ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವರ್ಷದ ಹಿಂದೆ ವಿಮಾನ ದುರಂತದಲ್ಲಿ ಮಗ ಸಾವು; ಈಗ ಏರ್ ಇಂಡಿಯಾ ಅಪಘಾತದಲ್ಲಿ ತಂದೆ-ತಾಯಿ ಬಲಿ

Ahmedabad Plane Crash: ಜೂ. 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್‌ ಮೂಲದ ದಂಪತಿ ಬಲಿಯಾಗಿದ್ದಾರೆ. ವಿಶೇಷ ಎಂದರೆ ಕಳೆದ ವರ್ಷ ನಡೆದ ವಿಮಾನ ಅಪಘಾತದಲ್ಲಿ ಈ ದಂಪತಿಯ ಪುತ್ರ ಮೃತಪಟ್ಟಿದ್ದರು.

ಮಗನಂತೆ ತಂದೆ-ತಾಯಿಯೂ ವಿಮಾನ ಅಪಘಾತಕ್ಕೆ ಬಲಿ

Profile Sushmitha Jain Jun 14, 2025 9:12 PM

ಗಾಂಧಿನಗರ: ಜೂ. 12ರ ಮಧ್ಯಾಹ್ನ ಅಹಮದಾಬಾದ್‌ನ (Ahmedabad) ಏರ್ ಇಂಡಿಯಾ (Air India) ವಿಮಾನ ದುರಂತ ಗುಜರಾತ್‌ನ ಜಾಮ್‌ನಗರ (Jamnagar) ಬಕ್ಷಿ ಕುಟುಂಬಕ್ಕೆ ಅಪಾರ ದುಃಖ ತಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆಯನ್ನು ಭೇಟಿಯಾಗಲು ಜಾಮ್‌ನಗರಕ್ಕೆ ಬಂದಿದ್ದ ಲಂಡನ್‌ನಲ್ಲಿ (London) ವಾಸಿಸುವ ದಂಪತಿ, ನೆಹಲ್‌ಬೆನ್ ಮತ್ತು ಆಕೆಯ ಪತಿ ಶೈಲೇಶ್‌ ಭಾಯ್ ಪರ್ಮಾರ್ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಈ ದಂಪತಿಯ ಏಕೈಕ ಮಗ ಹಿತ್ ಕೂಡ ವಿಮಾನ ದುರಂತದಲ್ಲಿ ಮೃತಪಟ್ಟಿದ್ದ. ಒಂದೇ ವರ್ಷದಲ್ಲಿ ಕುಟುಂಬದ ಮೂವರನ್ನು ಕಳೆದುಕೊಂಡ ಬಕ್ಷಿ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.

ಕಾಲಚಕ್ರದ ಕ್ರೌರ್ಯವನ್ನು ಈ ಘಟನೆ ತೋರಿಸಿದೆ. ಹರಿಹರಭಾಯ್ ಬಕ್ಷಿಯ ಕಾಯಿಲೆಯಿಂದಾಗಿ ಅವರ ಮಗಳು ನೆಹಲ್‌ಬೆನ್ ಜಾಮ್‌ನಗರಕ್ಕೆ ಬಂದಿದ್ದರು. ಬಳಿಕ ಶೈಲೇಶ್‌ ಭಾಯ್ ಆಗಮಿಸಿದ್ದರು. ದಂಪತಿ ಜೂನ್ 12ರಂದು ಜಾಮ್‌ನಗರದಿಂದ ಅಹಮದಾಬಾದ್‌ಗೆ ತೆರಳಿ, ಏರ್ ಇಂಡಿಯಾದ AI171 ವಿಮಾನದಲ್ಲಿ ಲಂಡನ್‌ಗೆ ಪಯಣ ಬೆಳೆಸಿದ್ದರು. ಆದರೆ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು.

ಈ ಸುದ್ದಿಯನ್ನೂ ಓದಿ: Vijay Rupani: 12 ಸ್ನೇಹಿತರು, ಜೂನ್ 12, ಸೀಟ್ ಸಂಖ್ಯೆ 12: ವಿಜಯ್ ರೂಪಾನಿಗೆ ಕಾಲೇಜು ಸ್ನೇಹಿತರಿಂದ ಕ‍ಣ್ಣೀರ ವಿದಾಯ

ಕಳೆದ ವರ್ಷ ಸ್ಪೇನ್‌ನಲ್ಲಿ ವಿಮಾನ ಚಾಲನಾ ತರಬೇತಿಯ ಕೊನೆಯ ಹಂತದಲ್ಲಿದ್ದ 26 ವರ್ಷದ ಹಿತ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದ. ಈಗ ಆತನ ತಂದೆ-ತಾಯಿಯೂ ಇದೇ ರೀತಿಯ ದುರಂತಕ್ಕೆ ಬಲಿಯಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ನೆಹಲ್‌ಬೆನ್‌ರ ಸೋದರ ಸಂಬಂಧಿ ಮತ್ತು ಕುಟುಂಬದವರು ಜಾಮ್‌ ನಗರದಿಂದ ಅಹಮದಾಬಾದ್‌ಗೆ ಧಾವಿಸಿದ್ದಾರೆ. ಜಾಮ್‌ ನಗರದ ಪಂಚವಟಿ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.

ನೆಹಲ್‌ಬೆನ್ ಮೊದಲಿಗೆ ಮೇ 31ರಂದು ಲಂಡನ್‌ಗೆ ಏಕಾಂಗಿಯಾಗಿ ಮರಳಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಶೈಲೇಶ್‌ ಭಾಯ್ ಆಗಮನದಿಂದಾಗಿ ಆ ಟಿಕೆಟ್ ರದ್ದುಗೊಳಿಸಿ ಜೂನ್ 12ರ ಫ್ಲೈಟ್‌ಗೆ ಇಬ್ಬರೂ ಟಿಕೆಟ್ ಬುಕ್ ಮಾಡಿದ್ದರು. ಆದರೆ ಇದೀಗ ಇಬ್ಬರೂ ಮೃತಪಟ್ಟಿದ್ದಾರೆ.

“ಸೆಕ್ಯುರಿಟಿ ಚೆಕ್ ಮುಗಿದಿದೆ, ಲಗೇಜ್ ಇಡಲಾಗಿದೆ, ಗೇಟ್ ನಂಬರ್‌ಗೆ ಕಾಯುತ್ತಿದ್ದೇವೆ. ಎಲ್ಲರ ಪ್ರೀತಿಗೆ ಧನ್ಯವಾದ, ಶೀಘ್ರ ಭೇಟಿಯಾಗೋಣ” ಎಂದು ವಿಮಾನದಲ್ಲಿ ಕುಳಿತುಕೊಳ್ಳುವ ಮೊದಲು ದಂಪತಿ ಕುಟುಂಬಕ್ಕೆ ಕೊನೆಯ ಸಂದೇಶ ಕಳುಹಿಸಿದ್ದರು. ಈ ಸಂದೇಶದ ಕೆಲವೇ ನಿಮಿಷಗಳಲ್ಲಿ ದಂಪತಿ ಶಾಶ್ವತವಾಗಿ ವಿದಾಯ ಹೇಳಿದ್ದು, ಕುಟುಂಬ ಕಂಗಾಲಾಗಿದೆ.