ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ರಿಕ್ಸ್ ಶೃಂಗಸಭೆಯ ನಂತರ ವಿಶ್ವ ನಾಯಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಯೇ? ಸುಳ್ಳು ಸುದ್ದಿ ಹಬ್ಬಿಸಿದ ಪಾಕಿಸ್ತಾನ

foreign ministry warns: ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಅನೇಕ ವಿಶ್ವ ನಾಯಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ವರದಿಗಳನ್ನು ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ಈ ವರದಿಗಳು ನಕಲಿ ಎಂದು ಹೇಳಿದೆ. ದುರುದ್ದೇಶಪೂರಿತ ಪೋಸ್ಟ್‌ಗಳ ವಿರುದ್ಧ ಎಚ್ಚರಿಕೆ ನೀಡಿದೆ.

ಬ್ರಿಕ್ಸ್ ನಂತರ ವಿಶ್ವ ನಾಯಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಯೇ?

ಬ್ರಿಕ್ಸ್ ಶೃಂಗಸಭೆಯ ಚಿತ್ರಣ -

Priyanka P
Priyanka P Sep 17, 2026 7:15 PM

ನವದೆಹಲಿ, ಸೆ.17: ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS summit) ಭಾಗವಹಿಸಿದ ನಂತರ ಅನೇಕ ವಿಶ್ವ ನಾಯಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ವರದಿಗಳನ್ನು ವಿದೇಶಾಂಗ ಸಚಿವಾಲಯ (foreign ministry) ತಳ್ಳಿಹಾಕಿದೆ. ಈ ವರದಿಗಳು ನಕಲಿ ಎಂದು ಹೇಳಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದುರುದ್ದೇಶಪೂರಿತ ಪೋಸ್ಟ್‌ಗಳ ವಿರುದ್ಧ ಸಚಿವಾಲಯದ ಸತ್ಯ-ಪರಿಶೀಲನಾ ಘಟಕವು ಎಚ್ಚರಿಕೆ ನೀಡಿದೆ.

ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಸೋಮವಾರ (ಸೆ.14) ದಕ್ಷಿಣ ಆಫ್ರಿಕಾಕ್ಕೆ ಮರಳಿದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಅನಾರೋಗ್ಯದ ಕಾರಣ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. 73 ವರ್ಷದ ರಾಮಫೋಸಾ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದು, ಸದ್ಯ ಅವರು ವೈದ್ಯಕೀಯ ಸಲಹೆಯ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷರ ಕಚೇರಿ ತಿಳಿಸಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ರಾಮಫೋಸಾ ಅವರ ಸಾರ್ವಜನಿಕ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಸಾಧ್ಯವಾದಷ್ಟು ಸಂದರ್ಭಗಳಲ್ಲಿ ನಿಗದಿಯಾಗಿರುವ ಕಾರ್ಯಕ್ರಮಗಳಲ್ಲಿ ತಮ್ಮ ಪರವಾಗಿ ಸಂಬಂಧಪಟ್ಟ ಸಚಿವರು ಭಾಗವಹಿಸುವಂತೆ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಇಲ್ಲಿದೆ ಪೋಸ್ಟ್:





ಅವರ ಗೈರುಹಾಜರಿಯ ನಡುವೆಯೇ, ದಕ್ಷಿಣ ಆಫ್ರಿಕಾದ ಉಪಾಧ್ಯಕ್ಷ ಪಾಲ್ ಮಶಟಿಲೆ ಕೂಡ ಸಣ್ಣ ವೈದ್ಯಕೀಯ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದ ಇಬ್ಬರು ಪ್ರಮುಖ ನಾಯಕರು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. “ವೈದ್ಯರ ಸಲಹೆಯ ಮೇರೆಗೆ, ಮುಂದಿನ ಸೂಚನೆ ನೀಡುವವರೆಗೆ ನಾನು ವಿಶ್ರಾಂತಿ ಮುಂದುವರಿಸುತ್ತೇನೆ. ಈ ನಡುವೆ, ನನ್ನ ಕಚೇರಿಯ ಸಮರ್ಥ ತಂಡವು ಸರ್ಕಾರ, ಉದ್ಯಮ ಮತ್ತು ಇತರ ಕ್ಷೇತ್ರಗಳ ಸಂಬಂಧಿತ ವ್ಯಕ್ತಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಹಾಗೂ ನನಗೆ ವಹಿಸಲಾದ ಜವಾಬ್ದಾರಿಗಳನ್ನು ಮುಂದುವರಿಸಲಿದೆ” ಎಂದು ಮಶಟಿಲೆ ತಿಳಿಸಿದ್ದಾರೆ.

ಕೆಲವು ಪರಿಶೀಲಿಸದ ವರದಿಗಳು, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ವೈದ್ಯಕೀಯ ಕಾರಣಗಳಿಂದಾಗಿ ಬ್ರಿಕ್ಸ್ ಶೃಂಗಸಭೆಯಿಂದ ಬೇಗನೆ ನಿರ್ಗಮಿಸಿ ವಿಶೇಷ ವಿಮಾನದಲ್ಲಿ ಹಿಂತಿರುಗಿದರು ಎಂದು ಹೇಳಿವೆ.

“ಶೇಕಡಾ 80ರಷ್ಟು ಭಾರತೀಯರು ಮಾಂಸಾಹಾರಿಗಳು”: ಬ್ರಿಕ್ಸ್ ಔತಣಕೂಟದಲ್ಲಿ ಸಸ್ಯಾಹಾರಿ ಮೆನುವಿನ ಬಗ್ಗೆ ರಾಹುಲ್ ಗಾಂಧಿ ವಾಗ್ದಾಳಿ

ಬ್ರಿಕ್ಸ್ ಶೃಂಗಸಭೆ

2026ರ ಸೆಪ್ಟೆಂಬರ್ 12 ಮತ್ತು 13ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಿತು. ಸ್ಥಿತಿಸ್ಥಾಪಕತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಶೃಂಗಸಭೆಯಲ್ಲಿ, 11 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ವೈವಿಧ್ಯಮಯ ಗುಂಪಿನ ನಡುವೆ ಒಮ್ಮತ ಮೂಡಿಸುವ ಸವಾಲು ಭಾರತ ಸಮಾಲೋಚಿಸಿತು.

ನವದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ಬಿಡುಗಡೆಗೊಂಡ ಜಂಟಿ ಘೋಷಣೆಯಲ್ಲಿ, ಅಣ್ವಸ್ತ್ರ ಅಪಾಯ ಮತ್ತು ಸಂಘರ್ಷದ ಹೆಚ್ಚುತ್ತಿರುವ ಸಾಧ್ಯತೆಗಳ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಅಲ್ಲದೆ, ಅಂತಾರಾಷ್ಟ್ರೀಯ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವ ಬದ್ಧತೆಯನ್ನು ಸದಸ್ಯ ರಾಷ್ಟ್ರಗಳು ಪುನರುಚ್ಚರಿಸಿವೆ.

ಅಂತಾರಾಷ್ಟ್ರೀಯ ವಿವಾದಗಳಿಗೆ ಸಂವಾದ, ಸಮಾಲೋಚನೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಲುವನ್ನೂ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಜಂಟಿ ಘೋಷಣೆಯಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿವೆ.