MLA M.T.Krishnappa : ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಘೇರಾವ್ ಪೂರ್ವನಿಯೋಜಿತ : ಸಿಡಿದ ಬೆಂಬಲಿಗರು
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕುಣಿಗಲ್ ತಾಲ್ಲೂಕಿಗೆ ಬಂದ ತುರುವೇಕೆರೆ ಶಾಸಕ ಕೃಷ್ಣಪ್ಪ ಅವರನ್ನು ಕುಣಿಗಲ್ ಶಾಸಕ ರಂಗನಾಥ್ ಟೀಕಿಸಿ ಪೈಪ್ ಲೈನ್ ವಿಚಾರವನ್ನು ತಿರುಚಿ ಹೇಳಿ ಅಲ್ಲಿದ್ದ ಬೆಂಬಲಿಗರನ್ನು ಪ್ರಚೋದಿಸಿ ಘೇರಾವ್ ಮಾಡಿಸಿದ್ದಾರೆ. ಜಿಲ್ಲೆಯ ರೈತರ ಹಿತಕ್ಕಾಗಿ ಕೃಷ್ಣಪ್ಪ ಅವರ ಹೋರಾಟ ನಡೆದಿದೆ. ಅವರನ್ನು ಬೆಂಬಲಿಸಿ ಗುಬ್ಬಿ ತುರುವೇಕೆರೆ ಜನರು ಕೈಗೆ ಬಳೆ ತೊಟ್ಟಿಲ್ಲ
-
ಗುಬ್ಬಿ: ಡಿಸಿಎಂ ಅವರ ಕುಣಿಗಲ್ ತಾಲ್ಲೂಕಿನ ಬರವೀಕ್ಷಣೆ ಸಮಯದಲ್ಲಿ ಕೆಲ ಮಂದಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ(Thiruvekere MLA MT Krishnappa) ಅವರನ್ನು ದಿಢೀರ್ ಘೇರಾವ್ ಮಾಡಿದ ಘಟನೆ ಕುಣಿಗಲ್ ಶಾಸಕ ರಂಗನಾಥ್(Kunigal MLA Ranganath) ಅವರ ಪೂರ್ವನಿಯೋಜಿತ ಯೋಜನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಬೆಂಬಲಿಗರು, ನೀರಾವರಿ ಹೋರಾಟಗಾರರು ನೇರ ಆರೋಪ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಮಾವತಿ ಜಿಲ್ಲೆಯ ಜೀವನಾಡಿ. ನಮ್ಮ ನೀರು ನಮ್ಮ ಹಕ್ಕು ಈ ನಿಟ್ಟಿನಲ್ಲಿ ಕೃಷ್ಣಪ್ಪ ಅವರ ಹೋರಾಟ ಜಿಲ್ಲೆಯ ರೈತರ ಹಿತಕ್ಕಾಗಿ ಎಂಬುದು ಕುಣಿಗಲ್ ರೈತರು ತಿಳಿಯಬೇಕಿದೆ. ಶಾಸಕ ರಂಗನಾಥ್ ಅವರ ಈ ತಂತ್ರಗಾರಿಕೆ ಪೈಪ್ ಲೈನ್ ಕಾಮಗಾರಿ ನೇರ ರಾಮನಗರ ಮಾಗಡಿ ಬಿಡದಿಗೆ ನೀರು ಹರಿಸಲು ಎಂಬುದು ಕುಣಿಗಲ್ ರೈತರು ಸೂಕ್ಷ್ಮವಾಗಿ ಆಲೋಚಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: Gubbi News: ಗುಬ್ಬಿ ಶಾಸಕರಿಗೆ ನೀರಿನ ಶಾಪ-ಮಂತ್ರಿಗಿರಿ ಕೈ ತಪ್ಪಿದೆ..! : ಎಸ್.ಡಿ.ದಿಲೀಪ್ ಕುಮಾರ್
