ಗುಜರಾತ್ನ ಸೋಮನಾಥ ದೇಗುಲದಲ್ಲಿ ನರೇಂದ್ರ ಮೋದಿ ವಿಶೇಷ ಪೂಜೆ; ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ, ವಾಜಪೇಯಿ ಸ್ಮರಿಸಿದ ಪ್ರಧಾನಿ
Somnath Temple Amrut Mahotsav: ಇತಿಹಾಸ ಪ್ರಸಿದ್ಧ ಗುಜರಾತ್ನ ಸೋಮನಾಥ ಶಿವ ದೇವಸ್ಥಾನ ಜೀರ್ಣೋದ್ಧಾರಗೊಂಡು 75 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಸೋಮವಾರ (ಮೇ 11) ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪೂಜೆ ಸಲ್ಲಿಸಿದರು. ಸೋಮನಾಥಕ್ಕೆ ತಲುಪಿದ ಮೋದಿ ಅಲ್ಲಿಂದ ರೋಡ್ಶೋ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು. ಮಂತ್ರಘೋಷಗಳ ಹಿನ್ನೆಲೆಯಲ್ಲಿ ನಡೆದ ಮಹಾ ಪೂಜೆ ಮತ್ತು ಜಲಾಭಿಷೇಕದಲ್ಲಿಯೂ ಮೋದಿ ಪಾಲ್ಗೊಂಡರು. ಅಲ್ಲದೆ ಕುಂಬಾಭಿಷೇಕವನ್ನು ಕಣ್ತುಂಬಿಕೊಂಡರು. ದೇಶದ ವಿವಿಧ ಪವಿತ್ರ ನದಿಗಳಿಂದ ಸಂಗ್ರಹಿಸಿದ ನೀರನ್ನು ಈ ಸಂದರ್ಭದಲ್ಲಿ ಪ್ರೋಕ್ಷಣೆ ಮಾಡಲಾಯಿತು.
ಗುಜರಾತ್ ಸೋಮನಾಥ ದೇವಾಲಯ ಮತ್ತು ನರೇಂದ್ರ ಮೋದಿ -
1951ರಲ್ಲಿ ಜೀರ್ಣೋದ್ಧಾರ
ಭಾರತದ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ಗುಜರಾತ್ನ ಸೋಮನಾಥ ಶಿವ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ 1951ರಲ್ಲಿ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದ್ದರು.
ಏರ್ ಶೋ
ಈ ಪ್ರಧಾನಿ ಅವರೊಂದಿಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಚಿವ ಹರ್ಶ್ ಸಂಘ್ವಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಭಾರತೀಯ ಪಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ ದೇಗುಲದ ಪರಿಸರದಲ್ಲಿ ಪ್ರದರ್ಶಿಸಿದ ಏರ್ ಶೋವನ್ನು ಮೋದಿ ಕಣ್ತುಂಬಿಕೊಂಡರು. ವಿಮಾನಗಳ ಆಗಸದಲ್ಲಿ ಭಾರತದ ಧ್ವಜ ಬಿಡಿಸಿದ್ದು ನೆರೆದವರನ್ನು ರೋಮಾಂಚನಗೊಳಿಸಿತು.
ಪೊಖ್ರಾನ್ ಅಣ್ವಸ್ತ್ರ ಪರೀಕ್ಷೆಯ ನೆನಪು
ಬಳಿಕ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1998ರ ಮೇಯಲ್ಲಿ ನಡೆಸಿದ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯನ್ನು ಸ್ಮರಿಸಿಕೊಂಡರು. ಇದು ಭಾರತದ ಸಾಮರ್ಥ್ಯವನ್ನೇ ಜಗತ್ತಿಗೇ ಸಾರಿತು ಎಂದು ಬಣ್ಣಿಸಿದರು.
ಭಾರತದ ಸಾಮರ್ಥ್ಯ ಜಗತ್ತಿಗೆ ಪರಿಚಯವಾದ ದಿನ
ʼʼಮೇ 11ರಂದು ಮೊದಲ ಮೂರು ಅಣ್ವಸ್ತ್ರ ಪರೀಕ್ಷೆ ನಡೆದವು. ಆ ಮೂಲಕ ನಮ್ಮ ಹೆಮ್ಮೆಯ ವಿಜ್ಞಾನಿಗಳು ಭಾರತದ ಸಾಮರ್ಥ್ಯವನ್ನು ಜಗತ್ತಿಗೇ ಸಾರಿದರುʼʼ ಎಂದು ಮೋದಿ ವಿವರಿಸಿದರು. ʼʼಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವು ದೇಶ ಮೊದಲು ಎನ್ನುವ ಸಂದೇಶ ಈ ಮೂಲಕ ಸಾರಿತು. ಜಗತ್ತಿನ ಯಾವುದೇ ಶಕ್ತಿಗೆ ಭಾರತವನ್ನು ಕುಗ್ಗಿಸಲು ಸಾಧ್ಯವಿಲ್ಲʼʼ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಯ ತಿರುಳು
ದೇಶದ ಇತಿಹಾಸದಲ್ಲಿ ಸೋಮನಾಥ ದೇಗುಲ ಹೊಂದಿರುವ ಪ್ರಾಮುಖ್ಯತೆಯನ್ನು ತಿಳಿಸಿದ ಮೋದಿ, ʼʼಪ್ರತಿ ಬಾರಿ ದೇಗುಲದ ಮೇಲೆ ದಾಳಿ ನಡೆಸಿದಾಗಲೆಲ್ಲ ಅದು ಮತ್ತಷ್ಟು ಶಕ್ತಿಯೊಂದಿಗೆ ತಲೆ ಎತ್ತಿ ನಿಂತಿದೆ. ದೇಗುಲವನ್ನು ನಾಶಪಡಿಸಲು ಯತ್ನಿಸಿದವರಿಗೆ ನಮ್ಮ ಶಕ್ತಿಯ ಬಗ್ಗೆ ಅರಿವಿರಲಿಲ್ಲʼʼ ಎಂದು ಹೇಳಿದರು.