Sirsi News: ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ವಾತಾವರಣ ಹೆಚ್ಚಬೇಕು: ಸಂಸದ ಕಾಗೇರಿ
Sirsi News: ಶಿರಸಿ ತಾಲೂಕಿನ ವಾನಳ್ಳಿಯಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ, ಬೆಂಗಳೂರಿನ ಅವಿನಾಶಿ ಸಂಸ್ಥೆ ಜಂಟಿಯಾಗಿ 'ಸುರ ಸಾನಿಕ' ವೇಣು ವಾದನ, ಯಕ್ಷ ರೂಪಕ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕುರಿತ ವಿವರ ಇಲ್ಲಿದೆ.


ಶಿರಸಿ: ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುವ, ಸದಾ ಪ್ರೋತ್ಸಾಹ ನೀಡುವ ವಾತಾವರಣ ಹೆಚ್ಚಬೇಕು. ಇದರಿಂದ ಮಾನಸಿಕ ನೆಮ್ಮದಿ ಸಾಧ್ಯವಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ, ಬೆಂಗಳೂರಿನ ಅವಿನಾಶಿ ಸಂಸ್ಥೆ ಜಂಟಿಯಾಗಿ ತಾಲೂಕಿನ (Sirsi News) ವಾನಳ್ಳಿಯಲ್ಲಿ ಹಮ್ಮಿಕೊಂಡಿದ್ದ 'ಸುರ ಸಾನಿಕ' ವೇಣು ವಾದನ, ಯಕ್ಷ ರೂಪಕ, ಸನ್ಮಾನ ಕಾರ್ಯಕ್ರಮಕ್ಕೆ ಚಂಡೆ ನುಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಅಭಿವೃದ್ಧಿ ಎಂದರೆ ಸೌಲಭ್ಯ, ಆರ್ಥಿಕ ಅಭಿವೃದ್ಧಿ ಒಂದಷ್ಟೇ ಅಲ್ಲ. ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಶ್ರದ್ದೆ ಕೂಡ ಬೆಳಸಿಕೊಳ್ಳಬೇಕು. ಅದರಿಂದ ನೆಮ್ಮದಿ ಸಾಧ್ಯ ಎಂದರು.
ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು ಮಾತನಾಡಿ, ಒಂದು ಕಾರ್ಯಕ್ರಮದ ಸಂಘಟನೆಗೆ ಎಷ್ಟೆಲ್ಲ ಕಷ್ಟ ಇದೆ ಎಂಬುದರ ಅರಿವಿದೆ. ಇಂಥ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ಎಲ್ಲರೂ ಜತೆಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ ಹೆಗಡೆ ಕಲ್ಲಾರೆಮನೆ, ಯಾರೂ ಪ್ರಶಸ್ತಿ ಹಿಂದೆ ಹೋಗದೇ, ಅದು ಬಂದಾಗ ವಿನಮ್ರವಾಗಿ ಸ್ವೀಕರಿಸಬೇಕು. ಹೀಗಾಗಿ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದರು.
ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾನಳ್ಳಿ ಸೊಸೈಟಿ ಅಧ್ಯಕ್ಷ ಎಂ.ಎ.ಹೆಗಡೆ ಕಾನಮುಷ್ಕಿ ಮಾತನಾಡಿದರು. ಸುಮಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಸಮ್ಮಾನ ಪತ್ರ ವಾಚಿಸಿದರು. ಪ್ರೊ. ರಾಘವೇಂದ್ರ ಜಾಜಿಗುಡ್ಡೆ ನಿರ್ವಹಿಸಿದರು.
ಈ ಸುದ್ದಿಯನ್ನೂ ಓದಿ | Class 1 age limit: ಪೋಷಕರಿಗೆ ಗುಡ್ ನ್ಯೂಸ್; 1ನೇ ತರಗತಿ ಪ್ರವೇಶಕ್ಕೆ ಮಕ್ಕಳ ಕನಿಷ್ಠ ವಯೋಮಿತಿ ಸಡಿಲಿಕೆ
ಇದಕ್ಕೂ ಮುನ್ನ ಪ್ರಕಾಶ ಹೆಗಡೆ ಕಲ್ಲಾರೆಮನೆ ಅವರ ಕೊಳಲು, ಕಾರ್ತಿಕ ಭಟ್ಟ ಅವರ ತಬಲಾ ದಲ್ಲಿ ನಡೆದ ವೇಣು ವಾದನ ಮುದ ನೀಡಿತು. ಬಳಿಕ ನಡೆದ ವಿಶ್ವಶಾಂತಿ ಸರಣಿಯ ಹತ್ತನೇ ಕಲಾ ಕುಸುಮ ವಿಶ್ವಾಭಿಗಮನಂ ಯಕ್ಷ ರೂಪಕವು ಗೋಕುಲ ನಿರ್ಗಮನ ಸನ್ನಿವೇಶ ಕಟ್ಟಿಕೊಟ್ಟಿತು. ಕು. ತುಳಸಿ ಹೆಗಡೆ ಪ್ರಸ್ತುತಿಯ ರೂಪಕಕ್ಕೆ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಿದರು. ಉದಯ ಪೂಜಾರ ಧ್ವನಿ ಬೆಳಕಿನ ಸಂಯೋಜನೆ ಮಾಡಿದ್ದರು.