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕುಣಿಗಲ್ ತಾಲ್ಲೂಕಿಗೆ ಬಂದ ತುರುವೇಕೆರೆ ಶಾಸಕ ಕೃಷ್ಣಪ್ಪ ಅವರನ್ನು ಕುಣಿಗಲ್ ಶಾಸಕ ರಂಗನಾಥ್ ಟೀಕಿಸಿ ಪೈಪ್ ಲೈನ್ ವಿಚಾರವನ್ನು ತಿರುಚಿ ಹೇಳಿ ಅಲ್ಲಿದ್ದ ಬೆಂಬಲಿಗರನ್ನು ಪ್ರಚೋದಿಸಿ ಘೇರಾವ್ ಮಾಡಿಸಿದ್ದಾರೆ. ಜಿಲ್ಲೆಯ ರೈತರ ಹಿತಕ್ಕಾಗಿ ಕೃಷ್ಣಪ್ಪ ಅವರ ಹೋರಾಟ ನಡೆದಿದೆ. ಅವರನ್ನು ಬೆಂಬಲಿಸಿ ಗುಬ್ಬಿ ತುರುವೇಕೆರೆ ಜನರು ಕೈಗೆ ಬಳೆ ತೊಟ್ಟಿಲ್ಲ. ರಂಗನಾಥ್ ಅವರನ್ನು ವಿರೋಧಿಸುವುದು ಗೊತ್ತು. ಯಡಮಟ್ಟೆ ಸೇವೆ ಮಾಡುವುದು ಗೊತ್ತು ಎಂದು ಕಟುವಾಗಿ ಟೀಕಿಸಿದ ಅವರು ಕುಣಿಗಲ್ ತಾಲ್ಲೂಕಿಗೆ ಹಂಚಿಕೆಯ ನೀರು ಹರಿಯುತ್ತಿದೆ. ಬಾಕಿ ಇರುವ ನಾಲೆ ಅಗಲೀಕರಣ ಮಾಡಿಸಿ ಮೊದಲು ಅವರೇ ನೀರು ಹರಿಸಿಕೊಳ್ಳಲಿ. ಕುಣಿಗಲ್ ಗೆ ನೀರು ಕೊಡಲು ಯಾರ ವಿರೋಧವಿಲ್ಲ. ಆದರೆ ಇಲ್ಲಿ ಸಾವಿರ ಕೋಟಿ ಲೂಟಿ ಹೊಡೆಯುವ ಯೋಜನೆ ಅನುಷ್ಠಾನಕ್ಕೆ ರೈತರ ನಡುವೆ ಎತ್ತಿಕಟ್ಟುವ ಕೆಲಸ ನಡೆದಿದೆ. ರೈತರು ಎಚ್ಚೆತ್ತು ನಮ್ಮ ಪಾಲಿನ ನೀರು ಎಲ್ಲಿಗೆ ಹೋಗುತ್ತದೆ ಎಂಬುದು ಮೊದಲು ಶಾಸಕರ ಕೊರಳುಪಟ್ಟಿ ಹಿಡಿದು ಕೇಳಿ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೀರಮಾರನಹಳ್ಳಿ ನರಸೇಗೌಡ ಮಾತನಾಡಿ ಕೃಷ್ಣಪ್ಪ ಅವರ ಘೇರಾವ್ ಖಂಡನೀಯ. ಕುಣಿಗಲ್ ಶಾಸಕ ರಂಗನಾಥ್ ಅವರ ಗೂಂಡಾಗಿರಿ ವರ್ತನೆ ಅವರ ಬೆಂಬಲಿಗರ ಮಾತುಗಳಿಂದ ತಿಳಿಯುತ್ತದೆ. ಅಷ್ಟಕ್ಕೂ ಕುಣಿಗಲ್ ಶಾಸಕರಿಗೆ ರಾಮನಗರ, ಮಾಗಡಿ ಬಿಡದಿ ಚಿಂತೆ ಯಾಕೆ ಎಂಬುದು ಅಲ್ಲಿನ ರೈತರು ಯೋಚಿಸಬೇಕಿದೆ. ಈ ಹಿಂದೆ ಹೇಮಾವತಿ ತರಲು ಹೋರಾಡಿದ್ದ ವೈ.ಕೆ.ರಾಮಯ್ಯ ಅವರ ಕನಸು ಯಾರೂ ನನಸು ಮಾಡಲಾಗಿಲ್ಲ. ತಾಲ್ಲೂಕಿನ ಇನ್ನೂ ಎರಡು ಹೋಬಳಿಗೆ ಹೇಮಾವತಿ ಹರಿದಿಲ್ಲ. ಹುಚ್ಚಮಾಸ್ತಿಗೌಡ ಅವರ ನಡೆ ಇವರಿಗಿಲ್ಲ. ರಂಗನಾಥ್ ಅವರು ಅಣ್ಣತಮ್ಮ ಸಂಬಂಧದ ಎರಡು ತಾಲ್ಲೂಕುಗಳ ನಡುವೆ ವೈಷಮ್ಯ ಬೆಳೆಸಿದ್ದಾರೆ. ಕೃಷ್ಣಪ್ಪ ಅವರ ಬಗ್ಗೆ ಹಗುರವಾಗಿ ಮಾತು, ನಡವಳಿಕೆ ಕಂಡು ಬಂದರೆ ಕುಣಿಗಲ್ ನಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ ಅವರು ಸಚಿವರಾದ ಮಾಗಡಿ ಬಾಲಕೃಷ್ಣ ಅವರು ಪೈಪ್ ಲೈನ್ ಕೆನಾಲ್ ಮಾಡುವುದಕ್ಕೆ ಮಂತ್ರಿಯಾಗಿದ್ದರಂತೆ. ಈ ರೀತಿಯ ಹೇಳಿಕೆ ಅವರ ಬೇಜವಾಬ್ದಾರಿ ತೋರುತ್ತದೆ. ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ರೈತ ಮುಖಂಡರು, ಹೋರಾಟಗಾರರ ಜೊತೆ ಚರ್ಚಿಸಿ ಸಾಧಕ ಬಾಧಕಗಳ ತಿಳಿದು ಮಾತನಾಡುವುದು ಮೊದಲು ಕಲಿಯಿರಿ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಂಜೇಗೌಡ, ಬೋರಪ್ಪನಹಳ್ಳಿ ಕುಮಾರ್, ವೀರಣ್ಣಗುಡಿ ರಾಮಣ್ಣ, ರವಿಕುಮಾರ್, ಬಾಬಣ್ಣ, ಕೇಶವ್, ನಂದೀಶ್, ಪಾಪಣ್ಣ, ಹರೀಶ್, ಲಕ್ಷ್ಮಿನಾರಾಯಣ(ಅಣ್ಣಿ), ಸೀನಣ್ಣ ಇತರರು ಇದ್ದರು.
![]()
ಉಪಮುಖ್ಯಮಂತ್ರಿಗಳ ಮುಂದೆಯೇ ಓರ್ವ ಶಾಸಕರಿಗೆ ರಕ್ಷಣೆ ಇಲ್ಲ ಎಂದಾದರೆ ಇನ್ನು ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ವೈಫಲ್ಯದಿಂದ ಕೂಡಿವುದು ತಿಳಿಯುತ್ತಿದೆ. ಕುಣಿಗಲ್ ಶಾಸಕರೇ ನಿಮಗೆ ಏನಾದರೂ ಧಮ್ಮು ತಾಕತ್ತು ಇದ್ದರೆ, ನಿಮ್ಮ ಸಂಬಂಧಿಯೇ ಸಿಎಂ ಆಗಿದ್ದಾರೆ ಜೊತೆಗೆ ನಿಮ್ಮದೇ ಸರ್ಕಾರವಿದೆ. ನಿಮ್ಮ ತಾಲೂಕಿನ ರೈತರ ಹಿತ ಕಾಪಾಡಲು ಮುಂದಾಗಿ. ಅದನ್ನು ಬಿಟ್ಟು ನಮ್ಮ ಶಾಸಕರ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ. ತಾಲೂಕಿನ ಜನತೆಗೆ ನೀರು ಕೊಡದೆ ರಾಮನಗರಕ್ಕೆ ನೀರು ಕೊಡಲು ಮುಂದಾಗಿರುವ ನಿಮಗೇನಾದರೂ ತಾಕತ್ತು ಇದ್ರೆ ನಮ್ಮ ಕ್ಷೇತ್ರಕ್ಕೆ ಬಂದು ನೋಡಿ. ಆನಂತರ ನಮ್ಮ ರೈತರ ತಾಕತ್ತು ತಿಳಿಯಲಿದೆ. ಯಾರೋ ನಾಲ್ಕು ಜನ ನಿಮ್ಮ ಮಾತು ಕೇಳುವವರನ್ನ ಬಿಟ್ಟು ಘೇರಾವ್ ಹಾಕಿಸುವುದು ಮುಖ್ಯವಲ್ಲ ಎಂ.ಟಿ ಕೃಷ್ಣಪ್ಪನವರ ಬಗ್ಗೆ ನಿಮ್ಮ ತಾಲೂಕಿನ ರೈತರ ಬಳಿಯೇ ತಿಳಿಯಿರಿ ಎಚ್ಚರಿಕೆಯಿಂದ ಇರಿ.
-ಜಗದೀಶ್, ಅಧ್ಯಕ್ಷರು, ಜೆಡಿಎಸ್ ಹೋಬಳಿ, ಸಿ.ಎಸ್.ಪುರ.