ಊಟ ಆರಂಭವಾಗಬೇಕಿರುವುದು ತುಪ್ಪದಿಂದಲೇ ಹೊರತು ಉಪ್ಪಿನಕಾಯಿಯಿಂದಲ್ಲ: ರಾಘವೇಶ್ವರ ಭಾರತೀ ಶ್ರೀ
Sri Raghaveshwara Bharathi Swamiji: ಗೋವು ಸೃಷ್ಟಿಯ ಸಾರವಾದರೆ, ಹಾಲು ಗೋವಿನ ಸಾರ. ತುಪ್ಪ ಸಾರಗಳ ಸಾರ. ದಿನ ಕಳೆದಂತೆ ಪ್ರಪಂಚದ ಎಲ್ಲಾ ವಸ್ತುಗಳ ಗುಣ ನಾಶವಾಗುತ್ತಾ ಸಾಗುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ತುಪ್ಪದ ಗುಣ ದಿನ ಕಳೆದಂತೆ ಹೆಚ್ಚಾಗುತ್ತಾ ಸಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.
-
ಗೋಕರ್ಣ, ಸೆ.19: ಬದುಕಲು ನೀರು ಬೇಕು. ಆದರೆ ಬದುಕು ಸಾರ್ಥಕವಾಗಬೇಕಾದರೆ ಗೋವಿನ ತುಪ್ಪ ಬೇಕು. ಕ್ರಿಮಿ ಕೀಟಗಳ ಎತ್ತರದಿಂದ ಮೇಲೆದ್ದು ಅರಿವಿನ ಬದುಕನ್ನು ಕಟ್ಟುಕೊಳ್ಳಲು ಗೋವಿನ ತುಪ್ಪದ ಪಾತ್ರ ಹಿರಿದಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶನಿವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ತುಪ್ಪದ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಗೋವು ಸೃಷ್ಟಿಯ ಸಾರವಾದರೆ, ಹಾಲು ಗೋವಿನ ಸಾರ. ತುಪ್ಪ ಸಾರಗಳ ಸಾರ. ದಿನ ಕಳೆದಂತೆ ಪ್ರಪಂಚದ ಎಲ್ಲಾ ವಸ್ತುಗಳ ಗುಣ ನಾಶವಾಗುತ್ತಾ ಸಾಗುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ತುಪ್ಪದ ಗುಣ ದಿನ ಕಳೆದಂತೆ ಹೆಚ್ಚಾಗುತ್ತಾ ಸಾಗುತ್ತದೆ. ಆಯುರ್ವೇದದ0ಲ್ಲಿ ನೂರು ವರ್ಷಗಳ ಹಳೆಯ ತುಪ್ಪುವನ್ನು ಮಹಾ ಔಷಧ ಎಂದು ಕರೆಯಲಾಗಿದೆ ಎಂದರು.
ದೇಶಿ ಗೋವಿನ ತುಪ್ಪ ಮಾತ್ರ ನಿಜವಾದ ತುಪ್ಪವಾಗಿದ್ದು, A2 ಅಲ್ಲದ ಹಾಲಿನಿಂದ ತಯಾರಿಸಿದ ತುಪ್ಪ ನಿಜವಾದ ತುಪ್ಪವಲ್ಲ. ಸುಶ್ರುತರು ಎಲ್ಲಾ ಜೀವಿಗಳಿಗೂ ಹಿತವಾದ ಆಹಾರಗಳ ಪಟ್ಟಿಯನ್ನು ಹೇಳುವಾಗ ನೀರಿನ ನಂತರ ತುಪ್ಪಕ್ಕೆ ಸ್ಥಾನವನ್ನು ನೀಡಿದ್ದು, ಇದು ತುಪ್ಪಕ್ಕಿರುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಆದರೆ ಇಂದು ತುಪ್ಪವನ್ನು ತಿನ್ನಬೇಡಿ, ಅದು ಆರೋಗ್ಯಕ್ಕೆ ಹಾಳು ಎಂದು ಪ್ರಚುರಪಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಹಾರದ ದೋಷಗಳನ್ನು ಕಳೆಯುವ ಶಕ್ತಿ ತುಪ್ಪಕ್ಕಿದೆ. ಯಜ್ಞಗಳ ಮೂಲಕ ದೇವರಿಗೆ ಸಮರ್ಪಣೆ ಮಾಡುವಾಗ ಎಲ್ಲಾ ದ್ರವ್ಯಗಳಿಗೂ ತುಪ್ಪದ ಸಂಸರ್ಗ ಅತ್ಯಗತ್ಯ. ತುಪ್ಪವನ್ನು ಔಷಧದ ಜತೆ ಸೇರಿಸಿದಾಗಲೂ, ಔಷಧದ ಗುಣವನ್ನು ಹೊತ್ತು ತರುವ ಜತೆಗೆ ತನ್ನ ಗುಣವನ್ನು ಉಳಿಸಿಕೊಳ್ಳುವ ವಿಶೇಷ ಸಾಮರ್ಥ್ಯ ತುಪ್ಪಕ್ಕಿದೆ ಎಂದು ವಿವರಿಸಿದರು.
ಭಾರತ ಮಂಡಲದ ಚೆನ್ನೈ, ಹುಬ್ಬಳ್ಳಿ - ಧಾರವಾಡ, ಹಾವೇರಿ, ಯಲ್ಲಾಪುರ, ಚಿಕ್ಕಮಗಳೂರು, ಹಾಸನ ಹಾಗೂ ಕೇರಳ ವಲಯದ ಪರವಾಗಿ ಗಜಾನನ ಭಾಗ್ವತ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಕೃಷ್ಣ ಕಳಂಜಿ ಹಾವೇರಿ, ಆರ್. ಜಿ ಭಟ್, ಡಾ. ಶಾರದಾ ಜಯಗೋವಿಂದ, ದಿನಪ್ರಧಾನರಾಗಿ ದತ್ತರಾಜ್ ಮಂಚಾಲೆ ದಂಪತಿಗಳು ಉಪಸ್ಥಿತರಿದ್ದರು.
![]()
ತುಪ್ಪದಿಂದಲೇ ಆಹಾರ ಸೇವನೆಯ ಆರಂಭವಾಗಬೇಕು ಎಂಬುದು ಆಯುರ್ವೇದದ ಅಭಿಮತವಾಗಿದ್ದು, ಇಂದು ಉಪ್ಪಿನಕಾಯಿಯಿಂದ ಊಟವನ್ನು ಆರಂಭಿಸುತ್ತಾರೆ. ಹಾಗಾದಲ್ಲಿ ಊಟದ ವ್ಯವಸ್ಥೆಯೇ ಬುಡಮೇಲಾದಂತೆ.
-ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