Mukhyamantri Chandru: ಶಿವಣ್ಣ ರೀತಿ ಕಮಲ್ ಹಾಸನ್ ಪರ ಇರೋರೆಲ್ಲಾ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು ಕಿಡಿ
Mukhyamantri Chandru: ನಾಡು-ನುಡಿಗೆ ಧಕ್ಕೆ ಬಂದಾಗ ಪ್ರೀತಿ ಗೀತಿ ಬದಿಗೊತ್ತಿ ಖಂಡಿಸಬೇಕಿತ್ತು. ರಾಜಕುಮಾರ್ ಅವರ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಕುಟುಂಬ ಮಾತ್ರ ಕನ್ನಡ ನಾಡಲ್ಲ. ನೀವು ಹೇಳಿದ್ದು ನನಗೆ ಇಷ್ಟ ಆಗಿಲ್ಲ ಇಲ್ಲಿಂದ ನಾನು ಹೊರಡುತ್ತೇನೆ ಎಂದಾದರೂ ಶಿವಣ್ಣ ಹೇಳಬೇಕಿತ್ತು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಸಮಾಧಾನ ಹೊರಹಾಕಿದ್ದಾರೆ.


ಬೆಂಗಳೂರು: ಕಮಲ್ ಹಾಸನ್ಗೆ ಜ್ಞಾನದ ಕೊರತೆ ಇದೆ. ಅಜ್ಞಾನದಿಂದ ದುರಹಂಕಾರವಾಗಿ ಮಾತನಾಡುವುದು ತಪ್ಪು. ಅವರ ಹೇಳಿಕೆಯನ್ನು ಖಂಡಿಸಬೇಕಾದವರು ಪಲಾಯನ ಮಾಡಿದರು. ಯಾರೆಲ್ಲಾ ಶಿವಣ್ಣನ ರೀತಿ ಕಮಲ್ ಹಾಸನ್ ಪರವಾಗಿ ಇದ್ದಾರೋ ಅವರೆಲ್ಲರೂ ನನ್ನ ದೃಷ್ಟಿಯಲ್ಲಿ ನಾಡದ್ರೋಹಿಗಳು ಎಂದು ಕನ್ನಡದ ಹಿರಿಯ ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು (Mukhyamantri Chandru) ಕಿಡಿಕಾರಿದ್ದಾರೆ.
ಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ಹೇಳಿಕೆ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಚಂದ್ರು, ಭಾಷೆ ಬಗ್ಗೆ ಜ್ಞಾನ ಇಲ್ಲದೆ, ನಾನು ಹೇಳಿದ್ದೇ ಸರಿ, ನನ್ನನ್ನು ಮೀರಿಸುವವರು ಯಾರೂ ಇಲ್ಲ ಎನ್ನೋ ಧೋರಣೆಯಲ್ಲಿ ಕಮಲ್ ಹಾಸನ್ ಮಾತನಾಡಿದ್ದಾರೆ. ಇದನ್ನು ನಿಜವಾಗಿ ತಮಿಳುನಾಡಿನವರೇ ಖಂಡಿಸಬೇಕಿತ್ತು. ಇಂತದ್ದನ್ನೆಲ್ಲ ಒಬ್ಬ ದೊಡ್ಡ ವ್ಯಕ್ತಿಯಾಗಿ ಮಾಡಬಾರದು ಎಂದು ಹೇಳಬೇಕಿತ್ತು. ದೊಡ್ಡ ವ್ಯಕ್ತಿ ಎಂದು ನಾವು ಅಂದುಕೊಳ್ಳುತ್ತಿದ್ದೇವೆ ಅಷ್ಟೇ. ಸಣ್ಣತನ ತೋರಿಸಿ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ ಎಂದರು.
ಕ್ಷಮೆ ಕೇಳುತ್ತಾರೋ ಬಿಡುತ್ತಾರೋ ಅದು ಬೇಕಾಗಿಲ್ಲ. ಆತ ಯೋಗ್ಯ ಅಲ್ಲ ಅಯೋಗ್ಯ ಎನ್ನೋದು ಸಾಬೀತಾಗಿದೆ. ಅವರು ನಮ್ಮ ರಾಜ್ಯಕ್ಕೆ ಬರದಂತೆ ಬಹಿಷ್ಕಾರ ಹಾಕುವಂತಹ ನಿರ್ಧಾರ ನಾವು ತೆಗೆದುಕೊಳ್ಳಬೇಕಾಗುತ್ತದೆ. ದೇಶ ಒಂದು ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅಜ್ಞಾನದಿಂದ ದುರಹಂಕಾರವಾಗಿ ಮಾತನಾಡುವುದು ತಪ್ಪು ಎಂದರು.
ನಾಡು-ನುಡಿಗೆ ಧಕ್ಕೆ ಬಂದಾಗ ಪ್ರೀತಿ ಗೀತಿ ಬದಿಗೊತ್ತಿ ಖಂಡಿಸಬೇಕಿತ್ತು. ರಾಜಕುಮಾರ್ ಅವರ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಕುಟುಂಬ ಮಾತ್ರ ಕನ್ನಡ ನಾಡಲ್ಲ. ನಮ್ಮ ಶಿವಣ್ಣನವರು ಪ್ರತಿಪಾದಿಸಬೇಕು ಏನೆಂದರೆ, ನಾನು ನನ್ನ ಕುಟುಂಬವನ್ನು ಹೊಗಳಿದ್ದಕ್ಕೆ ಧನ್ಯವಾದಗಳು, ಆದರೆ ನಾಡು ಮತ್ತು ನುಡಿಗೆ ಆಗಿರುವ ಧಕ್ಕೆಗೆ ನೀವು ತಪ್ಪಿತಸ್ಥರು. ನೀವು ಕ್ಷಮೆ ಕೇಳಬೇಕು, ಈ ಹೋರಾಟದ ಪರವಾಗಿದ್ದೇನೆ ಎಂದು ಹೇಳಬೇಕಿತ್ತೇ ಹೊರತು ಸುಮ್ಮನೆ ಕುಳಿತಿರುವುದು ಸರಿಯಲ್ಲ. ನೀವು ಹೇಳಿದ್ದು ನನಗೆ ಇಷ್ಟ ಆಗಿಲ್ಲ ಇಲ್ಲಿಂದ ನಾನು ಹೊರಡುತ್ತೇನೆ ಎಂದಾದರೂ ಶಿವಣ್ಣ ಹೇಳಬೇಕಿತ್ತು. ಆದರೆ ಅವರು ನನಗೆ ಅರ್ಥವೇ ಆಗಲಿಲ್ಲ ಅಥವಾ ಕೇಳಿಸಿಕೊಳ್ಳಲೇ ಇಲ್ಲ ಎನ್ನೋದು ಬೇಜವಾಬ್ದಾರಿತನ ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿಯನ್ನೂ ಓದಿ | Hari Paraak Column: ಕಮಲ್ ಹಸನ್ ಹಂಗೆಲ್ಲ ಮಾತಾಡಿದ್ರೆ ʼಶಿವʼ ಮೆಚ್ತಾನಾ ?
ಎಲ್ಲೋ ಒಂದು ಕಡೆ ಕ್ರಮವನ್ನು ತೆಗೆದುಕೊಳ್ಳುವಾಗ ಯಾರೆಲ್ಲಾ ಶಿವಣ್ಣ ರೀತಿ ಅವರ ಪರವಾಗಿಯೇ ಇದ್ದಾರೆ ಅವರೆಲ್ಲರೂ ನನ್ನ ದೃಷ್ಟಿಯಲ್ಲಿ ನಾಡದ್ರೋಹಿಗಳು ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ಹೊರಹಾಕಿದ್ದಾರೆ.
ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ ಎಂದ ಶಿವರಾಜ್ ಕುಮಾರ್
ಬೆಂಗಳೂರು: ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಕೊನೆಗೂ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ (Actor Shiva Rajkumar) ಅವರು ಮೌನ ಮುರಿದಿದ್ದಾರೆ. ನಾನು ಕಮಲ್ ಹಾಸನ್ ಹೇಳಿಕೆ ಸಮರ್ಥಿಸಿಕೊಳ್ಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಮಲ್ ಹಾಸನ್ ಹೇಳಿಕೆಯನ್ನು ನಾನೇನೂ ಸಮರ್ಥನೆ ಮಾಡಿಕೊಂಡಿಲ್ಲ. ಭಾಷೆ ಬಗ್ಗೆ ಮಾತನಾಡುತ್ತಿದ್ದಾಗ ನಾನು ಕೈ ತಟ್ಟಿದ್ದು ನಿಜ, ಆ ಸಂದರ್ಭದಲ್ಲಿ ಏನು ಮಾತನಾಡುತ್ತಿದ್ದರು ಅಂತ ಗೊತ್ತಾಗಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Kamal Haasan: ತಪ್ಪು ಮಾಡಿಲ್ಲ.. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ; ಮತ್ತೆ ಮೊಂಡುತನ ಮೆರೆದ ಕಮಲ್ ಹಾಸನ್
ಎಲ್ಲರೂ ಕನ್ನಡಾಭಿಮಾನದ ಬಗ್ಗೆ ಮಾತನಾಡುತ್ತಾರೆ. ಕನ್ನಡ ಅಭಿಮಾನ ಏನು ಎಂಬುದು ನಮಗೂ ಗೊತ್ತಿದೆ. ನಾನು ಕೂಡ ಕನ್ನಡಾಭಿಮಾನಿನೇ. ಅಣ್ಣಾವ್ರು, ಅಣ್ಣಾವ್ರ ಕುಟುಂಬದ ಕನ್ನಡಾಭಿಮಾನ ಎಲ್ಲರಿಗೂ ಗೊತ್ತಿದೆ. ಆ ವಿಚಾರದ ಬಗ್ಗೆ ನಾನು ಸ್ಪಷ್ಟನೆ ಕೊಡಲ್ಲ. ಕಮಲ್ ಹಾಸನ್ ಮಾತನಾಡಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಿ. ನಾನು ಎರಡನೇ ಬಾರಿ ಕ್ಲಿಪ್ಪಿಂಗ್ ಕೇಳಿದಾಗಲೆ ಗೊತ್ತಾಗಿದ್ದು. ಆ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮಾತಾಡಿದ್ದು ನನಗೆ ಗೊತ್ತಾಗಿಲ್ಲ. ಹೀಗಾಗಿ ಚಪ್ಪಾಳೆ ತಟ್ಟಿದೆ. ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ ಎಂದು ತಿಳಿಸಿದ್ದಾರೆ.