ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ವೇಳೆ ಘರ್ಷಣೆ; ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಮೇಲೆ ಹಲ್ಲೆ
West Bengal sees high drama: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2026ರ ಎರಡನೇ ಹಂತದ ಮತದಾನವು ಏಪ್ರಿಲ್ 29ರಂದು ಹೆಚ್ಚಿನ ಉದ್ವಿಗ್ನತೆಗೆ ಸಾಕ್ಷಿಯಾಯಿತು. ಆರ್ಜಿ ಕರ್ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಮತ್ತು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ವೇಳೆ ಘರ್ಷಣೆ -
ಕೋಲ್ಕತ್ತಾ, ಏ. 29: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ (West Bengal Election) 2026ರ ಎರಡನೇ ಹಂತದ ಮತದಾನವು ಏಪ್ರಿಲ್ 29ರಂದು ಹೆಚ್ಚಿನ ಉದ್ವಿಗ್ನತೆಗೆ ಸಾಕ್ಷಿಯಾಯಿತು. ವಿಶೇಷವಾಗಿ ಕೋಲ್ಕತ್ತಾದ ಭಬಾನಿಪುರ ಕ್ಷೇತ್ರದಲ್ಲಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamatha Banerjee) ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಆರ್ಜಿ ಕರ್ ಸಂತ್ರಸ್ತೆಯ ತಾಯಿ, ಬಿಜೆಪಿ ಅಭ್ಯರ್ಥಿ ರತ್ನಾ ದೇಬ್ನಾಥ್ ಮತ್ತು ಸುವೇಂದು ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಇದು ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಮತಗಟ್ಟೆಗೆ ಭೇಟಿ ನೀಡುತ್ತಿದ್ದಾಗ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. "ಬೂತ್ ಸಂಖ್ಯೆ 217ರಲ್ಲಿ ಗೂಂಡಾಗಳು ನನ್ನ ಮೇಲೆ ದಾಳಿ ನಡೆಸಿದರು. ಮಮತಾ ಅವರ ಗೂಂಡಾಗಳು ಮತದಾರರಲ್ಲ; ಅವರೆಲ್ಲರೂ ಹೊರಗಿನವರು" ಎಂದು ಸುವೇಂದು ಅಧಿಕಾರಿ ತಿಳಿಸಿದರು.
ಟಿಎಂಸಿ ಗೂಂಡಾಗಳ ಬೆನ್ನಟ್ಟಿದ ಸುವೇಂದು ಅಧಿಕಾರಿ:
ಮತಗಟ್ಟೆಯಲ್ಲಿರುವ ವ್ಯಕ್ತಿಗಳು ಕಾನೂನುಬದ್ಧ ಮತದಾರರಲ್ಲ ಎಂದು ಹೇಳಿದ ಅವರು, ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಒತ್ತಾಯಿಸಿದರು. “ಅವರು ಮತದಾರರಲ್ಲ, ಅವರು ಹೊರಗಿನವರು. ಅವರು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಸಿಆರ್ಪಿಎಫ್ ಅನ್ನು ಇಲ್ಲಿಗೆ ಕಳುಹಿಸಿ. ಇಲ್ಲಿ ಬಲಪ್ರಯೋಗ ಮಾಡುವವರೆಗೆ ನಾನು ಎಲ್ಲಿಗೂ ಹೋಗುವುದಿಲ್ಲ” ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ; ಮತದಾರರ ಒಲವು ಯಾರ ಕಡೆ?
ಸುವೇಂದು ಅಧಿಕಾರಿಯನ್ನು ಟಿಎಂಸಿ ಬೆಂಬಲಿಗರು ಜೈ ಬೆಂಗಾಲ್ ಎಂಬಂತಹ ಘೋಷಣೆಗಳನ್ನು ಕೂಗುತ್ತಾ ಸುತ್ತುವರಿದಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು, ಜೈ ಶ್ರೀ ರಾಮ್ ಮತ್ತು ಹಿಂದೂ ಹಿಂದೂ ಭಾಯಿ ಭಾಯಿ ಘೋಷಣೆಗಳೊಂದಿಗೆ ಪ್ರತಿಕ್ರಿಯಿಸಿದರು. ನಂತರ ಸಿಆರ್ಪಿಎಫ್ ಮತ್ತು ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿ ಜನಸಮೂಹವನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.
ಇನ್ನು ಸುವೇಂದು ಅಧಿಕಾರಿ ಮತಗಟ್ಟೆಗಳಲ್ಲಿ ಹಾಜರಿದ್ದ ಜನಸಮೂಹದ ಬಗ್ಗೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರು. “ಅವರೆಲ್ಲರೂ ಬಾಂಗ್ಲಾದೇಶಿ ಮುಸ್ಲಿಮರು. ಅವರು ಭಯಭೀತರಾಗಿದ್ದಾರೆ. ಮಮತಾ ಅವರನ್ನು ನಿರ್ನಾಮ ಮಾಡಲಾಗುವುದು” ಎಂದು ಹೇಳಿದರು.
ನಾಡಿಯಾದಲ್ಲಿ ಬಿಜೆಪಿ ಬೂತ್ ಏಜೆಂಟ್ ಮೇಲೆ ದಾಳಿ
ಭಾರಿ ಭದ್ರತೆಯ ನಡುವೆಯೂ ಎರಡನೇ ಹಂತದ ಮತದಾನದ ವೇಳೆ ಘರ್ಷಣೆ ನಡೆದಿರುವ ಘಟನೆ ಬುಧವಾರ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬಿಜೆಪಿ ಬೂತ್ ಏಜೆಂಟ್ ಒಬ್ಬ ತನ್ನ ಮೇಲೆ ಟಿಎಂಸಿ (TMC) ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ. ಮತದಾನದ ವೇಳೆ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಹಿಂಸಾಚಾರ ನಡೆದಿದ್ದು, ನಾಡಿಯಾದಲ್ಲಿ ಟಿಎಂಸಿ ಕಾರ್ಯಕರ್ತರ ದಾಳಿ ಮತ್ತು ಹೌರಾದಲ್ಲಿ ಇವಿಎಂ ದೋಷದಿಂದಾಗಿ ಘರ್ಷಣೆಗಳು ಉಂಟಾಗಿದೆ.