Vishweshwar Bhat's Book Release: ವಿಶ್ವೇಶ್ವರ ಭಟ್ ಅವರ 103ನೇ ಪುಸ್ತಕ 'ಬದುಕುಳಿದವರು ಕಂಡಂತೆʼ ಬಿಡುಗಡೆ; ಫೋಟೊಗಳು ಇಲ್ಲಿವೆ
Badukulidavaru Kandanthe Book: ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ 103ನೇ ಪುಸ್ತಕ 'ಬದುಕುಳಿದವರು ಕಂಡಂತೆʼ ಅನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಬೆಂಗಳೂರಿನಲ್ಲಿ ಭಾನುವಾರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಸುಷ್ಮಾ ಭಟ್, ಇಸ್ರೇಲ್ ಕಾನ್ಸುಲೇಟ್ ಜನರಲ್ನ ಡೆಪ್ಯುಟಿ ಕಾನ್ಸುಲ್ ಜನರಲ್ ಇನ್ಬಾಲ್ ಸ್ಟೋನ್ ಉಪಸ್ಥಿತರಿದ್ದರು.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ -
ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ 103ನೇ ಪುಸ್ತಕ 'ಬದುಕುಳಿದವರು ಕಂಡಂತೆʼ ಭಾನುವಾರ ಬಿಡುಗಡೆಗೊಂಡಿದೆ. ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೃತಿ ಲೋಕಾರ್ಪಣೆ ಮಾಡಿದರು. ಈ ವೇಳೆ ಪುಸ್ತಕದ ಲೇಖಕರಾದ ವಿಶ್ವೇಶ್ವರ ಭಟ್, ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಸುಷ್ಮಾ ಭಟ್, ಇಸ್ರೇಲ್ ಕಾನ್ಸುಲೇಟ್ ಜನರಲ್ನ ಡೆಪ್ಯುಟಿ ಕಾನ್ಸುಲ್ ಜನರಲ್ ಇನ್ಬಾಲ್ ಸ್ಟೋನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭಯಾನಕ ದಾಳಿ ಮತ್ತು ಹತ್ಯಾಕಾಂಡದಲ್ಲಿ ಬದುಕು ಉಳಿದವರು ಹೇಳಿದ ಮನ ಮಿಡಿಯುವ ರೋಚಕ ಕಥನವನ್ನು ಈ ಪುಸ್ತಕ ಒಳಗೊಂಡಿದೆ. ಮೂಲಕೃತಿಯನ್ನು ಯೇನ್ ಅಗಮೋನ್, ಓರಿಯಾ ಮೇವೊರೊಚ್ ರಚಿಸಿದ್ದಾರೆ. ಹಮಾಸ್ ಉಗ್ರರು ದಾಳಿ ನಡೆಸಿದ್ದ ಸ್ಥಳವನ್ನು ಸಂದರ್ಶಿಸಿರುವ ವಿಶ್ವೇಶ್ವರ ಭಟ್ ಅವರು, ಅಲ್ಲಿಯೇ ಕೃತಿಯನ್ನು ಅನುವಾದಿಸಲು ನಿರ್ಧರಿಸಿದ್ದರು.
ಹಮಾಸ್ ಭಯೋತ್ಪಾದಕರು 2023ರ ಅಕ್ಟೋಬರ್ 7ರಂದು ಗಾಜಾ ಗಡಿಯಿಂದ ಒಂದೇ ಸಮನೆ ರಾಕೆಟ್, ಕ್ಷಿಪಣಿಗಳನ್ನು ಇಸ್ರೇಲ್ ನತ್ತ ಉಡಾಯಿಸಿದ್ದರು. ಅವರ ಗುರಿ ಇಸ್ರೇಲ್ನಲ್ಲಿ ನಡೆಯುತ್ತಿದ್ದ ನೋವಾ ಮ್ಯೂಸಿಕ್ ಫೆಸ್ಟಿವಲ್ ಮತ್ತು ಸುತ್ತಲಿನ ಪ್ರದೇಶಗಳಾಗಿತ್ತು. ಅಲ್ಲಿ ನಾಲ್ಕು ಸಾವಿರ ಮಂದಿ ಸೇರಿದ್ದರು. ಅಂದು ಹಮಾಸ್ ಉಗ್ರರು ಪ್ಯಾರಾಚೂಟ್ಗಳಿಂದ ಇಳಿದು ಇಸ್ರೇಲಿನ ಗಡಿ ಭಾಗದಲ್ಲಿರುವ ಹಳ್ಳಿಗಳು ಮತ್ತು ಸಮುದಾಯ ಕೇಂದ್ರಗಳಲ್ಲಿದ್ದ ಅಮಾಯಕ ಜನರ ಮೇಲೆ ಗುಂಡು ಹಾರಿಸಿದ್ದರು.
ಇಸ್ರೇಲ್ ಮಹಿಳೆಯರ ಮೇಲೆ ಹಮಾಸ್ ಉಗ್ರರು ಅತ್ಯಾಚಾರ ಎಸಗಿ, ಮಕ್ಕಳನ್ನೂ ಗುಂಡಿಕ್ಕಿ ಸಾಯಿಸಿದ್ದರು. 251 ಜನರನ್ನು ಅಪಹರಿಸಿದ್ದರು. ಉಗ್ರರ ದಾಳಿಯಲ್ಲಿ ಸಾವಿರದ ಇನ್ನೂರಕ್ಕೂ ಹೆಚ್ಚು ಮಂದಿ ಹತರಾದರು. ಈ ಘೋರ ನರಮೇಧದ ಬಗ್ಗೆ ಯೇರ್ ಅಗಮೋನ್ ಮತ್ತು ಓರಿಯಾ ಮೇವೊರೊಚ್ ಅವರು ಬರೆದ ʼವನ್ ಡೇ ಇನ್ ಅಕ್ಟೋಬರ್ ʼ ಎಂಬ ಕೃತಿಯನ್ನು ವಿಶ್ವೇಶ್ವರ ಭಟ್ ಅವರು ಅನುವಾದಿಸಿದ್ದಾರೆ.
ಹತ್ಯಾಕಾಂಡದಲ್ಲಿ ಬದುಕಿ ಉಳಿದವರು ಹೇಳಿರುವ, ಮನಮಿಡಿಯುವ, ಹೃದಯವಿದ್ರಾವಕ, ರೋಚಕ ಕಥನವನ್ನು ಇದು ಒಳಗೊಂಡಿದೆ. ಆ ಭೀಕರ ಘಟನೆಯನ್ನು 34 ಮಂದಿ ತಮ್ಮ ಅನುಭವದ ಅಧಾರದಲ್ಲಿ ವಿವರಿಸಿದ್ದರು. ಈ ಅಪರೂಪದ ಧೈರ್ಯಶಾಲಿ ಕಥೆಯನ್ನು ಪುಸ್ತಕದಲ್ಲಿ ನೀವು ಓದಬಹುದು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವೇಶ್ವರ ಭಟ್ ಅವರು, ನಾನು ಈ ಪುಸ್ತಕವನ್ನು ಅತ್ಯಂತ ಭಾರವಾದ ಹೃದಯದಿಂದ ಬರೆದಿದ್ದೇನೆ. ನನ್ನ ಎಲ್ಲ ಕೃತಿಗಳಿಗಿಂತ ಇದು ವಿಭಿನ್ನ. ಇಸ್ರೇಲಿಗೆ ಹೋಗದಿದ್ದರೆ ಬಹುಶಃ ನಾನು ಇದನ್ನು ಬರೆಯುತ್ತಿರಲಿಲ್ಲ. ಈ ಪುಸ್ತಕವನ್ನು ಇಸ್ರೇಲಿಗರು ಓದುವುದಕ್ಕಿಂತ ಹೆಚ್ಚು ಕರ್ನಾಟಕದ ಜನತೆ, ಕನ್ನಡಿಗರು ಓದಬೇಕು ಎಂದು ತಿಳಿಸಿದರು.
ಇಷ್ಟೂ ಸುದ್ದಿಯನ್ನು ಎರಡು ವರ್ಷಗಳ ಹಿಂದೆ ಓದಿದ್ದೆ. ಆದರೆ ಖುದ್ದಾಗಿ ಇಸ್ರೇಲ್ನಲ್ಲಿ ನೋವಾ ಫೆಸ್ಟಿವಲ್ ನಡೆದ ಸ್ಥಳಕ್ಕೆ, ಕಿಬೂಟ್ಸ್ ಸಮುದಾಯದ ಸ್ಥಳಕ್ಕೆ ಭೇಟಿ ನೀಡಿದ್ದೆ. ಇವತ್ತಿಗೂ ಅಲ್ಲಿ ಕುದಿ ಮೌನವಿದೆ. ರಾತ್ರಿ ಅಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಬಹಳ ಕ್ರಿಯಾಶೀಲವಾದ ಭೂಮಿಯಲ್ಲಿ ಸ್ಮಶಾನ ಮೌನವಿದೆ. ಮನೆಗಳಲ್ಲಿ ರಕ್ತದ ಕಲೆ, ಸಾವಿರಾರು ಗುಂಡುಗಳು ಗೋಡೆಗಳು ಬಿದ್ದು ತೂತಾಗಿವೆ. ಇಪ್ಪತ್ತು ಇಪ್ಪತ್ತು ಜನರನ್ನು ಗುಡ್ಡೆ ಹಾಕಿ ಪೆಟ್ರೋಲ್ ಬಾಂಬ್ ಹಾಕಿ ಕೊಂದ ಜಾಗವನ್ನು ನೋಡಿರುವೆ.
ಮೂರೂವರೆ ಸಾವಿರ ಭಯೋತ್ಪಾದಕರು ದಾಳಿ ನಡೆಸಿದಾಗ ಇಸ್ರೇಲಿಗರು ಪರಸ್ಪರ ರಕ್ಷಣೆಗೆ ನಿಂತರು. ಎಲ್ಲಿಗೂ ಪಲಾಯನ ಮಾಡಲಿಲ್ಲ. ಧೈರ್ಯವಾಗಿ ಉಗ್ರರನ್ನು ಎದುರಿಸಿದರು. ಸಾವಿರಾರು ಇಸ್ರೇಲಿಗರ ಧೈರ್ಯ-ಸ್ಥೈರ್ಯ ಅಸಾಧಾರಣ. ಎರಡು ವರ್ಷ ಕಾಲ ಎಲ್ಲ ಇಸ್ರೇಲಿಗರು ಒತ್ತೆಯಾಳುಗಳ ಬಿಡುಗಡೆಗೆ ಪ್ರಾರ್ಥನೆ ಮಾಡಿದ್ದರು. ಅಂಗಿಯಲ್ಲಿ ಘೋಷಣೆ ಬರೆದಿದ್ದರು. ಅಂಥ ದೇಶಪ್ರೇಮ, ಮಾನವೀಯತೆ ಇದು. ಹಿಟ್ಲರ್ನ ಅವಧಿಯಲ್ಲಿ ನಡೆದ ಯಹೂದಿಗಳ ಹತ್ಯಾಕಾಂಡವನ್ನು ನಾಚಿಸುವ ರೀತಿಯಲ್ಲಿ ಈ ನರಮೇಧ ಆಗಿತ್ತು ಎಂದು ವಿಶ್ವೇಶ್ವರ ಭಟ್ ತಿಳಿಸಿದರು.
ಸಮಾರಂಭದಲ್ಲಿ ಇಸ್ರೇಲ್ನಲ್ಲಿ ಹಮಾಸ್ ಉಗ್ರರು ನಡೆಸಿದ ಭೀಕರ ನರಮೇಧದ ಏಳೂವರೆ ನಿಮಿಷಗಳ ವಿಡಿಯೊ ಪ್ರದರ್ಶಿಸಲಾಯಿತು. ಈ ಘೋರ ದೃಶ್ಯವನ್ನು ಕಂಡು ಇಡೀ ಸಭೆ ಅಕ್ಷರಶಃ ಸ್ತಬ್ಧವಾಯಿತು. ಎಲ್ಲರ ಕಣ್ಣಲ್ಲೂ ನೀರು. ದುಃಖ, ನೀರವ ಮೌನ ಆವರಿಸಿತು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಇಸ್ರೇಲ್ ತನ್ನ ಮೇಲೆ ಈತನಕ ನಡೆದ ದಾಳಿಗಳನ್ನು ಸಾಮೂಹಿಕವಾಗಿ ಎದುರಿಸಿ ಮೆಟ್ಟಿ ನಿಂತಿದೆ. ಇಸ್ರೇಲ್ನಂತೆಯೇ ಭಾರತದ ಮೇಲೂ ಮುಸ್ಲಿಮರಿಂದ ಸಾಂಸ್ಕೃತಿಕ ದಾಳಿಗಳು ಆಗಿವೆ. ಅದನ್ನು ಎದುರಿಸುವ ಹೀರೋತನವನ್ನು ಬೆಳೆಸಿಕೊಳ್ಳಲು ವಿಶ್ವೇಶ್ಬರ ಭಟ್ಟರ ಕೃತಿ ನಮಗೆ ಪ್ರೇರೇಪಣೆ ನೀಡುತ್ತದೆ ಎಂದು ತಿಳಿಸಿದರು.
ಇಸ್ರೇಲಿನ ಮೇಲಿನ ದಾಳಿ ಕುರಿತು ಭಟ್ಟರು ಬರೆದ ಕೃತಿ ಭಾರತಕ್ಕೆ ಯಾಕೆ ಪ್ರಸ್ತುತ ಎಂಬುದನ್ನು ನಾವು ಗಮನಿಸಬೇಕು. ಭಾರತದಲ್ಲೂ ದಿಲ್ಲಿ, ಕಾಶ್ಮೀರದ ಮೇಲೆ ಉಗ್ರರ ದಾಳಿಗಳಾಗಿವೆ. ಇಸ್ರೇಲ್ ಮೇಲೆ ಹಾಗೂ ಭಾರತದ ಮೇಲೆ ದಾಳಿ ಎಸಗಿದವರ ಗುಂಪುಗಳು ಬೇರೆಯಾಗಿರಬಹುದು. ಆದರೆ ಅವರ ಮಾನಸಿಕತೆಯಲ್ಲಿ ವ್ಯತ್ಯಾಸ ಇಲ್ಲ.
ಇಸ್ರೇಲ್ ದೇಶ ಹುಟ್ಟಿದ ಕಾಲದಲ್ಲಿಯೇ 7 ದಿನಗಳ ಯುದ್ಧವನ್ನು ಎದುರಿಸಬೇಕಾಯಿತು. ಸುತ್ತಲಿನ ಅರಬ್ ದೇಶಗಳೆಲ್ಲ ಸೇರಿ ಮುಗಿಬಿದ್ದವು. ಅದನ್ನು ಅಂದಿನಿಂದ ಇಂದಿನವರೆಗೂ ಒಂದೇ ರೀತಿಯಲ್ಲಿ ಎದುರಿಸುತ್ತ ಬಂದಿದೆ. ಅಂದಿನಿಂದ ಇಂದಿಗೂ ಶಕ್ತಿ, ದಿಟ್ಟತನ ಉಳಿದಿದೆ. ಅದಕ್ಕೆ ಕಾರಣ, ಬಾಲ್ಯದಿಂದಲೇ ಅಲ್ಲಿ ಮಿಲಿಟರಿ ಹಾಗೂ ಸಾಂಸ್ಕೃತಿಕ ಪಾಠ ನೀಡಲಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಇಸ್ಲಾಮಿಕ್ ಭಯೋತ್ಪಾದಕರ ಕ್ರೂರ ಬರ್ಬರ ದಾಳಿಯನ್ನು ಇಸ್ರೇಲಿನ ಯೋಧರು ಹಾಗೂ ನಾಗರಿಕರು ಎದುರಿಸಿದ ಬಗೆಯನ್ನು ಕನ್ನಡದ ಜನತೆಗೆ ಕೃತಿ ರೂಪದಲ್ಲಿ ನೀಡುವ ಮೂಲಕ ವಿಶ್ವೇಶ್ವರ ಭಟ್ಟರು ದೊಡ್ಡ ಸೇವೆ ಸಲ್ಲಿಸಿದ್ದಾರೆ. ಅವರು ಮಾಡಿರುವುದು ಕೇವಲ ಭಾಷಾನುವಾದವಲ್ಲ, ಅದು ಭಾವಾನುವಾದ ಎಂದು ಹೇಳಿದರು.
ಭಾರತಕ್ಕೆ ಕನಿಷ್ಠ 5000 ವರ್ಷಗಳ ಇತಿಹಾಸವಿದೆ. ಆದರೆ ಇಸ್ರೇಲ್ ರಚನೆ ಆಗಿರುವುದು 1948ರಲ್ಲಿ. ಆದರೆ ಇದು ನಮ್ಮ ಭೂಮಿ ಮಾತ್ರವಲ್ಲ, ಮಾತೃಭೂಮಿ ಎಂಬ ಭಾವನೆ ಅವರಲ್ಲಿದೆ. ಇಂಥ ಭಾವನೆ ಇಲ್ಲದೆ ಹೋದಲ್ಲಿ ದೇಶವನ್ನು ಉಳಿಸಿಕೊಳ್ಳಲು ಹೋರಾಟ ಸಾಧ್ಯವಾಗುವುದಿಲ್ಲ. ಇಸ್ರೇಲ್ ಬಹಳ ಸಣ್ಣ ದೇಶ. ಅದರ ಭೌಗೋಳಿಕತೆ, ಇತಿಹಾಸವನ್ನು ವಿಶ್ವೇಶ್ವರ ಭಟ್ಟರು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ ಎಂದರು.
ನಮ್ಮದೂ ಇಸ್ರೇಲ್ನಂತೆಯೇ ಗೆದ್ದ ಇತಿಹಾಸ ಹೊರತು ಸೋತ ಇತಿಹಾಸವಲ್ಲ. ಆದರೆ ಇತಿಹಾಸ ಪಾಠದಲ್ಲಿ ಇದನ್ನೆಲ್ಲ ಹೇಳಿಕೊಡುತ್ತಿಲ್ಲ. ನಮ್ಮಲ್ಲಿ ಮೊದಲಿನಿಂದ ಮಾನಸಿಕ ಗುಲಾಮಿತನ ಬೆಳೆಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಇಸ್ರೇಲ್, ಹಮಾಸ್ ಅನ್ನು ಒಂದು ದೇಶವಾಗಿ ಎದುರಿಸಿದ ಬಗೆ, ಜಿಹಾದಿ ಮಾನಸಿಕತೆಯನ್ನು ಇಸ್ರೇಲ್ ಎದುರಿಸಿದ ಬಗೆ ನಮಗೆ ಪಾಠವಾಗುವಂತೆ ಭಟ್ಟರ ಪುಸ್ತಕವಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.