ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರೋಗ್ಯಕ್ಕೊಂದು ಹೊಸ ಆಯಾಮ: ಯೋಗಬನ

Yogabana: ವಿವೇಕಾನಂದ ಚಿಂತನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ನಿಟ್ಟಿನಲ್ಲಿ ಡಿವೈನ್ ಪಾರ್ಕ್ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಯೋಗಬನ (Yogabana) ಎಂಬ ಅತಿವಿಶಿಷ್ಟ ಮಾದರಿಯ ಚಿಕಿತ್ಸಾ ಕೇಂದ್ರವನ್ನು ಮುನ್ನೆಲೆಗೆ ತಂದು ಯೋಗ, ಅಧ್ಯಾತ್ಮ, ಪ್ರಕೃತಿ, ಆಯುರ್ವೇದ ಚಿಕಿತ್ಸೆಯ ಜತೆಗೆ ವಿವೇಕಾನಂದರ ಚಿಂತನೆಗಳನ್ನು ಜೀವಂತವಾಗಿರಿಸುವ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ ಡಾ. ವಿವೇಕ್. ಇದು ಇರುವುದು ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ಸಾಲಿಗ್ರಾಮದಿಂದ ಕೇವಲ ಐದು ಕಿಮೀ ದೂರದಲ್ಲಿ.

ಯೋಗಬನ: ಆರೋಗ್ಯಕ್ಕೊಂದು ಹೊಸ ಆಯಾಮ

ಯೋಗಬನ -

Ramesh B
Ramesh B Dec 2, 2025 8:11 PM

ಉಡುಪಿ, ಡಿ. 2: ಸದೃಢ ದೇಹದಲ್ಲಿ ಸದೃಢ ಮನಸಿರುತ್ತದೆ. ಇದು ಸ್ವಾಮಿ ವಿವೇಕಾನಂದರು ಯುವ ಸಮೂಹಕ್ಕೆ ನೀಡಿದ್ದ ಆಲೋಚನೆಯಾಗಿತ್ತು. ಯೋಗಿಯಾಗಿ ಜಗತ್ತನ್ನೇ ಸುತ್ತಿದ ಯುಗಪುರುಷ ಸ್ವಾಮಿ ವಿವೇಕಾನಂದರು. ಸದೃಢಕಾಯ, ಸದೃಢ ಮನಸ್ಕರಾಗಿದ್ದ ಅವರು ಜಗತ್ತನ್ನೇ ಸುತ್ತಿ ಜ್ಞಾನವನ್ನು ಹಂಚಿದ್ದ ಭಾರತದ ಯುವ ಸಂತ. ʻಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿʼ ಹೀಗೆಂದು ಎಚ್ಚರಿಸಿ ಆ ಮೂಲಕ ಭಾರತದ ಭವಿಷ್ಯವನ್ನು ಜಾಗೃತಗೊಳಿಸಿದ್ದರು. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರ ಚಿಂತನೆಗಳು ಚಿರಂತನ. ವಿವೇಕರ ಚಿಂತನೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ನಿಟ್ಟಿನಲ್ಲಿ ಡಿವೈನ್ ಪಾರ್ಕ್ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಯೋಗಬನ (Yogabana) ಎಂಬ ಅತಿವಿಶಿಷ್ಟ ಮಾದರಿಯ ಚಿಕಿತ್ಸಾ ಕೇಂದ್ರವನ್ನು ಮುನ್ನೆಲೆಗೆ ತಂದು ಯೋಗ, ಅಧ್ಯಾತ್ಮ, ಪ್ರಕೃತಿ, ಆಯುರ್ವೇದ ಚಿಕಿತ್ಸೆಯ ಜತೆಗೆ ವಿವೇಕಾನಂದರ ಚಿಂತನೆಗಳನ್ನು ಜೀವಂತವಾಗಿರಿಸುವ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ ಡಾ. ವಿವೇಕ್.

ಪ್ರವಾಸ ನಿಮ್ಮಿತ್ತ ಬಂದರೂ ಚಿಕಿತ್ಸೆ ನಿಮಿತ್ತ ಬಂದರೂ ಇಲ್ಲಿನ ವಾಸ್ತವ್ಯ ನಿಮ್ಮನ್ನು ಚೈತನ್ಯಪೂರ್ಣರನ್ನಾಗಿ ಮಾಡುತ್ತದೆ. ಮನಸು ಮತ್ತು ದೇಹಕ್ಕೆ ಮತ್ತಷ್ಟು ಆರೋಗ್ಯ ಉಲ್ಲಾಸ ನೀಡಿ ಸಕಾರಾತ್ಮಕ ಭಾವಗಳನ್ನು ತುಂಬಿ ಕಳಿಸುತ್ತದೆ ಯೋಗಬನ.

Mantapa

ಯೋಗಬನ ಕುಂದಾಪುರ ಬಳಿಯ ಸಾಲಿಗ್ರಾಮದಿಂದ ಕೇವಲ ಐದು ಕಿಮೀ ದೂರದಲ್ಲಿದ್ದು, ಸುಂದರ ಪರಿಸರದ ನಡುವೆ ಅತ್ಯಂತ ಸುಂದರ ರೂಪದೊಂದಿಗೆ ಮೈದಳೆದಿದೆ ಈ ಯೋಗಬನ. ಸುತ್ತಲೂ ಹಚ್ಚ ಹಸಿರಿನ ಪರಿಸರ, ಕುಂದಾಪುರದ ಕಾನನ, ಹಕ್ಕಿಗಳ ಗಾನ, ಜಿಂಕೆಗಳ ಕೂಟ ಎಲ್ಲವೂ ಮೇಳೈಸಿದಂತೆ ಗುಡಿಗಟ್ಟಿ ನಿಂತಿದೆ ಇಲ್ಲಿನ ಯೋಗಬನ. ಮನಶ್ಶಾಂತಿ, ಆರೋಗ್ಯ, ದೈಹಿಕ ಮತ್ತು ಮಾನಸಿಕ ಫಿಟ್‌ನೆಸ್‌ ಇವೆಲ್ಲವನ್ನೂ ಬಯಸುವವರಿಗೆ ಹೇಳಿ ಮಾಡಿಸಿದಂಥ ಒಂದು ಜಾಗವಿದ್ದರೆ ಅದು ಯೋಗಬನ.

ಯೋಗಬನವನ್ನು ಇನ್ನೊಂದು ಹೆಸರಿನಿಂದಲೂ ಗುರುತಿಸಲಾಗುತ್ತದೆ. ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ (ಎಸ್‌ಎಚ್‌ಆರ್‌ಎಫ್). ಸಮೃದ್ಧ ಪರಿಸರದ ಮಧ್ಯೆ ಸುಂದರ ವಾಸ್ತವ್ಯ, ಆಟ, ಊಟೋಪಚಾರ ಬಯಸುತ್ತಿದ್ದೀರಿ ಅಂದರೆ ನಿಮಗಾಗಿಯೇ ಎಂಬಂತಿದೆ ಯೋಗಬನ. ಇದೊಂದು ಸುಂದರ ಪ್ರವಾಸಿ ತಾಣದಂಥ ಆರೋಗ್ಯಧಾಮ. ಇಲ್ಲಿಗೆ ಬರುವ ಎಲ್ಲರನ್ನೂ ಚಿಕಿತ್ಸಕ ಪದ್ಧತಿಯಲ್ಲೇ ಉಪಚರಿಸಲಾಗುತ್ತದೆ.

Golden Chariot: ಚಕ್ರಗಳ ಮೇಲೆ ರಾಜ್ಯದ ಸಾಮ್ರಾಜ್ಯಗಳು; 6 ದಿನ ಹೋಗಿ ಅರಸರಾಗಿ ಬನ್ನಿ

Prashanta

ಆತಿಥ್ಯ

ಯೋಗಬನದ ಮುಂದೆಯೇ ಇಳಿದರೆ, ಆಡಳಿತ ಕಚೇರಿಯಲ್ಲಿ ಚೆಕ್ಇನ್ ಮುಗಿಸಿ. ನಿಮಗೆ ಅಗತ್ಯವಿರುವ ಚಿಕಿತ್ಸೆಯ ಕುರಿತು ತಜ್ಞರಿಂದ ಮಾಹಿತಿ ಪಡೆದು ಪ್ಯಾಕೇಜ್‌ನಲ್ಲಿ ಕಾಯ್ದಿರಿಸಿದ ವಸತಿಯಲ್ಲಿ ಉಳಿದುಕೊಳ್ಳಬಹುದು. ಇಲ್ಲಿನ ವಾತಾವರಣ, ದಿನಚರಿ, ಆಹಾರ, ವಾಸ್ತು, ಪ್ರಕೃತಿ ಎಲ್ಲವೂ ನಿಮ್ಮ ಆರೋಗ್ಯ ವೃದ್ಧಿಯನ್ನೇ ಕೇಂದ್ರೀಕರಿಸಿ ರೂಪಿಸಲಾಗಿದೆ. ದೇವಾಲಯ ವಾಸ್ತುಶಿಲ್ಪ ಈ ಪ್ರತಿಷ್ಠಾನದ ನಿರ್ಮಾಣವು ದೇವಾಲಯದ ವಾಸ್ತುಶಿಲ್ಪವನ್ನು ಹೊಂದಿದೆ. ಅಂದರೆ ಸಾಮಾನ್ಯವಾಗಿ ದೇವಾಲಯಗಳಲ್ಲಿ ಹೊರ ಪ್ರದಕ್ಷಿಣೆ ಪಥ, ಒಳ ಪ್ರದಕ್ಷಿಣೆ ಪಥ, ಹೃದಯ ಭಾಗದಲ್ಲಿ ಗರ್ಭಗುಡಿ ಮಧ್ಯೆ ದೇವರ ವಿಗ್ರಹವಿರುತ್ತದೆ. ಅದರಂತೆ ಪ್ರತಿಷ್ಠಾನದ ಹೊರ ಪ್ರದಕ್ಷಿಣೆ ಪಥವಾಗಿ ಸೈಕ್ಲಿಂಗ್ ಟ್ರ್ಯಾಕ್, ಒಳ ಪ್ರದಕ್ಷಿಣೆ ಪಥವಾಗಿ ವಾಕಿಂಗ್ ಪಾತ್, ಮಧ್ಯೆ ಕಮಲದ ಆಕಾರದ ಕೊಳದ ನಡುವೆ ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕಮಲವು ಪವಿತ್ರತೆಯ ಸಂಕೇತ ಎಂದು ನಂಬಲಾಗಿದ್ದು ಅದರ ನಡುವೆ ವಿವೇಕಾನಂದರನ್ನು ಪ್ರತಿಷ್ಠಾಪಿಸಿರುವುದು ವಿಶೇಷ.

ಸೈಕ್ಲಿಂಗ್ ಟ್ರ್ಯಾಕ್ ಇದು 1.2 ಕಿಮೀ ಸುತ್ತಳತೆಯಷ್ಟು ವಿಶಾಲವಾಗಿದ್ದು, ಸುಸಜ್ಜಿತವಾಗಿದೆ. ಪಾತ್‌ನ ಇಕ್ಕೆಲಗಳಲ್ಲಿ ನೀವು ಕಣ್ಣಾಡಿಸಿದಷ್ಟೂ ಕಾಣುವುದೆಲ್ಲಾ ಹಚ್ಚಹಸಿರು. ಇಲ್ಲಿ ಚಿಕಿತ್ಸೆ ಪಡೆಯಲು ಬರುವ ಎಲ್ಲರಿಗೂ ಸೈಕಲ್ನ್ನು ಪ್ರತಿಷ್ಠಾನವೇ ನೀಡುತ್ತದೆ. ಸಾಕಾಗುವಷ್ಟು ಓಡಿಸಿ ಮರಳಿ ಅಲ್ಲಿಯೇ ನಿಲ್ಲಿಸಿದರಾಯಿತು. ವಾಕಿಂಗ್ ಪಾತ್ ಇಲ್ಲಿ ಒಟ್ಟು ಮೂರು ಪಾತ್ವೇಗಳಿದ್ದು, ಸುಂದರ ಪರಿಸರದ ಸಿರಿಯನ್ನು ಕಾಲ್ನಡಿಗೆಯ ಮೂಲಕ ಆಸ್ವಾದಿಸುವುದು ರೋಗೋಪಶಮನಕ್ಕೆ ಉತ್ತಮವಾಗಿದೆ. ಇದು ವೈಜ್ಞಾನಿಕವೂ ಹೌದು. ಪಾತ್‌ ವೇ ನಡಿಗೆಯ ವೇಳೆ ನವಿಲು, ಕೋಗಿಲೆ, ಕಾಜಾಣಗಳ ಧನಿಗಳು ನಿಮ್ಮ ಕಿವಿಗೆ, ಮನಸಿಗೆ ಮುದ ನೀಡುತ್ತವೆ. ರಿಫ್ಲೆಕ್ಸೋಲಜಿಯ ರಿಫ್ಲೆಕ್ಷನ್ ಎಂಬಂತೆ ಈ ಪಥಗಳ ಸಂಚಾರ ನಿಮ್ಮ ಮನಃಪಟಲಗಳಲ್ಲಿ ಮೂಡಿಬರುತ್ತವೆ.

Vivekananda

ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆ

ಆಕರ್ಷಕ ವಿವೇಕಾನಂದ ಪ್ರತಿಮೆ ಇಲ್ಲಿರುವುದು ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆ. 35 ಅಡಿ ಎತ್ತರದ ಈ ಪ್ರತಿಮೆ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಹೃದಯ ಭಾಗದಲ್ಲಿದೆ. ನೀವು ಸುತ್ತಲಿನ 500 ಮೀ ದೂರದಲ್ಲಿ ಎಲ್ಲಿಂದ ನಿಂತು ನೋಡಿದರೂ ಸ್ವಾಮಿ ವಿವೇಕಾನಂದರ ದರ್ಶನವಾಗುತ್ತದೆ. ಈ ಪ್ರತಿಮೆಯು 2020ರ ಫೆಬ್ರವರಿ 1ರಂದು ಉದ್ಘಾಟನೆಗೊಂಡಿದ್ದು, ಅಂದಿನಿಂದಲೂ ಇದು ಇಲ್ಲಿನ ಆಕರ್ಷಣೆಯ ತಾಣವಾಗಿ ಗುರುತಿಸಿಕೊಂಡಿದೆ.

ಪ್ರತಿಮೆಯ ಸುತ್ತ ಏನೇನಿದೆ?

ಒಳಾಂಗಣ ಆಟಗಳ ಮಂದಿರ (ಮಂಟಪ 1) ಇಲ್ಲಿ ಒಳಾಂಗಣ ಆಟಗಳಾದ ಅಳಗುಳಿ ಮನೆ, ಚದುರಂಗ, ಚೌಕಬಾರ, ಹಾವು ಏಣಿ, ಕೇರಂ ಮೊದಲಾದ ಆಟಗಳಿಗೆ ಅವಕಾಶ ಮಾಡಿಕೊಡಲಾಗಿದೆ.ಆಟವಾಡಿ ಉಲ್ಲಸಿತರಾಗಲು ಅವಕಾಶ ನೀಡಲಾಗಿದೆ. ಥೆರಪಿ ಕೇಂದ್ರ (ಸಂಶೋದನ) ಈ ಕೇಂದ್ರದಲ್ಲಿ ಥೆರಪೆಟಿಕ್ ಮಸಾಜ್, ಹಿಪ್ ಬಾತ್, ಆರ್ಮ್ಸ್ & ಫೂಟ್ ಬಾತ್, ಸೌನಾ ಬಾತ್, ಸ್ಟೀಮ್ ಬಾತ್, ಸ್ಪೈನಲ್ ಸ್ಪ್ರೇ ಹೀಗೆ ವೈವಿಧ್ಯಮಯ ಥೆರಪಿಗಳಿಗಾಗಿ ಸುಸಜ್ಜಿತ ಕೊಠಡಿಗಳಿವೆ. ನೂತನ ಉಪಕರಣಗಳೊಂದಿಗೆ ಇಲ್ಲಿ ಎಲ್ಲಾ ಥೆರಪಿಗಳನ್ನು ನಿರ್ವಹಿಸಲಾಗುತ್ತದೆ. ಯೋಗ ಮಂದಿರ (ಯೋಗಶ್ರೀ ಜಯಚಂದ್ರ) ಇಲ್ಲಿ ಯೋಗಕ್ಕಾಗಿ ವಿಶಾಲ ಯೋಗ ಮಂದಿರವಿದ್ದು, ನುರಿತ ಯೋಗ ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡಬಹುದು. ಇಲ್ಲಿ ಎಲ್ಲರೂ ಮಾಡಬಹುದಾದ ಮತ್ತು ಪರಿಣಾಮಕಾರಿ ಆಸನಗಳನ್ನು ಮಾಡಿಸಲಾಗುತ್ತಿದ್ದು, ಹೆಚ್ಚಾಗಿ ಓಡಾಡಲಾಗದವರೂ ಸೇರಿ ಎಲ್ಲ ವಯಸ್ಸಿನ ಜನರೂ ಭಾಗವಹಿಸುತ್ತಿರುವುದು ವಿಶೇಷ.

Kshemavana: ಕ್ಷೇಮವನ: ಸಾಧಕರ ಪಾಲಿನ ಆಕರ್ಷಕ ಆರೋಗ್ಯಧಾಮ

Vasukibana

ವಿವಿಧ ಚಿಕಿತ್ಸೆ

ಸೌಂದರ್ಯ ವೃದ್ಧಿ, ಬೊಜ್ಜು ನಿವಾರಣೆ, ದೇಹವನ್ನು ಸದೃಢವಾಗಿರಿಸಲು, ಅಂಗಾಂಗ ನೋವುಗಳ ನಿವಾರಣೆಯಂಥ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ ಇಲ್ಲಿ ಯೋಗ ಚಿಕಿತ್ಸೆಯನ್ನು ಕನ್ಸಲ್ಟೆನ್ಸಿಯೊಂದಿಗೆ ಹೇಳಿಕೊಡಲಾಗುತ್ತಿದೆ. ಹಾಸ್ಯಯೋಗದ ಮೂಲಕ ಮನರಂಜಿಸುತ್ತಲೇ ಚಿಕಿತ್ಸೆ ನೀಡುವುದು ಇಲ್ಲಿನ ಮತ್ತೊಂದು ವಿಶೇಷ. ಇಲ್ಲಿಗೆ ಭೇಟಿ ನೀಡುವ ಜನರು ತಮ್ಮ ಯೋಜಿತ ಪ್ಯಾಕೇಜ್ ಮುಗಿದ ನಂತರ ತಾವಾಗಿ ಅಳವಡಿಸಿಕೊಳ್ಳಬಹುದಾದ ಸರಳ ಯೋಗ ಕ್ರಮಗಳನ್ನು ಇಲ್ಲಿ ಅನುಸರಿಸಲಾಗುತ್ತದೆ. ಜಯಾಂಗಣ (ಪಾಕಶಾಲೆ) ಜಯಾಂಗಣ ಅಂದರೆ ಇಲ್ಲಿರುವ ರೆಸ್ಟೋರೆಂಟ್ ನ ಹೆಸರು. ಸುಸಜ್ಜಿತ ವ್ಯವಸ್ಥೆಯೊಂದಿಗೆ 50ಜನರು ಕುಳಿತುಕೊಳ್ಳಬಹುದಾದಷ್ಟು ವಿಶಾಲವಾಗಿದೆ. ಸಂಪೂರ್ಣ ಸಸ್ಯಾಹಾರಿಯಾಗಿದ್ದು, ಪ್ರತಿದಿನವೂ ವೈವಿಧ್ಯಮಯ ಭೋಜನಗಳನ್ನು ಸವಿಯಬಹುದು. ಪಾಕಶಾಲೆಯು ಇದಕ್ಕೆ ಅಂಟಿಕೊಂಡಂತಿದ್ದು ಸದಾ ಶುಚಿತ್ವ ನಿಮ್ಮ ಕಣ್ಣಿಗೆ ಬೀಳುತ್ತದೆ. ತರಕಾರಿಗಾಗಿ ಇಲ್ಲೇ ಸಾವಯವ ಕೃಷಿ ತೋಟವೊಂದನ್ನು ನಿರ್ವಹಿಸಲಾಗುತ್ತಿದ್ದು, ಇದರಿಂದ ಬೆಳೆದ ತರಕಾರಿಗಳನ್ನೇ ಅಡುಗೆಗೆ ಬಳಸಲಾಗುತ್ತಿರುವುದು ವಿಶೇಷ.

ಮಂದಿರ (ಮಂಟಪ 2) ಜಯಾಂಗಣದ ನಂತರ ಸಿಗುವುದು ಮಂದಿರ. ಇಲ್ಲಿ ಲಕ್ಷ್ಮೀ ಸಮೇತ ಶೇಷಶಯನ ವಿಗ್ರಹವನ್ನು ಇರಿಸಲಾಗಿದ್ದು, ಪ್ರಶಾಂತ ವಾತಾವರಣವಾದುದರಿಂದ ಮನಸನ್ನು ಅಹ್ಲಾದಕರಗೊಳಿಸುವ ಶಕ್ತಿ ಅಲ್ಲಿ ಅಡಕವಾಗಿದೆ. ಭಜನೆಯನ್ನು ಇಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಸುತ್ತಲೂ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಪ್ರಶಾಂತತೆಯ ಜತೆಗೆ ದೈವಿಕತೆಯ ಅನುಭೂತಿಯನ್ನು ಅಸ್ವಾದಿಸಬಹುದಾಗಿದೆ. ಇವೆಲ್ಲವೂ ಸ್ವಾಮಿ ವಿವೇಕಾನಂದರ ಸುತ್ತ ಒಂದು ಸುತ್ತಿನಲ್ಲೇ ನಿಮ್ಮ ಕಣ್ಣಿಗೆ ಬೀಳುವ ವೈಶಿಷ್ಟ್ಯಗಳು.

Jayangana

ಪ್ರಶಾಂತ ವಾಸಗೃಹ

ಪ್ರಶಾಂತ ವಾಸಗೃಹ ಎರಡು ಅಂತಸ್ತಿನ ಈ ಸುಂದರ ವಸತಿ ಗೃಹದಲ್ಲಿ ಏಕಕಾಲದಲ್ಲಿ 50 ಜನರು ಉಳಿದುಕೊಳ್ಳಬಹುದಾಗಿದೆ. ಇದಕ್ಕಾಗಿ 25 ಸುಸಜ್ಜಿತ ರೂಮ್‌ಗಳು ಇಲ್ಲಿವೆ. ಇರುವಷ್ಟು ದಿನಗಳು ಚೆನ್ನಾಗಿ ನಿಮ್ಮನ್ನು ನೋಡಿಕೊಳ್ಳುವ ಸಿಬ್ಬಂದಿ ನಿಮ್ಮ ಕರೆಗೆ ನಿಮಿಷಾರ್ಧದಲ್ಲಿ ಸ್ಪಂದಿಸುತ್ತಾರೆ. ಇಲ್ಲಿ ಉಳಿದುಕೊಳ್ಳುವ ಅಷ್ಟೂ ಹೊತ್ತು ನಿಮ್ಮ ನೆನಪಿನಲ್ಲಿ ಉಳಿಯುತ್ತವೆ. ಇಲ್ಲಿ ಒಟ್ಟಾರೆ ಐದು ವಿಧದ ರೂಮ್ಗಳು ಇದ್ದು, ಸ್ಪೆಷಲ್, ಡಿಲಕ್ಸ್ ಎಸಿ ರಹಿತ, ಎಸಿ ರೂಮ್, ಸೆಮಿ ಕಾಟೇಜ್ ಮತ್ತು ಕಾಟೇಜ್ ರೂಮ್‌ಗಳು ಇವೆ. ಪ್ರಕೃತಿಯ ಮಡಿಲಿನಲ್ಲಿನ ಈ ಕೋಣೆಗಳಲ್ಲಿ ಉಳಿದುಕೊಳ್ಳುವ ನೀವು ಬೆಳಗ್ಗೆ ಏಳುವುದು ಮಾತ್ರ ಹಕ್ಕಿಗಳ ಹಗಲಿನ ಚೆಲುವಿನ ಕರೆಗೆ. ಹಾಂ… ನೀವು ಓದುಗರಾಗಿದ್ದರೆ ರೂಮ್‌ಗಳಲ್ಲೇ ಇಡಲಾಗಿರುವ ವಿವೇಕ ಪ್ರಕಾಶನದ ವಿವಿಧ ಪುಸ್ತಕಗಳನ್ನು ಓದಿಕೊಳ್ಳಬಹುದು. ದಿನಚರಿಯ ಕುರಿತು ಮುದ್ರಿತ ಪ್ರತಿಯನ್ನು ಅಲ್ಲಿ ನೀಡಲಾಗಿರುತ್ತದೆ. ಓದಿಕೊಂಡು ಓಡಾಡಿಕೊಂಡು ಬರಬಹುದು.

ದಾರಿ ಹೇಗೆ?

ಬೆಂಗಳೂರು ಮಾರ್ಗವಾಗಿ ಹೊರಟರೆ ಕುಂದಾಪುರ ಸಮೀಪದ ಕೋಟಾದಲ್ಲಿ ಇಳಿದು ಅಲ್ಲಿಂದ ಸ್ಥಳೀಯ ಸಾರಿಗೆ ಮೂಲಕ ನೇರವಾಗಿ ಯೋಗಬನಕ್ಕೆ ತಲುಪಬಹುದು. ಸರ್ಕಾರಿ ಸಾರಿಗೆ ವ್ಯವಸ್ಥೆಯೂ ಇದೆ. ಬುಕಿಂಗ್‌ಗಾಗಿ ಇಲ್ಲಿ 3, 5 ಮತ್ತು 7 ದಿನಗಳ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌: https://www.shrfyoga.com/ ಇ-ಮೇಲ್: info@shrfyoga.com ದೂರವಾಣಿ ಸಂಖ್ಯೆ: 9606031231 / 9606031232 ಸಂಪರ್ಕಿಸಬಹುದು.

ನಿಸರ್ಗ ಮನೆ ವೇದ ವೆಲ್‌ನೆಸ್‌ ಸೆಂಟರ್‌ನಿಂದ ಶೇ. 100 ಆರೋಗ್ಯ

ವಿವೇಕಮಾರ್ಗದಲ್ಲೇ ಆರೋಗ್ಯ: ಡಾ. ವಿವೇಕ್ ಉಡುಪ

ಪೂಜ್ಯ ತಂದೆ ಚಂದ್ರಶೇಖರ ಉಡುಪ ಅವರು ಹಾಕಿಕೊಟ್ಟ ಮಾರ್ಗದಲ್ಲಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಅದನ್ನು ಜಗತ್ತಿನಾದ್ಯಂತ ಪಸರಿಸಬೇಕು ಮತ್ತು ಆರೋಗ್ಯ ಕ್ಷೇತ್ರಕ್ಕೂ ಅವರ ಆದರ್ಶಗಳನ್ನು ಅಳವಡಿಸಬೇಕು ಎಂಬ ಹಿರಿದಾಸೆಯ ಫಲವೇ ಇಂದು ಜನಪ್ರಿಯವಾಗಿರುವ ಯೋಗಬನ ಮತ್ತು ಡಿವೈನ್ ಪಾರ್ಕ್ ಎಂಬ ಅಪೂರ್ವ ಸಂಸ್ಥೆಗಳು.

ಡಾ. ವಿವೇಕ್ ಉಡುಪ, ಹುದ್ದೆಯ ವಿಚಾರಕ್ಕೆ ಬಂದರೆ ಎಸ್ ಎಚ್ ಆರ್ ಎಫ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಯೋಗಬನ ಮತ್ತು ಡಿವೈನ್ ಪಾರ್ಕ್ ನ ಕೇಂದ್ರಬಿಂದು ಇವರೇ. ಚಿಕಿತ್ಸೆಗೆಂದು ಬರುವವರ ಅಚ್ಚುಮೆಚ್ಚಿನ ವೈದ್ಯರು, ಸಲಹೆಗಾರರು ಮತ್ತು ಅಧ್ಯಾತ್ಮ ಗುರು, ವ್ಯಕ್ತಿತ್ವ ವಿಕಸನದ ಮಾರ್ಗದರ್ಶಿ ಏನು ಬೇಕಾದರೂ ಹೇಳಿ, ವಿವೇಕ್ ಉಡುಪ ಅವರು ಅವೆಲ್ಲ ಸ್ಥಾನಗಳಲ್ಲೂ ನಿಲ್ಲುತ್ತಾರೆ. ಸ್ವಾಮಿ ವಿವೇಕಾನಂದರ ತತ್ತ್ವಗಳನ್ನು, ಅವರು ಹೇಳಿಕೊಟ್ಟ ಜೀವನಕ್ರಮಗಳನ್ನು ಪೀಳಿಗೆಯಿಂದ ಪೀಳಿಗೆಗೆ ತಲುಪಿಸುತ್ತಲೇ ಅದನ್ನು ಆರೋಗ್ಯಕ್ರಮಕ್ಕೂ ಕನೆಕ್ಟ್ ಮಾಡುವ ವಿಶೇಷ ವಿಧಾನ ಡಾ. ವಿವೇಕ್ ಉಡುಪರಿಗೆ ಸಿದ್ಧಿಸಿದೆ.

ಎಸ್ ಡಿ ಎಂ ಕಾಲೇಜ್ ನಲ್ಲಿ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ನಲ್ಲಿ ವೈದ್ಯ ಪದವಿ ಪಡೆದು ನಂತರ ಯೋಗ ಮತ್ತು ರಿಹ್ಯಾಬಿಲಿಟೇಶನ್ ನಲ್ಲಿ ಎಂಡಿ ಕೂಡ ಪಡೆದವರು ಡಾ.ವಿವೇಕ್. ಈ ವಿಭಾಗದಲ್ಲಿ ಎಂಡಿ ಪದವಿ ಪಡೆದ ಮೊದಲ ವ್ಯಕ್ತಿ ಅಂದರೆ ಅದು ಡಾ.ವಿವೇಕ್ ಉಡುಪ. ರಾಜೀವ್ ಗಾಂಧಿ ಹೆಲ್ತ್ ಸೈನ್ಸಸ್ ಯೂನಿವರ್ಸಿಟಿಯಲ್ಲಿ ಬಿಎನ್ ವೈ ಎಸ್ ಮಾಡುತ್ತಾ ನಾಲ್ಕೂ ವರ್ಷಗಳೂ ಟಾಪರ್ ಆಗಿದ್ದು ಇವರ ಹೆಗ್ಗಳಿಕೆ. ಇದಕ್ಕಾಗಿ ಇವರಿಗೆ ಜಿಂದಾಲ್ ಗೋಲ್ಡ್ ಮೆಡಲ್ ಕೂಡ ನೀಡಲಾಯಿತು. ಚಿಕಿತ್ಸೆಯ ಜತೆಗೆ ಅತ್ಯುತ್ತಮ ಉಪನ್ಯಾಸಕಾರರೂ ಆಗಿರುವ ಇವರ ಮಾತುಗಳಿಂದ ಪ್ರಭಾವಿತರಾದವರು, ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸುಧಾರಣೆ ಕಂಡವರು ಸಾವಿರಾರು ಮಂದಿ. ರಾಜ್ಯಾದ್ಯಂತ ಮಾತ್ರವಲ್ಲ ದೇಶಾದ್ಯಂತ ಇವರು ಬೇಡಿಕೆಯ ಮೇರೆಗೆ ಶಿಬಿರಗಳನ್ನು ಆಯೋಜಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಜಾಗೃತಿ ಶಿಬಿರಗಳನ್ನು ಆಯೋಜಿಸಿ ಅರವತ್ತೈದು ಸಾವಿರಕ್ಕೂ ಹೆಚ್ಚು ಮಂದಿಗೆ ಆರೋಗ್ಯ ಸೇವೆ ನೀಡಿದ ಹಿರಿಮೆ ಇವರದ್ದು. ಟೈಮ್ಸ್ ಹೆಲ್ತ್ ಎಕ್ಸೆಲೆನ್ಸ್ ಅವಾರ್ಡ್, ಟೈಮ್ಸ್ ಪವರ್ ಐಕಾನ್ ಸೇರಿದಂತೆ ಹತ್ತು ಹಲವು ಗೌರವಗಳಿಗೆ ಭಾಜನರಾಗಿರುವ ಡಾ.ವಿವೇಕ್ ಅವರದು ಪ್ರಶಸ್ತಿ ಮತ್ತು ಹೆಸರಿಗಿಂತ ಸೇವಾ ಕಾರ್ಯದಲ್ಲೇ ಹೆಚ್ಚು ತೃಪ್ತಿ ಕಾಣುತ್ತಿರುವ ಅಪರೂಪದ ವ್ಯಕ್ತಿತ್ವ.

ವಿಂಟೇಜ್ ಕಾರುಗಳ 'ಪಯಣ'; ಜಗತ್ತನ್ನೇ ಆಕರ್ಷಿಸುತ್ತಿದೆ ಈ ಮಾದರಿ ಮ್ಯೂಸಿಯಂ

ಭಾರತದಲ್ಲಿ ಯೋಗ ಮತ್ತು ರಿಹ್ಯಾಬಿಟೇಷನ್‌ ವಿಷಯದಲ್ಲಿ MD ಪದವಿ ಪಡೆದವರಲ್ಲಿ ಡಾ. ಎ.ವಿವೇಕ ಉಡುಪ ಅವರು ಮೊದಲಿಗರು. ಡಿವೈನ್‌ ಪ್ರಾರ್ಕ್‌ ಪ್ರತಿಷ್ಠಾನದ ಆರೋಗ್ಯ ವಿಭಾಗವಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತದ್ದಾರೆ. ದೇಶ ವಿದೇಶಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕುರಿತು ತಿಳಿಸಲು ಉಚಿತ ಶಿಬಿರಗಳನ್ನು ಮಾಡಿದ್ದಾರೆ.

Yogabana room

ಡಾ. ಚಂದ್ರಶೇಖರ ಉಡುಪರ 75 ವರ್ಷಗಳ ಸಾರ್ಥಕ ಜೀವನ

ಶ್ರೀ ಗುರೂಜಿ ಅನ್ನುವಂಥದ್ದು ಸ್ವಾಮಿ ವಿವೇಕಾನಂದರ ಜಾಗೃತ ಚೇತನ. ಅದನ್ನು ಡಿವೈನ್ ಪಾರ್ಕ್ ನಲ್ಲಿ ಬಹಳ ಗೌರವದಿಂದ ಶ್ರೀ ಗುರೂಜಿ ಎಂದು ಸಂಬೋಧಿಸಲಾಗುತ್ತದೆ. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೋದ್ಧಾರದ ಕನಸನ್ನು ನನಸಾಗಿಸುವಲ್ಲಿ ಕಳೆದ ಸುಮಾರು ನಲವತ್ತೈದು ವರ್ಷಗಳಿಂದ ಡಿವೈನ್ ಪಾರ್ಕ್ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಎಪ್ಪತ್ತರ ದಶಕದಲ್ಲಿ ಡಾ. ಚಂದ್ರಶೇಖರ ಉಡುಪರು ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ಅವರ ಜೀವನದ ಮೇಲೆ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾದವರು. ಅದರ ಫಲವೇ ಡಿವೈನ್ ಪಾರ್ಕ್ ಎಂಬ ಪರಿಕಲ್ಪನೆ. ಆರೋಗ್ಯ ಮತ್ತು ಅಧ್ಯಾತ್ಮದ ಚಿಂತನೆಯಲ್ಲಿ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಒಳಿತು ಮಾಡುವ ನಿಟ್ಟಿನಿಂದ ಪ್ರಾರಂಭಿಸಿದ ಡಿವೈನ್ ಪಾರ್ಕ್ ಗೆ ಈಗ ಸುವರ್ಣ ಸಂಭ್ರಮ. ಅಂದರೆ ಐವತ್ತು ವರ್ಷಗಳು ತುಂಬುತ್ತಿದೆ. ಡಾ. ಚಂದ್ರಶೇಖರ ಉಡುಪ ಅವರು ಎಪ್ಪತ್ತೈದರ ತುಂಬುಸಾರ್ಥಕತೆಯ ಸಂತೃಪ್ತಿ ಕಾಣುತ್ತಿದ್ದಾರೆ. ತಾವು ನೆಟ್ಟ ಸಸಿಯೊಂದು ಬೃಹತ್ತಾಗಿ ಬೆಳೆದು ಟಿಸಿಲೊಡೆದು ಯೋಗಬನವೆಂಬ ಹೆಸರಿನ ಸಂಸ್ಥೆಯಾಗಿ ಅದನ್ನು ತಮ್ಮ ಹೆಮ್ಮೆಯ ಪುತ್ರ ಡಾ. ವಿವೇಕ್ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿರುವುದನ್ನು ಕಂಡಿದ್ದಾರೆ.

ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಂಪೂರ್ಣ ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಿಕೊಂಡವರು ಚಂದ್ರಶೇಖರ ಉಡುಪ ಅವರು. ಇಲ್ಲಿಗೆ ಬರುವ ಜನರಿಗೆ ಸ್ಮಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚುವ ಮೂಲಕ ಚಿಕಿತ್ಸಕ ಮನಸಿನಿಂದ ಮಾತನಾಡಿಸುವ ಶ್ರೀಯುತರಿಗೆ ಜನರು ಗೌರವ ಮತ್ತು ಅಕ್ಕರೆಯಿಂದ ಡಾಕ್ಟರ್‌ಜೀ ಎಂದೇ ಕರೆಯುತ್ತಾರೆ. God is nowhere ಅಲ್ಲ God is now here ಎನ್ನುವ ಆಧ್ಯಾತ್ಮಿಕ ಚಿಂತನೆ ಹಂಚುತ್ತಾ ತಮ್ಮಲ್ಲಿಗೆ ಬರುವ ಪ್ರತಿ ಮನಸುಗಳಲ್ಲೂ ಶಕ್ತಿ ತುಂಬುವ ಪ್ರೇರಣಾದಾಯಕ ವ್ಯಕ್ತಿತ್ವ ಇವರದು. ಆಧ್ಯಾತ್ಮದ ಮೂಲಕ ಜನರ ಆರೋಗ್ಯವನ್ನು ಸುಧಾರಿಸಬಹುದು ಎನ್ನುವ ಚಿಂತನೆಯಿಂದ ಡಿವೈನ್‌ ಪಾರ್ಕ್‌ನ ಮುಂದುವರೆದ ಭಾಗವಾಗಿ ಎಸ್‌ಎಚ್‌ಆರ್‌ಎಫ್‌ (ಯೋಗಬನ) ಸ್ಥಾಪಿಸಿದರು. ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಕ ಕ್ರಮವನ್ನೂ ಮುನ್ನೆಲೆಗೆ ತಂದ ಅವರ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಶ್ರೀಯುತರ ಕನಸಿನ ಕೂಸಾಗಿ ಇಂದಿಗೆ ಸಾಕಷ್ಟು ಜನರನ್ನು ತನ್ನತ್ತ ಸೆಳೆಯುತ್ತಿದೆ. ಸಂಸ್ಥೆಗೆ ಐವತ್ತು ತುಂಬುತ್ತಿರುವ ಸಂದರ್ಭದಲ್ಲಿ ಹಾಗೆಯೇ ಚಂದ್ರಶೇಖರ ಉಡುಪ ಅವರು ಅಮೃತಮಹೋತ್ಸವ ವರ್ಷದಲ್ಲಿರುವ ಸಮಯದಲ್ಲಿ ಯೋಗಬನ ಮತ್ತು ಡಿವೈನ್ ಪಾರ್ಕ್ ಗಳ ಹಿರಿಮೆ ತಿಳಿಸುವುದು ಸಕಾಲಿಕವೂ ಹೌದು ಅರ್ಥಪೂರ್ಣವೂ ಹೌದು.

image

ಯೋಗಬನದಲ್ಲಿ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಇಲ್ಲಿ ಯೋಗವನ್ನು ಜೀವನ ಕ್ರಮವಾಗಿ ಹೇಳಿ ಕೊಡಲಾಗುತ್ತದೆ. ಇಲ್ಲಿಗೆ ಬಂದವರಿಗೆ ಚಿಕಿತ್ಸೆ ನೀಡಿ ಗುಣಪಡಿಸುವುದು ಮಾತ್ರವಲ್ಲ, ಅದರ ಜತೆಗೆ ಅವರು ಮನೆಗಳಿಗೆ ಮರಳಿದ ನಂತರವೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹೇಳಿಕೊಡಲಾಗುತ್ತದೆ. ಇಲ್ಲಿ ಆಧ್ಯಾತ್ಮಿಕ ಚಿಕಿತ್ಸೆಯ ಭಾಗವಾಗಿ ಭಜನೆ ಕಾರ್ಯಕ್ರಮವಿರುತ್ತದೆ. ಅ, ಉ, ಅಂ ಕಾರಗಳ ಚಾಂಟಿಂಗ್, ಸದ್ಗ್ರಂಥ ಪಠಣವನ್ನು ಮಾಡಿಸಲಾಗುತ್ತದೆ. ಇಡೀ ಪ್ರತಿಷ್ಠಾನ ದೇವಸ್ಥಾನದ ವಾಸ್ತುಶಿಲ್ಪದಲ್ಲಿದ್ದು, ಹೃದಯ ಭಾಗದಲ್ಲಿರುವ ಕಮಲದ ಆಕಾರದ ಮಧ್ಯೆ ಜಗತ್ತಿನ ಅತಿ ಎತ್ತರದ ವಿವೇಕಾನಂದರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅನವಶ್ಯಕ ಮಾತ್ರೆಗಳನ್ನು ಬಿಡಿಸುವುದೂ ನಮ್ಮ ಉದ್ದೇಶ. ಸ್ವಾಮಿ ವಿವೇಕಾನಂದರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಲಾಗಿರುವ ಪ್ರತಿಷ್ಠಾನವಿದು. ಪ್ರತಿ ತಿಂಗಳಿನ ಎರಡನೇ ಶನಿವಾರ ಇಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ. ನೂರಾರು ಜನರು ಅಂದು ಇಲ್ಲಿ ಸೇರಿರುತ್ತಾರೆ.

ಡಾ. ಶ್ರೀ ಗಣೇಶ್, ಅಸೋಸಿಯೇಟ್ ಡೈರೆಕ್ಟರ್, ಅಡ್ಮಿನಿಸ್ಟ್ರೇಷನ್ ಅಂಡ್ ಮಾರ್ಕೆಟಿಂಗ್,
image

ಯೋಗಬನ ಶಿಬಿರದಲ್ಲಿ ಆಹಾರ ವಿಧಾನ, ತಪಾಸಣೆ, ಸುಂದರ ಪ್ರಕೃತಿಯ ಮಧ್ಯೆ ವಿಹಾರ, ರಜೆಯ ಮನರಂಜನೆ ಹೀಗೆ ವಿವಿಧ ಕಾರಣಗಳಿಂದ ಇಲ್ಲಿಗೆ ಜನರು ಬರುತ್ತಾರೆ. ಯೋಗ, ಹಾಸ್ಯ ಯೋಗ ಹೀಗೆ ಸುಧಾರಿತ ಮತ್ತು ತುಂಬಾ ಸರಳ ಯೋಗ ಮತ್ತು ಪ್ರಾಣಾಯಾಮಗಳನ್ನು ಇಲ್ಲಿ ಹೇಳಿಕೊಡುತ್ತೇವೆ. ಯಾವುದೇ ವಯಸ್ಕರು ಇಲ್ಲಿಗೆ ಬರಬಹುದು. ಉಪವಾಸವನ್ನು ಹೆಚ್ಚಾಗಿ ಶಿಫಾರಸು ಮಾಡುವುದಿಲ್ಲ. ಮೂರು ಹೊತ್ತು ಊಟ ಜತೆಗೆ ಸಂಜೆಯ ಹೊತ್ತಿಗೆ ಒಂದು ಲಘು ಉಪಾಹಾರವನ್ನು ನೀಡಲಾಗುತ್ತದೆ. ಒಳಾಂಗಣ ಆಟಗಳನ್ನು ಆಡಬಹುದು. ಹೊರಾಂಗಣ ಆಟಗಳಿಗಾಗಿ ವಿಶಾಲ ಸ್ಥಳ ಅವಕಾಶವಿದೆ. ಅನವಶ್ಯಕ ಮಾತ್ರೆಗಳನ್ನು ಬಿಡುವುದರ ಜತೆಗೆ ಮೊದಲು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ಕಡಿಮೆ ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಿನ ಮುಂದೆ ಇವೆ. ಸೌಂದರ್ಯದ ವೃದ್ಧಿ, ತೂಕ ಹೆಚ್ಚಿಸಲು ಮತ್ತು ಕಡಿಮೆ ಮಾಡಿಕೊಳ್ಳಲು, ಒತ್ತಡಗಳ ನಿವಾರಣೆಗೆ ಇಲ್ಲಿಗೆ ಸಾಕಷ್ಟು ಜನರು ಬರುತ್ತಾರೆ. ಅವರಿಗೆ ಇಲ್ಲಿನ ಚಿಕಿತ್ಸಕ ಕ್ರಮಗಳೂ ಇಷ್ಟವಾಗಿವೆ.

ಷಣ್ಮುಖ, ಅಸೋಸಿಯೇಟ್ ಡೈರೆಕ್ಟರ್, ಯೋಗ ಥೆರಪಿಸ್ಟ್.
image

ನನಗೆ ಈಗಾಗಲೇ 81ವರ್ಷಗಳು ತುಂಬಿವೆ. ಈ ಯೋಗಬನದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದೆ. ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು ಎನ್ನುವ ಮನಸಾಗಿತ್ತು. ಅದರಂತೆ ನಾನು ನನ್ನ ಸ್ನೇಹಿತರ ಜತೆಗೂಡಿ ಬಂದಿದ್ದೇನೆ. ನನ್ನದು ಧಾರವಾಡ. ಅಲ್ಲಿಂದ ಇಲ್ಲಿಗೆ ಬರುವ ಮಧ್ಯೆ ಪ್ರಯಾಣವನ್ನೂ ನಾನು ಆನಂದಿಸಿದ್ದೇನೆ. ಯೋಗಬನ ಬಹಳ ಸ್ವಚ್ಛಂದವಾಗಿದೆ. ಇಲ್ಲಿನ ಸಿಬ್ಬಂದಿ ಸೇವೆ ಮತ್ತು ಊಟ ತುಂಬಾ ಚೆನ್ನಾಗಿದೆ. ವಾಕಿಂಗ್ ಸಮಯದಲ್ಲಿ ಪ್ರಾಣಿ, ಪಕ್ಷಿಗಳ ಧ್ವನಿ ಕೇಳುವುದು ಅಹ್ಲಾದಕರ ಎನಿಸುತ್ತದೆ. ಯೋಗಬನದ ಸಂಸ್ಥಾಪಕರ ಆಟೊಬಯೋಗ್ರಫಿಯನ್ನು ಓದಿದೆ. ಅವರು ಆದರ್ಶಪ್ರಾಯರು. ಯೋಗಬನದ ಆರ್ಕಿಟೆಕ್ಚರ್ ಸುವ್ಯವಸ್ಥಿತವಾಗಿದೆ. ಇಲ್ಲಿ ಯೋಗಗುರುಗಳು ಸರಳವಾದ ಯೋಗಾಸನ ಮತ್ತು ಪ್ರಾಣಾಯಾಮದ ನಡುವೆ ಹಾಸ್ಯವನ್ನು ಕೂಡಿಸಿ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ.

ಡಾ. ಭೂಪೇಂದ್ರ ಒಡೆಯರ್, ನಿವೃತ್ತ ಪ್ರೊಫೆಸರ್, ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ
image

ಯೂಟ್ಯೂಬ್‌ನಲ್ಲಿ ಈ ಯೋಗಬನದ ಕುರಿತು ನೋಡಿದ್ದೆ. ಅದರಲ್ಲಿ ನೋಡಿದಂತೆ ಯೋಗಬನ ಇರುವುದಿಲ್ಲ ಎಂದೇ ಅನಿಸಿತ್ತು. ಆಗ ಮಳೆಗಾಲವಾಗಿದ್ದರಿಂದ ಬರಲು ಸಾಧ್ಯವಾಗಿರಲಿಲ್ಲ. ಮಳೆಗಾಲ ಮುಗಿದ ನಂತರ ಏನೇ ಆಗಲಿ, ಒಮ್ಮೆಯಾದರೂ ಭೇಟಿ ನೀಡೋಣ ಎಂದುಕೊಂಡೇ ಬಂದೆ. ಇಲ್ಲಿ ಎಲ್ಲವೂ ತುಂಬಾ ಸುಂದರವಾಗಿದೆ. ಕಿವಿಯ ತೊಂದರೆ ನಿವಾರಣೆ ಮತ್ತು ತೂಕ ಹೆಚ್ಚಿಸಿಕೊಳ್ಳಲು ಇಲ್ಲಿಗೆ ಬಂದಿದ್ದೆ. ಈಗ ಭರವಸೆ ಮೂಡಿದೆ. ಇಲ್ಲಿಂದ ಮರಳಿದ ಮೇಲೆ ಪರಿಚಯದವರಿಗೂ ಈ ಕುರಿತು ಹೇಳುವ ಆಸೆ ನನ್ನಲ್ಲಿದೆ. ಡಾ. ವಿವೇಕ್ ಅವರೂ ತುಂಬಾ ಆತ್ಮೀಯವಾಗಿ ನಮ್ಮನ್ನು ವಿಚಾರಿಸುತ್ತಾರೆ. ಊಟೋಪಚಾರ, ವಾತಾವರಣ, ವಾಸ್ತವ್ಯ ಎಲ್ಲವೂ ತುಂಬಾ ಚೆನ್ನಾಗಿದೆ.

ಉಮಾ ಸೋಮಶೇಖರ್ ಹಿರೇಮಠ್, ಬೆಳಗಾವಿ