ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ರಥೋತ್ಸವ; ವೇದಘೋಷ, ಹೋಮ-ಹವನ, ಅಭಿಷೇಕಗಳಿಂದ ಕಂಗೊಳಿಸಿದ ಪುಣ್ಯಕ್ಷೇತ್ರ

ಬೆಳಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ದಶಶಾಂತಿ, ರುದ್ರಾಭಿಷೇಕ, ಕಳಶಾರಾಧನೆ, ಮಹಾನ್ಯಾಸ ಪೂರ್ವಕ ಅಭಿಷೇಕ, ಮಹಾಮಂತ್ರ ಹೋಮ, ಧ್ವಜಾರೋಹಣ, ಕಳಶೋತ್ಸವ, ಲಿಂಗ ಪ್ರತಿಷ್ಠಾಪನೆ ಹಾಗೂ ಶ್ರೀ ಶರಭಯೋಗೇಂದ್ರಸ್ವಾಮಿ, ಅನ್ನಪೂರ್ಣದೇವಿ ಮತ್ತು ಕಾಶಿ ವಿಶ್ವನಾಥ ಸ್ವಾಮಿಗಳಿಗೆ ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ವೈದಿಕ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು.

ಪಾಪಾಗ್ನಿ ಮಠದಲ್ಲಿ 308ನೇ ಆರಾಧನಾ ಮಹೋತ್ಸವದ ದಿವ್ಯ ವೈಭವ

-

Profile
Ashok Nayak Aug 6, 2026 11:38 PM

ಚಿಕ್ಕಬಳ್ಳಾಪುರ: ಶೈವ ಸಂಪ್ರದಾಯದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಶ್ರೀ ದಕ್ಷಿಣ ಕಾಶಿ ಪಂಚನಂದಿ ಮಹಾ ಪುಣ್ಯಕ್ಷೇತ್ರ ಪಾಪಾಗ್ನಿ ಮಠದಲ್ಲಿ ಶ್ರೀ ಶ್ರೀ ಶರಭಯೋಗೇಂದ್ರಸ್ವಾಮಿಗಳ 308ನೇ ಆರಾಧನಾ ಮಹೋತ್ಸವ ಹಾಗೂ ಶ್ರೀ ಶ್ರೀ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ಬ್ರಹ್ಮ ರಥೋತ್ಸವ ಗುರುವಾರ ಅಪಾರ ಭಕ್ತಸಾಗರದ ನಡುವೆ ಅತ್ಯಂತ ವೈಭವ, ಭಕ್ತಿ ಮತ್ತು ವೈದಿಕ ಸಂಪ್ರದಾಯಗಳೊಂದಿಗೆ ನೆರವೇರಿತು. 

ತಾಲೂಕಿನ ಕಳವಾರ ಗ್ರಾಮದ ಬಳಿಯಿರುವ ಪಾಪಾಗ್ನಿ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ವೇದಮಂತ್ರಗಳ ಘೋಷ, ನಾದಸ್ವರದ ಮಂಗಳ ನಿನಾದ, ಪೂಜಾ ಕೈಂಕರ್ಯ ಗಳು ಹಾಗೂ ರಥೋತ್ಸವದ ಸಿದ್ಧತೆಗಳು ಇಡೀ ಪುಣ್ಯಕ್ಷೇತ್ರದಲ್ಲಿ ಆಧ್ಯಾತ್ಮಿಕ ವಾತಾವರಣದಿಂದ ಕಂಗೊಳಿಸಿತು.

ಇದನ್ನೂ ಓದಿ: Chikkaballapur News: ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ; ಜನರ ಪ್ರೀತಿಯೇ ನನ್ನ ಶಕ್ತಿ, ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ಮಾಡುತ್ತೇನೆ ಎಂದ ಹರೀಶ್ ರೆಡ್ಡಿ

ಬೆಳಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ದಶಶಾಂತಿ, ರುದ್ರಾಭಿಷೇಕ, ಕಳಶಾರಾಧನೆ, ಮಹಾನ್ಯಾಸಪೂರ್ವಕ ಅಭಿಷೇಕ, ಮಹಾಮಂತ್ರ ಹೋಮ, ಧ್ವಜಾರೋಹಣ, ಕಳಶೋತ್ಸವ, ಲಿಂಗ ಪ್ರತಿಷ್ಠಾಪನೆ ಹಾಗೂ ಶ್ರೀ ಶರಭಯೋಗೇಂದ್ರಸ್ವಾಮಿ, ಅನ್ನಪೂರ್ಣದೇವಿ ಮತ್ತು ಕಾಶಿ ವಿಶ್ವನಾಥ ಸ್ವಾಮಿಗಳಿಗೆ ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ವೈದಿಕ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು. 

ಬಳಿಕ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ರಥೋತ್ಸವಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಗಿದ್ದು, ನೂರಾರು ಭಕ್ತರು "ಹರ ಹರ ಮಹಾದೇವ" ಮತ್ತು "ಜೈ ವೀರ ಬ್ರಹ್ಮೇಂದ್ರಸ್ವಾಮಿ" ಎಂಬ ಜಯ ಘೋಷಗಳ ನಡುವೆ ರಥವನ್ನು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

867681 ok

ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳು ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಲೋಕಕ್ಷೇಮ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಸಕಲ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿ ದರು. ದಿನವಿಡೀ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮಗಳು ನಡೆದವು.

ಟ್ರಸ್ಟ್ ಅಧ್ಯಕ್ಷ ಬ್ರಹ್ಮಶ್ರೀ ಎನ್. ಹೆಂಜಾರಾಚಾರಿ ಮಾತನಾಡಿ, "ಪಾಪಾಗ್ನಿ ಮಠವು ಶತಮಾನಗಳ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಶ್ರೀ ಶರಭಯೋಗೇಂದ್ರ ಸ್ವಾಮಿಗಳ ಅನುಗ್ರಹದಿಂದ ಪ್ರತಿವರ್ಷ ಸಾವಿರಾರು ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಈ ಕ್ಷೇತ್ರದ ಮಹಿಮೆಗೆ ಸಾಕ್ಷಿಯಾಗಿದೆ. ಧರ್ಮ, ಸಂಸ್ಕೃತಿ ಮತ್ತು ಗುರುಪರಂಪರೆಯ ಮೌಲ್ಯಗಳನ್ನು ಉಳಿಸುವ ಕಾರ್ಯ ವನ್ನು ಟ್ರಸ್ಟ್ ನಿರಂತರವಾಗಿ ಮುಂದುವರಿಸಲಿದೆ" ಎಂದು ಹೇಳಿದರು.

ಟ್ರಸ್ಟ್ ಉಪಾಧ್ಯಕ್ಷ ಬ್ರಹ್ಮಶ್ರೀ ಎ.ಬಿ. ಮಂಜುನಾಥಾಚಾರಿ ಮಾತನಾಡಿ, "ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳ ಗುರುಪರಂಪರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಪಾಪಾಗ್ನಿ ಮಠವು ಭಕ್ತರ ನಂಬಿಕೆಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಪೂರ್ವಿಕರು ಹಾಕಿಕೊಟ್ಟ ಧಾರ್ಮಿಕ ಸಂಪ್ರದಾಯ ವನ್ನು ಮುಂದುವರಿಸಿಕೊಂಡು ಪ್ರತಿವರ್ಷ ವೈದಿಕ ವಿಧಿ-ವಿಧಾನಗಳೊಂದಿಗೆ ಆರಾಧನಾ ಮಹೋ ತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಉತ್ತಮ ಮಳೆ, ಸಮೃದ್ಧ ಬೆಳೆ, ದೇಶದ ಸುಭಿಕ್ಷತೆ ಹಾಗೂ ವಿಶ್ವಶಾಂತಿಗಾಗಿ ವಿಶೇಷ ಹೋಮ-ಹವನ ಮತ್ತು ಪೂಜೆಗಳನ್ನು ನೆರವೇರಿಸಲಾಗಿದೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಿ.ಜಿ. ಸಂಜುಂಡಾಚಾರಿ, ಉಪಾಧ್ಯಕ್ಷ ವಿ. ಸುಬ್ರಹ್ಮಣ್ಯಾಚಾರಿ, ಖಜಾಂಚಿ ಎನ್. ಮಂಜುನಾಥ್, ಸದಸ್ಯರಾದ ಪಿ.ಎನ್. ಕೇಶವಾಚಾರಿ, ಎಂ. ಸುಬ್ರಹ್ಮಣ್ಯಾಚಾರಿ, ಎ. ಮಹೇಶಾಚಾರಿ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.