತೀರ್ಥಪ್ರಸಾದ ವಿತರಣೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.