ಈ ಬಾರಿ ಮತ್ತೆ ಮೇಲೇಳಲು ಸಾಧ್ಯವಾಗದಂತ ಹೊಡೆತ ನೀಡುತ್ತೇವೆ: ಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರ್ 2.0 ಎಚ್ಚರಿಕೆ ನೀಡಿದ ಸೇನಾಧಿಕಾರಿ
Operation Sindhoor 2.0: ಭಾರತವು ಮತ್ತೊಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದರೆ ಹೊಡೆತ ಮತ್ತಷ್ಟು ಕಠಿಣವಾಗಿರುತ್ತದೆ ಎಂದು ಸೇನಾ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಪರೇಷನ್ ಸಿಂದೂರ್ನಲ್ಲಿ ನಾವು ಮಾಡಿದ್ದಕ್ಕಿಂತ ಪ್ರತಿಕ್ರಿಯೆ ಇನ್ನಷ್ಟು ಬಲವಾಗಿರುತ್ತದೆ. ನಾವು ಎಷ್ಟು ಪ್ರತಿಕ್ರಿಯಿಸುತ್ತೇವೆ, ಯಾವ ಹಂತಕ್ಕೆ ಹೋಗುತ್ತೇವೆ ಎಂಬುದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಎಚ್ಚರಿಸಿದ್ದಾರೆ.
ಕಳೆದ ಬಾರಿಗಿಂತ ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ ಎಂದ ಸೇನಾಧಿಕಾರಿ -
ಶ್ರೀನಗರ, ಫೆ. 26: ಭಾರತವು ಮತ್ತೊಂದು ಆಪರೇಷನ್ ಸಿಂದೂರ್ (Operation Sindhoor 2.0) ಕಾರ್ಯಾಚರಣೆ ನಡೆಸಿದರೆ ಹೊಡೆತ ಮತ್ತಷ್ಟು ಕಠಿಣವಾಗಿರುತ್ತದೆ ಎಂದು ಸೇನಾ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. 2025ರ ಏಪ್ರಿಲ್ 22ರಂದು 26 ನಾಗರಿಕರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ದಾಳಿಗೆ (Pahalgam attack) ಪ್ರತೀಕಾರವಾಗಿ ಭಾರತ ಕಳೆದ ವರ್ಷ ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿತು.
ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ, ಮೇ 10ರಂದು ಸಂಘರ್ಷವನ್ನು ಕೊನೆಗೊಳಿಸಲು ನವದೆಹಲಿ ಮತ್ತು ಇಸ್ಲಾಮಾಬಾದ್ ಒಪ್ಪಂದಕ್ಕೆ ಬಂದವು.
ಆಪರೇಷನ್ ಸಿಂದೂರ್ನಲ್ಲಿ ನಾವು ಮಾಡಿದ್ದಕ್ಕಿಂತ ಪ್ರತಿಕ್ರಿಯೆ ಬಲವಾಗಿರುತ್ತದೆ. ನಾವು ಎಷ್ಟು ಪ್ರತಿಕ್ರಿಯಿಸುತ್ತೇವೆ, ಯಾವ ಹಂತಕ್ಕೆ ಹೋಗುತ್ತೇವೆ ಎಂಬುದು ಆ ನಿರ್ದಿಷ್ಟ ದಿನ ಮತ್ತು ಆ ನಿರ್ದಿಷ್ಟ ಸಮಯದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದರೆ ನಾವು ಕಳೆದ ಬಾರಿಗಿಂತ ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ ಎಂದು ವೆಸ್ಟರ್ನ್ ಕಮಾಂಡ್ನ ಕಮಾಂಡಿಂಗ್-ಇನ್-ಚೀಫ್ ಜನರಲ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ಹೇಳಿದರು.
ಇಲ್ಲಿದೆ ಭಾಷಣದ ವಿಡಿಯೊ:
#WATCH | Pathankot, Punjab | On Operation Sindoor, General Officer Commanding-in-Chief Western Command, Lieutenant General Manoj Kumar Katiyar says, "In Operation Sindoor, we attacked all their (Pakistan) terrorist bases...After that, they retaliated, and in response, we… pic.twitter.com/XaNTq7Bfq3
— ANI (@ANI) February 26, 2026
ಆಪರೇಷನ್ ಸಿಂದೂರ್ನಲ್ಲಿ, ನಾವು ಅವರ ಎಲ್ಲ (ಪಾಕಿಸ್ತಾನ) ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆವು. ಅದರ ನಂತರ, ಅವರು ಪ್ರತಿದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ನಾವು ಅವರ ಮಿಲಿಟರಿ ನೆಲೆಗಳು ಮತ್ತು ವಾಯುನೆಲೆಗಳನ್ನು ನಾಶಪಡಿಸಿದೆವು. ನಂತರ ಅವರು ಕದನ ವಿರಾಮವನ್ನು ಬಯಸಿದರು. ನೇರವಾಗಿ ನಮ್ಮಿಂದ ಮಾತ್ರವಲ್ಲದೆ, ಇತರ ದೇಶಗಳಿಂದಲೂ ಭಾರತ ಕದನ ವಿರಾಮ ಘೋಷಿಸುವಂತೆ ಒತ್ತಾಯಿಸಿದರು. ಅವರಿಗೆ ನಮ್ಮೊಂದಿಗೆ ಹೋರಾಡಲು ಸಾಧ್ಯವಿಲ್ಲ ಎಂದು ಅಧಿಕಾರಿ ಒತ್ತಿ ಹೇಳಿದರು.
ಭಾರತ ನಮ್ಮ ಮನೆಗೆ ನುಗ್ಗಿ ಹೊಡೆದಿದೆ- ಪಾಕಿಸ್ತಾನ ವ್ಯಕ್ತಿಯ ಗೋಳಾಟವನ್ನೊಮ್ಮೆ ನೋಡಿ
ಪಾಕಿಸ್ತಾನವು ಕಾರ್ಗಿಲ್ ಅಥವಾ 1971ರ ಯುದ್ಧದಿಂದ ಪಾಠ ಕಲಿತಿಲ್ಲ. ಇನ್ನು ಅವರು ಆಪರೇಷನ್ ಸಿಂದೂರ್ನಿಂದ ಪಾಠ ಕಲಿಯುತ್ತಾರೆಯೇ? ಎಂದು ಮನೋಜ್ ಕುಮಾರ್ ಪ್ರಶ್ನಿಸಿದರು. ಪಾಕಿಸ್ತಾನವು ಪರೋಕ್ಷ ಯುದ್ಧಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ಅವರು ನೇರವಾಗಿ ಹೋರಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ಯುದ್ಧ ಮಾಡಲು ಪ್ರಾಕ್ಸಿಗಳನ್ನು ಬಳಸುತ್ತಾರೆ. ಪಾಕಿಸ್ತಾನವು ದುರ್ಬಲ ರಾಷ್ಟ್ರವಾಗಿದ್ದು, ಆಪರೇಷನ್ ಸಿಂದೂರ್ ಸಮಯದಲ್ಲಿ ಕದನ ವಿರಾಮಕ್ಕಾಗಿ ತನ್ನ ದೊಡ್ಡಣ್ಣನ ಬಳಿಗೆ ಓಡಿತು. ಅಲ್ಲದೆ ಕದನ ವಿರಾಮಕ್ಕಾಗಿ ಪರಮಾಣು ಯುದ್ಧದ ಬೆದರಿಕೆ ಹಾಕಿತು ಎಂದು ಅಧಿಕಾರಿ ಹೇಳಿದರು.
ವಾಯುನೆಲೆಯ ರಿಪೇರಿ ಶುರು ಮಾಡಿದ್ದ ಪಾಕ್!
2025ರ ಮೇ 10ರಂದು ಭಾರತೀಯ ವಾಯುಪಡೆ ನಡೆಸಿದ ಭೀಕರ ದಾಳಿಯಲ್ಲಿ ಧ್ವಂಸಗೊಂಡಿದ್ದ ಭೋಲಾರಿ ವಾಯುನೆಲೆಯ ಹ್ಯಾಂಗರ್ ಅನ್ನು ಪಾಕಿಸ್ತಾನವು ಪುನರ್ನಿರ್ಮಿಸಲು ಅಥವಾ ದುರಸ್ತಿ ಮಾಡಲು ಸಿದ್ಧತೆ ನಡೆಸುತ್ತಿದೆ. ಉಪಗ್ರಹ ಚಿತ್ರಗಳ ಪ್ರಕಾರ, ಹಾನಿಗೊಳಗಾದ ಹ್ಯಾಂಗರ್ನ ಹಸಿರು ಬಣ್ಣದ ಛಾವಣಿಯನ್ನು ತೆರವುಗೊಳಿಸಲಾಗುತ್ತಿದೆ.
ಮೇ 9ರಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಪಾಕಿಸ್ತಾನವು ಭಾರತದ ಮೇಲೆ ದೊಡ್ಡ ಮಟ್ಟದ ದಾಳಿಗೆ ಸಂಚು ರೂಪಿಸುತ್ತಿದೆ ಎಂಬ ಗುಪ್ತಚರ ಮಾಹಿತಿಯನ್ನು ನೀಡಿದ್ದರು. ಪಾಕಿಸ್ತಾನ ಅಂತಹ ದಾಳಿಗೆ ಮುಂದಾದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದರು.