Murder Case: ಗಂಡನನ್ನು ಪ್ರಿಯತಮನಿಂದ ಕೊಲ್ಲಿಸಿ ನಾಗರಪಂಚಮಿ ಹಬ್ಬದ ಪಾಯಸ ಉಂಡ ಪತ್ನಿ!
Koppala Crime News: ನೇತ್ರಾವತಿಗೆ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಆಗಿ, ಮೂರು ಮಕ್ಕಳು ಆಗಿದ್ದರೂ ಶ್ಯಾಮಣ್ಣ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಹಿನ್ನಲೆಯಲ್ಲಿ ಇಬ್ಬರೂ ಕೊಲೆ ಸಂಚು ರೂಪಿಸಿದ್ದಾರೆ.
ಕೊಲೆಯಾದ ದ್ಯಾಮಣ್ಣ, ಆರೋಪಿ ನೇತ್ರಾವತಿ -
ಹರೀಶ್ ಕೇರ
Aug 1, 2025 10:28 AM
ಕೊಪ್ಪಳ: ನಾಗರಪಂಚಮಿ ಹಬ್ಬದ ದಿನವೇ ಪತ್ನಿಯೊಬ್ಬಳು (wife) ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು (husband) ಪ್ರಿಯಕರನ ಮೂಲಕ ಕೊಲ್ಲಿಸಿದ (Murder case) ಘಟನೆ ಕೊಪ್ಪಳ (Koppala crime news) ತಾಲೂಕಿನ ಬೂದಗುಂಪ ಗ್ರಾಮದಲ್ಲಿ ನಡೆದಿದೆ. ಗಂಡನ ಕೊಂದ ಬಳಿಕ ಪತ್ನಿ ನಾಗರ ಪಂಚಮಿ ಆಚರಿಸಿದ್ದಾಳೆ. ಕೊಲೆ ಪ್ರಕರಣ ಭೇದಿಸಿರುವ ಮುನಿರಾಬಾದ್ ಠಾಣೆ ಪೊಲೀಸರು ಆರೋಪಿಗಳಾದ ನೇತ್ರಾವತಿ ಮತ್ತು ಶ್ಯಾಮಣ್ಣ ಎಂಬವರನ್ನು ಬಂಧಿಸಿದ್ದಾರೆ. ದ್ಯಾಮಣ್ಣ ವಜ್ರಬಂಡಿ ಕೊಲೆಯಾದ ಪತಿ.
ಶ್ಯಾಮಣ್ಣ ಮೂಲತಃ ಕೊಪ್ಪಳ ತಾಲೂಕಿನ ಕಾಮನೂರ ನಿವಾಸಿ ಆಗಿದ್ದು, ಲಾರಿ ಚಾಲಕನಾಗಿದ್ದ. ನೇತ್ರಾವತಿ ಮತ್ತು ಶ್ಯಾಮಣ್ಣ ಒಂದೇ ಗ್ರಾಮದವರಾಗಿದ್ದರು. ನೇತ್ರಾವತಿಗೆ ಬೂದಗುಂಪ ಗ್ರಾಮದ ದ್ಯಾಮಣ್ಣ ಜೊತೆ ಮದುವೆ ಆಗಿ, ಮೂರು ಮಕ್ಕಳು ಆಗಿದ್ದರೂ ಶ್ಯಾಮಣ್ಣ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ ಹಿನ್ನಲೆ ಇಬ್ಬರು ಕೊಲೆ ಸಂಚು ರೂಪಿಸಿದ್ದಾರೆ.
ಅದರಂತೆ ಜುಲೈ 25ರಂದು ಬೂದಗುಂಪ ಬಳಿ ಗ್ಯಾರೇಜ್ವೊಂದರಿಂದ ರಾಡ್ ತಂದಿದ್ದ ಶ್ಯಾಮಣ್ಣ, ಅದೇ ರಾಡ್ನಿಂದ ತನ್ನ ಜಮೀನಿನಲ್ಲೇ ದ್ಯಾಮಣ್ಣನನ್ನು ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಶವಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಕೊಲೆ ಬಳಿಕ ರಾಡ್ ವಾಪಸ್ ಕೂಡ ನೀಡಿದ್ದಾನೆ. ಅತ್ತ ಗಂಡ ಹೆಣವಾಗಿದ್ದರೆ ಇತ್ತ ಮನೆಯಲ್ಲಿ ನೇತ್ರಾವತಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡಿದ್ದಾಳೆ.
ಕೊಲೆ ಬಳಿಕ ಪತಿ ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ಮನೆಯವರಿಗೆ ನಂಬಿಸಿದ್ದಾಳೆ. ತಾನು ಫೋನ್ ಸ್ವಿಚ್ ಆಫ್ ಮಾಡಿಕೊಂಡು 5 ದಿನ ಮನೆಯಲ್ಲೇ ಇದ್ದಳು. ಇತ್ತ ದ್ಯಾಮಣ್ಣ ಸಹೋದರರು ಅನುಮಾನಗೊಂಡು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮುನಿರಾಬಾದ್ ಪೊಲೀಸರು, ವಿಚಾರಣೆ ನಡೆಸಿದ ಬಳಿಕ ಪತಿ ಕೊಲೆ ವಿಚಾರವನ್ನು ನೇತ್ರಾವತಿ ತಿಳಿಸಿದ್ದಾಳೆ. ಆ ಮೂಲಕ ಪ್ರಿಯಕರ ಶ್ಯಾಮಣ್ಣ ಜೊತೆ ಸೇರಿ ಪತಿಯನ್ನ ಕೊಂದಿರುವುದು ಬಹಿರಂಗವಾಗಿದೆ.
ಇದನ್ನೂ ಓದಿ: Murder case: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೆರೆಗೆ ತಳ್ಳಿ ಕೊಂದ ಪತ್ನಿ