ಜಮ್ಮು-ಕಾಶ್ಮೀರದಲ್ಲಿ ಇರಾನ್ಗೆ ನೀಡಿದ್ದ ದೇಣಿಗೆ ದುರುಪಯೋಗ ಶಂಕೆ; ಮಧ್ಯವರ್ತಿಗಳ ವಿರುದ್ಧ ತನಿಖೆ ಶುರು
Iran donations: ಕಾಶ್ಮೀರ ಕಣಿವೆಯಲ್ಲಿ ಯುದ್ಧಪೀಡಿತ ಇರಾನ್ಗೆ ದೊಡ್ಡ ಪ್ರಮಾಣದ ದೇಣಿಗೆಗಳು ಬರುತ್ತಿರುವುದರಿಂದ, ಭಾರತ ವಿರೋಧಿ ಚಟುವಟಿಕೆಗಳಿಗೆ ಸಹಾಯ ಮಾಡಲು ಹಣವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಮಧ್ಯವರ್ತಿಗಳು ಸಂಗ್ರಹಿಸುವ ಹಣ ಇರಾನ್ಗೆ ತಲುಪದಿರಬಹುದು.
ಇರಾನ್ ದೇಣಿಗೆಗಳ ದುರುಪಯೋಗ ಶಂಕೆ -
ಶ್ರೀನಗರ, ಮಾ.26: ಕಾಶ್ಮೀರ ಕಣಿವೆಯಲ್ಲಿ ಯುದ್ಧಪೀಡಿತ ಇರಾನ್ಗೆ (Iran) ದೊಡ್ಡ ಪ್ರಮಾಣದ ದೇಣಿಗೆಗಳು ಬರುತ್ತಿರುವುದರಿಂದ, ಭಾರತ ವಿರೋಧಿ ಚಟುವಟಿಕೆಗಳಿಗೆ ಸಹಾಯ ಮಾಡಲು ಹಣವನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಬೇರೆಡೆಗೆ ತಿರುಗಿಸುವ ಅಪಾಯವಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಇರಾನಿನ ರಾಯಭಾರ ಕಚೇರಿಯು ( Iranian Embassy) ಮಾನವೀಯ ಉದ್ದೇಶಗಳಿಗಾಗಿ ದೇಣಿಗೆ ನೀಡಲು ಕರೆ ನೀಡಿದಾಗಿನಿಂದ ಒಟ್ಟು 17.91 ಕೋಟಿ ರೂ.ಗಳನ್ನು ದೇಣಿಗೆಗಳ ಮೂಲಕ ಸಂಗ್ರಹಿಸಲಾಗಿದೆ. ಇದರಲ್ಲಿ ಬುಡ್ಗಮ್ ಮಾತ್ರ 9.5 ಕೋಟಿ ರೂ.ಗಳನ್ನು ನೀಡಿದೆ.
ಆದರೆ, ರಾಜ್ಯ ತನಿಖಾ ಸಂಸ್ಥೆ ಅಧಿಕಾರಿಗಳು ಮಧ್ಯವರ್ತಿಗಳ ಜಾಲ ಮತ್ತು ಹಲವಾರು ಸಂಶಯಾಸ್ಪದ ಸಂಸ್ಥೆಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಥವಾ ಕಣಿವೆಯಲ್ಲಿ ಸಂಭಾವ್ಯ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಉತ್ತೇಜಿಸಲು ದೊಡ್ಡ ಪ್ರಮಾಣದ ಹಣವನ್ನು ವಂಚನೆ ಮಾಡುತ್ತಿವೆ ಎಂದು ಶಂಕಿಸಿದ್ದಾರೆ.
ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಹೆಚ್ಚಿನ ಜನರು ನಿಜವಾದ ಸದ್ಭಾವನೆಯಿಂದ ದೇಣಿಗೆ ನೀಡುತ್ತಿದ್ದಾರೆ. ಇರಾನ್ ರಾಯಭಾರ ಕಚೇರಿಗೆ ನೇರವಾಗಿ ಹಣವನ್ನು ದೇಣಿಗೆ ನೀಡುತ್ತಿರುವವರು ಚಿಂತಿಸಬೇಕಾಗಿಲ್ಲ. ಏಕೆಂದರೆ ಅದು ಇರಾನ್ಗೆ ತಲುಪುತ್ತದೆ. ಆದರೆ, ಮಧ್ಯವರ್ತಿಗಳಿಂದ ಮತ್ತು ಸಂಶಯಾಸ್ಪದ ಸಂಸ್ಥೆಗಳಿಂದ ಆ ಹಣ ರಾಯಭಾರ ಕಚೇರಿಗೆ ತಲುಪದಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುದ್ಧಪೀಡಿತ ಇರಾನ್ಗೆ ಕಾಶ್ಮೀರಿಗಳಿಂದ ನೆರವು; ಪತಿ ಉಡುಗೊರೆಯಾಗಿ ನೀಡಿದ ಚಿನ್ನ ದಾನ ಮಾಡಿದ ವಿಧವೆ
ಹಣದ ದುರುಪಯೋಗದ ಬಗ್ಗೆ ಎಸ್ಐಎ ಎಚ್ಚರಿಕೆ ನೀಡಿದ ನಂತರ ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಹೆಸರುಗಳು ಬೆಳಕಿಗೆ ಬಂದಿವೆ. ಇರಾನ್ನಿಂದ ಬರುವ ಹಣವನ್ನು ಶ್ರೀನಗರ ಮೂಲದ ಹಕೀಮ್ ಸಜಾದ್ ಎಂಬ ವ್ಯಕ್ತಿಯ ಮೂಲಕ ಹಲವಾರು ಶಿಯಾ ಧರ್ಮಗುರುಗಳ ನಡುವೆ ವಿತರಿಸಲಾಗುತ್ತಿದೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ.
ಗಾಂದರ್ಬಲ್ನ ಮಾಜಿ ನಿವಾಸಿಯಾಗಿರುವ ಸೈಯದ್ ರುಹೊಲ್ಲಾ ರಿಜ್ವಿ, ಪ್ರಸ್ತುತ ಇರಾನ್ನ ಪಾರ್ದೇಸಾನ್ ಅಂದೀಶಾ ಮೈದಾನ್ನಲ್ಲಿ ವಾಸಿಸುತ್ತಿದ್ದಾನೆ. ರಿಜ್ವಿ ಹಣಕಾಸು ಜಾಲದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ರಿಜ್ವಿ, ಶ್ರೀನಗರ ಮೂಲದ ಹಕೀಮ್ ಸಜಾದ್ ಎಂಬಾತನ ಸೋದರ ಮಾವ ಕೂಡ ಆಗಿದ್ದು, ಈ ಹಿಂದೆ ಭಾರತ ವಿರೋಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿದ್ದಾನೆ. ಸಾಜಾದ್ ಇರಾನ್ನಿಂದ ಬಂದ ಹಣವನ್ನು ಸ್ಥಳೀಯ ಶಿಯಾ ಮುಸ್ಲಿಂ ಧರ್ಮಗುರುಗಳಿಗೆ ವಿತರಿಸುವ ಉಸ್ತುವಾರಿ ವಹಿಸಿದ್ದ.
ಈ ಸಂದರ್ಭದಲ್ಲಿ, ರಾಜ್ಯ ತನಿಖಾ ಸಂಸ್ಥೆಯ (SIA) ಅಧಿಕಾರಿಗಳು, ಭಯೋತ್ಪಾದಕ ನಿಧಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಮೌಲವಿ ಸರ್ಜನ್ ಬರ್ಕಾತಿ ಅವರ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.
2016 ರಲ್ಲಿ ಬುರ್ಹಾನ್ ವಾನಿಯ ಮರಣದ ನಂತರ ಭಾರತ ವಿರೋಧಿ ಭಾಷಣಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಬೆಳಕಿಗೆ ಬಂದ ಬರ್ಕಾತಿ, ಕ್ರೌಡ್ಫಂಡಿಂಗ್ ಮೂಲಕ 1.5 ಕೋಟಿ ರೂ.ಗಳ ಮೊತ್ತವನ್ನು ಸಂಗ್ರಹಿಸಿದ್ದ.
ತನಿಖಾ ಸಂಸ್ಥೆಗಳ ಪರಿಶೀಲನೆಯ ಪ್ರಕಾರ, ಈ ನೆಪದಲ್ಲಿ ಆ ಧಾರ್ಮಿಕ ನಾಯಕನು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಷ್ಟೇ ಅಲ್ಲದೆ, ತಿಳಿಯದ ಮೂಲಗಳಿಂದ ಬಂದ ಹಣವನ್ನು ವಹಿವಾಟು ಮಾಡಿದ್ದಾನೆ ಎಂಬ ಆರೋಪವಿದೆ. ಅವನಿಗೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕಗಳಿತ್ತೆಂಬ ಶಂಕೆಯೂ ವ್ಯಕ್ತವಾಗಿದೆ. ಅಲ್ಲದೆ, ಪ್ರತ್ಯೇಕತಾವಾದಿ ಉಗ್ರಗಾಮಿ ಅಭಿಯಾನಕ್ಕೆ ಉತ್ತೇಜನ ನೀಡಲು ಈ ಹಣವನ್ನು ಬಳಸಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ.